ಚಿಕ್ಕಮಗಳೂರು, ಜೂ.3- ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನು ಸಂಪರ್ಕಿಸುವ ಪ್ರಮುಖ ಮಾರ್ಗವಾಗಿರುವ ಚಾರ್ಮಾಡಿ ಘಾಟ್ನಲ್ಲಿ ಭಾರಿ ಮಳೆಯಿಂದಾಗಿ ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ನಲ್ಲಿರುವ ರಾಷ್ಟ್ರೀಯ ಹೆದ್ದಾರಿ 73ರಲ್ಲಿ ವಾಹನ ಸವಾರರು ತೀವ್ರ ಸಂಕಷ್ಟ ಎದುರಿಸುವಂತಾಗಿತ್ತು.
ಪಶ್ಚಿಮ ಘಟ್ಟದಲ್ಲಿ ಪ್ರಾರಂಭವಾಗಿರುವ ಮಳೆ ಆರ್ಭಟದಿಂದ ಮಣ್ಣಿನ ಜರಿತ, ಮರ ಬಿರುಕು ಮುಂತಾದ ಪ್ರಕೃತಿ ಅಡಚಣೆಗಳ ಸಂಭವ ಹೆಚ್ಚಾಗಿದೆ. ಬೃಹತ್ ಮರ ರಸ್ತೆಗೆ ಬಿದ್ದ ಕಾರಣ ನೂರಾರು ವಾಹನಗಳು ಕಿ.ಮೀ.ಗಳಷ್ಟು ದೂರ ಸಾಲಾಗಿ ನಿಂತಿದ್ದು, ವಾಹನ ಸವಾರರು ಹಾಗೂ ಪ್ರವಾಸಿಗರು ಪರದಾಡಿದರು.
ಘಟನಾ ಸ್ಥಳಕ್ಕೆ ತಕ್ಷಣವೇ ಸ್ಥಳೀಯ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ, ಮರವನ್ನು ತೆರವುಗೊಳಿಸಿದರು. ಈ ಘಾಟಿ ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಗಡಿಭಾಗದಲ್ಲಿದ್ದು, ಹಲವು ವರ್ಷಗಳಿಂದ ಮಳೆ ಸಮಯದಲ್ಲಿ ಈ ರೀತಿಯ ಅಡಚಣೆಗಳು ಸಂಭವಿಸುತ್ತಲೇ ಇವೆ. ಸಂಬಂಧಪಟ್ಟ ಇಲಾಖೆಗಳಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಬಗ್ಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಚಾರ್ಮುಡಿ ಘಾಟ್ನಲ್ಲಿ ದಟ್ಟ ಮಂಜು ಅವರಿಸಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ವಾಹನ ಪಲ್ಟಿ ಆಗಿರುವ ಘಟನೆ ನಡೆದಿದೆ. ಈ ವಾಹನದಲ್ಲಿ ಚಿಕ್ಕಮಗಳೂರಿನಿಂದ ಮಂಗಳೂರಿಗೆ ತರಕಾರಿ ಸಾಗಿಸುತ್ತಿದ್ದು ವಾಹನದ ಚಾಲಕನಿಗೆ ಗಂಭೀರ ಗಾಯಗಳಾಗಿ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದು, ಚಾರ್ಮುಡಿ ಘಾಟ್ ನಲ್ಲಿ ಮಂಜು ಆವರಿಸಿಕೊಂಡಿದ್ದ ಹಿನ್ನೆಲೆಯಲ್ಲಿ ರಸ್ತೆ ಸ್ಪಷ್ಟವಾಗಿ ಕಾಣದೇ ಇರುವುದರಿಂದ ಸಾರ್ವಜನಿಕರು ಜಾಗೃತವಾಗಿ ವಾಹನ ಚಲಾಯಿಸಲು ಬಣಕಲ್ ಪೊಲೀಸರು ಮನವಿ ಮಾಡಿದ್ದಾರೆ.