ಬೆಂಗಳೂರು, ಜೂ.3 – ನಟ ಕಮಲ್ ಹಾಸನ್ ಬಗ್ಗೆ ನಮಗೆ ಯಾವುದೇ ಮೃದು ಭಾವನೆ ಇಲ್ಲ. ಆದರೆ ಪರಿಸ್ಥಿತಿ ಹದಗೆಡಬಹುದು ಎಂಬ ಕಾರಣಕ್ಕಾಗಿ ಎಚ್ಚರಿಕೆ ನೀಡುತ್ತಿರುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಮಲ್ ಹಾಸನ್ರವರೇ ನ್ಯಾಯಾಲಯದ ಮೊರೆ ಹೋಗಿದ್ದು ಈಗ ಕೋರ್ಟ್ ನಿರ್ದೇಶನ ನೀಡಿದೆ. ಅದರಂತೆ ಕಮಲ್ ಹಾಸನ್ ಕ್ಷಮೆ ಕೇಳುವ ನಿರೀಕ್ಷೆಯಿದೆ.
ಕಮಲ್ಹಾಸನ್ ಹೇಳಿಕೆ ಬಗ್ಗೆ ನಿನ್ನೆ ಸಾಹಿತಿಗಳಾದ ಹಂಪ ನಾಗರಾಜಯ್ಯ ಹಾಗೂ ಇತರರ ಜೊತೆ ತಾವು ಚರ್ಚೆ ನಡೆಸಿದ್ದೇನೆ. ಯಾರದು ಸರಿ, ಯಾರದು ತಪ್ಪು ಎಂಬ ಕುರಿತು ವಿಮರ್ಶೆಗಳು ನಡೆದವು. ದ್ರಾವಿಡ ಭಾಷೆಗಳೆಲ್ಲಾ ಒಂದೇ ಆಗಿವೆ. ತಮಿಳು, ಕನ್ನಡ, ತೆಲುಗು, ಮಲೆಯಾಳಂ ಪರಸ್ಪರ ಮಿಳಿತವಾಗಿವೆ. ಇಲ್ಲಿ ಮೇಲು-ಕೀಳು ಎಂಬುದು ಉದ್ಭವಿಸುವುದಿಲ್ಲ ಎಂದರು.
ಕಮಲ್ಹಾಸನ್ ವೈಯಕ್ತಿಕವಾಗಿ ಹಠಕ್ಕೆ ಬಿದ್ದಿದ್ದಾರೆ. ನ್ಯಾಯಾಲಯದ ಆದೇಶವನ್ನು ಎಲ್ಲರೂ ಪಾಲನೆ ಮಾಡಬೇಕು. ಕೋರ್ಟ್ ನಿರ್ದೇಶನ ನೀಡಿದರೆ ಅದರಂತೆ ಕ್ಷಮೆ ಕೇಳುವ ಸಾಧ್ಯತೆ ಇದೆ ಎಂದರು.
ಕಮಲ್ಹಾಸನ್ ಅವರ ಪಕ್ಷ ಕಾಂಗ್ರೆಸ್ನ ಮಿತ್ರ ಪಕ್ಷವಾಗಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ವಿಚಾರದಲ್ಲಿ ಮೃದು ಧೋರಣೆ ತೋರುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಸಮಾಜವನ್ನು ವಿಭಜನೆ ಮಾಡುತ್ತಾರೆ. ನಾವು ಜೋಡಿಸುತ್ತೇವೆ ಎಂದರು.
ಕಬ್ಬಿಣದಲ್ಲೇ ಕತ್ತರಿ ಮತ್ತು ಸೂಜಿ ಎರಡೂ ತಯಾರಾಗುತ್ತದೆ. ಆದರೆ ಎರಡೂ ಬೇರೆಬೇರೆ ಕೆಲಸ ಮಾಡುತ್ತವೆ. ಕಾಂಗ್ರೆಸ್ ಸಮಾಜವನ್ನು ಜಾತಿ, ಧರ್ಮ, ಭಾಷೆ ರಾಜ್ಯದ ಹೆಸರಿನಲ್ಲಿ ವಿಭಜಿಸಲು ಬಯಸುವುದಿಲ್ಲ ಎಂದು ಹೇಳಿದರು.
ಕಮಲ್ಹಾಸನ್ ಹೇಳಿಕೆಯ ಪ್ರಕರಣ ವಿಪರೀತಕ್ಕೆ ಹೋಗಿ ಹೆಚ್ಚುಕಮ್ಮಿಯಾದರೆ ಯಾರು ಹೊಣೆಗಾರರು? ಹೊಸೂರಿಗೆ ಪ್ರತಿದಿನ 50 ಸಾವಿರ ಮಂದಿ ಬೆಂಗಳೂರಿನಿಂದ ಹೋಗುತ್ತಾರೆ. ಹೊಸೂರಿನಿಂದ ಇಲ್ಲಿಗೆ ಬಂದು ನೆಲೆಸುತ್ತಾರೆ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ನಾವು ಮುಂದಡಿ ಇಡಬೇಕು. ಇದರಲ್ಲಿ ಮೃದುತ್ವ ಎಂಬುದಿಲ್ಲ. ಕನ್ನಡ ಪರ ಸಂಘಟನೆಗಳು ಪರಿಸ್ಥಿತಿಯನ್ನು ವಿಪರೀತಕ್ಕೆ ತಕೆ ತೆಗೆದುಕೊಂಡು ಹೋಗದೆ ಸಂಯಮದಿಂದ ವರ್ತಿಸಬೇಕು ಎಂದು ಕರೆ ನೀಡಿದರು.