ಕೊರಟಗೆರೆ,ಜೂ.4- ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಎರಡು ಕರಡಿಗಳು ಪ್ರತ್ಯೇಕವಾಗಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕಾಣಿಸಿಕೊಂಡಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾದಂತಾಗಿದೆ.
ಪಟ್ಟಣದ ಪ್ರಮುಖ ರಾಜ್ಯ ರಸ್ತೆ ಮಧುಗಿರಿ-ತುಮಕೂರು ಪ್ರಮುಖ ರಸ್ತೆಯಲ್ಲಿ ಒಂದು ಕರಡಿ ಕಾಣಿಸಿಕೊಂಡರೆ, ಕಾಳಿದಾಸ ಪ್ರೌಢಶಾಲೆಯ ಹಿಂಭಾಗದ ರಸ್ತೆಯಲ್ಲಿ ಮತ್ತೊಂದು ಕರಡಿ ಕಾಣಿಸಿಕೊಂಡಿದ್ದು ರಾತ್ರಿ ವೇಳೆ ಸಾರ್ವಜನಿಕರು ಓಡಾಡಲು ಭಯ ಮೂಡಿದಂತಾಗಿದೆ.
ಕಾಡಮೃಗಗಳು ಇತ್ತೀಚಿಗೆ ಆಹಾರ ಅರಸಿ ನಾಡಿನತ್ತ ಧಾವಿಸುತ್ತಿದ್ದು, ಕೊರಟಗೆರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಎರಡು ಕಡೆ ಪ್ರತ್ಯೇಕವಾಗಿ ರಾತ್ರಿ ವೇಳೆ ಕರಡಿಗಳು ರಾಜ ಗಾಂಭೀರ್ಯವಾಗಿ ನಡೆದಾಡುತ್ತಿರುವುದು ಸಿ ಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಯಾವುದೇ ಭಯವಿಲ್ಲದೆ ರಸ್ತೆಯಲ್ಲಿ ಬೀದಿ ದೀಪಗಳ ನಡುವೆ ನಡೆದಾಡುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.