ಬೆಂಗಳೂರು, ಜೂ.7 – ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆಯೇ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧುಬಂಗಾರಪ್ಪ ತಿರುಗೇಟು ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತಿದೆ. ಹಿಂದೆ ಡಾ.ರಾಜ್ ಕುಮಾರ್ ಅಂತ್ಯಕ್ರಿಯೆ ವೇಳೆಯಲ್ಲಿ ಕುಮಾರಸ್ವಾಮಿ ರಾಜೀನಾಮೆ ಕೊಟ್ಟಿದ್ದರೇ? ಎಂದು ಪ್ರಶ್ನಿಸಿದರು.
ಅವರು ಅಧಿಕಾರದಲ್ಲಿದ್ದಾಗಲೇ ದುರ್ಘಟನೆಯಾಗಿದ್ದು ಅದನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ. ಐದಾರು ವರ್ಷಗಳ ಬಳಿಕ ಏನೋ ತಪ್ಪಾಯಿತು ಎಂದರೆ ಹೇಗೆ?, ಆಗಲೇ ಪ್ರತಿಕ್ರಿಯಿಸಬೇಕಿತ್ತು. ರಾಜೀನಾಮೆ ನೀಡಬೇಕಿತ್ತು. ಡಾ. ರಾಜ್ಕುಮಾರ್ ಕುಟುಂಬ ತಮಗೆ ಸೂಕ್ತ ಮಾಹಿತಿ ನೀಡಲಿಲ್ಲ ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ. ಡಾ.ರಾಜ್ ಕುಮಾರ್ ಕುಟುಂಬಕ್ಕೂ ಕುಮಾರಸ್ವಾಮಿಯವರೇ ಮುಖ್ಯಮಂತ್ರಿಯಾಗಿದ್ದರು. ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಹೇಳಿಕೆ ನೀಡುವಾಗ ಯೋಚಿಸಬೇಕಾಗುತ್ತದೆ ಎಂದರು.
ಡಾ.ರಾಜ್ಕುಮಾರ್ ಅಂತ್ಯಕ್ರಿಯೆ ವೇಳೆಯಲ್ಲಾದ ಘಟನೆಗಳ ಬಗ್ಗೆ ಹೇಳಲು ನಮಗೆ ಬಹಳಷ್ಟು ವಿಚಾರಗಳಿವೆ. ನಾನು ಆ ಕುಟುಂಬದಲ್ಲಿದ್ದವನು. ನನಗೆ ಗೊತ್ತಿದ್ದರೂ ನಾನು ಚರ್ಚೆ ಮಾಡಲು ಬಯಸುವುದಿಲ್ಲ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ರಾಜೀನಾಮೆ ಬಗ್ಗೆ ಯೋಚನೆ ಮಾಡಿರಲಿಲ್ಲ. ಈಗ ಬೇರೆಯವರಿದ್ದಾರೆ. ಹೊಟ್ಟೆಹುರಿಯಿಂದ ಮಾತನಾಡುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ಕಾಲ್ತುಳಿತ ದುರಂತವನ್ನು ಯಾರೂ ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ಮನೆ ಮಕ್ಕಳನ್ನು ಕಳೆದುಕೊಂಡಷ್ಟೇ ದುಃಖ ಮುಖ್ಯಮಂತ್ರಿಯವರಲ್ಲಿದೆ. ವಿರೋಧಪಕ್ಷಗಳು ಇದರಲ್ಲೂ ರಾಜಕೀಯ ಮಾಡುತ್ತಾರೆಂದರೆ ನಾಚಿಕೆಯಾಗಬೇಕು ಎಂದರು.
ಆರ್ಸಿಬಿ ವಿಜಯೋತ್ಸವ ಆಚರಣೆ ಬೇಡ ಎಂದಿದ್ದರೆ ಯಾವ ರೀತಿಯ ಟೀಕೆಗಳಾಗುತ್ತಿದ್ದವು ಎಂಬ ಬಗ್ಗೆ ಚರ್ಚೆಯಾಗಬೇಕಿದೆ. ದುರ್ಘಟನೆಯಾದ ಬಳಿಕ ಎಲ್ಲರೂ ವ್ಯತಿರಿಕ್ತ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕುಮಾರಸ್ವಾಮಿ ಎಲ್ಲಾ ಸ್ಥಾನಮಾನಗಳನ್ನು ನೋಡಿದ್ದಾರೆ. ಅದರ ಜವಾಬ್ದಾರಿ ಏನೆಂದು ಗೊತ್ತಿದೆ. ಈಗ ಸಿದ್ದರಾಮಯ್ಯನವರು ರಾಜೀನಾಮೆ ಕೊಟ್ಟರೆ ಆ ಸ್ಥಾನದಲ್ಲಿ ನಿಂತು ಕುಮಾರಸ್ವಾಮಿ ಅಥವಾ ವಿಜಯೇಂದ್ರ ಅವರು ತೀರ್ಮಾನ ಮಾಡಲು ಸಾಧ್ಯವೇ?, ಅನಗತ್ಯವಾಗಿ ಏಕೆ ಈ ರೀತಿ ಮಾತನಾಡುತ್ತಾರೆ ಎಂದು ಕಿಡಿಕಾರಿದರು.
ರಸಗೊಬ್ಬರ ಕೇಳಿದವರಿಗೆ ಗುಂಡು ಹೊಡೆದವರು ಯಾರು ಎಂದು ವಿಜಯೇಂದ್ರ ಅವರು ನೆನಪಿಟ್ಟುಕೊಳ್ಳಬೇಕು. ವಿರೋಧಪಕ್ಷದಲ್ಲಿದ್ದೇವೆ ಎಂಬ ಕಾರಣಕ್ಕಾಗಿಯೇ ಟೀಕೆ ಮಾಡುವುದು ಅದೂ ಇಂತಹ ಸಂದರ್ಭದಲ್ಲಿ ಮಾತನಾಡುವುದು ಒಳ್ಳೆಯ ಬೆಳವಣಿಗೆಯಲ್ಲ, ಘಟನೆಯಾಗಬಾರದಿತ್ತು ಎಂಬುದು ಎಲ್ಲರ ಅಭಿಪ್ರಾಯ ಎಂದರು.
ಗುಪ್ತಚರ ವೈಫಲ್ಯವಾಗಿದೆ. ಅದಕ್ಕಾಗಿ ಆಡಳಿತಾತ್ಮಕವಾಗಿ ಯಾವ ನಿರ್ಧಾರ ತೆಗೆದುಕೊಳ್ಳಬೇಕೋ ಅದನ್ನು ಮುಖ್ಯಮಂತ್ರಿ ತೆಗೆದುಕೊಂಡಿದ್ದಾರೆ.
ಕುಮಾರಸ್ವಾಮಿ, ವಿಜಯೇಂದ್ರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹಸಚಿವರ ರಾಜೀನಾಮೆ ಕೇಳಿದ್ದಾರೆ. ಅದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಜ್ಯಪಾಲರನ್ನು ವಜಾಗೊಳಿಸಬೇಕೆಂದು ಕೇಳಿದ್ದಾರೆಯೇ ಎಂದು ಪ್ರಶ್ನಿಸಿದರು.
ಪಹಲ್ಯಾಮ್ ಭಯೋತ್ಪಾದನೆ ದಾಳಿಗೆ ಸಂಬಂಧಪಟ್ಟಂತೆ ಯಾರು ರಾಜೀನಾಮೆ ಕೊಟ್ಟಿದ್ದಾರೆ. ಅಲ್ಲಿ ಗುಪ್ತಚರ ವೈಫಲ್ಯವಾಗಿರಲಿಲ್ಲವೇ?, ಕದನ ವಿರಾಮ ಘೋಷಿಸಿದ್ದೇಕೆ, ಆಮೆರಿಕದ ಅಧ್ಯಕ್ಷ ಭಾರತದ ವಿಷಯದಲ್ಲಿ ಹಸ್ತಕ್ಷೇಪವನ್ನು ನೋಡಿ ಪ್ರಜೆಗಳು ಖುಷಿಯಾಗಿರಬೇಕೆ?, ಇಡೀ ದೇಶ ಪ್ರಧಾನಿಯವರ ಜೊತೆಯಲ್ಲಿದ್ದಾಗ ಅಮೆರಿಕ ಅಧ್ಯಕ್ಷರ ಮಾತು ಕೇಳಿ ಕದನ ವಿರಾಮ ಘೋಷಿಸಿದ್ದೇಕೆ? ಎಂದು ಪ್ರಶ್ನಿಸಿದರು.
ವಿರೋಧಪಕ್ಷಗಳಿಗೆ ಟೀಕೆ ಮಾಡುವುದು ಒಂದು ರೋಗ, ಸಿದ್ದರಾಮುಲ್ಲಾಖಾನ್ ಎಂದಿದ್ದರು. ಡಿ.ಕೆ.ಶಿವಕುಮಾರ್ ಅವರನ್ನು ಟೀಕಿಸಿದ್ದರು. ರಾಹುಲ್ ಗಾಂಧಿ ಸಂವಿಧಾನ ಪುಸ್ತಕ ಹಿಡಿದಿದ್ದಕ್ಕೂ ಟೀಕೆ ಮಾಡಿದರು ಎಂದು ಲೇವಡಿ ಮಾಡಿದರು. ಕಾಲ್ತುಳಿತ ಪ್ರಕರಣವನ್ನು ನ್ಯಾಯಾಂಗ ತನಿಖೆ ಮ್ಯಾಜಿಸ್ಟ್ರೇಟ್ ತನಿಖೆ, ಪೊಲೀಸ್ ತನಿಖೆ ಸೇರಿ ಹಲವಾರು ರೀತಿಯ ವಿಚಾರಣೆಗಳು ನಡೆಯುತ್ತಿವೆ. ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದು ಶತಸಿದ್ದ ಎಂದು ಹೇಳಿದರು.