ಮಂಗಳೂರು,ಜೂ.13- ರಾಜ್ಯಸರ್ಕಾರದ ನೆಮ್ಮದಿ ಕೆಡಿಸಿದ್ದ ಇತ್ತೀಚಿನ ಸರಣಿ ಕೊಲೆಗಳು ಹಾಗೂ ಕೋಮು ಹಿಂಸಾಚಾರವನ್ನು ಹತ್ತಿಕ್ಕಲು ದೇಶದಲ್ಲೇ ಮೊದಲ ಬಾರಿಗೆ ಕರಾವಳಿ ಹಾಗೂ ಮಲೆನಾಡಿನ ಮೂರು ಜಿಲ್ಲೆಗಳಿಗೆ ಸೀಮಿತವಾಗಿ ಕೋಮು ಹಿಂಸೆ ನಿಗ್ರಹ ವಿಶೇಷ ಕಾರ್ಯಪಡೆಯನ್ನು ಗೃಹಸಚಿವ ಡಾ.ಜಿ.ಪರಮೇಶ್ವರ್ ಇಲ್ಲಿಂದು ಲೋಕಾರ್ಪಣೆ ಮಾಡಿದರು. ಶಾಂತಿಯ ಸಂಕೇತವಾದ ಪಾರಿವಾಳದ ಚಿಹ್ನೆಯನ್ನೊಳಗೊಂಡ ವಿಶೇಷ ಕಾರ್ಯಪಡೆ ಲಾಂಛನವನ್ನು ಹಾಗೂ ಕೈಪಿಡಿಯನ್ನು ಇದೇ ವೇಳೆ ಬಿಡುಗಡೆಗೊಳಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಧಾನಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಐವಾನ್ ಡಿಸೋಜ, ಪುತ್ತೂರು ಕ್ಷೇತ್ರದ ಶಾಸಕ ಅಶೋಕ್ ರೈ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿನ್, ಮಾಜಿ ಸಂಸದ ಅಜಯ್ ಸರ್ ನಾಯಕ್, ಮಾಜಿ ಸಚಿವ ವಿನಯ್ಕುಮಾರ್ ಸೊರಕೆ, ರಾಜ್ಯದ ಪೊಲೀಸ್ ಮಹಾ ನಿರ್ದೇಶಕ ಎಂ.ಎ.ಸಲೀಂ, ಜಿಲ್ಲಾಧಿಕಾರಿ ಮುಲೈಮುಹಿಲನ್, ಎಡಿಜಿಪಿ ಎಸ್.ಮುರುಘನ್, ಪಶ್ಚಿಮ ವಲಯ ಐಜಿಪಿ ಅಜಿತ್ ಸಿಂಗ್, ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ರೆಡ್ಡಿ, ಮೂರು ಜಿಲ್ಲೆಗಳ ಎಸ್ಪಿಗಳು ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಇದೇ ವೇಳೆ ಮಾತನಾಡಿದ ಪರಮೇಶ್ವರ್ ಅವರು, ಆರು ತಿಂಗಳ ಹಿಂದೆ ಮಂಗಳೂರಿನಲ್ಲಿ ಒಂದು ಕೊಲೆಯಾಗಿತ್ತು. ಸ್ವಾಭಾವಿಕವಾಗಿ ಆತಂಕ, ಭಯದ ವಾತಾವರಣ ನಿರ್ಮಾಣವಾಗಿತ್ತು. ಆ ವೇಳೆ ಶಾಂತಿ ಸಹಬಾಳ್ವೆಯ ಪರಿಸ್ಥಿತಿಯನ್ನು ನಾನು ನೋಡಲೇ ಇಲ್ಲ. ರಾಜ್ಯದಲ್ಲಿ ಕಲೆ, ಸಂಸ್ಕೃತಿ, ಸಾಹಿತ್ಯ ಉಳಿದಿದ್ದರೆ ಅದಕ್ಕೆ ಕರಾವಳಿ ಜಿಲ್ಲೆಗಳ ಕೊಡುಗೆ ಅಪಾರವಾಗಿದೆ. ಇಲ್ಲಿನ ಕಾರ್ಯವೈಖರಿಯೇ ವಿಶೇಷವಾಗಿದೆ. ರಾಜ್ಯದಲ್ಲೇ ಮೊದಲ ಖಾಸಗಿ ವೈದ್ಯಕೀಯ ಕಾಲೇಜುಗಳು ಮಂಗಳೂರಿನಲ್ಲಿ ಆರಂಭಿಸಲಾಗಿತ್ತು. ನಾಡಿನ ಅಭಿವೃದ್ಧಿಯಲ್ಲೂ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಕೊಡುಗೆ ಅಪಾರವಾಗಿದೆ ಎಂದರು.
ಈ ಹಿಂದೆ ಕೊಲೆಯಾಗಿದ್ದಾಗ ಇರುವ ಸಿಬ್ಬಂದಿಗಳನ್ನೇ ಬಳಸಿಕೊಂಡು ಆಗಿನ ಪೊಲಿಸ್ ಆಯುಕ್ತರು ವಿಶೇಷ ಕಾರ್ಯಪಡೆ ರಚನೆ ಮಾಡಿದ್ದರು. ಮಂಗಳೂರಿನಲ್ಲಿ ಸಾಮರಸ್ಯ ಹಾಳಾಗಿದೆ. ಇದನ್ನು ಬಾಯಿ ಮಾತಿನಲ್ಲಿ ಸರಿಪಡಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ವಿಶೇಷ ಕಾರ್ಯಪಡೆ ರಚಿಸುವ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದು ಹೇಳಿದರು.
ರಾಜ್ಯದಲ್ಲಿ ನಕ್ಸಲ್ ಚಟುವಟಿಕೆ ನಿಂತು ಹೋಗಿವೆ. ಹೀಗಾಗಿ ಅದಕ್ಕಾಗಿ ರಚನೆಯಾಗಿದ್ದ ವಿಶೇಷ ಕಾರ್ಯಪಡೆ ರದ್ದುಗೊಳಿಸಲು ಚರ್ಚೆಯಾಗುತ್ತಿತ್ತು. ಆ ಪಡೆಯಲ್ಲಿ ಕೆಲಸ ಮಾಡಿದವರಿಗೆ ಯುದ್ಧ ಕೌಶಲ್ಯ ಹಾಗೂ ಮಾಹಿತಿ ಸಂಗ್ರಹ ಸೇರಿದಂತೆ ಹಲವು ರೀತಿಯ ತರಬೇತಿಗಳನ್ನು ನೀಡಲಾಗಿತ್ತು. ಅದನ್ನು ಬಳಸಿಕೊಂಡು ಕೋಮು ಹಿಂಸೆ ನಿಗ್ರಹ ಪಡೆ ರಚಿಸಲು ನಿರ್ಧರಿಸಲಾಯಿತು. ಇದು ದೇಶದಲ್ಲೇ ಮೊದಲ ಉಪಕ್ರಮ ಎಂದರು.
ಕೋಮುವಾದ ವಿಚಾರಧಾರೆಗಳನ್ನು ಪ್ರಚೋದಿಸುವುದು, ದ್ವೇಷದ ಭಾಷಣ ಮಾಡಿ ಸಮಾಜದಲ್ಲಿ ಸಾಮರಸ್ಯ ಹಾಳು ಮಾಡುವುದು, ಕಲುಷಿತ ವಾತಾವರಣ ನಿರ್ಮಿಸಿ ಸಹೋದರತ್ವ ಹಾಳು ಮಾಡುವ ವ್ಯಕ್ತಿಗಳು ಹಾಗೂ ಸಂಘಟನೆಗಳನ್ನು ಹತ್ತಿಕ್ಕುವ ಅಧಿಕಾರವನ್ನು ವಿಶೇಷ ಪಡೆಗೆ ನೀಡಲಾಗುವುದು. ಇವರಿಗೆ ಬೇರೆ ಯಾವುದೇ ಕೆಲಸ ಇಲ್ಲ. ಶಾಂತಿ ಕಾಪಾಡುವುದು ಪ್ರಮುಖ ಧ್ಯೇಯ ಎಂದರು. ಈ ಕಾರ್ಯಪಡೆ ಯಶಸ್ವಿಯಾಗಲಿದೆ ಎಂಬ ವಿಶ್ವಾಸ ತಮಗಿದೆ. ಈವರೆಗೂ ಒಳ್ಳೊಳ್ಳೆಯ ಮಾತುಗಳನ್ನಾಡಿ ಮೃದು ಧೋರಣೆಯಲ್ಲಿ ತಿಳಿ ಹೇಳುವ ಪ್ರಯತ್ನ ಮಾಡಿದ್ದೆವು. ಅದು ಅವರಿಗೆ ಮನವರಿಕೆಯಾಗಿಲ್ಲ. ಹೀಗಾಗಿ ಬಲಪ್ರಯೋಗ ಅನಿವಾರ್ಯವಾಗಿದೆ. ಮಂಗಳೂರಿನ ಜನ ಈ ಪಡೆಗೆ ಹೆಚ್ಚಿನ ಕೆಲಸ ಕೊಡದಂತೆ ಸ್ವಯಂ ಪ್ರೇರಿತವಾಗಿ ಸೌಹಾರ್ದತೆ ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಒಂದು ವೇಳೆ ನಿಮ ಪ್ರವೃತ್ತಿಯನ್ನು ಮುಂದುವರೆಸಿದರೆ ಕಾರ್ಯಪಡೆಯ ಕೆಲಸದೊತ್ತಡ ಹೆಚ್ಚಾಗುತ್ತದೆ. ಶಾಂತಿ ಮರುಸ್ಥಾಪನೆಗೆ ಎಲ್ಲರ ಸಹಕಾರ ಬೇಕು. 2023 ರ ವಿಧಾನಸಭೆ ಚುನಾವಣೆಗೆ ಪ್ರಣಾಳಿಕೆ ಸಿದ್ಧಗೊಳಿಸುವಾಗ ತಾವು ಮಂಗಳೂರಿಗೆ ಬಂದು ವಿವಿಧ ಸಂಘಟನೆಗಳ ಜೊತೆ ಚರ್ಚೆ ನಡೆಸಿದ್ದು, ಕಾನೂನು ಸುವ್ಯವಸ್ಥೆ ಕಾರಣಕ್ಕೆ ಬಂಡವಾಳ ಹೂಡಿಕೆ ಮಾಡಲು ಹಿಂದೇಟು ಹಾಕುವಂತಹ ವಾತಾವರಣವಿದೆ. ಮಕ್ಕಳನ್ನು ಇಲ್ಲಿ ಓದಿಸಲಾಗುತ್ತಿಲ್ಲ. ಬೆಂಗಳೂರಿಗೆ ಕಳುಹಿಸಬೇಕಾದ ಪರಿಸ್ಥಿತಿಯಿದೆ. ಇಲ್ಲಿ ಶಾಂತಿಪಾಲನೆಗೆ ಆದ್ಯತೆ ನೀಡಿ ಎಂದು ಜನ ಮನವಿ ಮಾಡಿದರು ಎಂದು ಹೇಳಿದರು.
ಈ ಪಡೆಯ ಬಗ್ಗೆ ಅನೇಕ ಜನ ಟೀಕೆ ಮಾಡುತ್ತಾರೆ. ಪಡೆಯ ಅಗತ್ಯವಿತ್ತು. ಕರಾವಳಿಯಲ್ಲಿ ಶಾಂತಿ ನೆಲೆಸಿದರೆ ರಾಜ್ಯದಲ್ಲೂ ಶಾಂತಿಯ ವಾತಾವರಣ ಇರುತ್ತದೆ. ಅಗತ್ಯಬಿದ್ದರೆ ವಿಶೇಷಪಡೆಯ ಸಂಖ್ಯೆಯನ್ನು ಹೆಚ್ಚು ಮಾಡಲಾಗುವುದು ಎಂದು ತಿಳಿಸಿದರು. ಧರ್ಮ ಹಾಗೂ ಜಾತಿಯ ಹೆಸರಿನಲ್ಲಿ ಬೇದಭಾವ ಹಾಗೂ ಹಿಂಸೆ ಮಾಡುವವರು ಸಂವಿಧಾನ ವಿರೋಧಿಗಳು. ಇದನ್ನು ತಮ ಸರ್ಕಾರ ಸಹಿಸುವುದಿಲ್ಲ. ಅಗತ್ಯಬಿದ್ದರೆ ಈ ಕಾರ್ಯಪಡೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ತಮ ಸರ್ಕಾರ ಸಿದ್ಧವಿದೆ ಎಂದು ಇದೇ ವೇಳೆ ಪ್ರಕಟಿಸಿದರು. ಬೇರೆಬೇರೆ ಜಿಲ್ಲೆಗಳಲ್ಲಿ ಅಂತಹ ಪರಿಸ್ಥಿತಿ ಉದ್ಭವಿಸುವುದಿಲ್ಲ, ವಿಸ್ತರಿಸುವ ಅಗತ್ಯ ಇರುವುದಿಲ್ಲ ಎಂಬ ವಿಶ್ವಾಸವಿದೆ ಎಂದರು.