Sunday, June 15, 2025
Homeಬೆಂಗಳೂರುರಾಜಕಾಲುವೆ ದಿಕ್ಕು ಬದಲಿಸಲು ಅವಕಾಶ ನೀಡಬೇಡಿ: ಎನ್‌.ಆರ್‌.ರಮೇಶ್‌

ರಾಜಕಾಲುವೆ ದಿಕ್ಕು ಬದಲಿಸಲು ಅವಕಾಶ ನೀಡಬೇಡಿ: ಎನ್‌.ಆರ್‌.ರಮೇಶ್‌

ಬೆಂಗಳೂರು, ಜೂ.13- ಯಾರಿಗೂ ಉಪಕಾರ ಮಾಡಿಕೊಡುವ ಉದ್ದೇಶದಿಂದ ಸರ್ಕಾರಿ ಸ್ವತ್ತಿನಲ್ಲಿ ರಾಜಕಾಲುವೆ ದಿಕ್ಕನ್ನು ಬದಲಿಸಲು ಮುಂದಾಗಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಸಂರಕ್ಷಣೆ ಮಾಡುವಂತೆ ಬಿಜೆಪಿ ಮುಖಂಡ ಎನ್‌.ಆರ್‌.ರಮೇಶ್‌ ಅವರು ಭೂ ದಾಖಲೆ ಇಲಾಖೆ ಆಯುಕ್ತರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.

ಯಡಿಯೂರಿನ ನಾಗಸಂದ್ರ ಗ್ರಾಮದ ಸರ್ವೆ ನಂಬರ್‌ 36/2 ರ ಸ್ವತ್ತು ಸಂಪೂರ್ಣವಾಗಿ ಸರ್ಕಾರಿ ಖರಾಬು ಸ್ವತ್ತಾಗಿರುತ್ತದೆ. ಸದರಿ ಸ್ವತ್ತಿನ ಮಧ್ಯಭಾಗದಲ್ಲಿ ದ್ವಿತೀಯ ಹಂತದ ರಾಜಕಾಲುವೆಯು ಹಾದು ಹೋಗಿರುತ್ತದೆ.ಮೇಲೆ ತಿಳಿಸಿರುವ ಸರ್ವೆ ನಂಬರ್‌ 36/2 ರ ಸರ್ಕಾರಿ ಸ್ವತ್ತನ್ನು ನಕಲಿ ದಾಖಲೆಗಳ ಮೂಲಕ ಶರ್ಮಿಳ ಭಕ್ತಾರಾಂ ಎಂಬುವವರು ಕಬಳಿಸಿದ್ದಾರೆ. ಮಾತ್ರವಲ್ಲ, ಬೆಂಗಳೂರು ದಕ್ಷಿಣ ತಾಲ್ಲೂಕಿನ ತಹಸೀಲ್ದಾರ್‌ ಕಛೇರಿಗೆ ಮನವಿ ಪತ್ರ ಸಲ್ಲಿಸಿ, ಯಡಿಯೂರು ನಾಗಸಂದ್ರ ಗ್ರಾಮದ ಸರ್ವೆ ನಂಬರ್‌ 36/2 ರಲ್ಲಿ ಹಾದು ಹೋಗಿರುವ ರಾಜಕಾಲುವೆಯ ದಿಕ್ಕನ್ನು ಬದಲಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ. ಅವರ ಈ ಮನವಿ ಸಂಪೂರ್ಣವಾಗಿ ಕಾನೂನು ಬಾಹಿರವಾದ ಮನವಿಯಾಗಿರುತ್ತದೆ ಎಂದು ಅವರು ದೂರಿನಲ್ಲಿ ದಾಖಲೆ ನೀಡಿದ್ದಾರೆ.

ಸರ್ವೆ ನಂಬರ್‌ 36/2 ರ ಸ್ವತ್ತು ಸಂಪೂರ್ಣವಾಗಿ ಸರ್ಕಾರಿ ಬಿ ಖರಾಬು ಸ್ವತ್ತಾಗಿರುತ್ತದೆ.ಮುಂದುವರೆದಂತೆ, ದಿನಾಂಕ 25/03/2024 ರಂದು ಬೆಂಗಳೂರು ದಕ್ಷಿಣ ತಾಲ್ಲೂಕಿನ ತಹಸೀಲ್ದಾರ್‌ ಅವರು ಸದರಿ ಯಡಿಯೂರು ನಾಗಸಂದ್ರ ಗ್ರಾಮವು ಗೆಜೆಟ್‌ ನೋಟಿಫಿಕೇಷನ್‌ ಸಂಖ್ಯೆ: -56/66-67 ರಂತೆ ನಗರ ಭೂಮಾಪನ ವ್ಯಾಪ್ತಿಗೆ ಒಳಪಟ್ಟಿರುವ ಕಾರಣ ಇದಕ್ಕೆ ಸಂಬಂಧಪಟ್ಟ ನಿರ್ಧಾರವನ್ನು ತೆಗೆದುಕೊಳ್ಳಬೇಕಿರುವುದು ಭೂದಾಖಲೆಗಳ ಇಲಾಖೆ ಎಂದು ಟಿಪ್ಪಣಿಯನ್ನು ಬರೆದಿರುತ್ತಾರೆ.

ಅದಾದನಂತರ, ಭೂದಾಖಲೆಗಳ ಸಹಾಯಕ ನಿರ್ದೇಶಕರು, ನಗರ ಮಾಪನ ತಂಡ – 03, ಕೆ.ಆರ್‌. ವೃತ್ತ ಇವರು ಕಾನೂನು ಬಾಹಿರವಾದ ನಿರ್ಣಯವನ್ನು ತೆಗೆದುಕೊಂಡಿರುವ ವಿಷಯ ತಿಳಿದು ಬಂದಿರುತ್ತದೆ.ಯಡಿಯೂರು ನಾಗಸಂದ್ರ ಗ್ರಾಮದ ಸರ್ವೆ ನಂಬರ್‌ 36/2 ರ 1.13 ಎಕರೆ ವಿಸ್ತೀರ್ಣದ ಸ್ವತ್ತು ಸಂಪೂರ್ಣ ಸರ್ಕಾರಿ ಬಿ ಖರಾಬು ಸ್ವತ್ತಾಗಿದ್ದು, ಸುಮಾರು 100 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯಯುತವಾಗಿರುತ್ತದೆ.

ಆದರೆ, ಶರ್ಮಿಳ ಭಕ್ತಾರಾಂ ಅವರು ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡಿರುವ ವಿಷಯ ದಾಖಲೆಗಳ ಸಹಿತವೇ ರುಜುವಾತಾಗಿದ್ದರೂ ಸಹ, ಭೂದಾಖಲೆಗಳ ಸಹಾಯಕ ನಿರ್ದೇಶಕರಾದ ಕುಸುಮ ಲತಾ ಅವರು ಕಾನೂನು ಬಾಹಿರವಾಗಿ ನಿರ್ಣಯವನ್ನು ತೆಗೆದುಕೊಂಡು ಸದರಿ ಸರ್ಕಾರಿ ಸ್ವತ್ತಿನಲ್ಲಿ ಹಾದು ಹೋಗಿದ್ದ ರಾಜಕಾಲುವೆಯ ದಿಕ್ಕನ್ನು ಬದಲಿಸುವ ಬಗ್ಗೆ ವರದಿಯನ್ನು ಮಂಡಿಸಿರುತ್ತಾರೆ ಎಂಬ ಆಘಾತಕಾರಿ ವಿಷಯ ತಿಳಿದುಬಂದಿರುತ್ತದೆ.

ಹೀಗಾಗಿ ಕುಸುಮ ಲತಾ ರವರ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಮತ್ತು ಶರ್ಮಿಳ ಭಕ್ತಾರಾಂ ರವರು ಕಬಳಿಸಲು ಹೊರಟಿರುವ ಸರ್ಕಾರಿ ಸ್ವತ್ತನ್ನು ಸಂರಕ್ಷಿಸಿಕೊಳ್ಳುವ ಬಗ್ಗೆ ಕಾನೂನು ರೀತ್ಯಾ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ದಾಖಲೆಗಳ ಸಹಿತ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಮಾನ್ಯ ಆಯುಕ್ತರನ್ನು ರಮೇಶ್‌ ಆಗ್ರಹಿಸಿದ್ದಾರೆ.

RELATED ARTICLES

Latest News