ನವದೆಹಲಿ,ಜೂ.18– ಜಮ್ಮು ಮತ್ತು ಕಾಶ್ಮೀರದ ಪಹಲ್ಯಾಮ್ನಲ್ಲಿ ನಡೆದ ನರಮೇಧಕ್ಕೆ ಪ್ರತಿಕಾರವಾಗಿ ಆಪರೇಷನ್ ಸಿಂಧೂರದ ಮೂಲಕ ಪಾಕಿಸ್ತಾನಕ್ಕೆ ಸರಿಯಾದ ಪಾಠ ಕಲಿಸಿದ್ದರಿಂದ ನಮ್ಮ ಮುಂದೆ ಮಂಡಿಯೂರುವಂತೆ ಮಾಡಿದ್ದೇವೆ ಹೊರತು ಯಾವುದೇ ಮೂರನೇ ರಾಷ್ಟ್ರದ ಮಧ್ಯಪ್ರವೇಶದಿಂದ ಕದನ ವಿರಾಮ ಘೋಷಣೆ ಮಾಡಲಿಲ್ಲ ಎಂದು ಪ್ರಧಾನಿ ನರೇಂದ್ರಮೋದಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ವಾಸ್ತವ ಪರಿಚಯ ಮಾಡಿಕೊಟ್ಟಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆ ಕುರಿತು ಎರಡೂ ದೇಶಗಳ ಪರಸ್ಪರ ಒಪ್ಪಿಗೆ ಬಳಿಕ ಕದನ ವಿರಾಮ ಘೋಷಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಪ್ರಧಾನಿ ಮೋದಿ ಸ್ಪಷ್ಟನೆ ನೀಡಿದ್ದಾರೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಡುವೆ 35 ನಿಮಿಷಗಳ ದೂರವಾಣಿ ಸಂಭಾಷಣೆಯ ಸಮಯದಲ್ಲಿ ಕಾಶ್ಮೀರ ವಿಚಾರ ಪ್ರಸ್ತಾಪವಾಯಿತು ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರು ಮಾಹಿತಿ ನೀಡಿದ್ದಾರೆ. ಮಾತುಕತೆ ವೇಳೆ ಪ್ರಧಾನಿ ಮೋದಿಯವರು ಭಾರತದ ಭಯೋತ್ಪಾದನಾ ವಿರೋಧಿ ಕ್ರಮಗಳ ಬಗ್ಗೆ, ವಿಶೇಷವಾಗಿ ಆಪರೇಷನ್ ಸಿಂಧೂರ್ ಬಗ್ಗೆ ಟ್ರಂಪ್ ಬಳಿ ವಿವರವಾಗಿ ಚರ್ಚಿಸಿದರು ಎಂದು ಹೇಳಿದ್ದಾರೆ.
ಜಿ-7 ಶೃಂಗಸಭೆಗೆ ಭೇಟಿ ನೀಡಿದ್ದ ವೇಳೆ ಅಮೆರಿಕಗೆ ಭೇಟಿ ನೀಡುವಂತೆ ಟ್ರಂಪ್ ಮೋದಿಯನ್ನು ಆಹ್ವಾನಿಸಿದ್ದರು. ಆದರೆ ಮೊದಲೇ ವೇಳಾಪಟ್ಟಿ ನಿಗದಿಯಾಗಿದ್ದ ಹಿನ್ನೆಲೆ ಅಮೆರಿಕಗೆ ಭೇಟಿ ನೀಡಲು ಸಾಧ್ಯವಿಲ್ಲ ಎಂದು ಮೋದಿ ತಿಳಿಸಿದ್ದಾರೆ. ಬಳಿಕ ದೂರವಾಣಿ ಮೂಲಕ ಟ್ರಂಪ್ ಗೆ ಕರೆ ಮಾಡಿದ ಮೋದಿ, ಆಪರೇಷನ್ ಸಿಂಧೂರದ ಬಳಿಕ ಭಾರತ ಹಾಗೂ ಪಾಕ್ ನಡುವೆ ಕದನ ವಿರಾಮ ಘೋಷಣೆ ಕುರಿತು ಭಾರತದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಪಾಕ್ ಮನವಿ ಬಳಿಕ ಭಾರತ ಪರಸ್ಪರ ಹೊಂದಾಣಿಕೆಯೊಂದಿಗೆ ಕದನ ವಿರಾಮ ಘೋಷಿಸಿದೆ. ಇದರಲ್ಲಿ ಯಾವ ದೇಶದ ಮಧ್ಯಸ್ಥಿಕೆಯೂ ಇರಲಿಲ್ಲ. ಯಾವುದೇ ವ್ಯಾಪಾರ ಒಪ್ಪಂದದ ಬಗ್ಗೆಯೂ ಚರ್ಚಿಸಿಲ್ಲ. ಭಾರತವು ಇನ್ನು ಮುಂದೆ ಭಯೋತ್ಪಾದನೆಯನ್ನು ಪ್ರಾಕ್ಸಿ ಯುದ್ಧವಾಗಿ ನೋಡುವುದಿಲ್ಲ, ಬದಲಿಗೆ ಯುದ್ಧವಾಗಿ ನೋಡುತ್ತದೆ. ಭಾರತದ ಆಪರೇಷನ್ ಸಿಂಧೂರ ಇನ್ನೂ ಮುಂದುವರಿಯುತ್ತದೆ ಎಂದು ಮೋದಿ ಹೇಳಿದರು.
ಸುಮಾರು 35 ನಿಮಿಷಗಳ ಕಾಲ ಟ್ರಂಪ್ ಜೊತೆ ಪ್ರಧಾನಿ ನರೇಂದ್ರ ಮೋದಿ ದೂರವಾಣಿಯಲ್ಲಿ ಮಾತನಾಡಿದರು. ಇದೇ ವೇಳೆ ಕ್ವಾಡ್ ಸಭೆಗೆ ಭಾಗಿಯಾಗಲು ಭಾರತಕ್ಕೆ ಬರುವಂತೆ ಟ್ರಂಪ್ಗೆ ಮೋದಿ ಮನವಿ ಮಾಡಿದ್ದು, ಮೋದಿ ಆಹ್ವಾನವನ್ನು ಟ್ರಂಪ್ ಸ್ವೀಕರಿಸಿದ್ದಾರೆ. ಈ ಮೊದಲು ನನ್ನ ಮಧ್ಯಸ್ಥಿಕೆಯಿಂದಲೇ ಭಾರತ ಹಾಗೂ ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಯಾಗಿದೆ ಎಂದು ಟ್ರಂಪ್ ಹೇಳಿಕೊಂಡಿದ್ದರು. ಇದೀಗ ಟ್ರಂಪ್ಗೆ ಮೋದಿ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಏಪ್ರಿಲ್ 22 ರ ನಂತರ ಭಾರತವು ಭಯೋತ್ಪಾದನೆಯ ವಿರುದ್ಧ ಕ್ರಮ ಕೈಗೊಳ್ಳುವ ತನ್ನ ದೃಢನಿಶ್ಚಯದ ಬಗ್ಗೆ ಇಡೀ ಜಗತ್ತಿಗೆ ತಿಳಿಸಿದೆ.ಜಮ್ಮು ಮತ್ತು ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಭಾರತ ಎಂದಿಗೂ ಮೂರನೇ ಶಕ್ತಿಯ ಮಧ್ಯಸ್ಥಿಕೆ ಕೇಳಿಲ್ಲ, ಮುಂದೆಯೂ ಕೇಳುವುದಿಲ್ಲ ಎಂದು ತಿಳಿಸಿದ್ದಾರೆಂದು ಮಿತ್ರಿ ಅವರು ತಿಳಿಸಿದ್ದಾರೆ.
ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಮತ್ತು ಭಾರತ ಮತ್ತು ಪಾಕಿಸ್ತಾನ ನಡುವಿನ ಮಧ್ಯಸ್ಥಿಕೆ ಕುರಿತು. ಅಮೆರಿಕದೊಂದಿಗೆ ಯಾವುದೇ ಮಟ್ಟದಲ್ಲಿ ಮಾತುಕತೆ ನಡೆದಿಲ್ಲ. ಮಿಲಿಟರ ಕ್ರಮವನ್ನು ನಿಲ್ಲಿಸುವ ಕುರಿತು, ಭಾರತ ಮತ್ತು ಪಾಕಿಸ್ತಾನದ ನಡುವೆ ನೇರವಾಗಿ ಮಾತುಕತೆಗಳು ನಡೆದಿವೆ ಎಂದು ಮಾಹಿತಿ ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ, ಭಾರತ ಮೊದಲಿನಿಂದಲೂ ದ್ವಿಪಕ್ಷೀಯ ಮಾತುಕತೆಗೆ ಒತ್ತು ನೀಡಿದೆ. ಇದರಲ್ಲಿ ಮೂರನೇ ಶಕ್ತಿಯ ಮಧ್ಯಸ್ಥಿಕೆಯನ್ನು ಭಾರತ ಎಂದಿಗೂ ಒಪ್ಪಿಕೊಂಡಿಲ್ಲ. ಮುಂದೆ ಒಪ್ಪುವುದೂ ಇಲ್ಲ. ಈ ಪ್ರಾದೇಶಿಕ ವಿವಾದ ಬಗೆಹರಿಯಲು ಮೂರನೇ ಶಕ್ತಿಯ ಅವಶ್ಯಕತೆಯೇ ಇಲ್ಲ ಎಂಬುದು ಭಾರತದ ದೃಢವಾದ ನಿಲುವು ಎಂದು ಪ್ರಧಾನಿ ಮೋದಿ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸ್ಪತ ಸ್ಪಷ್ಟವಾಗಿ ಹೇಳಿದ್ದಾರೆ.