ಹಾಸನ, ಜೂ.23- ಬಾಳಿ ಬದುಕಬೇಕಾದ ಯುವಜನತೆ ಹೃದಯಾಘಾತದಿಂದ ಅರ್ಧಕ್ಕೆ ಜೀವನದ ಆಟ ಮುಗಿಸುತ್ತಿರುವುದು ಜಿಲ್ಲೆಯ ಜನತೆಯನ್ನು ಬೆಚ್ಚಿ ಬೀಳಿಸಿದೆ.ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನ ಅವಧಿಯಲ್ಲಿ ಹೃದಯಾಘಾತದಿಂದ 12 ಮಂದಿ ಯುವಕರು ಮೃತಪಟ್ಟಿದ್ದಾರೆ.
ಬೇಲೂರು ಪಟ್ಟಣದಲ್ಲಿ ಟೀ ಅಂಗಡಿ ನಡೆಸುತ್ತಿದ್ದ ನಿಷಾದ್(35) ಹೃದಯಾಘಾತದಿಂದ ಮೃತಪಟ್ಟರೆ, ಮತ್ತೊಂದೆಡೆ ಹಾಸನ ನಗರದ ಸತ್ಯಮಂಗಲ ಬಡಾವಣೆಯಲ್ಲಿ ಮೊಬೈಲ್ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ ಚೇತನ್ (38) ಊಟ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ನಿಷಾದ್ ಸಮಾಜಸೇವಕರಾಗಿದ್ದು, ಕರೋನ ಸಾಂಕ್ರಾಮಿಕ ಸಂದರ್ಭದಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಅನಾಥ ಶವಗಳ ಅಂತ್ಯಕ್ರಿಯೆ ಮಾಡಿ ಹೃದಯ ವೈಶಾಲ್ಯತೆ ಮೆರೆದಿದ್ದರು. ಅಂತಹ ಯುವಕನೇ ಹೃದಯಾಘಾತದಿಂದ ಮೃತಪಟ್ಟಿರುವುದು ಬೇಲೂರು ಪಟ್ಟಣದ ಜನರಲ್ಲಿ ಕಂಬನಿ ತರಿಸಿದೆ.
ಮೊಬೈಲ್ ಅಂಗಡಿ ನಡೆಸುತ್ತಿದ್ದ ಚೇತನ್ ಮನೆಯಲ್ಲಿ ಊಟ ಮಾಡುತ್ತಿರುವಾಗಲೇ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲೇ ಮೃತಪಟ್ಟಿದ್ದಾರೆ.ಜಿಲ್ಲೆಯಲ್ಲಿ ಮೇ, ಜೂನ್ ತಿಂಗಳಿನಲ್ಲೇ 12 ಯುವಕರು ಹಾಗೂ ಮಧ್ಯವಯಸ್ಕರು ಹೃದಯಾಘಾತದಿಂದ ಸಾವನ್ನಪ್ಪುತ್ತಿರುವುದಕ್ಕೆ ಆತಂಕ ಹೆಚ್ಚಾಗಿದೆ.
ಹೃದಯಾಘಾತದಿಂದ ಸಾವನ್ನಪ್ಪಿದವರ ವಿವರ :
ಮೇ 20 ರಂದು ಅರಕಲಗೂಡು ತಾಲೂಕಿನ ಅಭಿಷೇಕ್, ಹೊಳೆನರಸೀಪುರದ ವಿದ್ಯಾರ್ಥಿನಿ ಸಂಧ್ಯ ಒಂದೇ ದಿನ ಸಾವನ್ನಪ್ಪಿದರೆ, ಮೇ 28 ರಂದು ವಿದ್ಯಾರ್ಥಿನಿ ಕವನ, ಜೂ. 11 ರಂದು ಹೊಳೆನರಸೀಪುರದ ಯುವಕ ನಿಶಾಂತ್, ಜೂ. 12 ರಂದು ಸಾರಿಗೆ ಸಿಬ್ಬಂದಿ ನಾಗಪ್ಪ, ನೀಲಕಂಠಪ್ಪ ಮೃತಪಟ್ಟರೆ, ಜೂ. 13 ರಂದು ದೇವರಾಜ್, ಸತೀಶ್ ಮೃತಪಟ್ಟಿದ್ದಾರೆ. ಜೂ.14 ರಂದು ಕಾಂತರಾಜು, ಜೂ. 18 ರಂದು ಅರಣ್ಯ ಇಲಾಖೆ ನೌಕರ ನವೀನ್, ಜೂ. 21 ರಂದು ನಿಷಾದ್ ಅಹಮ್ಮದ್ ಹಾಗೂ ಚೇತನ್ ಇಹಲೋಕ ತ್ಯಜಿಸಿದ್ದಾರೆ.
ಈ ಸರಣಿ ಹೃದಯಾಘಾತ ಇಡೀ ಜಿಲ್ಲೆಯಲ್ಲೇ ಆತಂಕ ಸೃಷ್ಟಿಸಿದ್ದು ವೈದ್ಯರಿಗೂ ಕೂಡ ಇದೊಂದು ಸವಾಲಾಗಿ ಪರಿಣಮಿಸಿದೆ. ಪೋಷಕರಲ್ಲೂ ಸಹ ಭಯದ ವಾತಾವರಣ ನಿರ್ಮಾಣವಾಗಿದೆ.ಯುವಜನತೆ ಆರೋಗ್ಯವನ್ನು ನಿರ್ಲಕ್ಷಿಸದೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆದರೆ ಅಕಾಲಿಕ ಸಾವನ್ನು ತಡೆಯಬಹುದು ಎಂದು ಹೃದ್ರೋಗ ತಜ್ಞರು ಸಲಹೆ ನೀಡಿದ್ದಾರೆ.
ಬದಲಾದ ಜೀವನಶೈಲಿ, ಒತ್ತಡದ ಕೆಲಸ ಸೇರಿದಂತೆ ಮತ್ತಿತರ ಕಾರಣಗಳಿಂದ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಪ್ರತಿನಿತ್ಯ ಯೋಗ, ವ್ಯಾಯಾಮದಲ್ಲಿ ತೊಡಗಿಸಿಕೊಂಡರೆ ಕೆಲ ಖಾಯಿಲೆಗಳಿಂದ ದೂರ ಇರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆಹಾರ ಪದ್ಧತಿಯೂ ಕೂಡ ಬದಲಾದರೆ ಒಳಿತು.
- ಬಂಜೆತನ ಸಮಸ್ಯೆಗಳಿಗೆ ಉಚಿತ ಮಾರ್ಗದರ್ಶನ ನೀಡಲು ಬಂತು ಟೋಲ್-ಫ್ರೀ ಸಂಖ್ಯೆ
- ರಾಜ್ಯದಲ್ಲಿ ಶೀಘ್ರವೇ ಜಲಾಶಯಗಳು ಭರ್ತಿ.!
- ಇರಾನ್-ಇಸ್ರೇಲ್ ಯುದ್ಧಕ್ಕೆ ಅಮೆರಿಕ ರಂಗಪ್ರವೇಶ ಬೆನ್ನಲ್ಲೇ ಜಾಗತಿಕ ಷೇರು ಮಾರುಕಟ್ಟೆ ತಲ್ಲಣ
- ಶಾಸಕರ ಅಸಮಾಧಾನ ಬಗೆಹರಿಸುವೆ:ಸಿಎಂ
- ಗುಜರಾತ್ ವಿಧಾನಸಭೆಉಪಚುನಾವಣೆ ಫಲಿತಾಂಶ : ಬಿಜೆಪಿ,ಎಎಪಿ ಸಮಬಲ