Wednesday, June 25, 2025
Homeರಾಜ್ಯಕಲಬುರಗಿ : ಡಾಬಾದಲ್ಲಿ ತ್ರಿವಳಿ ಕೊಲೆ, ಅಟ್ಟಾಡಿಸಿಕೊಂಡು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ

ಕಲಬುರಗಿ : ಡಾಬಾದಲ್ಲಿ ತ್ರಿವಳಿ ಕೊಲೆ, ಅಟ್ಟಾಡಿಸಿಕೊಂಡು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ

Kalaburagi: Triple murder in a daba

ಕಲಬುರಗಿ,ಜೂ.25- ಡಾಬಾಕ್ಕೆ ನುಗ್ಗಿದ ದುಷ್ಕರ್ಮಿಗಳು ಮೂವರನ್ನು ಅಟ್ಟಾಡಿಸಿಕೊಂಡು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ನಗರದ ಹೊರವಲಯದ ಪಟ್ನಾ ಗ್ರಾಮದಲ್ಲಿ ಇಂದು ಮುಂಜಾನೆ ನಡೆದಿದೆ.ಭೀಕರವಾಗಿ ಕೊಲೆಯಾದವರನ್ನು ಪಟ್ನಾ ಗ್ರಾಮದ ಸಿದ್ದಾರೂಢ (35), ಜಗದೀಶ್‌ (28) ಮತ್ತು ರಾಮು (35) ಎಂದು ಗುರುತಿಸಲಾಗಿದೆ.

ಸಿದ್ಧಾರೂಢ ಅವರು ಡಾಬಾ ನಡೆಸುತ್ತಿದ್ದು, ಸಂಬಂಧಿಕರಾದ ಜಗದೀಶ್‌ ಹಾಗೂ ರಾಮಚಂದ್ರ ಅವರು ಈ ಡಾಬಾದಲ್ಲೇ ಕೆಲಸ ಮಾಡಿಕೊಂಡಿದ್ದರು. ಇಂದು ಮುಂಜಾನೆ 1.30 ರ ಸುಮಾರಿನಲ್ಲಿ ಏಕಾಏಕಿ ಮಾರಕಾಸ್ತ್ರಗಳೊಂದಿಗೆ ಡ್ರೈವರ್‌ ಡಾಬಾಗೆ ನುಗ್ಗಿದ 10 ರಿಂದ 12 ಮಂದಿಯ ದುಷ್ಕರ್ಮಿಗಳ ಗುಂಪು ಕೆಲಸ ಮಾಡುತ್ತಿದ್ದ ಈ ಮೂವರನ್ನು ಗುರಿಯಾಗಿಸಿಕೊಂಡು ಅಟ್ಟಾಡಿಸಿ ಭೀಕರವಾಗಿ ಮನಬಂದಂತೆ ಕೊಚ್ಚಿ ಹತ್ಯೆ ಮಾಡಿ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾರೆ.

ಈ ಮೂವರ ಮೃತದೇಹಗಳು ರಕ್ತಿಸಿಕ್ತವಾಗಿ ಬಿದ್ದಿದ್ದನ್ನು ಕಂಡು ಗ್ರಾಹಕರು ಆತಂಕಗೊಂಡು ಡಾಬಾದಿಂದ ಹೊರಗೆ ಓಡಿ ಹೋಗಿದ್ದಾರೆ.ಸುದ್ದಿ ತಿಳಿಯುತ್ತಿದ್ದಂತೆ ಸಬ್‌ ಅರ್ಬನ್‌ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಕೊಲೆಯಾದವರ ಪೈಕಿ ಒಬ್ಬಾತ ಕೊಲೆ ಪ್ರಕರಣವೊಂದರ ಆರೋಪಿ ಎಂದು ತಿಳಿದುಬಂದಿದ್ದು, ಹಳೆಯ ವೈಷಮ್ಯದಿಂದಾಗಿ ಕೊಲೆ ನಡೆದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿರುವ ಪೊಲೀಸರು ಹಂತಕರ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ. ಸಬ್‌ ಅರ್ಬನ್‌ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

ತ್ರಿವಳಿ ಕೊಲೆ ಘಟನೆಯಿಂದ ನಗರದ ಜನತೆ ಬೆಚ್ಚಿಬಿದ್ದಿದ್ದಾರೆ. ಮುಂಜಾನೆ ದುಷ್ಕರ್ಮಿಗಳು ಡಾಬಾಗೆ ನುಗ್ಗಿ ಮೂವರನ್ನು ಗ್ರಾಹಕರ ಎದುರಲ್ಲೇ ಕೊಲೆ ಮಾಡಿರುವುದನ್ನು ಗಮನಿಸಿದರೆ, ಹಂತಕರಿಗೆ ಪೊಲೀಸರ ಭಯವಿಲ್ಲ ಎಂಬುದು ಗೊತ್ತಾಗುತ್ತದೆ.

RELATED ARTICLES

Latest News