ಬೆಂಗಳೂರು, ಜೂ.26- ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆ ನಡೆಸಿದ ಮಾಸಿಕ ತಪಾಸಣೆಯಲ್ಲಿ ಪ್ಯಾರಸಿಟಮಲ್ ಮಾತ್ರೆಗಳು ಗುಣಮಟ್ಟದಲ್ಲಿ ವೈಫಲ್ಯವಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮೊದಲು ಸಣ್ಣಪುಟ್ಟ ಔಷಧಿಗಳನ್ನು ಮಾತ್ರ ಪರೀಕ್ಷೆಗೊಳಪಡಿಸಲಾಗುತ್ತಿತ್ತು. ಇಲಾಖೆಯ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆಯನ್ನು ನೀಡಿದ್ದು, ಮಾರ್ಗಸೂಚಿಯನುಸಾರ ಎಲ್ಲಾ ಔಷಧಿಗಳನ್ನೂ ತಪಾಸಣೆಗೆ ಒಳಪಡಿಸಲಾಗಿದೆ. ಅದರ ಪ್ರಕಾರ, ಪ್ರತೀ ತಿಂಗಳು ಔಷಧಿ, ಕಾಂತಿವರ್ಧಕ ಮತ್ತು ಸೌಂದರ್ಯವರ್ಧಕಗಳನ್ನು ಸ್ಯಾಂಪಲ್ ಪಡೆದು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರಲ್ಲಿ ಕುಂಕುಮ ಹಾಗೂ ಪ್ಯಾರಸಿಟಮಲ್ ಔಷಧಿಗಳು ಗುಣಮಟ್ಟದಲ್ಲಿ ವೈಫಲ್ಯವಾಗಿವೆ ಎಂದಿದ್ದಾರೆ.
ಔಷಧಿಗಳ ನಿಯಮಿತ ಪರಿಶೀಲನೆ ಹಾಗೂ ಗುಣಮಟ್ಟ ವೈಫಲ್ಯವಾದ ಸಂದರ್ಭದಲ್ಲಿ ಔಷಧಿಗಳನ್ನು ಹಿಂಪಡೆಯಲು ಅನುಕೂಲವಾಗುವಂತೆ ವಿಶೇಷವಾದ ನೀತಿಯನ್ನು ರೂಪಿಸಲಾಗುತ್ತಿದೆ. ಅದರ ಪ್ರಕಾರ, ಮುಂದಿನ ದಿನಗಳಲ್ಲಿ ಕಳಪೆ ಮಟ್ಟದ ಔಷಧಿ, ಕಾಂತಿವರ್ಧಕ, ಸೌಂದರ್ಯವರ್ಧಕ ಹಾಗೂ ಆಹಾರ ಉತ್ಪಾದನೆಯಲ್ಲಿ ಬಳಸುವ ರಾಸಾಯನಿಕಗಳ ಗುಣಮಟ್ಟ ಪರಿಶೀಲನೆಗೆ ಒಳಪಡಿಸಿ ಕಳಪೆ ಕಂಡುಬಂದಾಗ ಕ್ರಿಮಿನಲ್ ಕೇಸ್ ದಾಖಲಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಮಾರುಕಟ್ಟೆಯಿಂದ ಸದರಿ ಸರಕನ್ನು ಸಂಪೂರ್ಣವಾಗಿ ಹಿಂಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ವಿಚಾರವಾಗಿ ರಾಷ್ಟ್ರಮಟ್ಟದಲ್ಲಿ ಕಾನೂನು ರೂಪುಗೊಳ್ಳಬೇಕು. ಅದಕ್ಕಾಗಿ ನಾವು ಕೇಂದ್ರ ಸರ್ಕಾರಕ್ಕೆ ಪತ್ರವನ್ನೂ ಬರೆದಿದ್ದೆ. ಅಲ್ಲಿಂದ ಸರಿಯಾದ ಉತ್ತರ ಬಂದಿಲ್ಲ. ನಮ್ಮ ಸರ್ಕಾರ ನಮ್ಮದೇ ವ್ಯಾಪ್ತಿಯಲ್ಲಿ ಕೈ ಕಟ್ಟೆ ಕೂರದೇ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದು ತಿಳಿಸಿದರು.
ಔಷಧಿ ಗುಣಮಟ್ಟಗಳ ಪರಿಶೀಲನೆಯ ಸಮಗ್ರ ಮಾಹಿತಿಯನ್ನು ವೆಬ್ಸೈಟ್ನಲ್ಲಿ ಅಳವಡಿಸಲಾಗಿದೆ. ಸಾರ್ವಜನಿಕರು ಸ್ವಯಂ ವೈದ್ಯ ಮಾಡಿಕೊಳ್ಳುವ ಬದಲಾಗಿ ವೈದ್ಯರ ತಪಾಸಣೆಗೊಳಗಾಗಬೇಕು. ವೈದ್ಯಕೀಯ ಶಿಫಾರಸು ಆಧರಿಸಿಯೇ ಔಷಧಿ ತೆಗೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಜನರಿಗೆ ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತದೆ ಎಂದರು.
ಪ್ಯಾರಸಿಟಮಲ್ ಸೇರಿದಂತೆ ಯಾವುದೇ ಔಷಧಿಯಾಗಿದ್ದರೂ ಬ್ಯಾಚ್ಗಳ ಆಧಾರದ ಮೇಲೆ ಪರಿಶೀಲಿಸಲಾಗುತ್ತದೆ. ಒಟ್ಟಾರೆ ಎಲ್ಲಾ ಔಷಧಿಯೂ ಕಳಪೆ ಎಂದು ಹೇಳಲಾಗುವುದಿಲ್ಲ. ಪರೀಕ್ಷೆಗೊಳಪಟ್ಟ ಔಷಧಿಗಳ ಗುಣಮಟ್ಟವನ್ನು ಮಾತ್ರ ಆಧರಿಸಿ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ.
ಗುಣಮಟ್ಟದಲ್ಲಿ ವೈಫಲ್ಯಗೊಂಡ ಔಷಧಿಗಳ ಇತರ ಬ್ಯಾಚ್ಗಳನ್ನು ಹೆಚ್ಚಿನ ತಪಾಸಣೆಗೊಳಪಡಿಸಲಾಗುತ್ತದೆ. ರಾಜ್ಯಸರ್ಕಾರದ ಈ ಕ್ರಮದಿಂದ ಔಷಧಿ ಹಾಗೂ ಇತರ ವಸ್ತುಗಳ ತಯಾರಿಕರ ಜವಾಬ್ದಾರಿ ಹೆಚ್ಚಾಗುತ್ತದೆ. ಸರ್ಕಾರ ನಿಯಮಿತ ಪರಿಶೀಲನೆಗೊಳಪಡಿಸುತ್ತದೆ ಎಂಬ ಕಾರಣಕ್ಕೆ ಗುಣಮಟ್ಟ ಕಾಯ್ದುಕೊಳ್ಳಲು ಅನುಕೂಲವಾಗಲಿದೆ ಎಂದು ತಿಳಿಸಿದರು.
- ಚೀನಾದಲ್ಲಿ ಪ್ರವಾಹಕ್ಕೆ ಆರು ಮಂದಿ ಬಲಿ
- ಸಂಸತ್ಗಿಂತ ಸಂವಿಧಾನವೇ ಸರ್ವೋಚ್ಚ : ಸಿಜೆಐ ಬಿ.ಆರ್. ಗವಾಯಿ
- 50 ಕೋಟಿ ಮೌಲ್ಯದ ಡ್ರಗ್ಸ್ ನಾಶಪಡಿಸಿದ ಪೊಲೀಸರು
- ರಕ್ಷಣಾ ಸ್ವಾವಲಂಬನೆಗೆ ಒತ್ತು : ಪ್ರಧಾನಿ ಮೋದಿ
- ಅಧ್ಯಕ್ಷರು, ಸಚಿವರ ಬದಲಾವಣೆ : ರಾಜ್ಯ ರಾಜಕೀಯದಲ್ಲಿ ಮತ್ತೊಮ್ಮೆ ಗರಿಗೆದರಿದ ಚರ್ಚೆ