ಕೆಜಿಎಫ್,ಜು.18- ನಗರದ ಪ್ರತಿಯೊಂದು ಬೀದಿಯಲ್ಲೂ ಕನಿಷ್ಠ 5ರಿಂದ 15 ನಾಯಿಗಳ ಗುಂಪು ನಿತ್ಯ ದಂಡು ಸೇರುತ್ತಿದ್ದು, ಅವುಗಳ ಬೊಗಳಾಟ, ಅಳುವ ಶಬ್ದದಿಂದ ನಿದ್ರೆಯಿಲ್ಲದೆ ಸ್ಥಳೀಯರು ನರಕಯಾನತೆ ಅನುಭವಸುವಂತಾಗಿದೆ.
ರಾತ್ರಿ ಶಾಂತವಾಗಿ ನಿದ್ರೆ ಮಾಡಬೇಕಾದ ಸಮಯದಲ್ಲಿನಾಯಿಗಳ ನಿರಂತರ ಬೊಗಳುವಿಕೆಯಿಂದ, ಕೆಲಸಕ್ಕೆ ಹೋಗುವ ಕಾರ್ಮಿಕರು, ಉದ್ಯೋಗಿಗಳು, ವಿದ್ಯಾರ್ಥಿಗಳು ಮನೆಯಿಂದ ಹೊರಡಲು ಮತ್ತು ವಾಪಸ್ಸಾಗುವ ವೇಳೆ ಭಯದಿಂದಲೇ ಓಡಾಡುವಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
17 ಲಕ್ಷ ಏನಾಯ್ತು?
ಎರಡು ವರ್ಷಗಳ ಹಿಂದೆ ಆಗಿನ ನಗರಸಭಾ ಅಧ್ಯಕ್ಷರಾಗಿದ್ದ ವಳ್ಳಲುನಿಸ್ವಾಮಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಬೀದಿನಾಯಿಗಳ ಸಂತಾನ ನಿಯಂತ್ರಣಕ್ಕಾಗಿ 17 ಲಕ್ಷ ರೂ. ಮಂಜೂರು ಮಾಡಲಾಗಿದೆ ಎಂದು ಘೋಷಿಸಿದ್ದರು. ಆದರೆ ಈವರೆಗೆ ಯಾವುದೇ ಕ್ರಮಗಳು ಕೈಗೊಳ್ಳದಿರುವುದು ಸಾರ್ವಜನಿಕರಲ್ಲಿ ಅಸಮಾಧಾನ ಉಂಟುಮಾಡಿದೆ.
ಜನಜೀವನ ನಾಯಿಪಾಡು!
ನಾಯಿಗಳ ಸಂಖ್ಯೆ ಹೆಚ್ಚಳದಿಂದಾಗಿ ರಸ್ತೆಯಲ್ಲಿ ಸುಗಮ ವಾಹನಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ. ಎರಡು ಹಾಗೂ ನಾಲ್ಕು ಚಕ್ರದವಾಹನಗಳ ಅಪಘಾತಗಳು ಹೆಚ್ಚಾಗುತ್ತಿದ್ದು, ಶಾಲಾ-ಕಾಲೇಜು ಮಕ್ಕಳ ಪ್ರಾಣಕ್ಕೂ ಅಪಾಯ ಎದುರಾಗುತ್ತಿದೆ.
ಇನ್ನು ಕೆಲವು ನಾಯಿಗಳು ಹಿಂಸಾತಕ ರೂಪತಾಳುತ್ತಿದ್ದು, ಮಕ್ಕಳು, ವೃದ್ಧರು, ಮಹಿಳೆಯರು ಹಾಗೂ ಇತರ ಸಾರ್ವಜನಿಕರನ್ನು ಅಟ್ಟಿಸಿಕೊಂಡು ಹೋಗುತ್ತವೆ. ಮಕ್ಕಳು ಬೀದಿಯಲ್ಲಿ ಓಡಾಡುವುದು ದುಸ್ತರ ಎನಿಸಿದೆ. ಇದ್ದಕ್ಕಿದ್ದಂತೆ ಆಕ್ರಮಣ ಮಾಡುತ್ತವೆ.
ರಾತ್ರಿ ಪಾಳಿ ಕೆಲಸ ಮುಗಿಸಿಕೊಂಡು ಮನೆಗೆ ಮರಳುವವರ ಮೇಲೆ ತೀವ್ರವಾಗಿ ಆಕ್ರಮಣ ಮಾಡುತ್ತಿವೆ. ನಾಯಿಗಳ ಆಕ್ರಮಣದಿಂದ ತಪ್ಪಿಸಿಕೊಂಡು ಓಡುವ ಪ್ರಯತ್ನದಲ್ಲಿ ಹಲವರು ಗಾಯಗೊಂಡಿರುವ ನಿದರ್ಶನಗಳಿವೆ.
ಇಲ್ಲಿ ನಾಯಿಗಳ ಕಡಿತ ಪ್ರಕರಣಗಳು ಸಾಮಾನ್ಯವಾಗಿಬಿಟ್ಟಿವೆ. ಕೋಳಿಗಳು, ಮೇಕೆ, ಕುರಿ, ಹಸುಗಳು ಬೀದಿನಾಯಿಗಳ ಕಡಿತಕ್ಕೆ ಗುರಿಯಾಗುತ್ತಿವೆ. ಬೆಮೆಲ್ನಗರದ ಬಳಿ ನಾಯಿಗಳ ಕಡಿತಕ್ಕೆ ಜಿಂಕೆಗಳು ಬಲಿಯಾಗಿವೆ.
ಇನ್ನೊಂದು ಅಂಶವೆಂದರೆ, ನಾಯಿಗಳು ವಾಹನಗಳ ಚಕ್ರಗಳ ಮೇಲೆ ಮೂತ್ರವಿಸರ್ಜನೆ ಮಾಡುವುದು, ಟೈರ್ಗಳನ್ನು ಕಚ್ಚುವುದು, ಎಳೆದಾಡುವುದು ಮಾಡುತ್ತಿವೆ. ಇದರಿಂದ ವಾಹನಗಳಿಗೆ ಹಾನಿಯಾಗುತ್ತಿವೆ.
ನಡುಬೀದಿಯಲ್ಲೇ ನಾಯಿಗಳ ದಂಡು ನಿದ್ರೆಗೆ ಜಾರುತ್ತಿವೆ. ಆಟವಾಡುವುದು, ಜಗಳವಾಡುವುದು, ದಾರಿದಾಟುವುದು ಮೊದಲಾದವುಗಳಿಂದ ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ. ಇದನ್ನುನಿಯಂತ್ರಿಸದೇ ಹೋದರೆ ಮುಂದೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ.
ಶಾಸಕರೆ, ಕ್ರಮಕೈಗೊಳ್ಳಿ
ಕ್ಷೇತ್ರದಶಾಸಕರುತಕ್ಷಣವೇನಗರಸಭೆ ಆಡಳಿತದ ಗಮನಸೆಳೆಯಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಬೀದಿನಾಯಿಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯುವಂತೆ ಕಾಲಮಿತಿ ಹಾಕಬೇಕು. ಕೂಡಲೇ ಸ್ಟೆರಿಲೈಸೇಶನ್ (ಜನನನಿಯಂತ್ರಣ), ಆರೋಗ್ಯ ಪೂರ್ಣನಿರ್ವಹಣೆ, ಹಾಗೂ ಬೀದಿನಾಯಿಗಳನ್ನು ಪಶುಪಾಲನಾ ಇಲಾಖೆಯ ಸಹಾಯದಿಂದ ಸ್ಥಳಾಂತರಿಸುವ ಮುಂತಾದಕ್ರಮಗಳನ್ನು ಕೈಗೊಳ್ಳಬೇಕು ಇದು ನಾಗರಿಕರ ಹಿತದದೃಷ್ಟಿಯಿಂದ ತುರ್ತುಅಗತ್ಯ, ಜರೂರಾಗಿ ಆಗಬೇಕಿದೆ ಎಂದು ದೊರೈಅರಸು ಮನವಿ ಮಾಡಿಕೊಂಡಿದ್ದಾರೆ.