ಬೆಂಗಳೂರು,ಫೆ.13- ಒಂದು ಕಡೆ ಕೆಲಸವಿಲ್ಲದೇ ಕೈಯಲ್ಲಿ ಹಣವಿಲ್ಲ, ಮತ್ತೊಂದು ಕಡೆ ಪೋಷಕರ ನಿಂದನೆ. ಈ ಎಲ್ಲದರ ನಡುವೆ ಆತ ಅವಿವಾಹಿತನಾಗಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ಅಪ್ಪ-ಅಮನನ್ನೇ ಕೊಲೆ ಮಾಡಿ ಜೈಲು ಸೇರಿದ್ದಾನೆ.
ಕಳೆದ ಎರಡು ದಿನಗಳ ಹಿಂದೆ ಹೆಚ್ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯ ವಿಜ್ಞಾನನಗರದ ಆದರ್ಶ ವಿಸ್ತಾ ಅಪಾರ್ಟ್ಮೆಂಟ್ನಲ್ಲಿ ನಡೆದಿದ್ದ ನೌಕಾಪಡೆಯ ನಿವೃತ್ತ ಕ್ಯಾಪ್ಟನ್ ನವೀನ್ಚಂದ್ರಭಟ್ (60) ಹಾಗೂ ವೈದ್ಯೆ ಶ್ಯಾಮಲಾಭಟ್ (55) ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಮಗ ರೋಹನ್ ಚಂದ್ರಭಟ್ (33) ಎಂಬಾತನ ದುರಂತ ಕಥೆ.
ರೋಹನ್ಚಂದ್ರಭಟ್ ಈ ಹಿಂದೆ ಸಾಫ್್ಟವೇರ್ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿದ್ದನು.ಕೆಲ ತಿಂಗಳ ಹಿಂದೆಯಷ್ಟೇ ಆ ಕೆಲಸ ಬಿಟ್ಟು ಹೊಸ ಉದ್ಯಮ ಆರಂಭಿಸಲು ನಿರ್ಧರಿಸಿ ಪೋಷಕರ ಬಳಿ ಹಣಕಾಸಿನ ನೆರವು ಕೇಳಿದ್ದ.ಆದರೆ ಹಣ ಕೊಡಲು ಅವರು ನಿರಾಕರಿಸಿ ಮನೆಕೆಲಸದವರ ಮುಂದೆಯೇ ಬೈದಿದ್ದಾರೆ. ಇದ್ದ ಕೆಲಸ ಬಿಟ್ಟು ಓಡಾಡಿಕೊಂಡಿದ್ದ ಮಗನ ವರ್ತನೆಯಿಂದ ಪೋಷಕರು ಬೇಸರ ವ್ಯಕ್ತಪಡಿಸಿದ್ದರು. ನಿನಗೆ ಸ್ವಲ್ಪವೂ ಜವಾಬ್ದಾರಿ ಇಲ್ಲ. ನಿನ್ನ ಸಹೋದರಿ ವಿದೇಶದಲ್ಲಿ ಉತ್ತಮ ಕೆಲಸದಲ್ಲಿದ್ದಾಳೆ ಎಂದು ನಿಂದಿಸಿ ನನಗೆ ಹಾಲಿನಲ್ಲಿ ನಿದ್ರೆ ಮಾತ್ರೆ ಬೆರೆಸಿ ಕೊಡುತ್ತಿದ್ದರು.
ಅಲ್ಲದೇ ನಮ ಕುಟುಂಬದ ಮರ್ಯಾದೆ ಕಳೆಯಲು ನೀನು ಹುಟ್ಟಿದ್ದೀಯಾ ಎಂದು ಸಂಬಂಧಿಕರ ಎದುರು ಬೈದು ನನಗೆ ಅವಮಾನಿಸುತ್ತಿದ್ದರು. ಹಾಗಾಗಿ ಕೋಪದಲ್ಲಿ ನಾನು ಇಬ್ಬರನ್ನೂ ಕೊಲೆ ಮಾಡಿದೆ ಎಂದು ವಿಚಾರಣೆ ವೇಳೆ ಆತ ಪೊಲೀಸರ ಮುಂದೆ ಹೇಳಿಕೆ ನೀಡಿರುವುದು ಗಮನಿಸಿದರೇ ಆತ ಮಾನಸಿಕವಾಗಿ ಸ್ಥಿಮಿತ ಕಳೆದುಕೊಂಡು ಈ ಕೃತ್ಯ ವೆಸಗಿರುವುದು ಪೊಲೀಸರ ಇದುವರೆಗಿನ ತನಿಖೆಯಿಂದ ತಿಳಿದು ಬಂದಿದೆ.
