ಕನಕಪುರ, ಅ.12– ರಾಜಿ ಮಾಡುವ ನೆಪದಲ್ಲಿ ಕರೆಸಿಕೊಂಡು ಯುವಕನ ಎದೆ ಮೇಲೆ ಕಲ್ಲು ಎತ್ತಿಹಾಕಿ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಕಳೆದ ರಾತ್ರಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಗೆಂಡಿಗೆರೆಯಲ್ಲಿ ನಡೆದಿದೆ.
ಯಡವನಗೇಟ್ ಸಮೀಪದ ನಿವಾಸಿ ಸುನೀಲ್ (30) ಮೃತಪಟ್ಟಿದ್ದು, ಆತನ ಸಹೋದರ ಕಿರಣ್ ಸೇರಿದಂತೆ ಹಲವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕನಕಪುರದ ನುಗುಲು ಗ್ರಾಮದಲ್ಲಿ ಮುನಿರಾಜು ಮತ್ತು ಜಯಲಕ್ಷ್ಮಿ ಎಂಬ ದಂಪತಿ ವಾಸವಾಗಿದ್ದು, ಅವರಿಗೆ ಸುನಿಲ್ ಮತ್ತು ಕಿರಣ್ ಎಂಬ ಮಕ್ಕಳಿದ್ದಾರೆ. ಇವರಿಗೆ ಒಂದೂವರೆ ಎಕರೆ ಕೃಷಿ ಜಮೀನಿದೆ.
ಈ ನಡುವೆ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡು ಜಯಲಕ್ಷ್ಮಿ ಮತ್ತು ಮಕ್ಕಳು ಮುನಿರಾಜುನನ್ನು ಬಿಟ್ಟು ಯಡವನಗೇಟ್ ಬಳಿ ಮನೆ ಮಾಡಿಕೊಂಡು ವಾಸವಾಗಿದ್ದರು.
ಮುನಿರಾಜು ಇತ್ತೀಚೆಗೆ ತನ್ನ ಒಂದೂವರೆ ಎಕರೆ ಜಮೀನನ್ನು ಪಾರ್ಥ ಎಂಬುವವರಿಗೆ ಮಾರಾಟ ಮಾಡಿದ್ದ. ಇದು ಜಯಲಕ್ಷ್ಮಿ ಮತ್ತು ಅವರ ಮಕ್ಕಳಿಗೆ ತಿಳಿದು ನಿನ್ನೆ ಇವರು ಪಾರ್ಥನ ಮನೆ ಬಳಿ ಬಂದು ನಮಗೆ ತಿಳಿಯದೆ ಮತ್ತು ನಮ ಸಹಿ ಪಡೆಯದೆ ನೀವು ಜಮೀನು ಕೊಂಡಿದ್ದೀರಿ ಮತ್ತು ನೋಂದಣಿ ಕೂಡ ಮಾಡಿಸಿಕೊಂಡಿದ್ದೀರಿ.
ಇದು ಹೇಗೆ ಎಂದು ಕೇಳಿದ್ದಾರೆ. ಸ್ಥಳೀಯರು ಇವರನ್ನು ಸಮಾಧಾನ ಮಾಡಿ ಕಳುಹಿಸಿದ್ದಾರೆ.ನಂತರ ರಾತ್ರಿ ಪಾರ್ಥ ಕುಳಿತು ಮಾತನಾಡಿ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳೋಣ ಬನ್ನಿ ಎಂದು ಕರೆದಿದ್ದಾರೆ. ಎಲ್ಲರೂ ಇವರ ಮಾತನ್ನು ನಂಬಿ ಸುನಿಲ್, ಕಿರಣ್ ಮತ್ತಿತರರು ಅಲ್ಲಿಗೆ ಹೋಗಿದ್ದಾರೆ.
ಈ ಸಂದರ್ಭದಲ್ಲಿ ಗುಂಪು ಕಟ್ಟಿಕೊಂಡು ಬಂದಿದ್ದ ಪಾರ್ಥ ಏಕಾಏಕಿ ಕಿರಣ್ ಮತ್ತು ಸುನಿಲ್ ಮೇಲೆ ಎರಗಿದ್ದಾರೆ. ಸುನೀಲ್ ಮೇಲೆ ಕಲ್ಲು ಎತ್ತಿ ಹಾಕಿದರೆ, ಕಿರಣ್ಗೆ ದೊಣ್ಣೆಯಿಂದ ಹೊಡೆದು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.
ಗಲಾಟೆ ನಡೆಯುತ್ತಿದ್ದನ್ನು ನೋಡಿದ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದಾವಿಸಿದ ಸಿಬ್ಬಂದಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸುನಿಲ್ ಮತ್ತು ಕಿರಣ್ನನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸುನಿಲ್ ಮೃತಪಟ್ಟಿದ್ದಾರೆ. ಕನಕಪುರ ಗ್ರಾಮಾಂತರ ಠಾಣೆ ಪೊಲೀಸರು ಪಾರ್ಥ ಹಾಗೂ ಆತನ ಪುತ್ರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.