Sunday, May 19, 2024
Homeಬೆಂಗಳೂರುಕಾಸ್ಮೆಟಿಕ್ ಸರ್ಜರಿಗೆ ಬಂದು ವೈದ್ಯರಿಗೆ 6 ಕೋಟಿ ಪಂಗನಾಮ ಹಾಕಿದ ಮಹಿಳೆ

ಕಾಸ್ಮೆಟಿಕ್ ಸರ್ಜರಿಗೆ ಬಂದು ವೈದ್ಯರಿಗೆ 6 ಕೋಟಿ ಪಂಗನಾಮ ಹಾಕಿದ ಮಹಿಳೆ

ಬೆಂಗಳೂರು,ಫೆ.7- ಕಾಸ್ಮೆಟಿಕ್ ಸರ್ಜರಿಗೆ ಬಂದಿದ್ದ ಮಹಿಳೆಯ ಮಾತಿಗೆ ಮರಳಾದ ವೈದ್ಯರೊಬ್ಬರು ಐಷಾರಾಮಿ ಕಾರಿನ ದುರಾಸೆಗೆ ಬಿದ್ದು ಬರೋಬ್ಬರಿ 6 ಕೋಟಿ ರೂ. ಹಣವನ್ನು ಕಳೆದುಕೊಂಡಿರುವ ಘಟನೆ ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಈ ಬಗ್ಗೆ ಐಶ್ವರ್ಯ ಗೌಡ ಎಂಬ ಮಹಿಳೆ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ವಿಜಯನಗರದಲ್ಲಿ ಡಾ.ಗಿರೀಶ್ ಹಾಗೂ ಇವರ ಪತ್ನಿ ಡಾ.ಮಂಜುಳಾ ಖಾಸಗಿ ಆಸ್ಪತ್ರೆ ನಡೆಸುತ್ತಿದ್ದಾರೆ.

2022ರಲ್ಲಿ ಐಶ್ವರ್ಯ ಗೌಡ ಎಂಬ ಮಹಿಳೆ ಇವರ ಆಸ್ಪತ್ರೆಗೆ ಕಾಸ್ಮೆಟಿಕ್ ಸರ್ಜರಿಗೆ ಬಂದಿದ್ದಾಗ ಪರಿಚಯವಾಗಿದೆ. ವೈದ್ಯ ದಂಪತಿ ಬಳಿ ಹಣ ಇರುವುದನ್ನು ತಿಳಿದುಕೊಂಡಿದ್ದ ಆಕೆ, ನಾನು ರಿಯಲ್ ಎಸ್ಟೇಟ್ ಫೈನಾನ್ಸ್ ವ್ಯವಹಾರ ಮಾಡಿಕೊಂಡಿರುವುದಾಗಿ ಪರಿಚಯಿಸಿಕೊಂಡಿದ್ದಾಳೆ. ಐಷಾರಾಮಿ ಸೆಕೆಂಡ್ ಹ್ಯಾಂಡ್ ಕಾರುಗಳ ವ್ಯವಹಾರವನ್ನು ಸಹ ಮಾಡಿಕೊಂಡಿರುವುದಾಗಿ ತಿಳಿಸಿದ್ದರಿಂದ ಡಾ.ಗಿರೀಶ್ ಅವರು ಐಷರಾಮಿ ಕಾರನ್ನು ಖರೀದಿಸಲು ಯೋಚಿಸುತ್ತಿದ್ದರಿಂದ ಈ ಮಹಿಳೆಯನ್ನು ಸಂಪರ್ಕಿಸಿದ್ದಾರೆ.

ಅತಿ ಕಡಿಮೆ ಬೆಲೆಗೆ ಐಷಾರಾಮಿ ಸೆಕೆಂಡ್ ಹ್ಯಾಂಡ್ ಕಾರನ್ನು ಕೊಡಿಸುವುದಾಗಿ ಡಾ.ಗಿರೀಶ್ ಅವರನ್ನು ನಂಬಿಸಿ ಮೊದಲಿಗೆ 2 ಕೋಟಿ 75 ಲಕ್ಷ ರೂ.ಗಳನ್ನು ಆನ್ಲೈನ್ ಆರ್ಟಿಜಿಎಸ್ ಮೂಲಕ ಹಾಕಿಸಿಕೊಂಡಿದ್ದಲ್ಲದೆ 3.25 ಕೋಟಿ ನಗದು ಹಣ ಸೇರಿ 6 ಕೋಟಿ ಹಣವನ್ನು ಪಡೆದು ಕಾರನ್ನು ಕೊಡಿಸದೆ ಹಣವನ್ನು ಹಿಂದಿರುಗಿಸದೆ ವಂಚಿಸಿದ್ದಾಳೆ.

ಕಾಂಗ್ರೆಸ್ ಗ್ಯಾರಂಟಿಗಳನ್ನು ಈಡೇರಿಸಲಾಗದೇ ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ : ವಿಜಯೇಂದ್ರ

ವೈದ್ಯ ದಂಪತಿ ಕ್ಲಬ್ವೊಂದರ ಬಳಿ ಹೋಗಿ ಐಶ್ವರ್ಯ ಗೌಡಳನ್ನು ಭೇಟಿ ಮಾಡಿ ಹಣವನ್ನು ಹಿಂದಿರುಗಿಸುವಂತೆ ಕೇಳಿದಾಗ ಅವಾಚ್ಯ ಶಬ್ದಗಳಿಂದ ಡಾ.ಗಿರೀಶ್ ಅವರಿಗೆ ಬೈದು ನೀನು ಇದೇ ರೀತಿ ಮುಂದುವರೆಸಿದರೆ ನಿನ್ನ ವಿರುದ್ಧ ನನ್ನ ಮೇಲೆ ಅತ್ಯಾಚಾರ ಮಾಡಿ ನನ್ನ ಮಾನಕ್ಕೆ ಧಕ್ಕೆ ಉಂಟು ಮಾಡಿದ್ದಾನೆ ಎಂಬುವುದಾಗಿ ಪೊಲೀಸ್ ಠಾಣೆಗೆ ಹೋಗಿ ಸುಳ್ಳು ದೂರು ನೀಡುವುದಾಗಿ, ಈ ಬಗ್ಗೆ ಮಾಧ್ಯಮದಲ್ಲೂ ಪ್ರಕಟಿಸುವುದಾಗಿ ಧಮ್ಕಿ ಹಾಕಿದ್ದಾಳೆ.

ಹಣ ಪಡೆದು ಏಕೆ ಮೋಸ ಮಾಡುತ್ತಿದ್ದೀಯಾ ಎಂದು ಕೇಳಿದರೆ, ಈ ವಿಷಯವನ್ನು ಇಲ್ಲಿಗೆ ಬಿಟ್ಟು ಬಿಡಲು 5 ಲಕ್ಷ ಕೊಡುವಂತೆ ಬೆದರಿಕೆ ಹಾಕಿ ಮತ್ತೆ ಎರಡು ಲಕ್ಷ ಹಣ ಸುಲಿಗೆ ಮಾಡಿದ್ದಾಳೆ. ಮಹಿಳೆಯ ವರ್ತನೆಯಿಂದ ನೊಂದ ಡಾ.ಗಿರೀಶ್ ಅವರು ಇದೀಗ ವಿಜಯನಗರ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ದಾಖಲಿಸಿ ನ್ಯಾಯಕ್ಕಾಗಿ ಮೊರೆ ಹೋಗಿದ್ದಾರೆ. ಡಾ.ಗಿರೀಶ್ ನೀಡಿರುವ ದೂರನ್ನು ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News