ಕನಕಪುರ,ಮಾ.20- ಎರಡೂವರೆ ವರ್ಷದ ಮಗುವಿನ ಮೇಲೆ ಅಂಗನವಾಡಿ ಸಹಾಯಕಿ ಒಬ್ಬರು ಚಾಕುವಿನಿಂದ ಬರೆ ಹಾಕಿ ಗುದದ್ವಾರಕ್ಕೆ ಖಾರದಪುಡಿ ಹಾಕಿ ಕ್ರೌರ್ಯ ಮೆರೆದಿರುವ ಆರೋಪ ಕೇಳಿಬಂದಿದೆ.
ನಗರದ ಮಹಾರಾಜರಕಟ್ಟೆಯ ಅಂಗನವಾಡಿ ಕೇಂದ್ರದಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಟ್ಟಣದ ಜ್ಯೋತಿ ಬಾಯಿ ಮತ್ತು ರಮೇಶ್ ದಂಪತಿಯ ಪುತ್ರ ದೀಕ್ಷಿತ್ ಎಂಬ ಮಗುವಿನ ಮೇಲೆ ಅಮಾನವೀಯತೆಯಿಂದ ಕೈ ಮೇಲೆ ಕಾದ ಚಾಕುವಿನಿಂದ ಬರೆ ಹಾಕಿದ್ದಲ್ಲದೆ ಗುದದ್ವಾರಕ್ಕೆ ಖಾರದಪುಡಿ ಹಾಕಿದ್ದಾಳೆ.
ಮಗು ಜೋರಾಗಿ ಅಳುತ್ತಿರುವುದನ್ನು ಕಂಡ ತಾಯಿ ಕೂಡಲೇ ಅಂಗನವಾಡಿ ಕೇಂದ್ರದ ಬಳಿ ಬಂದು ಮಗುವನ್ನು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಏನೂ ತಪ್ಪು ಮಾಡದಿದ್ದರೂ ತಮ್ಮ ಮನೆಯಲ್ಲಿನ ಒತ್ತಡದಿಂದ ಮಗುವಿಗೆ ಈ ರೀತಿ ಮಾಡಿದ್ದಾರೆ ಎಂದು ಪೋಷಕರು ದೂರಿದ್ದಾರೆ. ಅಂಗನವಾಡಿ ಸಹಾಯಕಿಯ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.