ದುಬೈ, ಸೆ.28- ಕ್ರಿಕೆಟ್ನಲ್ಲಿ ಬದ್ಧ ವೈರಿಗಳೆಂದೇ ಬಿಂಬಿತವಾಗಿರುವ ಭಾರತ-ಪಾಕಿಸ್ತಾನ ನಡುವಿನ ಏಷ್ಯಾಕಪ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಈಗಾಗಲೇ ಪಂದ್ಯಾವಳಿಯಲ್ಲಿ ಎಲ್ಲ ತಂಡಗಳನ್ನೂ ಮಣಿಸಿ ದಿಗ್ವಿಜಯ ಸಾಧಿಸಿರುವ ಸೂರ್ಯಕುಮಾರ್ ಯಾದವ್ ಸಾರಥ್ಯದ ಭಾರತ ತಂಡ ಬಲಿಷ್ಠವಾಗಿ ಕಾಣಿಸುತ್ತಿದ್ದು, ಈಗಾಗಲೇ ಎರಡು ಬಾರಿ ಸೋತಿರುವ ಪಾಕಿಸ್ತಾನವನ್ನು ಮತ್ತೊಮೆ ಬಗ್ಗು ಬಡಿದು ಏಷ್ಯಾ ಚಾಂಪಿಯನ್ ಕಿರೀಟ ಮುಡಿಗೇರಿಸಿ ಕೊಳ್ಳಲು ಹಾತೊರೆಯುತ್ತಿದೆ.
ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ರಾತ್ರಿ 8 ಗಂಟೆಗೆ ಆರಂಭಗೊಳ್ಳಲಿರುವ ಫೈನಲ್ ಪಂದ್ಯಕ್ಕೆ ಈಗಾಗಲೇ ಪ್ರೇಕ್ಷಕರು ಕ್ರೀಡಾಂಗಣದತ್ತ ಜಮಾಯಿಸಿದ್ದು, ಎಲ್ಲ ಟಿಕೆಟ್ಗಳೂ ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿದ್ದು, ಎಲ್ಲ ಆಸನಗಳು ಕಿಕ್ಕಿರಿದು ತುಂಬಲಿವೆ. ಈಗಾಗಲೇ ಎರಡೂ ತಂಡಗಳು ಮಧ್ಯಮ ಕ್ರಮಾಂಕದಲ್ಲಿ ಒತ್ತಡ ಅನುಭವಿಸಿವೆ. ಆದರೂ ಫೈನಲ್ ಪಂದ್ಯ, ಅದರಲ್ಲೂ ಟಿ-20 ಪಂದ್ಯ ಕ್ಷಣ ಕ್ಷಣಕ್ಕೂ ರೋಚಕತೆಯಿಂದ ಕೂಡಿರುತ್ತದೆ.ಇದರ ನಡುವೆ ಪಹಲ್ಗಾಮ್ ದಾಳಿ ನಂತರ ಭಾರತ-ಪಾಕ್ ನಡುವೆ ಅಂತರ ಕಾಯ್ದುಕೊಂಡಿದ್ದು, ಅದು ಕ್ರೀಡೆಯಲ್ಲೂ ಕಾಣಿಸಿಕೊಂಡಿದೆ. ಪಂದ್ಯದ ನಂತರ ಹಸ್ತಲಾಘವ ಮಾಡದೆ ಸುದ್ದಿಯಾಗಿದ್ದ ಟೀಂ ಇಂಡಿಯಾ ಈಗ ಫೈನಲ್ ಪಂದ್ಯಕ್ಕೂ ಮುನ್ನ ಸಾಮೂಹಿಕ ಚಿತ್ರದಲ್ಲೂ ಕಾಣಿಸಿಕೊಳ್ಳಲು ನಿರಾಕರಿಸಿದ್ದು, ಭಾರೀ ಸಂಚಲನ ಮೂಡಿಸಿದೆ.
ಪ್ರತಿಯೊಂದು ಪಂದ್ಯದಲ್ಲೂ ಮೊದಲು ಬ್ಯಾಟ್ ಮಾಡುವ ತಂಡಗಳು ಒತ್ತಡದಲ್ಲಿ ಸಿಲುಕಿ ಗುರಿ ಮುಟ್ಟುವ ತಂಡಗಳ ಬ್ಯಾಟ್್ಸಮನ್ಗಳು ನಿರಾಯಾಸವಾಗಿ ಬ್ಯಾಟ್ ಬೀಸುತ್ತಿದ್ದಾರೆ.
ಇದೇ ಮೊದಲ ಬಾರಿಗೆ ಏಷ್ಯಾಕಪ್ನಲ್ಲಿ ಬದ್ಧ ವೈರಿಗಳು ಮುಖಾಮುಖಿಯಾಗುತ್ತಿದ್ದು, ಕ್ರಿಕೆಟ್ ಪಂಡಿತರು ಹಲವಾರು ಲೆಕ್ಕಾಚಾರಗಳನ್ನು ಹಾಕಿ ಪಂದ್ಯ ಕೊನೆ ಹಂತದವರೆಗೂ ಹೋಗಬಹುದು ಎಂದು ನಿರೀಕ್ಷಿಸಿದ್ದಾರೆ.ಆದರೆ, ಬಲಿಷ್ಠವಾಗಿರುವ ಬ್ಯಾಟಿಂಗ್ ಭಾರತಕ್ಕೆ ಆಸರೆಯಾದರೆ ಬಲಿಷ್ಠ ಬೌಲಿಂಗ್ ಪಾಕಿಸ್ತಾನಕ್ಕೆ ನೆರವಾಗಿದೆ. ಈ ಎಲ್ಲದರ ನಡುವೆ ದುಬೈನ ಈ ಮೈದಾನ ಹವಾಮಾನಕ್ಕೆ ತಕ್ಕಂತೆ ಬದಲಾಗುತ್ತದೆ ಮತ್ತು ಪರಿಸ್ಥಿತಿ ಹಾಗೂ ಒತ್ತಡಗಳನ್ನು ಮೀರಿ ಆಟಗಾರರು ಕಣಕ್ಕಿಳಿಯುತ್ತಿದ್ದಾರೆ.