ಬೆಂಗಳೂರು, ಜೂ.7- ಕಳೆದ ಹಲವಾರು ವರ್ಷಗಳಿಂದ ಜಾಹೀರಾತು ತೆರಿಗೆ ಪಾವತಿಸದೆ ಕಳ್ಳಾಟವಾಡುತ್ತಿದ್ದ ಕೆಎಸ್ಸಿಎಗೆ ಬಿಬಿಎಂಪಿ ನೋಟೀಸ್ ಜಾರಿ ಮಾಡಿದೆ. ಯಾವುದೇ ಕ್ರೀಡಾಂಗಣದ ಒಳಭಾಗ ಹಾಗೂ ಹೊರಭಾಗಗಳಲ್ಲಿ ಜಾಹೀರಾತು ಪ್ರದರ್ಶಿಸಿದರೆ ಕಾನೂನಿನಂತೆ ಅವರು ಬಿಬಿಎಂಪಿಯವರಿಗೆ ತೆರಿಗೆ ಪಾವತಿಸಬೇಕು.
ಆದರೆ, ಕಳೆದ ಹಲವಾರು ವರ್ಷಗಳಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜಾಹೀರಾತು ಆಳವಡಿಸಿಕೊಂಡು ಬರಲಾಗುತ್ತಿದೆ. ಪ್ರದರ್ಶನವಾಗುವ ಜಾಹೀರಾತಿಗೆ ತೆರಿಗೆ ನೀಡಿ ಎಂದರೆ ಕೆಎಸ್ಸಿಎ ಅವರು ಕಿವಿ ಮೇಲೆ ಹಾಕಿಕೊಳ್ಳುತ್ತಿರಲಿಲ್ಲ. ನೋಟೀಸ್ ನೀಡಿದರೂ ಡೋಂಟ್ ಕೇರ್ ಎನ್ನುತ್ತಿದ್ದರು.
ಕ್ರಿಕೆಟ್ ಸಂಸ್ಥೆಯವರ ಈ ಧೋರಣೆಯಿಂದ ಬಿಬಿಎಂಪಿಗೆ ಹತ್ತಾರು ಕೋಟಿ ರೂ.ಗಳ ನಷ್ಟ ಸಂಭವಿಸಿತ್ತು. ಇದೀಗ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿರುವ ಪಾಲಿಕೆ ಅಧಿಕಾರಿಗಳು ಬಾಕಿ ತೆರಿಗೆ ಪಾವತಿಸುವಂತೆ ಮತ್ತೊಂದು ನೋಟೀಸ್ ನೀಡಿ ಬಿಸಿ ಮುಟ್ಟಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಮ್ಯಾಚ್ ನಡೆಯುವಾಗ ಎಲ್ಇಡಿ ಸೇರಿದಂತೆ ಅನೇಕ ಜಾಹೀರಾತು ಬೋರ್ಡ್ ಗಳು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಅಳವಡಿಕೆ ಮಾಡಿ ಅನಧಿಕೃತವಾಗಿ ಜಾಹೀರಾತು ಪ್ರದರ್ಶಿಸುತ್ತಿದ್ದೀರಿ. ಪಾಲಿಕೆಯಿಂದ ಜಾಹೀರಾತು ಅಳವಡಿಕೆಗೆ ಅನುಮತಿ ಪಡೆದಿಲ್ಲ ಇದು ಕೂಡ ಕಾನೂನು ಬಾಹಿರ.
ಈ ಬಗ್ಗೆ ಈಗಾಗಲೇ ನೋಟೀಸ್ ಕೊಟ್ಟಿದ್ರು ಉತ್ತರ ನೀಡುತ್ತಿಲ್ಲ ಎಂದು ನೋಟೀಸ್ನಲ್ಲಿ ಎಚ್ಚರಿಸಲಾಗಿದೆ. ಜಾಹೀರಾತು ಶುಲ್ಕದ ಜೊತೆ ದಂಡದ ಪ್ರಯೋಗಕ್ಕೂ ಮುಂದಾಗಿರುವ ಬಿಬಿಎಂಪಿ ಅಧಿಕಾರಿಗಳು ಈ ಬಾರಿ ಶುಲ್ಕ ಪಾವತಿಸದಿದ್ದರೆ ದಂಡ ವಿಧಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.