Saturday, May 11, 2024
Homeಬೆಂಗಳೂರುನಾಳೆ ಬೆಂಗಳೂರು ಬಂದ್ : ಏನಿರುತ್ತೆ..? ಏನಿರಲ್ಲ..? ಇಲ್ಲಿದೆ ಮಾಹಿತಿ

ನಾಳೆ ಬೆಂಗಳೂರು ಬಂದ್ : ಏನಿರುತ್ತೆ..? ಏನಿರಲ್ಲ..? ಇಲ್ಲಿದೆ ಮಾಹಿತಿ

ಬೆಂಗಳೂರು,ಸೆ.25- ಸಂಕಷ್ಟದ ಸಂದರ್ಭದಲ್ಲೂ ತಮಿಳುನಾಡಿಗೆ ಕಾವೇರಿ ಜಲಾಶಯದಿಂದ ನೀರು ಹರಿಸಿರುವುದನ್ನು ಖಂಡಿಸಿ ಕನ್ನಡ ಹಾಗೂ ವಿವಿಧ ರೈತಪರ ಸಂಘಟನೆಗಳು ಕರೆಕೊಟ್ಟಿರುವ ನಾಳಿನ ಬೆಂಗಳೂರು ಬಂದ್‍ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ರಾಜ್ಯ ರಾಜಧಾನಿ ಬೆಂಗಳೂರು ಬಹುತೇಕ ಸ್ತಬ್ಧವಾಗಲಿದೆ.

ಅಗತ್ಯ ಸೇವೆಗಳಾದ ಔಷಧ, ಆಸ್ಪತ್ರೆ, ಹಾಲು, ಪೇಪರ್, ಅಂಬುಲೆನ್ಸ್ ಎಂದಿನಂತೆ ಕಾರ್ಯನಿರ್ವಾಹಿಸಲಿವೆ. ಉಳಿದಂತೆ ಹೋಟೆಲ್‍ಗಳು, ಆಟೋಗಳು ಸಿಗಲ್ಲ, ಟ್ಯಾಕ್ಸಿ ಓಡಾಡಲ್ಲ, ಓಲಾ, ಉಬರ್ ಸೇವೆ ಲಭ್ಯವಿರುವುದಿಲ್ಲ. ಬೀದಿಬದಿ ವ್ಯಾಪಾರ, ಪೆಟ್ರೋಲ್ ಬಂಕ್, ಶಾಲಾ, ಕಾಲೇಜು, ಬಿಬಿಎಂಪಿ ನೌಕರರು, ಬಿಎಂಟಿಸಿ ಬಸ್ ಸಂಚಾರ, ಕೈಗಾರಿಕೆಗಳು, ವಾಣಿಜ್ಯೋದ್ಯಮ, ಚಿಕ್ಕಪೇಟೆ ಅಂಗಡಿಗಳು, ಕೆಎಸ್ ಆರ್ ಟಿಸಿ ಬಸ್, ಮಾರ್ಕೆಟ್‍ಗಳು ಬಂದ್ ಆಗಿರಲಿವೆ.

ಇದಲ್ಲದೇ ಖಾಸಗಿ ಶಾಲಾ ಬಸ್ ಒಕ್ಕೂಟವೂ ಬೆಂಬಲ ನೀಡಿವೆ. ಇದರಿಂದ ಅಂದು ಸಂಪೂರ್ಣ ಸಾರಿಗೆ ವ್ಯತ್ಯಯವಾಗುವುದು ಖಚಿತವಾಗಿವೆ. ಶಾಲೆಗಳಿಗೂ ರಜೆ ಘೋಷಿಸುವ ಸಾಧ್ಯತೆಗಳಿವೆ. ಈ ಬಂದ್‍ಗೆ ಎಲ್ಲಾ ಸಂಘಟನೆಗಳ ಜೊತೆಗೆ ಸಿನಿಮಾ ಉದ್ಯಮ ಆಟೋ ರಿಕ್ಷಾ, ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರು, ಐಟಿ-ಬಿಟಿ ಕಂಪನಿಯವರು, ವಿದ್ಯಾಸಂಸ್ಥೆಯವರು, ಅಪಾಟ್ರ್ಮೆಂಟ್ ಸಂಘ ಸಂಸ್ಥೆಗಳು ಖಾಸಗಿ ಕಾರ್ಖಾನೆಯವರು, ಕೈಗಾರಿಕೆಗಳು ವರ್ತಕರು ಹೋಟೆಲ್ ಉದ್ದಿಮೆದಾರರು, ಅಂಗಡಿ ಮಾಲೀಕರು ಸ್ವಯಂಪ್ರೇರಿತವಾಗಿ ಬಂದ್ ಮಾಡಿ ಬೆಂಬಲ ವ್ಯಕ್ತಪಡಿಸಬೇಕೆಂದು ಕೋರಲಾಗಿದೆ.

ಬೆಂಗಳೂರು ಬಂದ್‍ಗೆ ನಮ್ಮ ಸಂಪೂರ್ಣ ಬೆಂಬಲ ಇರುತ್ತದೆ. ಸಾರಿಗೆ ಬಸ್ ರಸ್ತೆಗೆ ಇಳಿಯುವುದಿಲ್ಲ ಎಂದು ಕೆಎಸ್‍ಆರ್‍ಟಿಸಿ ಸ್ಟಾಫ್ ಆಂಡ್ ವಕರ್ಸ್ ಫೆಡರೇಶನ್ ಅಧ್ಯಕ್ಷ ಅನಂತ್ ಸುಬ್ಬರಾವ್ ಹೇಳಿದ್ದಾರೆ. ಬಂದ್‍ಗೆ ಖಾಸಗಿ ಸಾರಿಗೆ ಸಂಘಟನೆಗಳು ಕೂಡ ಬೆಂಬಲ ವ್ಯಕ್ತಪಡಿಸಿವೆ. ನೆಲ, ಜಲ ಹಾಗೂ ಭಾಷೆ ವಿಚಾರದಲ್ಲಿ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ ತಿಳಿಸಿದ್ದಾರೆ.

ಅಸ್ತಿತ್ವ ಉಳಿಸಿಕೊಳ್ಳಲು ಕುಮಾರಸ್ವಾಮಿ ಬಿಜೆಪಿ ನಾಯಕರ ಕಾಲಿಗೆ ಬಿದ್ದಿದ್ದಾರೆ : ಪ್ರಿಯಾಂಕ್ ಖರ್ಗೆ

ಟೌನ್ ಹಾಲ್‍ನಿಂದ ಫ್ರೀಡಂ ಪಾರ್ಕ್‍ವರೆಗೆ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. 150ಕ್ಕೂ ಹೆಚ್ಚು ಸಂಘಟನೆಗಳು ಬೆಂಗಳೂರು ಬಂದ್‍ಗೆ ಬೆಂಬಲ ಸೂಚಿಸಿವೆ. ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಜಾ.ದಳ ಹಾಗೂ ಆಮ್ ಆದ್ಮಿ ಪಕ್ಷಗಳೂ ಬೆಂಬಲ ಘೋಷಿಸಿವೆ.

ಬೆಂಗಳೂರು ಬಂದ್‍ಗೆ ತಮ್ಮ ಸಂಘಟನೆಯ ನೈತಿಕ ಬೆಂಬಲ ಇದೆ ಎಂದು ಬೀದಿಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ರಂಗಸ್ವಾಮಿ ಹೇಳಿದ್ದಾರೆ. ಸರಕಾರಿ ಕಚೇರಿಗಳಿಗೆ ರಜೆ ನೀಡಲಾಗಿಲ್ಲ. ಸಾರ್ವಜನಿಕರಿಗೆ ತೊಂದರೆ ಉಂಟು ಮಾಡದಂತೆ ಬಂದ್ ಮಾಡಬೇಕು. ಬಲವಂತಾಗಿ ಬಂದ್ ಮಾಡುವಂತೆ ಒತ್ತಡ ಹಾಕಿದರೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಸರ್ಕಾರ ಕೂಡ ಎಚ್ಚರಿಕೆ ಕೊಟ್ಟಿದೆ.

ಕಾವೇರಿ ನದಿ ನೀರನ್ನು ನಂಬಿಕೊಂಡಿರುವ ಮೈಸೂರು-ಮದ್ದೂರು ಭಾಗದ ಜೊತೆಗೆ ರಾಮನಗರ ಜಿಲ್ಲೆಯಲ್ಲೂ ಕೂಡ ನಾಳಿನ ಬಂದ್‍ಗೆ ಬೆಂಬಲ ಘೋಷಿಸಲಾಗಿದೆ. ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಬೆಂಗಳೂರು ಬಂದ್ ನಡೆಸಲಾಗುತ್ತದೆ. ಈಗಾಗಲೇ ಬೆಂಬಲ ಸೂಚಿಸಿರುವ ಕನ್ನಡ ಪರ ಸಂಘಟನೆಗಳು, ಸಾರಿಗೆ, ಆಟೋ ರಿಕ್ಷಾ ಸೇರಿ ಹಲವು ಸಂಘಟನೆಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಐಟಿ ಕಂಪೆನಿಗಳು, ಕಾರ್ಖಾನೆಗಳು ರಜೆ ನೀಡಿ ಬಂದ್‍ಗೆ ಸೂಚಿಸುವಂತೆ ಕೋರಲಾಗಿದೆ.

ರಾಮನಗರ ಬಂದ್:

ರೇಷ್ಮೆನಗರಿ ರಾಮನಗರದಲ್ಲೂ ಕಾವೇರಿ ಕಿಚ್ಚು ಹೆಚ್ಚಾಗಿದೆ. ಸೆ.26ರಂದು ಬೆಂಗಳೂರು ಬಂದ್‍ಗೆ ಕರೆ ನೀಡಿರುವ ಹಿನ್ನೆಲೆ ರಾಮನಗರ ಬಂದ್‍ಗೂ ಕರೆ ನೀಡಲಾಗಿದೆ.ರಾಮನಗರ, ಚನ್ನಪಟ್ಟಣ, ಬಿಡದಿ ಪಟ್ಟಣವನ್ನು ಸಂಪೂರ್ಣ ಸ್ತಬ್ಧ ಮಾಡಲು ವರ್ತಕರ ಸಂಘ, ಹೋಟೆಲ್ ಮಾಲೀಕರ ಸಂಘ, ವಕೀಲರ ಸಂಘ, ಆಟೋ ಚಾಲಕರ ಸಂಘ ಸೇರಿ ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.

ಸೆ.26 ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಮೆಡಿಕಲ್, ಆಸ್ಪತ್ರೆ, ಹಾಲಿನ ಅಂಗಡಿ, ರೇಷ್ಮೆ ಮಾರುಕಟ್ಟೆ ಹೊರತುಪಡಿಸಿ ಉಳಿದೆಲ್ಲಾ ಸೇವೆ ಸ್ಥಗಿತ ಮಾಡಲು ನಿರ್ಧರಿಸಲಾಗಿದೆ. ಅಂದು ಬೆಳಗ್ಗೆ 10ಕ್ಕೆ ಎಪಿಎಂಸಿ ವೃತ್ತದಲ್ಲಿ ಮËನ ಪ್ರತಿಭಟನೆ ನಡೆಸಿ ಹಳೇ ಬೆಂಗಳುರು-ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲು ವಿವಿಧ ಸಂಘಟನೆಗಳು ಸಿದ್ಧತೆ ನಡೆಸಿವೆ.

ರಾಜ್ಯದ ಆಡಳಿತ ಶಕ್ತಿ ಕೇಂದ್ರವಾಗಿರುವ ಬೆಂಗಳೂರಿನಲ್ಲಿ ಪ್ರತಿಭಟನೆ, ಬಂದ್ ನಡೆಸಿದರೆ ರಾಜ್ಯ ಸರ್ಕಾರದ ಗಮನವನ್ನು ಹೆಚ್ಚಿನ ಮಟ್ಟಿಗೆ ಸೆಳೆದು ಕೇಂದ್ರದ ಮೇಲೆ ಮತ್ತು ಕಾನೂನಾತ್ಮಕವಾಗಿ ಕಾವೇರಿ ನೀರಿಗಾಗಿ ಮುಂದಿನ ದಿನಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಹೋರಾಟ ನಡೆಸಲು ಉತ್ತಮ ಎಂದು ವಿವಿಧ ಸಂಘಟನೆಗಳ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಂದ್‍ಗೆ ಬೆಂಬಲಿಸುವುದು ಸಾರಿಗೆ ಒಕ್ಕೂಟಗಳಿಗೆ ಬಿಟ್ಟಿದ್ದು : ಸಚಿವ ರಾಮಲಿಂಗಾರೆಡ್ಡಿ

ಬೇಡಿಕೆಗಳೇನು?
ಕೂಡಲೇ ರಾಜ್ಯ ಸರ್ಕಾರ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸಬೇಕು.ರಾಜ್ಯ ಸರ್ಕಾರ ಕೂಡಲೇ ವಿಧಾನಸಭೆ ಅವೇಶನ ಕರೆದು ಸಮಗ್ರ ಚರ್ಚಿಸಿ, ಸಂಕಷ್ಟ ಸೂತ್ರ ಜಾರಿ ಮಾಡುವ ತನಕ ನೀರು ಬಿಡುವುದಿಲ್ಲ ಎಂಬ ಎಚ್ಚರಿಕೆಯನ್ನು ಕೇಂದ್ರ ಸರ್ಕಾರ ಮತ್ತು ಕಾವೇರಿ ನೀರು ನಿರ್ವಹಣಾ ಮಂಡಳಿಗೆ ನೀಡಬೇಕು.

ಕಾವೇರಿ ನೀರು ನಿರ್ವಹಣಾ ಮಂಡಳಿ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವನ್ನು ಕೂಡಲೇ ರದ್ದು ಪಡಿಸಿ, ಸ್ವತಂತ್ರ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ನೀರು ನಿರ್ವಹಣಾ ಮಂಡಳಿ ರಚಿಸಬೇಕು. ಈ ಮಂಡಳಿಯಲ್ಲಿ ನಾಲ್ಕು ರಾಜ್ಯಗಳ ಪರಿಣಿತರು ನೀರಾವರಿ ತಜ್ಞರು, ರೈತ ಪ್ರತಿನಿಗಳು ಎಲ್ಲರನ್ನು ಒಳಗೊಂಡಂತೆ ಮಂಡಳಿ ರಚನೆ ಮಾಡಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುವಂತೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಬೇಕು ಎಂಬುದು ಹೋರಾಟಗಾರರ ಒತ್ತಾಯವಾಗಿದೆ.

ಏನಿರುತ್ತೆ?

  • ಆಂಬುಲೆನ್ಸ್ ಸೇವೆ
  • ತರಕಾರಿ, ಹಾಲು
  • ಮೆಡಿಕಲ್ಸ್
  • ಆಸ್ಪತ್ರೆ
  • ಬ್ಯಾಂಕ್
  • ನಮ್ಮ ಮೆಟ್ರೋ

  • ಏನಿರಲ್ಲ?
  • ಆಟೋ
  • ಮ್ಯಾಕ್ಸಿ ಕ್ಯಾಬ್
  • ಹೋಟೆಲ್
  • ಬಿಎಂಟಿಸಿ, ಕೆಎಸ್‍ಆರ್‍ಟಿಸಿ
  • ಲಾರಿ
  • ಮ್ಯಾಕ್ಸಿ ಕ್ಯಾಬ್
  • ಓಲಾ, ಊಬರ್
  • ಬಿಬಿಎಂಪಿ
  • ಖಾಸಗಿ ಶಾಲೆ, ಕಾಲೇಜುಗಳು
    50-50 (ಬಂದ್‍ಗೆ ಬೆಂಬಲ ನೀಡಬಹುದು ಅಥವಾ ನೀಡದೇ ಇರಬಹುದು)
  • ಖಾಸಗಿ ಬಸ್
  • ಏರ್ ಪೋರ್ಟ್ ಟ್ಯಾಕ್ಸಿ
  • ಲಾರಿ ಮಾಲೀಕರು
  • ಸರ್ಕಾರಿ ನೌಕರರು
  • ಶಾಪಿಂಗ್ ಮಾಲ್
  • ಸರ್ಕಾರಿ ಕಛೇರಿಗಳು
  • ಐಟಿ ಬಿಟಿ ಕಂಪನಿಗಳು
RELATED ARTICLES

Latest News