ಬೆಂಗಳೂರು,ಡಿ.15-ಒಂಟಿಯಾಗಿ ಓಡಾಡುವ ಮಹಿಳೆಯರನ್ನು ಹಿಂಬಾಲಿಸಿಕೊಂಡು ಹೋಗಿ ಅಡ್ಡಗಟ್ಟಿ ಅಸಭ್ಯವಾಗಿ ವರ್ತಿಸುತ್ತಿದ್ದ ವಿಕೃತ ಕಾಮಿಯೊಬ್ಬನನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹೆರೋಹಳ್ಳಿಯ ಮಾದೇಶ್ವರನಗರ ನಿವಾಸಿ ವಿನೋದ್ (27) ಬಂಧಿತ ಆರೋಪಿ. ಸುಮನಹಳ್ಳಿ ಜಂಕ್ಷನ್ ಮುಖಾಂತರ ಶ್ರೀನಿವಾಸನಗರ ಸರ್ಕಲ್ ಕಡೆಯಿಂದ ಮಹಿಳೆಯೊಬ್ಬರು ಪೀಣ್ಯ ಜಿಕೆ ಡಬ್ಲ್ಯೂ ಲೇಔಟ್ಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು.
ಮಾರ್ಗಮಧ್ಯೆ ರಸ್ತೆ ಗುಂಡಿಯಿಂದಾಗಿ ವಾಹನವನ್ನು ನಿಧಾನ ಮಾಡಿದಾಗ ಹಿಂಬಾಲಿಸಿಕೊಂಡು ಬಂದಿದ್ದ ಆರೋಪಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ ಅವರನ್ನು ತಬ್ಬಿಕೊಂಡು ಅಸಭ್ಯವಾಗಿ ವರ್ತಿಸಿದ್ದಾನೆ.ಈ ವೇಳೆ ಹಿಂದೆ ಕಾರಿನಲ್ಲಿ ಬರುತ್ತಿದ್ದ ಮಹಿಳೆಯ ಪತಿ ಗಮನಿಸಿ ಆತನನ್ನು ಹಿಡಿದುಕೊಳ್ಳಲು ಯತ್ನಿಸಿದಾಗ ತಪ್ಪಿಸಿಕೊಂಡು ಪರಾರಿಯಾಗಿದ್ದ.
ಈ ಬಗ್ಗೆ ಮಹಿಳೆ ಪತಿ 112 ಗೆ ಕರೆ ಮಾಡಿದ್ದಾರೆ. ಹೊಯ್ಸಳ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ಕೈಗೊಂಡು ವಿಕೃತ ಕಾಮಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಈ ವಿಕೃತ ಕಾಮಿ ಸಂಜೆಯಾಗುತ್ತಿದ್ದಂತೆ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಏಕಾಏಕಿ ತಬ್ಬಿಕೊಂಡು ಅಸಭ್ಯವಾಗಿ ವರ್ತಿಸುತ್ತಿದ್ದ.ಇದೀಗ ಪೊಲೀಸರು ಆತನನ್ನು ಬಂಧಿಸಿದ್ದು, ಒಂಟಿ ಮಹಿಳೆಯರು ನಿಟ್ಟುಸಿರು ಬಿಟ್ಟಿದ್ದಾರೆ. ಮಹಿಳೆಯರಿಗಾಗಿ ನಗರ ಪೊಲೀಸರು ಸುರಕ್ಷತಾ ಕ್ರಮಗಳನ್ನು ಕೈಗೊಂಡರಾದರೂ ವಿಕೃತ ಕಾಮಿಗಳ ಕಾಟ ತಪ್ಪಿಲ್ಲ. ಇಂತಹ ಘಟನೆಗಳೇನಾದರೂ ನಡೆದರೆ ಭಯಪಡೆದೆ ಧೈರ್ಯದಿಂದ ಮಾಹಿತಿ ನೀಡುವಂತೆ ಪೊಲೀಸರು ಮಹಿಳೆಯರಿಗೆ ಮನವಿ ಮಾಡಿದ್ದಾರೆ.
