ಬೆಂಗಳೂರು, ಮೇ 31- ಇಂದು ವಿಶ್ವ ಧೂಮಪಾನ ನಿಷೇಧ ದಿನದ ಅಂಗವಾಗಿ ಪೊಲೀಸರು ಇಂದು ನಗರದಾದ್ಯಂತ ಕಾರ್ಯಾಚರಣೆ ನಡೆಸಿ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇದುತ್ತಿದ್ದವರನ್ನು ಪತ್ತೆ ಹಚ್ಚಿ ದಂಡ ವಿಧಿಸಿದ್ದಾರೆ.
ಸಾರ್ವಜನಿಕರ ಆರೋಗ್ಯವನ್ನು ರಕ್ಷಿಸುವ ಹಾಗೂ ತಂಬಾಕು ನಿಯಂತ್ರಣ ಕಾನೂನುಗಳ ಪಾಲನೆಯನ್ನು ಖಾತ್ರಿಪಡಿಸಲು ನಗರದಾದ್ಯಂತ ಪೊಲೀಸರು ಇಂದು ಅರಿವು ಹಾಗೂ ಜಾಗೃತಿ ಮೂಡಿಸಿದ್ದು, ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮಕೈಗೊಂಡಿದ್ದಾರೆ.
ಇನ್ನು ಮುಂದೆ ತಂಬಾಕು ಉತ್ಪನ್ನಗಳನ್ನು ಅಂಗಡಿಗಳಲ್ಲಿ ಮಾರಾಟ ಮಾಡಬೇಕಾದರೆ ಮಾರಾಟಗಾರರು ಬಿಬಿಎಂಪಿಯಿಂದ ಮಾರಾಟದ ಲೈಸೆನ್್ಸ ಪಡೆಯಬೇಕೆಂದು ಪೊಲೀಸ್ ಅಧಿಕಾರಿಗಳು ಮಾರಾಟಗಾರರಿಗೆ ತಿಳಿಸಿದರು. ಇಂದು ಶಾಲಾ ಕಾಲೇಜುಗಳಿಗೆ ಭೇಟಿ ನೀಡಿರುವ ಪೊಲೀಸರು, ವಿದ್ಯಾರ್ಥಿಗಳಿಗೆ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮ ಗಳ ಬಗ್ಗೆ ಅರಿವು ಮೂಡಿಸಿದರು.

ಸಾರ್ವಜನಿಕ ಸ್ಥಳಗಳಲ್ಲಿ, ಎಲ್ಲಂದರಲ್ಲಿ ಸಿಗರೇಟ್ ಸೇದುವವರನ್ನು ಪತ್ತೆ ಹಚ್ಚಿ ಅರಿವು ಮೂಡಿಸಿ ದಂಡ ವಿಧಿಸಿದ್ದಾರೆ.ಅಲ್ಲದೇ ಪಬ್ ಮತ್ತು ಬಾರ್ ಅಂಡ್ ರೆಸ್ಟೋರೆಂಟ್ಗಳಿಗೂ ಭೇಟಿ ನೀಡಿ ನಿಗಧಿಪಡಿಸಿರುವ ಸೋಕಿಂಗ್ ಜೋನ್ನಲ್ಲೇ ಸಿಗರೇಟ್ ಬಳಸುವಂತೆ ಸೂಚಿಸಿದರಲ್ಲದೇ ನಿಯಮ ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಧ್ಯಾಹ್ನದ ವೇಳೆಗೆ ಕೇಂದ್ರ ವಿಭಾಗದಲ್ಲಿ 25 ಪ್ರಕರಣ, ಈಶಾನ್ಯ ವಿಭಾಗದಲ್ಲಿ 25 ಪ್ರಕರಣಗಳನ್ನು ಈಗಾಗಲೇ ದಾಖಲಿಸಿಕೊಂಡಿದ್ದು, ಸಂಜೆವೇಳೆಗೆ ನಗರದಾದ್ಯಂತ ಇನ್ನಷ್ಟು ಪ್ರಕರಣಗಳು ದಾಖಲಾಗಲಿವೆ.
ವಿಶ್ವ ಧೂಮಪಾನ ನಿಷೇಧ ದಿನದ ಅಂಗವಾಗಿ ಜೂನ್ 2ರ ವರೆಗೆ ನಗರದಾದ್ಯಂತ ಸಂಚರಿಸಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು,ಅಪ್ರಾಪ್ತರಿಗೆ ತಂಬಾಕು ಮಾರಾಟ ಮಾಡುವುದು ಹಾಗೂ ಶಿಕ್ಷಣ ಸಂಸ್ಥೆಗಳಬಳಿ ತಂಬಾಕು ಮಾರಾಟ ಮಾಡುವಂತಹ ಉಲ್ಲಂಘನೆಗಳ ವಿರುದ್ಧ ಪೊಲೀಸರು ತೀವ್ರನಿಗಾವಹಿಸಿ ಕಾರ್ಯಾಚರಣೆ ನಡೆಸಲಿದ್ದಾರೆ.
ಮಾಲ್ಗಳು,ಕಾಫಿಬಾರ್ಗಳು ಮತ್ತು ಅಂಗಡಿಗಳಲ್ಲಿ ಅನಿರೀಕ್ಷಿತ ಭೇಟಿ ನೀಡಿ ಈ ಸಿಗರೇಟ್ ಮಾರಾಟ ಮಾಡಲಾಗುತ್ತಿದೆಯೇ ಎಂದು ತಪಾಸಣೆ ನಡೆಸಲಾಗುತ್ತಿದೆ. ಕಾನೂನುಗಳ ಪ್ರಕಾರ ನಿಷೇಧಿತವಾಗಿರುವ ಹುಕ್ಕಾ ಬಾರ್ಗಳ ವಿರುದ್ಧ ಈಗಾಗಲೇ ಕ್ರಮ ಕೈಗೊಂಡಲಾಗಿದ್ದು, ಅಕ್ರಮ ಸ್ಥಳಗಳನ್ನು ಪತ್ತೆ ಮಾಡಿ ತೀವ್ರ ತಪಾಸಣೆ ಮುಂದುವರೆಸಲಾಗುತ್ತದೆ.
ಪೋಲಿಸರೊಂದಿಗೆ ಸಹಕರಿಸಿ:
ಆರೋಗ್ಯಕರ ಭವಿಷ್ಯಕ್ಕಾಗಿ ನಾವು ಬದ್ದರಾಗಿದ್ದೇವೆ.ಸಮಸ್ಥ ನಾಗರಿಕರು ಹಾಗೂ ವ್ಯಾಪಾರಿಗಳು ಕಾನೂನು ಪಾಲನೆಗಾಗಿ ಪೊಲೀಸರೊಂದಿಗೆ ಕೈಜೋಡಿಸುವ ಮೂಲಕ ಸಹಕರಿಸಬೇಕೆಂದು ನಗರ ಪೊಲೀಸ್ ಆಯುಕ್ತ ದಯಾನಂದ ಅವರು ಮನವಿ ಮಾಡಿಕೊಂಡಿದ್ದಾರೆ.