Friday, September 20, 2024
Homeರಾಜಕೀಯ | Politicsಮನೆಯೊಂದು ಮೂರು ಬಾಗಿಲಂತಾದ ಕರ್ನಾಟಕ ಬಿಜೆಪಿ

ಮನೆಯೊಂದು ಮೂರು ಬಾಗಿಲಂತಾದ ಕರ್ನಾಟಕ ಬಿಜೆಪಿ

ಬೆಂಗಳೂರು,ಆ.13- ಮನೆಯೊಂದು ಮೂರು ಬಾಗಿಲು! ಹೌದು, ಇದು ಸದ್ಯ ರಾಜ್ಯ ಬಿಜೆಪಿಯ ಪರಿಸ್ಥಿತಿ. ರಾಜ್ಯ ಸರ್ಕಾರದ ವಿರುದ್ಧ ಪಾದಯಾತ್ರೆ, ಹೋರಾಟದ ಉತ್ಸಾಹ ಕಮಲ ಪಾಳಯದಲ್ಲಿ ಮೇಲ್ನೋಟಕ್ಕೆ ಕಾಣಸಿಕ್ಕರೂ, ಆಂತರಿಕವಾಗಿ ಬಿಜೆಪಿ ಒಡೆದ ಮನೆಯಾಗಿದೆ.

ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಂ ಒಂದು ಕಡೆಯಾದರೆ, ರೆಬೆಲ್‌ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಬಣ ಮತ್ತೊಂದು ಕಡೆ. ಇದೆಲ್ಲವನ್ನೂ ಮೀರಿ ಸಂಘ ನಿಷ್ಠ ಅಥವಾ ಹೈಕಮಾಂಡ್‌ ನಿಷ್ಠ ಬಣ ಮಗದೊಂದು ಕಡೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಯ್ಕೆ ಸಂದರ್ಭದಲ್ಲೇ ಭುಗಿಲೆದ್ದ ಅಸಮಾಧಾನ ಇನ್ನೂ ಆರಿಲ್ಲ. ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಬಹಿರಂಗವಾಗಿಯೇ ಗುಡುಗಿದ್ದರು. ಅವರಿಗೆ ಸಾಥ್‌ ನೀಡಿದವರು ವಲಸೆ ಶಾಸಕ ರಮೇಶ್‌ ಜಾರಕಿಹೊಳಿ.

ಸದ್ಯ ಈ ತಂಡ ವಿಸ್ತರಣೆಯಾಗುತ್ತಿದೆ. ಮಾಜಿ ಸಂಸದ ಪ್ರತಾಪ ಸಿಂಹ, ಕುಮಾರ ಬಂಗಾರಪ್ಪ, ಶಾಸಕ ಬಿಪಿ ಹರೀಶ್‌ ಕೂಡಾ ಸೇರ್ಪಡೆಯಾಗಿದ್ದಾರೆ. ಈ ಭಿನ್ನ ರಾಗಕ್ಕೆ ವಿಧಾನಸಭೆ ಉಪ ನಾಯಕ ಅರವಿಂದ ಬೆಲ್ಲದ ಪರೋಕ್ಷ ಬೆಂಬಲ ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ ವಿರುದ್ಧದ ಹೋರಾಟ ಹಾಗೂ ಪಾದಯಾತ್ರೆಯಲ್ಲಿ ಉತ್ಸಾಹದಲ್ಲಿದ್ದ ಬಿಜೆಪಿಗೆ ಒಳಬೇಗುದಿಯೇ ಬಹುದೊಡ್ಡ ಸವಾಲಾಗಿದೆ. ಪಾದಯಾತ್ರೆಯಲ್ಲಿ ಬಿ.ವೈ.ವಿಜಯೇಂದ್ರಗೆ ಒಂದಿಷ್ಟು ರಾಜಕೀಯ ಲಾಭವಾದರೂ ಅದನ್ನು ಗಟ್ಟಿಗೊಳಿಸಲು ಪಕ್ಷದಲ್ಲಿರುವ ಬಂಡಾಯಗಾರರು ಅವಕಾಶ ಕೊಡುತ್ತಿಲ್ಲ.

ಈ ಕಾರಣಕ್ಕಾಗಿಯೇ ಪಾದಯಾತ್ರೆಯ ಹಿಂದೆ ಡಿಕೆಶಿ ಸೂತ್ರಧಾರ ಎಂದೇ ಬಂಡಾಯ ಬಣ ಪ್ರಚಾರ ಮಾಡಿತ್ತು. ಇದನ್ನು ಅಲ್ಲಗಳೆಯುವುದು ವಿಜಯೇಂದ್ರಗೂ ಸವಾಲಾಗಿ ಮಾರ್ಪಟ್ಟಿತ್ತು. ಈ ನಡುವೆ ಯತ್ನಾಳ್‌ ನೇತೃತ್ವದ ಭಿನ್ನರ ಗುಂಪು ಬಳ್ಳಾರಿಗೆ ಪಾದಯಾತ್ರೆ ಹಮಿಕೊಳ್ಳಲು ಸಿದ್ಧತೆ ನಡೆಸುತ್ತಿದೆ. ಆದರೆ ಇದಕ್ಕೆ ಹೈಕಮಾಂಡ್‌ ಅನುಮತಿ ಕೊಡುತ್ತಾ? ಇದರಲ್ಲಿ ಬಿ.ವೈ.ವಿಜಯೇಂದ್ರ ಬಣ ಭಾಗಿಯಾಗುತ್ತಾ? ಎಂಬುವುದು ಯಕ್ಷ ಪ್ರಶ್ನೆಯಾಗಿದೆ.

ಸದ್ಯ ರಾಜ್ಯ ಬಿಜೆಪಿಯಲ್ಲಿ ಕೇಳಿ ಬರುತ್ತಿರುವ ಒಂದು ಪದ ಹೊಂದಾಣಿಕೆ ರಾಜಕಾರಣ. ಹೌದು ಬಿವೈ ವಿಜಯೇಂದ್ರ ವಿರುದ್ಧ ಯತ್ನಾಳ್‌ ಬಣ ಈ ಆರೋಪವನ್ನು ಮಾಡುತ್ತಿದೆ. ವಿರೋಧ ಪಕ್ಷದ ನಾಯಕ ಆರ್‌ ಅಶೋಕ್‌ ವಿರುದ್ಧವೂ ಇದೇ ಆರೋಪವನ್ನು ಯತ್ನಾಳ್‌ ತಂಡ ಮಾಡುತ್ತಿದೆ. ಬಿವೈ ವಿಜಯೇಂದ್ರ ಅವರು ಡಿಸಿಎಂ ಡಿಕೆ ಶಿವಕುಮಾರ್‌ ಜೊತೆಗೆ ಹೊಂದಾಣಿಕೆ ರಾಜಕಾರಣ ನಡೆಸುತ್ತಿದ್ದಾರೆ ಎಂಬುವುದು ಆರೋಪವಾಗಿದೆ.

ಸದನದಲ್ಲೂ ಬಿಜೆಪಿ ಅಹೋರಾತ್ರಿ ಧರಣಿ ಸಂದರ್ಭದಲ್ಲಿ ಇದೇ ಆರೋಪವನ್ನು ಯತ್ನಾಳ್‌ ಮಾಡಿದ್ದರು. ತಮ ಒತ್ತಡಕ್ಕೆ ಮಣಿದು ಪ್ರತಿಭಟನೆ ನಡೆಸಿದ್ದಾರೆ ಎಂಬ ಅರ್ಥದಲ್ಲೂ ಹೇಳಿಕೆ ನೀಡಿದ್ದರು. ಇವೆಲ್ಲವೂ ವಿಜಯೇಂದ್ರ ಬಣಕ್ಕೆ ಮುಜುಗರ ಉಂಟು ಮಾಡುತಿವೆ.

ಹೈಕಮಾಂಡ್‌ ನಡೆ ಏನು:
ರಾಜ್ಯ ಬಿಜೆಪಿಯ ಒಳಬೇಗುದಿ ಬಿಜೆಪಿ ಹೈಕಮಾಂಡ್‌ಗೂ ತಲೆನೋವಾಗಿ ಮಾರ್ಪಟ್ಟಿದೆ. ಇದು ಹೀಗೆಯೇ ಮುಂದುವರಿದಲ್ಲಿ ಪಕ್ಷಕ್ಕೆ ದೊಡ್ಡ ರೀತಿಯಲ್ಲಿ ಡ್ಯಾಮೇಜ್‌ ಆಗಲಿದೆ. ರಾಜ್ಯದಲ್ಲಿ ಆಡಳಿತ ಸರ್ಕಾರದ ವಿರುದ್ಧ ಹೋರಾಟ ಮಾಡಲು ಬಿಜೆಪಿ ಬಳಿ ಸಾಕಷ್ಟು ಅಸ್ತ್ರಗಳಿವೆ. ಆದರೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ ಹೈಕಮಾಂಡ್‌ ಮಧ್ಯಪ್ರವೇಶ ಮಾಡುತ್ತಾ? ಎಂಬುವುದು ಕುತೂಹಲಕ್ಕೆ ಕಾರಣವಾಗಿದೆ.

ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅವರಲ್ಲಿ ಸಾಕಷ್ಟು ನಿರೀಕ್ಷೆಗಳು ಇದ್ದವು. ಆದರೆ ಎಲ್ಲರ ವಿಶ್ವಾಸ ಗಳಿಸುವಲ್ಲಿ ವಿಜಯೇಂದ್ರ ವಿಫಲವಾಗುತ್ತಿದ್ದಾರೆ. ಪಕ್ಷದಲ್ಲೇ ಕೆಲವರು ಬಹಿರಂಗವಾಗಿ ವಿಜಯೇಂದ್ರ ವಿರುದ್ಧ ಅಸಮಾಧಾನ ಹೊರಹಾಕಿದರೆ, ಮತ್ತೆ ಕೆಲವರು ಆಂತರಿಕವಾಗಿಯೇ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ವಿಜಯೇಂದ್ರ ವಿರುದ್ಧವಾಗಿ ಅಭಿಪ್ರಾಯ ರೂಪಿಸುವಲ್ಲಿ ಅವರ ವಿರೋಧಿ ಬಣ ಸಕ್ರಿಯವಾದರೆ, ಅವರನ್ನು ಬಲವಾಗಿ ಸಮರ್ಥನೆ ಮಾಡುವವರು ಪಕ್ಷದಲ್ಲಿ ಇಲ್ಲ. ಇದು ಭವಿಷ್ಯದಲ್ಲಿ ವಿಜಯೇಂದ್ರಗೆ ಹಿನ್ನಡೆ ಆಗುವುದರಲ್ಲಿ ಸಂಶಯವಿಲ್ಲ.

RELATED ARTICLES

Latest News