Tuesday, October 22, 2024
Homeಬೆಂಗಳೂರುಕೆಂಗೇರಿ ಕೆರೆಯಲ್ಲಿ ಮುಳುಗಿದ್ದ ಅಣ್ಣ-ತಂಗಿಯ ಶವಗಳು ಪತ್ತೆ

ಕೆಂಗೇರಿ ಕೆರೆಯಲ್ಲಿ ಮುಳುಗಿದ್ದ ಅಣ್ಣ-ತಂಗಿಯ ಶವಗಳು ಪತ್ತೆ

Brother and sister who drowned in Kengeri Lake found dead

ಬೆಂಗಳೂರು, ಅ.22 : ಕೆಂಗೇರಿ ಕೆರೆಯಲ್ಲಿ ಮುಳುಗಿದ್ದ ಅಣ್ಣ-ತಂಗಿಯ ಶವಗಳನ್ನು ಕೆರೆಯಿಂದ ಅಗ್ನಿಶಾಮಕ ಸಿಬ್ಬಂದಿ ಹೊರ ತೆಗೆದಿದ್ದಾರೆ. ಬೆಳಿಗ್ಗೆ ಅಣ್ಣ ಜಾನ್ಸಿಸೀನ (13) ಶವ ಪತ್ತೆಯಾಗಿತ್ತು. ಇಂದು ಸಂಜೆ 4.30 ರ ಸುಮಾರಿಗೆ ತಂಗಿ ಮಹಾಲಕ್ಷ್ಮಿ (11) ಶವವನ್ನು ಹೊರತೆಗೆದಿದ್ದಾರೆ. ಎರಡೂ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ರಾಜರಾಜೇಶ್ವರಿ ಆಸ್ಪತ್ರೆಗೆ ರವಾನಿಸಲಾಗಿದೆ.

ನಿನ್ನೆ ಸಂಜೆ ಕೆರೆಯಿಂದ ನೀರು ತರಲು ಬಿಂದಿಗೆ ತೆಗೆದುಕೊಂಡು ಹೋಗಿದ್ದ ಅಣ್ಣ-ತಂಗಿ ನೀರಿನಲ್ಲಿ ಮುಳುಗಿಹೋಗಿದ್ದರು. ನಂತರ ಅವರ ತಾಯಿ ಕೆಂಗೇರಿ ಪೊಲೀಸರಿಗೆ ತಿಳಿಸಿದರು. ಇಂದು ಬೆಳಿಗ್ಗೆ 15 ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಮಳೆಯ ನಡುವೆಯೂ ನಿರಂತರವಾಗಿ ಕೆರೆಯಲ್ಲಿ ಶೋಧ ನಡೆಸಿ ಶವಗಳನ್ನು ಹೊರತೆಗೆದಿದ್ದಾರೆ.

ನಿನ್ನೆ ಸಂಜೆ ಕೆಲಸದ ನಿಮಿತ್ತ ತಾಯಿ ನಾಗಮ ಹೊರಗೆ ಹೋಗಿದ್ದರು. ನೀರು ತರಲೆಂದು ಆಟವಾಡುತ್ತಾ ಅಣ್ಣ- ತಂಗಿ ಇಬ್ಬರು ಬಿಂದಿಗೆ ತೆಗೆದುಕೊಂಡು ಹೊರಗೆ ಹೋಗಿದ್ದಾರೆ. ಕೆಂಗೇರಿ ಕೆರೆ ಬಳಿ ಹೋಗಿದ್ದಾಗ ಬಿಂದಿಗೆ ಜಾರಿ ನೀರಿಗೆ ಬಿದ್ದಿದೆ. ಮಹಾಲಕ್ಷ್ಮೀ ಬಿಂದಿಗೆ ತೆಗೆದುಕೊಳ್ಳಲು ಮುಂದಾಗುತ್ತಿದ್ದಂತೆ ಕಾಲು ಜಾರಿ ಕೆರೆಗೆ ಬಿದ್ದಿದ್ದಾಳೆ. ತಕ್ಷಣ ಇದನ್ನು ಇದನ್ನು ಕಂಡ ಅಣ್ಣ ಜಾನ್ಸಿಸೀನ ತಂಗಿಯ ರಕ್ಷಣೆಗಾಗಿ ನೀರಿಗೆ ಇಳಿದಾಗ ಆತನೂ ಸಹ ನೀರಿನಲ್ಲಿ ಮುಳುಗಿದ್ದಾನೆ.

ಕೆಲ ಸಮಯದ ಬಳಿಕ ನಾಗಮ ಮನೆಗೆ ಬಂದಾಗ ಮಕ್ಕಳಿಬ್ಬರು ಕಾಣಿಸಿಲ್ಲ. ಇವರನ್ನು ಹುಡುಕಿಕೊಂಡು ಹೋದಾಗ ಕೆಂಗೇರಿ ಕೆರೆ ಬಳಿ ಮಗನ ಬಟ್ಟೆ ಕಂಡು ಮಕ್ಕಳಿಬ್ಬರು ನೀರಿನಲ್ಲಿ ಮುಳುಗಿರುವ ಶಂಕೆ ವ್ಯಕ್ತಪಡಿಸಿ ಕೆಂಗೇರಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ತಕ್ಷಣ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಕೆರೆ ಬಳಿ ಬಂದು ಶೋಧ ಕಾರ್ಯದಲ್ಲಿ ತೊಡಗಿದರಾದರೂ ಕತ್ತಲಾಗಿದ್ದರಿಂದ ಹಾಗೂ ವಿಪರೀತ ಮಳೆ ಸುರಿಯುತ್ತಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಿ ಇಂದು ಬೆಳಗ್ಗೆ ಮತ್ತೆ ಶೋಧ ಕಾರ್ಯದಲ್ಲಿ ತೊಡಗಿದ್ದರು.
ಸತತ ಮೂರು ಗಂಟೆಯ ಬಳಿಕ 11 ಗಂಟೆ ವೇಳೆಗೆ ಬಾಲಕ ಜಾನ್ಸಿಸೀನ ಮೃತದೇಹ ಪತ್ತೆಯಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಶವವನ್ನು ಹೊರತೆಗೆದಿದ್ದಾರೆ.

RELATED ARTICLES

Latest News