Saturday, May 18, 2024
Homeರಾಜ್ಯನವೆಂಬರ್‌ನಲ್ಲಿ ಜಾತಿಗಣತಿ ವರದಿ ಬಹಿರಂಗ..!?

ನವೆಂಬರ್‌ನಲ್ಲಿ ಜಾತಿಗಣತಿ ವರದಿ ಬಹಿರಂಗ..!?

ಬೆಂಗಳೂರು,ಅ.11- ಬಿಹಾರದ ನಂತರ ಕರ್ನಾಟಕದಲ್ಲಿ ನವೆಂಬರ್ ವೇಳೆಗೆ ಜಾತಿ ಜನಗಣತಿಯ ವರದಿಯನ್ನು ಬಹಿರಂಗಗೊಳ್ಳುವ ಸಾಧ್ಯತೆಗಳಿವೆ. ಹಿಂದುಳಿದ ವರ್ಗಗಳ ಅಭಿವೃದ್ಧಿ ಸಚಿವ ಶಿವರಾಜ್ ತಂಗಡಗಿ, ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆಯನ್ನು ಭೇಟಿ ಮಾಡಿ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿರುವುದು ಇದಕ್ಕೆ ಪುಷ್ಟಿ ನೀಡಿದೆ.

ಪ್ರಸ್ತುತ ಸನ್ನಿವೇಶದಲ್ಲಿ ವರದಿ ಬಿಡುಗಡೆಯ ಸಾಧ್ಯತೆಗಳು ಹೆಚ್ಚಾಗಿ ಕಂಡುಬರುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರ ಜೊತೆ ಚರ್ಚೆ ನಡೆಸಿದ್ದು, ಈ ಹಿಂದೆ ಕಾಂತರಾಜು ನೇತೃತ್ವದ ಆಯೋಗ ನಡೆಸಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯನ್ನು ಯಥಾವತ್ತು ಸಲ್ಲಿಕೆ ಮಾಡುವಂತೆ ಸೂಚನೆ ನೀಡಿದ್ದಾರೆ.

ಕಾಂತರಾಜು ಅವರ ಆಯೋಗ ಸಮೀಕ್ಷೆ ನಡೆಸಿ ತಯಾರಿಸಿದ ವರದಿಗೆ ಆಗಿನ ಆಯೋಗದ ಕಾರ್ಯದರ್ಶಿ ಸಹಿ ಹಾಕಿರಲಿಲ್ಲ. ಅದರ ಹೊರತಾಗಿಯೂ ವರದಿಯನ್ನು ಕಾಂತರಾಜು ಅವರು ಸರ್ಕಾರದ ಮುಖ್ಯಕಾರ್ಯದರ್ಶಿ ಅವರಿಗೆ ನೀಡಿದ್ದರು. ಅದು ಊರ್ಜಿತವಲ್ಲ ಎಂಬ ತಾಂತ್ರಿಕ ಅಂಶಗಳು ಎದುರಾಗಿವೆ. ಕಾರ್ಯದರ್ಶಿಯವರ ಸಹಿಯನ್ನೊಳಗೊಂಡ ಕ್ರಮಬದ್ಧವಾದ ವರದಿಯನ್ನು ಮತ್ತೊಮ್ಮೆ ಸರ್ಕಾರಕ್ಕೆ ಸಲ್ಲಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ.

ಮನವೊಲಿಸಿದ ಬಿಎಸ್‌ವೈ, ಧರಣಿ ಕೈಬಿಟ್ಟ ಶಾಸಕ ಮುನಿರತ್ನ

ನವೆಂಬರ್‍ವರೆಗೂ ಕಾಲಾವಕಾಶ ನೀಡುವಂತೆ ಆಯೋಗದ ಅಧ್ಯಕ್ಷರು ಮನವಿ ಮಾಡಿಕೊಂಡಿದ್ದಾರೆ. ಸರಿಪಡಿಸಿದ ತಾಂತ್ರಿಕ ಅಂಶಗಳನ್ನು ಪರಿಗಣಿಸಿ ವರದಿ ಸಲ್ಲಿಕೆಯಾಗುವ ನಿರೀಕ್ಷೆಗಳಿವೆ. ಕಳೆದ ಎಂಟು ವರ್ಷಗಳ ಹಿಂದೆ ನಡೆದಿದ್ದ ಸಮೀಕ್ಷೆ ವರದಿಯನ್ನು ಪ್ರಸ್ತುತ ಅಂಗೀಕರಿಸಲು ಸಾಧ್ಯವೇ ಎಂಬ ಗೊಂದಲಗಳು ತಲೆ ಎತ್ತಿವೆ.

ಕಾಂತರಾಜು ಅವರ ಆಯೋಗದಲ್ಲಿ ಕೆಲವು ಜಾತಿಗಳ ಸಂಖ್ಯಾವಾರು ಪ್ರಮಾಣದ ಬಗ್ಗೆ ಆಕ್ಷೇಪಗಳೆವೆ. ಕೆಲವು ಸಮುದಾಯಗಳು ಇದನ್ನು ತೀವ್ರವಾಗಿ ವಿರೋಧಿಸಿಯೂ ಇವೆ. ಮನೆ ಮನೆ ಸಮೀಕ್ಷೆ ಸರಿಯಾಗಿ ನಡೆದಿಲ್ಲ. ಸಮೀಕ್ಷಾ ವರದಿಯಲ್ಲಿ ಕೆಲವು ಮಾಹಿತಿಗಳನ್ನು ಆ ವೇಳೆ ತಿರುಚಲಾಗಿದೆ ಎಂಬ ಆರೋಪಗಳಿವೆ. ಹಲವು ಗಂಭೀರ ಆರೋಪಗಳಿಂದ ಕೂಡಿರುವ ಸಮೀಕ್ಷಾ ವರದಿಯನ್ನು ಅಂಗೀಕರಿಸುವುದು ಸರಿಯಲ್ಲ ಎಂಬ ವಾದಗಳು ಕೇಳಿಬಂದಿವೆ.

ರಾಜ್ಯಸರ್ಕಾರ ಸಮೀಕ್ಷೆ ನಡೆಸುವಾಗ ಆರ್ಥಿಕ, ಸಾಮಾಜಿಕ ಮಾಹಿತಿ ಸಂಗ್ರಹ ಎಂದು ಹೇಳಿತ್ತು. ವರದಿ ಸಿದ್ಧಗೊಂಡ ಬಳಿಕ ಅದನ್ನು ಜಾತಿ ಜನಗಣತಿ ಎಂದು ಪ್ರತಿಪಾದಿಸಲಾಗುತ್ತಿದೆ. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯಾವುದೇ ಸೌಲಭ್ಯಗಳ ಹಂಚಿಕೆ ಹಾಗೂ ಸಾಮಾಜಿಕ ನ್ಯಾಯಗಳ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಜಾತಿ ಜನಸಂಖ್ಯೆಯ ಮಾಹಿತಿಗಳು ಅಗತ್ಯ. ಆದರೆ ಅದನ್ನು ಕ್ರೂಢೀಕರಿಸಲು ಕರಾರುವಕ್ಕಾದ ಸಮೀಕ್ಷೆಗಳು ನಡೆಯಬೇಕು. ದೇಶದಲ್ಲಿ ಜನಗಣತಿಗೆ ಭಾರತೀಯ ಗಣತಿ ಆಯೋಗಕ್ಕೆ ಮಾತ್ರ ಅಕಾರ ಇದೆ ಎಂದು ಸುಪ್ರೀಂಕೋರ್ಟ್ ತೀಪೆರ್ದರಲ್ಲಿ ಸ್ಪಷ್ಟಪಡಿಸಿದೆ.

ಹೀಗಿರುವಾಗ ಹಿಂದುಳಿದ ವರ್ಗಗಳ ಆಯೋಗದ ನೇತೃತ್ವದಲ್ಲಿ ನಡೆದಿದೆ ಎಂದು ಹೇಳಲಾದ ಸಮೀಕ್ಷಾ ವರದಿ ಕಾನೂನಾತ್ಮಕವಾಗಿ ಊರ್ಜಿತವೇ ಎಂಬುದು ಪ್ರಶ್ನಾರ್ಹವಾಗಿದೆ. ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡಿ ಜಾರಿಗೊಳಿಸಲು ಮುಂದಾದರೆ ಮತ್ತಷ್ಟು ಪ್ರತಿಭಟನೆಗಳು ಎದುರಾಗುವ ಸಾಧ್ಯತೆಯಿದೆ.

ಜೆಡಿಎಸ್, ಬಿಜೆಪಿ ಅಕಾರ ನಡೆಸಿದ ಸಂದರ್ಭದಲ್ಲಿ ವರದಿಯ ತಂಟೆಗೆ ಹೋಗಿರಲಿಲ್ಲ. ಸಿದ್ಧರಾಮಯ್ಯ ಅದನ್ನೇ ಗುರಿಯಾಗಿಟ್ಟುಕೊಂಡು ಹಲವು ಬಾರಿ ತಗಾದೆ ತೆಗೆದಿದ್ದರು. ಈಗ ಸಿದ್ದರಾಮಯ್ಯನವರೇ ಅಧಿಕಾರದಲ್ಲಿರುವುದರಿಂದ ವರದಿಯ ಅಂಗೀಕಾರದ ಅನಿವಾರ್ಯತೆ ಎದುರಾಗಿದೆ.

ಇದಕ್ಕೆ ಪೂರಕವಾಗಿ ಎಐಸಿಸಿ ಕೂಡ ದೇಶಾದ್ಯಂತ ಜಾತಿ ಜನಗಣತಿ ನಡೆಯಬೇಕು ಎಂದು ಪ್ರತಿಪಾದಿಸಿದೆ. ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಈ ರೀತಿಯ ಸಮೀಕ್ಷೆ ನಡೆಯಲಿದೆ ಮತ್ತು ಅವು ಅಂಗೀಕಾರಗೊಳ್ಳಲಿವೆ ಎಂದು ರಾಹುಲ್‍ಗಾಂಧಿ ತಿಳಿಸಿದ್ದಾರೆ. ಸಿದ್ದರಾಮಯ್ಯ ಕೂಡ ಅದಕ್ಕೆ ದನಿಗೂಡಿಸಿದ್ದಾರೆ.

ಪಟಾಕಿ ದುರಂತ : ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶ

ಆದರೆ ಕಾನೂನಾತ್ಮಕವಾಗಿ ಸಾಕಷ್ಟು ತೊಂದರೆಗಳು, ಗೊಂದಲಗಳು ಇರುವುದರಿಂದ ರಾಜ್ಯಸರ್ಕಾರ ವರದಿ ಅಂಗೀಕರಿಸಿದರೆ ನ್ಯಾಯಾಲಯದಲ್ಲಿ ಅದು ಮೇಲುಗೈ ಸಾಧಿಸಲಿದೆಯೇ ಎಂಬುದು ಚರ್ಚೆಗೊಳಗಾಗುತ್ತಿದೆ. ಒಂದು ವೇಳೆ ಸರ್ಕಾರ ಹಿಂದಿನ ವರದಿಯನ್ನು ಅಂಗೀಕರಿಸಿ ಲೋಪದೋಷಗಳ ಪರಿಷ್ಕರಣೆಗೆ ಮತ್ತೊಂದು ಸಮೀಕ್ಷೆ ನಡೆಸುವ ಸಾಧ್ಯತೆಗಳ ಬಗ್ಗೆಯೂ ಸಮಾಲೋಚನೆ ನಡೆದಿವೆ ಎಂದು ಹೇಳಲಾಗುತ್ತಿದೆ.

RELATED ARTICLES

Latest News