Friday, September 20, 2024
Homeರಾಜಕೀಯ | Politicsಮುಖ್ಯಮಂತ್ರಿ ಬದಲಾವಣೆ ಗ್ಯಾರಂಟಿ : ಆರ್.ಅಶೋಕ್

ಮುಖ್ಯಮಂತ್ರಿ ಬದಲಾವಣೆ ಗ್ಯಾರಂಟಿ : ಆರ್.ಅಶೋಕ್

Chief Minister Change Guarantee : R. Ashok

ಬೆಂಗಳೂರು,ಸೆ.9- ರಾಜ್ಯದಲ್ಲಿ ಮುಖ್ಯ ಮಂತ್ರಿ ಸ್ಥಾನ ಬದಲಾವಣೆಯಾಗುವುದು 100ಕ್ಕೆ ನೂರರಷ್ಟು ಬದಲಾವುದು ಖಚಿತ. ಹೀಗಾಗಿಯೇ ಅನೇಕ ಸಚಿವರು ಒಳಗೊಳಗೆ ಕುರ್ಚಿ ಮೇಲೆ ಟವಲ್ ಹಾಕಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗುತ್ತಾರೆ ಎಂದು ನಾವು ಹೇಳುವುದಲ್ಲ. ಕಾಂಗ್ರೆಸ್ ಪಕ್ಷದಲ್ಲೇ ಹೇಳುತ್ತಾರೆ. ರಾಜ್ಯದಲ್ಲಿ ಮುಖ್ಯಮಂತ್ರಿಗಳ ಬದಲಾವಣೆ ನಿಶ್ಚಿತ ಎಂದು ಪುನರುಚ್ಚರಿಸಿದರು.

ಮುಖ್ಯಮಂತ್ರಿ ಕುರ್ಚಿ ಮೇಲೆ ಸಾಲು ಸಾಲು ನಾಯಕರು ಟವಲ್ ಹಾಕಿರುವುದನ್ನು ನೋಡುತ್ತಿದ್ದೇವೆ. ಎಂ.ಬಿ.ಪಾಟೀಲ್, ಜಾರಕಿಹೊಳಿ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್, ಪರಮೇಶ್ವರ್ ಪ್ರಯತ್ನ ಮಾಡುತ್ತಿರುವ ವಿಚಾರ ಗೊತ್ತಿದೆ ಎಂದು ವ್ಯಂಗ್ಯವಾಡಿದರು.
ಎಂ.ಬಿ.ಪಾಟೀಲ್, ನಾನು ಸೀನಿಯರ್ ಎಂದು ಹೇಳುತ್ತಾರೆ. ಜೊತೆಗೆ ಲಿಂಗಾಯತ ಪ್ರಭಾವಿ ನಾಯಕ ಎಂದು ಹೇಳಿಕೊಂಡಿದ್ದಾರೆ.

ಆರ್.ವಿ.ದೇಶಪಾಂಡೆ, ನಾನು ಅವಕಾಶ ಕೊಟ್ಟರೇ ಸಿಎಂ ಆಗುತ್ತೇನೆ ಎಂದರೆ, ಇತ್ತ ಜಾರಕಿಹೊಳಿ ಅಂತೂ ನೇರವಾಗಿ ಅಭಿಯಾನವನ್ನೇ ಪ್ರಾರಂಭಿಸಿದ್ದಾರೆ. ಶಾಸಕರು ನನ್ನ ಜೊತೆಗೆ ಎಷ್ಟು ಮಂದಿ ಇದ್ದಾರೆ? ಎಂಬುದನ್ನು ಪ್ರದರ್ಶನ ಮಾಡುತ್ತಿದ್ದಾರೆ. ದೆಹಲಿ ಮಟ್ಟದಲ್ಲೂ ಪ್ರಯತ್ನ ಮುಂದುವರೆಸಿದ್ದಾರೆ.

ಇತ್ತ ಡಾ.ಜಿ.ಪರಮೇಶ್ವರ್ ಅಂತೂ ಹೈಕಮಾಂಡ್ ನಾಯಕರ ಅಭ್ಯರ್ಥಿಯಾಗಿದ್ದಾರೆ. ಈ ಹಿಂದೆ ನಾನು ಮುಖ್ಯಮಂತ್ರಿ ಆಗಬೇಕಾಗಿದ್ದನ್ನು ತಪ್ಪಿಸಿದ್ದಾರೆ. ನಾನು ಉಪ-ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಣೆ ಮಾಡಿದವನು. ನನಗೊಂದು ಅವಕಾಶ ಕೊಡಿ ಎಂದು ಕೇಳುತ್ತಿದ್ದಾರೆ.
ಡಿ.ಕೆ.ಶಿವಕುಮಾರ್ ಅಂತೂ ಯಾವೆಲ್ಲಾ ಮಾರ್ಗಗಳು ಇದೆಯೋ, ಅದನ್ನೆಲ್ಲಾ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ನಿಶ್ಚಿತ ಎಂದರು.

ರಾಜ್ಯದಲ್ಲಿ ಹಾಗಾದರೆ ಮುಖ್ಯಮಂತ್ರಿಗಳ ಬದಲಾವಣೆ ಯಾವಾಗ? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅಶೋಕ್, ನಾವು ದಿನಾಂಕ ನಿಗದಿ ಮಾಡುವುದಲ್ಲ. ಈಗಾಗಲೇ ಕಾಂಗ್ರೆಸ್ನಲ್ಲೇ ಮುಖ್ಯಮಂತ್ರಿಗಳ ಬದಲಾವಣೆಗೆ ದಿನಾಂಕ ನಿಗದಿಯಾಗಿದೆ. ಅವರ ಪಕ್ಷದಲ್ಲೇ ಇದರ ಬಗ್ಗೆ ಚರ್ಚೆಗಳು ಜೋರಾಗಿದೆ ಎಂದು ವ್ಯಂಗ್ಯವಾಡಿದರು.

ಯಾರು, ಯಾವಾಗ ಮುಖ್ಯಮಂತ್ರಿ ಆಗಬೇಕು? ಎಂಬುದರ ಬಗ್ಗೆ ವಿಸ್ತತವಾದ ಚರ್ಚೆ ಆಗಿದೆ. ನಾವು ದಿನಾಂಕ ತಿಳಿಸಿದರೆ ಅದನ್ನು ಅವರು ಪ್ರಶ್ನೆ ಮಾಡುತ್ತಾರೆ. ನಾವು ದಿನಾಂಕ ಹೇಳುವುದಿಲ್ಲ. ಅವರಲ್ಲಿ ಈಗ ದಿನಾಂಕ ನಿಗದಿಯಾಗಿದೆ ಎಂದು ಅಶೋಕ್ ಕುಹಕವಾಡಿದರು.
ಡಿ.ಕೆ.ಶಿವಕುಮಾರ್ ಪ್ರಧಾನಿ ನರೇಂದ್ರಮೋದಿ ಅವರನ್ನು ಭೇಟಿಯಾಗಿದ್ದಾರೆ. ಪ್ರಧಾನಿಗಳ ಭೇಟಿ ಯಾರಿಗೂ ಅಷ್ಟು ಸುಲಭವಾಗಿ ಸಿಗುವುದಿಲ್ಲ.

ಅಂತಹುದರಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಸಿಕ್ಕಿದ್ದು ಹೇಗೆ? ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ ಎಂದರು. ಕಾಂಗ್ರೆಸ್ನ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರಧಾನಿ ನರೇಂದ್ರಮೋದಿ ಅವರನ್ನು ಭೇಟಿಯಾಗಿದ್ದು ಅವರದೇ ಪಕ್ಷದ ಹೈಕಮಾಂಡ್ ನಾಯಕರನ್ನು ಪ್ರಶ್ನಿಸುವಂತೆ ಮಾಡಿದೆ ಎಂದು ಹೇಳಿದರು.

RELATED ARTICLES

Latest News