ಚಿಕ್ಕಬಳ್ಳಾಪುರ, ಜೂ.7- ಇಬ್ಬರು ಮಕ್ಕಳೊಂದಿಗೆ ತಾಯಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಸೂಸೆಪಾಳ್ಯದ ರಂಗಧಾಮಕೆರೆಯಲ್ಲಿ ನಡೆದಿದೆ. ಸೂಸೆಪಾಳ್ಯದ ಲಾವಣ್ಯ (28) ಈಕೆಯ ಪುತ್ರಿಯರಾದ ನಿಹಾರಿಕಾ (12) ಹಾಗೂ ನೇಹ(6 ) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು.
ದುರಂತದ ವಿವರ:
ಚಿಕ್ಕಬಳ್ಳಾಪುರ ನಗರದ ಗಂಗನಮಿದ್ದೇ ರಸ್ತೆಯಲ್ಲಿನ ಬ್ರೆಟ್ ಸ್ಕೂಲಿನಲ್ಲಿ ಈ ಹಿಂದಿನ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿದ್ದ ನಿಹಾರಿಕಾ ಮತ್ತು ನೆಹರನ್ನು ಮುಂದಿನ ತರಗತಿಗಳಿಗೆ ಸೇರಿಸಲು ಲಾವಣ್ಯ ತನ್ನ ಪತಿಯೊಂದಿಗೆ ಶಾಲೆಯಲ್ಲಿ ಕರೆದಿದ್ದ ಪೋಷಜರ ಸಭೆಯಲ್ಲಿ ಪಾಲ್ಗೊಂಡಿದ್ದರು.
ಪೋಷಕರ ಸಭೆಯ ನಂತರ ಇಬ್ಬರು ಮಕ್ಕಳ ಜೊತೆಗೆ ಲಾವಣ್ಯ ಮತ್ತು ಪತಿ ಜಯಣ್ಣ ಮನೆಗೆ ತೆರಳಲು ಶಾಲೆಯಿಂದ ಹೊರಗೆ ಬಂದಿದ್ದಾರೆ. ಹೊರಬಂದವರೇ ಮಕ್ಕಳ ಜೊತೆ ನೀನು ಮನೆಗೆ ನಡಿ ಎಂದು ಜಯಣ್ಣ ಪತ್ನಿಗೆ ಹೇಳಿದ್ದು ಅದರಂತೆ ಪತ್ನಿ ತನ್ನ ಇಬ್ಬರು ಮಕ್ಕಳೊಂದಿಗೆ ತನ್ನ ಗ್ರಾಮದತ್ತ ಹೊರಟಿದ್ದಾಳೆ.
ಜಯಣ್ಣ ಸಂಜೆ ಮನೆಗೆ ಬಂದು ನೋಡಿದಾಗ ಪತ್ನಿ ಹಾಗೂ ಮಕ್ಕಳು ಮನೇಲಿ ಇರಲಿಲ್ಲ. ವಿಚಲಿತನಾದ ಜಯಣ್ಣ ತನ್ನ ಬಂಧುಬಳಗ ನೆಂಟರಿಷ್ಟರ ಬಳಿ ವಿಚಾರಿಸಿದರೂ ಅವರ ಸುಳಿವು ಸಿಕ್ಕಿರಲಿಲ್ಲ. ಈ ನಡುವೆ ನಿನ್ನೆ ರಂಗಧಾಮಕೆರೆಯಲ್ಲಿ ಮೃತ ದೇಹಗಳು ಕಂಡುಬಂದಿವೆ. ತಾಯಿ ತನ್ನ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಯಾವುದೇ ನಿಖರ ಮಾಹಿತಿ ಸಿಕ್ಕಿಲ್ಲ ಪೊಲೀಸರ ತನಿಖೆಯಿಂದ ಅಷ್ಟೇ ಸತ್ಯ ಹೊರಬರಬೇಕಿದೆ.
ಗ್ರಾಮಸ್ಥರಿಂದ ಮಾಹಿತಿ ಪಡೆದ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಮೃತದೇಹಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಗಾರಕ್ಕೆ ಸಾಗಿಸಿ ಮರಣೋತ್ತರ ಪರೀಕ್ಷೆಯ ನಂತರ ವಾರಸುದಾರರಿಗೆ ಮೃತದೇಹಗಳನ್ನು ಹಸ್ತಾಂತರಿಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.