Friday, September 20, 2024
Homeಬೆಂಗಳೂರುಬೆಂಗಳೂರು ಪೊಲೀಸರ ಕ್ಷಿಪ್ರ ಕಾರ್ಯಾಚರಣೆ : ಲೈಂಗಿಕ ದೌರ್ಜನ್ಯ ಎಸಗಿದ್ದ ಕೊರಿಯೋಗ್ರಾಫರ್ ಬಂಧನ

ಬೆಂಗಳೂರು ಪೊಲೀಸರ ಕ್ಷಿಪ್ರ ಕಾರ್ಯಾಚರಣೆ : ಲೈಂಗಿಕ ದೌರ್ಜನ್ಯ ಎಸಗಿದ್ದ ಕೊರಿಯೋಗ್ರಾಫರ್ ಬಂಧನ

ಬೆಂಗಳೂರು,ಆ.19-ಡ್ರಾಪ್ ಕೇಳಿದ ವಿದ್ಯಾರ್ಥಿನಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮೃಗೀಯ ರೀತಿ ವರ್ತಿಸಿ ಲೈಂಗಿಕ ದೌರ್ಜನ್ಯ ವೆಸಗಿ ಪರಾರಿಯಾಗಿದ್ದ ಆರೋಪಿ ಕೊರಿಯೋಗ್ರಾಫರ್ನನ್ನು ಎಚ್ಎಸ್ಆರ್ ಲೇಔಟ್ ಠಾಣೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ತಮಿಳುನಾಡು ಮೂಲದ ಮುಖೇಶ್ವರನ್(24) ಬಂಧಿತ ಆರೋಪಿ. ಈತ ಡ್ಯಾನ್‌್ಸ ಕೊರಿಯೋಗ್ರಾಫರ್ ಹಾಗೂ ಸ್ಕೇಟಿಂಗ್ ಇನ್ಸ್ಟ್ರಕ್ಟರ್. ಬನ್ನೇರುಘಟ್ಟ ರಸ್ತೆಯ ಎಸ್.ಆರ್.ನಗರದಲ್ಲಿ ವಾಸವಾಗಿದ್ದಾನೆ. ಮೊನ್ನೆ ರಾತ್ರಿ ಈತ ಮಡಿವಾಳ ರಸ್ತೆ ಮೂಲಕ ಹೋಗುತ್ತಿದ್ದಾಗ ವಿದ್ಯಾರ್ಥಿನಿ ಡ್ರಾಪ್ಗಾಗಿ ಬೈಕ್ ಅಡ್ಡ ಹಾಕಿದ್ದಾಳೆ. ಆ ವೇಳೆ ಆತನೂ ಸಹ ಪಾನಮತ್ತನಾಗಿದ್ದನು.

ಈ ವಿದ್ಯಾರ್ಥಿನಿಯನ್ನು ಹೊಸೂರು ರಸ್ತೆಯ ಸರ್ವೀಸ್ ರಸ್ತೆಯಲ್ಲಿರುವ ಗಿರಿಯಾಸ್ ಶೋರೂಂ ಹಿಂಭಾಗ ಲಾರಿಗಳನ್ನು ನಿಲ್ಲಿಸುವ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬಟ್ಟೆಯನ್ನು ಹರಿದು, ಕಿತ್ತಾಕಿ ಬೆತ್ತಲಾಗಿಸಿ ಲೈಂಗಿಕ ದೌರ್ಜನ್ಯವೆಸಗಿದ್ದ.ಆ ಸಂದರ್ಭದಲ್ಲಿ ಆ ವಿದ್ಯಾರ್ಥಿನಿ ಸಹಾಯಕ್ಕಾಗಿ ಮೊಬೈಲ್ನಲ್ಲಿ ಎಸ್ಒಎಸ್ ಬಟನ್ ಒತ್ತಿದ್ದರಿಂದ ಆಕೆಯ ಸ್ನೇಹಿತೆಗೆ ಹಾಗೂ ತಂದೆಗೆ ಮೆಸೇಜ್ ಹೋಗಿದೆ.

ಅಪಾಯದ ಬಗ್ಗೆ ಮೊಬೈಲ್ನಲ್ಲಿ ಬಂದ ಮೆಸೇಜ್ ನೋಡಿದ ಗೆಳತಿ ತಕ್ಷಣ ತನ್ನ ಸ್ನೇಹಿತನಿಗೆ ತಿಳಿಸಿದಳು. ಆಗ ಆ ಸ್ನೇಹಿತ ಸ್ಥಳಕ್ಕೆ ಬಂದಾಗ ಬೆತ್ತಲಾಗಿದ್ದ ಸ್ನೇಹಿತೆಯನ್ನು ಗಮನಿಸಿ ಸುತ್ತ ನೋಡಿದಾಗ ಒಬ್ಬಾತನ ಮೈಮೇಲೆ ಅಂಗಿ ಇರಲಿಲ್ಲ. ಜೀನ್‌್ಸ ಪ್ಯಾಂಟ್ ಮಾತ್ರ ಇತ್ತು. ತಕ್ಷಣ ಆತನನ್ನು ಹಿಡಿಯಲು ಹೋದಾಗ ಬೈಕ್ ಹತ್ತಿಕೊಂಡು ಪರಾರಿಯಾಗಿದ್ದಾನೆ.ಅಷ್ಟರಲ್ಲಿ ಈತನ ಮತ್ತೊಬ್ಬ ಸ್ನೇಹಿತ ಸ್ಥಳಕ್ಕೆ ಬಂದಿದ್ದು, ಕಾರಿನ ಶೀಟ್ ಕವರ್ನ್ನು ತೆಗೆದು ವಿದ್ಯಾರ್ಥಿನಿಗೆ ಹೊದಿಸಿ ಕಾರಿನಲ್ಲಿ ಮಲಗಿಸಿ ಹೆಬ್ಬಗೋಡಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.

ಈ ಸಂದರ್ಭದಲ್ಲಿ ಸಂತ್ರಸ್ತೆಯ ಸ್ನೇಹಿತೆಯಿಂದ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡ ಆಕೆಯ ಸ್ನೇಹಿತ ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಪತ್ತೆಗಾಗಿ 40 ಮಂದಿಯನ್ನೊಳಗೊಂಡ 5 ತಂಡಗಳನ್ನು ರಚಿಸಿ ಶೋಧ ಕಾರ್ಯಾಚರಣೆಗಿಳಿದಿದ್ದರು.

ಈ ತಂಡಗಳು ಕೃತ್ಯ ನಡೆದ ಸ್ಥಳದಲ್ಲಿ ದೊರೆತ ಕೆಲವು ಸಾಕ್ಷ್ಯಾಧಾರಗಳು, ಆರೋಪಿಯ ಬೈಕ್ ನಂಬರ್, ಸಂತ್ರಸ್ತೆಯ ಹೇಳಿಕೆ, ಸ್ನೇಹಿತರ ಹೇಳಿಕೆಗಳು ಹಾಗೂ ಯುವತಿ ಡ್ರಾಪ್ ಪಡೆದ ರಸ್ತೆಯಲ್ಲಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿ ಪತ್ತೆಗೆ ಕ್ಷಿಪ್ರ ಕಾರ್ಯಾಚರಣೆ ಕೈಗೊಂಡು ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿವೆ.

ನಾಗಲ್ಯಾಂಡ್ ಮೂಲದ 21 ವರ್ಷದ ವಿದ್ಯಾರ್ಥಿನಿ ಆನೇಕಲ್ನ ಚಂದಾಪುರದಲ್ಲಿ ವಾಸವಾಗಿದ್ದುಕೊಂಡು ಖಾಸಗಿ ಕಾಲೇಜುವೊಂದರಲ್ಲಿ ಅಂತಿಮ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿದ್ದಾಳೆ. ಸ್ನೇಹಿತನ ಜೊತೆ ಈ ವಿದ್ಯಾರ್ಥಿನಿ ಕಾರಿನಲ್ಲಿ ಮೊನ್ನೆ ರಾತ್ರಿ ಕೋರಮಂಗಲದ ಪಬ್ಗೆ ಹೋಗಿ ಪಾರ್ಟಿ ಮುಗಿಸಿಕೊಂಡು ವಾಪಸ್ ಮನೆಗೆ ಹಿಂದಿರುಗುತ್ತಿದ್ದಳು. ಆ ವೇಳೆ ಈಕೆಯೇ ಕಾರನ್ನು ಚಲಾಯಿಸುತ್ತಿದ್ದಳು.

ಮೊನ್ನೆ ರಾತ್ರಿ ಸುಮಾರು ಒಂದು ಗಂಟೆ ಸಂದಭದಲ್ಲಿ ಕೋರಮಂಗಲದ ಫೋರಂ ಮಾಲ್ ಬಳಿ ಇವರ ಕಾರು ಆಟೋ ರಿಕ್ಷಾಗೆ ಡಿಕ್ಕಿ ಹೊಡೆದಿದೆ. ಆ ವೇಳೆ ಆಟೋ ರಿಕ್ಷಾ ಚಾಲಕ ಹಾಗೂ ಸ್ನೇಹಿತರ ನಡುವೆ ಜಗಳವಾಗಿದೆ. ಅದೇ ಸಂದರ್ಭದಲ್ಲಿ ಹೊಯ್ಸಳ ಪೊಲೀಸರು ಈ ಮಾರ್ಗದಲ್ಲಿ ಬಂದಾಗ ಗಾಬರಿಗೊಂಡ ವಿದ್ಯಾರ್ಥಿನಿ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್ ಸವಾರನಿಗೆ ಡ್ರಾಪ್ ಕೇಳಿದ್ದಾಳೆ.

ನೆರವು ಕೇಳಿದ ವಿದ್ಯಾರ್ಥಿಯನ್ನು ಬೈಕ್ನಲ್ಲಿ ಹತ್ತಿಸಿಕೊಂಡ ಸವಾರ 2 ಕಿ.ಮೀವರೆಗೆ ಸುರಕ್ಷಿತವಾಗಿ ಕರೆದುಕೊಂಡು ಹೋಗಿ ನಂತರ ಆಕೆಯನ್ನು ಇಳಿಸಿ ಅಲ್ಲಿಂದ ಆತ ತೆರಳಿದ್ದಾನೆ.

ಇತ್ತ ವಿದ್ಯಾರ್ಥಿನಿ ತನ್ನ ಮನೆಗೆ ತೆರಳುವ ಸಲುವಾಗಿ ಪುನಃ ಮಡಿವಾಳ ಬಳಿ ಡ್ರಾಪ್ಗಾಗಿ ಈ ಮಾರ್ಗದಲ್ಲಿ ಬಂದ ದ್ವಿಚಕ್ರ ವಾಹನವನ್ನು ಅಡ್ಡ ಹಾಕಿದ್ದಾಳೆ. ದ್ವಿಚಕ್ರ ವಾಹನದ ಸವಾರ ಯುವತಿಯನ್ನು ಹತ್ತಿಸಿಕೊಂಡು ಸ್ವಲ್ಪ ದೂರ ಹೋಗಿದ್ದಾನೆ. ಆ ವೇಳೆ ಆತನಿಗೆ ಯಾವ ದುರಾಲೋಚನೆ ಬಂದಿತೋ ಏನೋ ದ್ವಿಚಕ್ರ ವಾಹನವನ್ನು ಬೇರೆ ಮಾರ್ಗಕ್ಕೆ ತಿರುಗಿಸಿದಾಗ ಆಕೆಯ ಅರಿವಿಗೆ ಬಂದು ತಕ್ಷಣ ಮೊಬೈಲ್ನಲ್ಲಿ ಎಸ್ಒಎಸ್ ಬಟನ್ ಒತ್ತಿದ್ದಾಳೆ.

ಅಷ್ಟರಲ್ಲಾಗಲೇ ಸವಾರ ತನ್ನ ಬೈಕ್ನ್ನು ಎಚ್ಎಸ್ಆರ್ ಲೇಔಟ್ 7ನೇ ಸೆಕ್ಟರ್ ರಾಜೀವ್ಗಾಂಧಿನಗರ ಹೊಸೂರು ಮುಖ್ಯರಸ್ತೆಯ ಸರ್ವೀಸ್ ರಸ್ತೆಯಲ್ಲಿರುವ ಗಿರಿಯಾಸ್ ಶೋರೂಂ ಹಿಂಭಾಗ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯವೆಸಗಿ ಪರಾರಿಯಾಗಿದ್ದ.

ಕೋಲ್ಕತ್ತಾದಲ್ಲಿ ತರಬೇತಿ ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ದೇಶಾದ್ಯಂತ ಪ್ರತಿಭಟನೆ ನಡೆಸಿ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕೆಂದು ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸಿಲಿಕಾನ್ ಸಿಟಿಯಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ.

RELATED ARTICLES

Latest News