Sunday, May 5, 2024
Homeರಾಜ್ಯಬರ ನಿರ್ವಹಣೆಯಲ್ಲಿ ಸಿಎಂ ವಿಫಲ : ವಿಪಕ್ಷ ನಾಯಕ ಅಶೋಕ್ ವಾಗ್ದಾಳಿ

ಬರ ನಿರ್ವಹಣೆಯಲ್ಲಿ ಸಿಎಂ ವಿಫಲ : ವಿಪಕ್ಷ ನಾಯಕ ಅಶೋಕ್ ವಾಗ್ದಾಳಿ

ಬೆಂಗಳೂರು,ಏ.6- ಬರ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲ ತಾಲ್ಲೂಕುಗಳಲ್ಲಿ ಮಳೆ ಇಲ್ಲದೆ ಎಲ್ಲ ತಾಲ್ಲೂಕುಗಳಲ್ಲಿ ಬರಗಾಲ ಆವರಿಸಿದೆ.

ಕುಡಿಯಲು ನೀರು, ಜಾನುವಾರುಗಳಿಗೆ ಮೇವಿಲ್ಲದೆ ಜನರು ಗುಳೇ ಹೋಗುತ್ತಿದ್ದಾರೆ. ಈ ಸರ್ಕಾರ ಜನರ ಪಾಲಿಗೆ ಇದ್ದು ಸತ್ತಂತೆ. ಹೀಗಾಗಿ ಸಿಎಂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು. ಬ್ರಾಂಡ್ ಬೆಂಗಳೂರು ಈಗ ಬಾಡ್ ಬೆಂಗಳೂರು ಆಗಿದೆ. ಡಿ.ಕೆ.ಶಿವಕುಮಾರ್ ನೀರಾವರಿ ಸಚಿವರಾದ ನಂತರ ರಾಜ್ಯದ ಎಲ್ಲಾ ಅಣೆಕಟ್ಟುಗಳು ಖಾಲಿಯಾಗಿವೆ.

ಲೋಕೋಪಯೋಗಿ ಸಚಿವರು ಯಾರು ಎಂಬುದೇ ಜನರಿಗೆ ಗೊತ್ತಿಲ್ಲ. ಒಂದು ಕಿ.ಮೀ ರಸ್ತೆಗೆ ಡಾಂಬರ್ ಹಾಕಿಲ್ಲ. ತಮ್ಮ ಜವಾಬ್ದಾರಿ ಮರೆತು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ 11 ತಿಂಗಳ ನಂತರ ಬರಪರಿಹಾರದ ಹಣ ಬಿಡುಗಡೆ ಮಾಡಿದ್ದರು. ಹಿಂದಿನ ಯುಪಿಎ ಸರ್ಕಾರಕ್ಕೆ ಹೋಲಿಕೆ ಮಾಡಿದರೆ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಎನ್ಡಿಎ ಸರ್ಕಾರ ದುಪ್ಪಟ್ಟು ಅನುದಾನ ನೀಡಿದೆ. ಕೇಂದ್ರದಿಂದ ಅನುದಾನ ನೀಡುವ ವಿಷಯದಲ್ಲಿ ಯಾವುದೇ ತಾರತಮ್ಯವಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಜುಲೈ ತಿಂಗಳಲ್ಲೇ ವಾಡಿಕೆಗಿಂತ ಶೇ. 67% ಮಳೆ ಕಡಿಮೆಯಾಗಿದೆ. ಇದಾದ ಬಳಿಕ ಮೂರುವರೆ ತಿಂಗಳು ಕಳೆದ ಮೇಲೆ ಬರ ಬಂದಿದೆ. ಕೆರಗಳು ಬತ್ತಿ ಹೋಗಿದೆ. ಜಲಾಶಯಗಳು ಖಾಲಿ ಖಾಲಿ ಆಗಿದೆ. ಮಳೆಯ ಕೊರತೆಯ ಹಿನ್ನೆಲೆಯಲ್ಲಿ, ಜಲಾಶಯಗಳು ಖಾಲಿ ಖಾಲಿಯಾಗಿದೆ. 508 ಕೆರೆಯಲ್ಲಿ ಮಳೆ ಕಡಿಮೆಯಾದ ಪರಿಣಾಮ ಒಂದು ಹನಿ ನೀರಿಲ್ಲ ಎಂದು ಆಗ್ರಹಿಸಿದರು.

ಸಾಮಾಜಿಕ ಜಾಲತಾಣದಲ್ಲಿ ಹೇಳುತ್ತಾರೆ, ಸವಾಲು ಚರ್ಚೆಗೆ ಬನ್ನಿ ಅಂತಾರೆ.ನಾನು ಈ ಮಾತನ್ನು ಹೇಳಬೇಕೋ, ಹೇಳಬಾರದೋ ಗೊತ್ತಿಲ್ಲ.ಕಾಂಗ್ರೆಸ್ ಪಾರ್ಲಿಮೆಂಟ್ನಲ್ಲಿ ಸತ್ತು ಹೋಗಿತ್ತಾ? ರಾಷ್ಟ್ರೀಯ ಕಾಂಗ್ರೆಸ್ ಸತ್ತು ಹೋಗಿದ್ಯಾ?ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಬರ ಪರಿಹಾರಕ್ಕೆ ಒಬ್ಬೊಬ್ಬ ರೈತರಿಗೆ 25ರಿಂದ 50 ಸಾವಿರ ರೂಪಾಯಿ ನೀಡಬೇಕಿತ್ತು. ಆದರೆ ಕೊಟ್ಟಿರುವುದು ಮಾತ್ರ ಕೇವಲ 2 ಸಾವಿರ ರೂಪಾಯಿ.ಮುಂಗಾರು ಬೆಳೆ ಬೇರೆ, ಹಿಂಗಾರು ಬೆಳೆಯೇ ಬೇರೆ. ಹಿಂಗಾರು ಕೂಡ ಕೈ ಕೊಟ್ಟಿದೆ. ಮಿ.ಸಿದ್ಧರಾಮಯ್ಯಜೀ ಏಕೆ ಹಿಂಗಾರು ಬರವನ್ನು ಮುಚ್ಚಿಟ್ಟಿದ್ದೀರಿ? ಈಗ ಘೋಷಣೆ ಮಾಡಿರುವುದು ಮುಂಗಾರು ಬರ ಮಾತ್ರ. ಈವರೆಗೂ 900 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೀವು ಗ್ಯಾರೆಂಟಿಗಳನ್ನು ಎಷ್ಟು ಬೇಕಾದರೀ ಕೊಡಿ. 5 ಏಕೆ 50 ಗ್ಯಾರೆಂಟಿಗಳನ್ನು ಕೊಡಿ.

5 ಗ್ಯಾರಂಟಿ ಅಲ್ಲ, 50 ಗ್ಯಾರಂಟಿ ಬೇಕಾದರೆ ಕೊಡಿ. ಆದರೆ ರೈತರಿಗೆ ಪರಿಹಾರ ಕೊಡಿ. ರೈತರ ಆತ್ಮಹತ್ಯೆ ಆಗುತ್ತಿದೆ, ನಿಮಗೆ ಕಿಂಚಿತ್ತೂ ನೋವು ಇಲ್ವಾ. ಹತ್ತು ತಿಂಗಳಲ್ಲಿ ಯಾವ ಅಭಿವೃದ್ಧಿ ಕೆಲಸ ಆಗಿದೆ ಎಂದು ಪ್ರಶ್ನಿಸಿದರು.

ಜಲಾಶಯ ಕಟ್ಟಿದ್ದೀರಾ? ಶಿಕ್ಷಣ ಸಂಸ್ಥೆ ಮಾಡಿದ್ದೀರಾ? ಅಧಿಕಾರಕ್ಕೆ ಬಂದು ಬಂದು ವರ್ಷವಾಯ್ತು. ಆಸ್ಪತ್ರೆ, ಶಾಲೆ, ಡ್ಯಾಂ ಕಟ್ಟುವುದು ನಮ್ಮ ಕರ್ತವ್ಯ. ಏನನ್ನೂ ಕಟ್ಟಿಲ್ಲ. ಯಾವ ಕೆಲಸವನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಂಗಾರು ಪರಿಹಾರ ಬೇಕು ಎಂದು ಬಿಡುಗಡೆ ಮಾಡಿದ್ದೀರಲ್ಲಾ, ಅದೇ ರೀತಿ ಹಿಂಗಾರು ಪರಿಹಾರದ್ದು ಬಿಡುಗಡೆ ಮಾಡಬೇಕು ಅಲ್ಲವೇ? 6651.15 ಕೋಟಿ ನಾವು ಅಧಿಕಾರದಲ್ಲಿದ್ದಾಗ ನಾಲ್ಕು ವರ್ಷಗಳ ಅಧಿಕಾರದಲ್ಲಿದ್ದಾಗ ಪರಿಹಾರ ಬಿಡುಗಡೆ ಮಾಡಿದ್ದೇವೆ. ಬೆಳೆ ಪರಿಹಾರ ಬಿಡುಗಡೆ ಮಾಡಿದ್ದೇವೆ ಎಂದು ಸಮರ್ಥಿಸಿಕೊಂಡರು.

RELATED ARTICLES

Latest News