Thursday, May 9, 2024
Homeರಾಜ್ಯಮೋದಿ ಶ್ರೀಮಂತರ ಸಾಲ ಮನ್ನಾ ಮಾಡಿ, ಬಡವರನ್ನು ದೂರ ಮಾಡುತ್ತಿದ್ದಾರೆ : ಸಿಎಂ ಸಿದ್ದರಾಮಯ್ಯ

ಮೋದಿ ಶ್ರೀಮಂತರ ಸಾಲ ಮನ್ನಾ ಮಾಡಿ, ಬಡವರನ್ನು ದೂರ ಮಾಡುತ್ತಿದ್ದಾರೆ : ಸಿಎಂ ಸಿದ್ದರಾಮಯ್ಯ

ಬೆಂಗಳೂರು, ನ.19- ರೈತರ ಸಾಲ ಮನ್ನಾ ಮಾಡಲು ಹಿಂದೇಟು ಹಾಕುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಶ್ರೀಮಂತರ ಸಾಲ ಮನ್ನಾ ಮಾಡುತ್ತಾರೆ. ಬ್ಯಾಂಕ್‍ಗಳನ್ನು ಖಾಸಗೀಕರಣ ಮಾಡಿ, ಅವುಗಳನ್ನು ಬಡವರಿಂದ ದೂರ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರ ಜನ್ಮದಿನಾಚರಣೆ ಹಾಗೂ ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಅಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವತಂತ್ರ್ಯ ಭಾರತದಲ್ಲಿ ಮತ್ತು ಪೂರ್ವದಲ್ಲಿ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ್ದರೆ ಅದು ಕಾಂಗ್ರೆಸ್ ಮಾತ್ರ. ಇಂದು ಅಧಿಕಾರದಲ್ಲಿರುವ ಬಿಜೆಪಿಯಲ್ಲಿ ದೇಶಕ್ಕಾಗಿ ಯಾರು ತ್ಯಾಗ ಬಲಿದಾನ ಮಾಡಿಲ್ಲ. ಜಾತ್ಯತೀತ ತತ್ವ, ಸಾಮಾಜಿಕ ನ್ಯಾಯ, ಬಡವರ ಪರ ಕಾಳಜಿ, ಸಮಸಮಾಜ ನಿರ್ಮಾಣ ಸೇರಿದಂತೆ ಎಲ್ಲದಕ್ಕೂ ಸ್ಪಂದಿಸಿ, ಜನರ ಸಮಸ್ಯೆ ಬಗೆ ಹರಿಸುವ ಕೆಲಸ ಮಾಡಿದ್ದು ಕಾಂಗ್ರೆಸ್ ಮಾತ್ರ.

ನೆಹರು ಈ ದೇಶದ ಪ್ರಧಾನಿಯಾಗಿದ್ದ ದಿನಗಳಲ್ಲಿ ದೇಶ ಹೇಗಿತ್ತು ಎಂದು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಆರ್ಥಿಕವಾಗಿ, ಸಾಮಾಜಿಕವಾಗಿ ಬಹಳ ಕೆಳಮಟ್ಟದಲ್ಲಿತ್ತು. ಅಂತಹ ಸಂಕಷ್ಟ ಸಮಯದಲ್ಲಿ ಪ್ರಧಾನಿಯಾದ ನೆಹರು ದೇಶ ಕಟ್ಟಿದರು, ನಂತರ ಲಾಲ್ ಬಹುದೂರ್ ಶಾಸ್ತ್ರಿ, ಇಂದಿರಾಗಾಂಧಿ ದೇಶದ ದಿಕ್ಕು ಬದಲಿಸಿದರು.

ವಿರೋಧ ಪಕ್ಷಗಳು ಇಂದಿರಾಗಾಂಧಿ ಹಠಾವೋ ಎನ್ನುತ್ತಿದ್ದವು. ಅದಕ್ಕೆ ತಿರುಗೇಟು ನೀಡಿದ ಇಂದಿರಾಗಾಂಧಿ, ಗರೀಬಿ ಹಠಾವೋ ಎಂದರು. ಹಸಿರು ಕ್ರಾಂತಿಯ ಮೂಲಕ ಆಹಾರದ ಸ್ವಾವಲಂಬನೆ ತಂದರು. ಜನಸಂಖ್ಯೆಯಲ್ಲಿ ನಾವು ಚೀನಾವನ್ನು ಹಿಂದಿಕ್ಕಿ ಮೊದಲ ಸ್ಥಾನದಲ್ಲಿದ್ದೇವೆ. ಎಲ್ಲರಿಗೂ ಆಹಾರ ಒದಗಿಸಬೇಕಾದರೆ ನಿರಂತರವಾದ ಹಸಿರು ಕ್ರಾಂತಿಯಾಗಬೇಕು, ಆಗ ಮಾತ್ರ ಭಾರತ ಬಲಿಷ್ಠ ರಾಷ್ಟ್ರವಾಗಲು ಸಾಧ್ಯ ಎಂದರು.

ಖಾಸಗಿ ಬ್ಯಾಂಕ್‍ಗಳು ಬಡವರಿಗೆ, ಸಾಮಾನ್ಯರಿಗೆ ಬಾಗಿಲು ತೆರೆದಿರಲಿಲ್ಲ. ಬ್ಯಾಂಕ್ ರಾಷ್ಟ್ರೀಕರಣದ ಮೂಲಕ ಇಂದಿರಾಗಾಂ ಬಡವರಿಗೆ ಬ್ಯಾಂಕ್ ಬಾಗಿಲು ತೆರೆದಿಟ್ಟರು. ಈಗ ಪ್ರಧಾನಿಯಾಗಿರುವ ನರೇಂದ್ರ ಮೋದಿ ಹಿಂದಿನ ಅಭಿವೃದ್ಧಿ ಎಲ್ಲಾ ಕೆಲಸವನ್ನು ತಿರುವು ಮುರುವು ಮಾಡುತ್ತಿದ್ದಾರೆ. ಬ್ಯಾಂಕ್‍ಗಳನ್ನು ಖಾಸಗೀಕರಣ ಮಾಡುವ ಮೂಲಕ ಬಡವರಿಗೆ ಅವುಗಳ ಬಾಗಿಲುಗಳನ್ನು ಮುಚ್ಚುತ್ತಿದ್ದಾರೆ. ಶ್ರೀಮಂತರ ಸಾಲ ಮನ್ನಾ ಮಾಡುವ ಮೋದಿ, ರೈತರ ಸಾಲ ಮನ್ನಾ ಮಾಡುವುದಿಲ್ಲ ಎನ್ನುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಹಸಿರು ಕ್ರಾಂತಿಯಾಗಿದ್ದಾಗ ಬಾಬುಜಗಜೀವನರಾಮ್ ಕೃಷಿ ಸಚಿವರಾಗಿದ್ದರು. ಇಂದಿರಾಗಾಂಧಿ 1971ರಲ್ಲಿ ಪಾಕಿಸ್ತಾನವನ್ನು ಬಗ್ಗು ಬಡಿದು, ಬಾಂಗ್ಲಾದೇಶ ವಿಭಜನೆ ಮಾಡಿದಾಗ ಬಾಬು ಜಗಜೀವನರಾಮ್ ರಕ್ಷಣಾ ಸಚಿವರಾಗಿದ್ದರು, 20 ಅಂಶಗಳ ಮೂಲಕ ಬಡವರಿಗೆ ಶಕ್ತಿ ತುಂಬಿದ ಇಂದಿರಾಗಾಂ, ಉಳುವವನೆ ಭೂಮಿ ಒಡೆಯ ಕಾನೂನಿನ ಮೂಲಕ ರೈತರಿಗೆ ಭೂಮಿ ಕೊಡಿಸಿದರು. ಉಗ್ರವಾದವನ್ನು ಬಲವಾಗಿ ಖಂಡಿಸುತ್ತಿದ್ದರು. ಕೊನೆಗೆ ಅದೇ ಉಗ್ರವಾದಕ್ಕೆ ಬಲಿಯಾದರು ಎಂದರು.

ಪಕ್ಷದ ಅಧ್ಯಕ್ಷರಾಗಿ ಅಕಾರ ಸ್ವೀಕರಿಸಿದವರಿಗೆ ಲೋಕಸಭೆ ಚುನಾವಣೆಯ ಸವಾಲು ಮುಂದಿದೆ. ಬಿಬಿಎಂಪಿ ಚುನಾವಣೆಯಲ್ಲೂ ಅಧಿಕಾರ ಹಿಡಿಯಬೇಕಿದೆ. ಬಿಜೆಪಿ, ಜನತಾದಳದವರು ನಮಗೆ ಮಸಿ ಬಳಿಯಲು ಯತ್ನಿಸುತ್ತಿದ್ದಾರೆ. ನಾವು ಆಡಳಿತ ನಡೆಸುವುದನ್ನು ಅವರಿಂದ ಸಹಿಸಲಾಗುತ್ತಿಲ್ಲ. ಹೊಟ್ಟೆ ಉರಿ, ದ್ವೇಷ, ಅಸೂಯೆ, ಮತ್ಸರ ಸೇರಿ ಎಲ್ಲಾ ಪದಗಳು ಅವರಿಗೆ ಅನ್ವರ್ಥವಾಗಿವೆ. ಕುಮಾರಸ್ವಾಮಿ ಮಾಡುವ ಯಾವ ಆರೋಪಕ್ಕೂ ದಾಖಲೆ ನೀಡುವುದಿಲ್ಲ. ನನ್ನ ಮೇಲೆ, ಡಿ.ಕೆ.ಶಿವಕುಮಾರ್ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿರುತ್ತಾರೆ ಎಂದರು.

ಬಿಜೆಪಿಯವರು ಹೇಳಿಕೊಟ್ಟು ಆರೋಪ ಮಾಡಿಸುತ್ತಿದ್ದಾರೆ. ಎರಡು ಪಕ್ಷಗಳ ಮೈತ್ರಿ ಹೇಗಿದೆ ಎಂದರೆ ಅನ್ನ ಹಳಸಿತ್ತು, ನಾಯಿ ಕಾದಿತ್ತು ಎಂಬಂತಾಗಿದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ವರ್ಗಾವಣೆಯಲ್ಲಿ ಲಂಚ ಪಡೆದಿದ್ದರು. ಶೇ.40ರಷ್ಟು ಕಮಿಷನ್ ಪಡೆದವರು ಅವರು, ಈಗ ನಮ್ಮ ಮೇಲೆ ಸುಳ್ಳು ಹೇಳುತ್ತಿದ್ದಾರೆ. ಮುಖ್ಯಮಂತ್ರಿಯಾಗಲು ಕುಮಾರಸ್ವಾಮಿಗೆ ಕಾಂಗ್ರೆಸ ಸಂಪೂರ್ಣ ಬೆಂಬಲ ನೀಡಿದ್ದರೂ ಅವರಿಂದ ಸರ್ಕಾರ ಉಳಿಸಿಕೊಳ್ಳಲಾಗಲಿಲ್ಲ. ಸುಳ್ಳೆ ಅವರ ಮನೆ ದೇವರು. ಇನ್ನೂ ಮುಂದೆ ಅವರ ಸುಳ್ಳುಗಳಿಗೆ ಉತ್ತರ ಕೊಡಲ್ಲ ಎಂದು ತೀರ್ಮಾನಿಸಿದ್ದೇನೆ ಎಂದರು.

ಸಿದ್ದರಾಮಯ್ಯರನ್ನು ದೃತರಾಷ್ಟ್ರನಿಗೆ ಹೋಲಿಸಿದ ಬಿಜೆಪಿ

ವರ್ಗಾವಣೆ ಮಾಡುವ ಅಧಿಕಾರ ಇರುವುದು ಸರ್ಕಾರಕ್ಕಲ್ಲದೆ, ಕುಮಾರಸ್ವಾಮಿ, ಬಿಜೆಪಿಯವರಿಗೆ ಇದೆಯೇ, ಅವರು ಲಂಚ ಪಡೆದಿದ್ದರು, ಅದನ್ನು ನಮ್ಮ ಕಾಲದಲ್ಲೂ ನಡೆಯುತ್ತದೆ ಎಂದು ಅಂದುಕೊಂಡಿದ್ದಾರೆ. ಎರಡು ಭಾರೀ ಮುಖ್ಯಮಂತ್ರಿಯಾಗಿದ್ದವರು ವಿದ್ಯುತ್ ಕಳ್ಳತನ ಮಾಡಿ, ತಪ್ಪನ್ನು ಒಪ್ಪಿಕೊಂಡು ದಂಡ ಕಟ್ಟಿದ್ದಾರೆ. ಅದನ್ನು ಕ್ಷುಲ್ಲಕ ಪ್ರಕರಣ ಎನ್ನುತ್ತಿದ್ದಾರೆ, ಕುಮಾರಸ್ವಾಮಿಯವರೇ ಕ್ಷುಲ್ಲಕ ವ್ಯಕ್ತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿರೋಧ ಪಕ್ಷಗಳ ಆರೋಪಗಳಿಗೆ ಆದ್ಯತೆ ಬೇಡ, ನಮ್ಮ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಿ ಎಂದು ಮುಖ್ಯಮಂತ್ರಿ ಕರೆ ನೀಡಿದರು. ಇಂದಿರಾಗಾಂಧಿಯವರ ಜನ್ಮದಿನವನ್ನು ಇಂದು ರಾಷ್ಟ್ರಾದ್ಯಂತ ಆಚರಣೆ ಮಾಡಲಾಗುತ್ತಿದೆ. 16 ವರ್ಷ ದೇಶದ ಪ್ರಧಾನಿಯಾಗಿದ್ದ ಅವರು ವಿರೋಧ ಪಕ್ಷದ ನಾಯಕರಿಂದಲೂ ಹೊಗಳಿಸಿಕೊಂಡಿದ್ದರು.

ಇಂದಿರಾಗಾಂಧಿ ಹುಟ್ಟಿದ ಸ್ಥಳ ರಾಜಕೀಯ ಕೇಂದ್ರವಾಗಿತ್ತು, ತಂದೆ ಜವಹಾರ್‍ಲಾಲ್ ನೆಹರು ಸೇರಿದಂತೆ ಎಲ್ಲರೂ ಸಕ್ರಿಯ ರಾಜಕಾರಣದಲ್ಲಿದ್ದರು. ಮಹಾತ್ಮ ಗಾಂ ಸೇರಿದಂತೆ ಅನೇಕ ಮಹನೀಯರನ್ನು ನೋಡಿಕೊಂಡು ಬೆಳೆದ ಇಂದಿರಾಗಾಂಯವರ ಮೇಲೆ ಸ್ವತಂತ್ರ್ಯ ಹೋರಾಟದ ಗಾಢ ಪರಿಣಾಮ ಬೀರಿತ್ತು, ಬಾಲ್ಯದಿಂದಲೇ ಜನಪರವಾದ ದೋರಣೆ ಬೆಳೆದಿತ್ತು. ಲಾಲ್ ಬಹುದೂರ್ ಶಾಸ್ತ್ರಿ ನಂತರ 1977 ರಿಂದ 1980ರವರೆಗೆ ಮೂರು ವರ್ಷ ಹೊರತು ಪಡಿಸಿದರೆ 196ರಿಂದ 1984ರವರೆಗೆ ದೇಶದ ಪ್ರಧಾನಿಯಾಗಿದ್ದರು. ಅವರನ್ನು ಉಕ್ಕಿನ ಮಹಿಳೆ ಎಂದು ಕರೆಯುತ್ತಾರೆ. ದೇಶಕ್ಕಾಗಿ ದೃಢವಾದ, ಜನಪರವಾದ ನಿರ್ಧಾರ ತೆಗೆದುಕೊಳ್ಳುತ್ತಿದ್ದರು, ರಾಜಕೀಯವನ್ನ ಸಮಜ ಸೇವೆ ಎಂದು ಭಾವಿಸಿದ್ದರು ಎಂದರು.

ಆಲ್ ದಿ ಬೆಸ್ಟ್ ಟೀಂ ಇಂಡಿಯಾ: ಶುಭಕೋರಿದ ಪ್ರಧಾನಿ ಮೋದಿ

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್, ಸಚಿವರಾದ ಬೈರತಿ ಸುರೇಶ್, ದಿನೇಶ್ ಗುಂಡೂರಾವ್, ಕೃಷ್ಣಬೈರೇಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಇದೇ ವೇಳೆ ಬೆಂಗಳೂರು ನಗರ ಜಿಲ್ಲೆಗಳ ನಾಲ್ವರು ಕಾಂಗ್ರೆಸ್ ಅಧ್ಯಕ್ಷರು ಅಕಾರ ಸ್ವೀಕರಿಸಿದರು. ಇಂದಿರಾಗಾಂ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

RELATED ARTICLES

Latest News