Sunday, May 5, 2024
Homeರಾಜ್ಯರಾಜ್ಯದಲ್ಲಿ ಕೋಮು-ಗಲಭೆ ಸಂಚು ನಡೆಯುತ್ತಿದೆ : ಕಾಂಗ್ರೆಸ್ ದೂರು

ರಾಜ್ಯದಲ್ಲಿ ಕೋಮು-ಗಲಭೆ ಸಂಚು ನಡೆಯುತ್ತಿದೆ : ಕಾಂಗ್ರೆಸ್ ದೂರು

ಬೆಂಗಳೂರು,ಜ.7- ರಾಜ್ಯದಲ್ಲಿ ಕೋಮು ಗಲಭೆ ಹೆಚ್ಚಿಸಲು ಸಂಚು ನಡೆಸಿರುವ ವ್ಯಕ್ತಿಗಳ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ದೂರು ನೀಡಿದೆ. ಕಾಂಗ್ರೆಸ್ ಸಾಮಾಜಿಕ ಜಾಲತಾಣ ದಲ್ಲಿ ಬಿಜೆಪಿ ನಾಯಕರ ಆಕ್ಷೇಪಾರ್ಹ ಫೋಟೋಗಳನ್ನ ಪ್ರಕಟಿಸಿರುವುದರ ವಿರುದ್ಧ ದೂರು ನೀಡುತ್ತಿದ್ದಂತೆ ಕಾಂಗ್ರೆಸ್ ಕೂಡ ಚುರುಕಾಗಿದ್ದು ಬಿಜೆಪಿ ಮತ್ತು ಅದರ ಪಕ್ಷದ ಬೆಂಬಲಿಗರ ವಿರುದ್ಧ ದೂರು ನೀಡಲಾರಂಭಿಸಿದೆ.

ಬೆಂಗಳೂರು ಜಿಲ್ಲಾ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗದ ಅಧ್ಯಕ್ಷರಾದ ಬಿ.ಎಲ್.ಚೇತನ್ ಹಲಸೂರು ಗೇಟ್ ಸೈಬರ್ ಕ್ರೈಂ ವಿಭಾಗಕ್ಕೆ ನಿನ್ನೆ ದೂರು ನೀಡಿದ್ದು, ಕೋಮುಗಲಭೆ ಸೃಷ್ಟಿಸುವ ಸಂಚು ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಜೈ ರಾಷ್ಟ್ರ ರಕ್ಷಣಾ ಪಡೆ ಎಂಬ ಹೆಸರಿನಡಿ ಸಕ್ರಿಯವಾಗಿರುವ ವಾಟ್ಸಪ್ ಗ್ರೂಪ್‍ನಲ್ಲಿ ಕರ್ನಾಟಕದಲ್ಲಿ ಕೋಮುಗಲಭೆ ಎಬ್ಬಿಸೋಕೆ ಬಿಜೆಪಿ ನಮಗೆ ಬೆಂಬಲ ಕೊಟ್ಟಿದೆ. ಆದ್ದರಿಂದ ಎಲ್ಲಾ ಕಾರ್ಯಕರ್ತರು ರೆಡಿಯಾಗಿರಿ, ಎಲ್ಲಿ, ಏನು ಮಾಡಬೇಕೆಂಬುದನ್ನು ನಾವು ಈ ವಾಟ್ಸಪ್ ಗ್ರೂಪ್‍ನಲ್ಲಿ ಮಾಹಿತಿ ಕೊಡುತ್ತಿರುತ್ತೇವೆ. ಜೈ ರಾಷ್ಟ್ರ ರಕ್ಷಣಾ ಪಡೆ-2024 ಕ್ಕೆ ಮತ್ತೊಮ್ಮೆ ಮೋದಿ ಎಂಬ ಮೆಸೇಜ್ ಹಾಕಿದ್ದಾರೆ. ಸಂದೇಶ ರವಾನೆಯಾದ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಿದಾಗ ಅದು ಪುನೀತ್ ಕೆರೆಹಳ್ಳಿ ಎಂಬುವವರಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಈ ವ್ಯಕ್ತಿ ಈಗಾಗಲೇ ಕೋಮುವಾದಿ ಕುಖ್ಯಾತಿಗೆ ಒಳಗಾಗಿದ್ದಾನೆ.

ಕರ್ನಾಟಕದಾದ್ಯಂತ ಇಂತಹ ವಿಕೃತಗಳ ಹಾಗೂ ಕುಕೃತ್ಯಗಳ ರೂವಾರಿಯಾಗಿದ್ದಾನೆ. ಮತ್ತೊಮ್ಮೆ ರಾಜ್ಯದಲ್ಲಿ ಶಾಂತಿ ಕದಡುವ ಜನಾಂಗೀಯ ದ್ವೇಷವನ್ನು ಹುಟ್ಟುಹಾಕುವ ಕೆಲಸಕ್ಕೆ ಮುಂದಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪುನೀತ್ ಕೆರೆಹಳ್ಳಿ ಮತ್ತು ಆತನ ಸಂಗಡಿಗರು ಎಲ್ಲೆಲ್ಲಿ ಕೋಮುಗಲಭೆ ಸೃಷ್ಟಿಸಲು ಮುಂದಾಗಿದ್ದಾರೆ ಎಂಬ ಮಾಹಿತಿ ಪಡೆದು ದುಷ್ಕøತ್ಯ ತಡೆಯಬೇಕು, ಕೋಮುಗಲಭೆ ಎಬ್ಬಿಸಲು ಸುಪಾರಿ ಕೊಟ್ಟಿರುವ ಬಿಜೆಪಿ ಹಾಗೂ ಇತರೆ ಸಂಘಟನೆಗಳ ಮುಖಂಡರ ವಿರುದ್ಧವೂ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಲಾಗಿತ್ತು.

ರೈತರ ನೆರವಿಗೆ ಬರಲು ಆಗದಿದ್ದರೆ ರಾಜೀನಾಮೆ ಕೊಡಿ : ಅಶೋಕ್

ಸೈಬರ್ ಕ್ರೈಂ ಪೊಲೀಸರು ದೂರು ಸ್ವೀಕರಿಸಿ ಕಾನೂನಾತ್ಮಕ ಪರಿಶೀಲನೆಗೆ ಮುಂದಾಗಿದ್ದಾರೆ. ದೂರಿನೊಂದಿಗೆ ವಾಟ್ಸಪ್ ಗ್ರೂಪ್‍ನಲ್ಲಿ ಸಂದೇಶ ಇರುವ ಸ್ಕ್ರೀನ್‍ಶಾಟ್ ಚಿತ್ರವನ್ನು ಕಾಂಗ್ರೆಸ್ ನಾಯಕರು ಲಗತ್ತಿಸಿದ್ದಾರೆ. ಕೆಪಿಸಿಸಿಯ ವಕ್ತಾರರೂ ಆಗಿರುವ ವಿಧಾನಪರಿಷತ್‍ನ ಮಾಜಿ ಸದಸ್ಯ ರಮೇಶ್‍ಬಾಬು ನೇತೃತ್ವದಲ್ಲಿ ಹಲಸೂರು ಗೇಟ್ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಮತ್ತೊಂದು ದೂರು ನೀಡಲಾಗಿದ್ದು, ಸನಾತನಿ ಹುಡುಗಿ ಹೆಸರಿನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಕೋಮು ಭಾವನೆ ಸೃಷ್ಟಿಸುವ ಪ್ರಚೋದನಾಕಾರಿ ಅಂಶಗಳಿವೆ ಎಂದು ಆಕ್ಷೇಪಿಸಲಾಗಿದೆ.

ಅನಾಮಧೇಯ ಹೆಣ್ಣು ಮಗಳೊಬ್ಬಳು ವಿಡಿಯೋ ಮಾಡಿ, ಸನಾತನ ಹುಡುಗಿ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಅದರಲ್ಲಿ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ಅೀಧಿನದಲ್ಲಿರುವ ದೇವಾಲಯಗಳಿಗೆ ಭೇಟಿ ನೀಡಿದಾಗ ದೇಣಿಗೆ ನೀಡಬೇಡಿ, ಅದು ಸರ್ಕಾರಕ್ಕೆ ಹೋಗುತ್ತದೆ, ಅನ್ಯ ಧರ್ಮಗಳಿಗೆ ಬಳಕೆಯಾಗುತ್ತದೆ, ಕೇವಲ ಒಂದು ರೂಪಾಯಿ ಮಾತ್ರ ನೀಡಿ. ಖಾಸಗಿ ದೇವಾಲಯಗಳಿಗೆ ದೇಣಿಗೆ ಹೆಚ್ಚು ನೀಡಿ ಎಂದು ಸಂದೇಶ ನೀಡಲಾಗಿದೆ.

ಧರ್ಮದ ನಡುವೆ ಒಡಕು ಉಂಟು ಮಾಡುವ ಧಾರ್ಮಿಕ ದತ್ತಿ ಇಲಾಖೆಗಳಿಗೆ ಮಸಿ ಬಳಿಯುವ ಹುನ್ನಾರ ಮತ್ತು ಕುತಂತ್ರಗಳು ನಡೆದಿವೆ. ಸಮಾಜದ ಶಾಂತಿ ಕದಡುವ ರಾಜ್ಯವಿರೋ ಹಾಗೂ ಹಿಂದೂ ಧರ್ಮ ವಿರೋಧಿಗಳನ್ನು ಪತ್ತೆ ಹಚ್ಚಿ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ. ಪುಟ್ಟರಾಜು ಅವರ ಹೆಸರಿನಲ್ಲಿ ದೂರು ಸ್ವೀಕರಿಸಿರುವ ಪೊಲೀಸರು ಕಾನೂನಾತ್ಮಕ ಅಂಶಗಳನ್ನು ಪರಿಶೀಲಿಸುತ್ತಿದ್ದಾರೆ.

RELATED ARTICLES

Latest News