Saturday, October 19, 2024
Homeರಾಜಕೀಯ | Politicsದುಷ್ಟರ ರಕ್ಷಣೆಗೆ ಮುಂದಾದ ಸರ್ಕಾರದ ವಿರುದ್ಧ ಸಿಟಿ ರವಿ ಆಕ್ರೋಶ

ದುಷ್ಟರ ರಕ್ಷಣೆಗೆ ಮುಂದಾದ ಸರ್ಕಾರದ ವಿರುದ್ಧ ಸಿಟಿ ರವಿ ಆಕ್ರೋಶ

CT Ravi outraged against the government for protecting Rioters

ಚಿಕ್ಕಮಗಳೂರು, ಅ.13- ಕೋಮು ಗಲಭೆಗೆ ಕಾರಣಕರ್ತರಾದ, ಕೋಮು ಗಲಭೆ ಹುಟ್ಟು ಹಾಕಲು ಪ್ರಯತ್ನಿಸಿದವರ ಮೇಲಿನ ಮೊಕದ್ದಮೆ ಹಿಂದಕ್ಕೆ ಪಡೆಯುವ ಮೂಲಕ ದಸರಾ ಸಂದರ್ಭದಲ್ಲಿ ದುಷ್ಟರ ರಕ್ಷಣೆಗೆ ಸರ್ಕಾರ ಮುಂದಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆರೋಪಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ದಸರಾ, ವಿಜಯದಶಮಿ ಉದ್ದೇಶವೇ ದುಷ್ಟರಿಗೆ ಶಿಕ್ಷೆ ಕೊಡಬೇಕು ಎನ್ನುವುದು. ಸಜ್ಜನರ ರಕ್ಷಣೆ ಆಗಬೇಕುಎನ್ನುವುದು. ಆದರೆ ಈ ಸರ್ಕಾರ ಮೊಕದ್ದಮೆ ಹಿಂದಕ್ಕೆ ಪಡೆದು ಸಜ್ಜನರ ರಕ್ಷಣೆ ಮಾಡಲಿಲ್ಲ. ದುರ್ಜನರ ರಕ್ಷಣೆಗೆ ಹೊರಟಿದೆ. ಇದು ಅಕ್ಷಮ್ಯ ಅಪರಾಧ, ಮಹಾ ತಪ್ಪು ಎಂದರು.

ಈ ನಿರ್ಣಯವನ್ನು ಮರು ಪರಿಶೀಲಸದೆ ಇದ್ದಲ್ಲಿ ದುಷ್ಟರ ರಕ್ಷಣೆಗೆ ಹೊರಟಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹುಬ್ಬಳ್ಳಿ ಚಲೋ ಕಾರ್ಯಕ್ರಮಕ್ಕೆ ಕರೆ ಕೊಡಬೇಕಾಗುತ್ತದೆ. ನಮ್ಮ ಕೋರ್‌ಕಮಿಟಿ ಸದಸ್ಯರು ಹಾಗೂ ರಾಜ್ಯಾಧ್ಯಕ್ಷರ ಜೊತೆ ಚರ್ಚಿಸಿ ಸರ್ಕಾರದ ಕೆಟ್ಟ ನೀತಿ ವಿರುದ್ಧ ಜನಾಂದೋಲನವನ್ನು ರೂಪಿಸಬೇಕಾಗುತ್ತದೆ ಎಂದು ಹೇಳಿದರು.

ಕಾಂಗ್ರೆಸ್ ಓಟ್ ಬ್ಯಾಂಕ್ ರಾಜಕಾರಣಕ್ಕೆ ಕರ್ನಾಟಕ ರಾಜ್ಯದ ನೆಮ್ಮದಿಗೆ ಕೊಳ್ಳಿ ಇಡುವ ಕೆಲಸ ಆಗುತ್ತಿದೆ. ಹಿಂದಿನ ಅವಧಿಯಲ್ಲಿ ಇದೇ ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ಇದೇ ರೀತಿ ಎಸ್‌ಡಿಪಿಐ, ಪಿಎಸ್ಐಗೆ ಸೇರಿದ 2000ಕ್ಕೂ ಹೆಚ್ಚು ಜನರ ಮೊಕದ್ದಮೆ ಹಿಂದಕ್ಕೆ ಪಡೆದ ಪರಿಣಾಮ ರಾಜು ಹತ್ಯೆ, ರುದ್ರೇಶ್ ಹತ್ಯೆ ಈ ರೀತಿ ಸರಣಿ ಹತ್ಯೆಗಳು ನಡೆದವು ಮತ್ತೆ ರಾಜ್ಯದಲ್ಲಿ ಇಂತಹ ಪರಂಪರೆಯನ್ನು ಪುನರ್ ಪ್ರಾರಂಭಿಸಬೇಕೇಂದು ದುಷ್ಟರ ಮೇಲಿನ ಮೊಕದ್ದಮೆ ಹಿಂದಕ್ಕೆ ಪಡೆದಿದ್ದೀರಿ. ಇದನ್ನು ಪುನರ್ ಪರಿಶೀಲಿಸಬೇಕು ಎಂದು ಆಗ್ರಹಿಸುತ್ತೇವೆ ಎಂದರು.

ನಾಡ ಹಬ್ಬ ದಸರಾಗೆ ಅದರದ್ದೇ ಆದ ಗೌರವ ಇದೆ. ಅದಕ್ಕೆ ಚ್ಯುತಿ ಬರುವಂತೆ ಕಾಂಗ್ರೆಸ್ ಸರ್ಕಾರ ನಡೆದುಕೊಂಡಿದೆ. ಎಲ್ಲಿ ರಾಜಕಾರಣ ಮಾತನಾಡಬೇಕು, ಎಲ್ಲಿ ಮಾತನಾಡಬಾರದು ಎನ್ನುವ ಪರಿ ಜ್ಞಾನವೇ ಇಲ್ಲದಂತೆ ಅವರ ವರ್ತನೆ ಇದೆ ಎಂದು ಟೀಕಿಸಿದರು.

ದಸರಾ ಉದ್ಘಟನೆ ದಿನ ಚಾಮುಂಡಿ ಬೆಟ್ಟದಲ್ಲಿ ನಾಡ ಸಂಸ್ಕೃತಿ ಬಗ್ಗೆ ಮಾತನಾಡಲಿಲ್ಲ. ಪರಂಪರ ಬಗ್ಗೆ ಮಾತನಾಡಲಿಲ್ಲ. ಇತಿಹಾಸದ ಬಗ್ಗೆ ಮಾತನಾಡಲಿಲ್ಲ. ಅದರ ಬದಲಿಗೆ ಅಲ್ಲಿ ಮಾತನಾಡಿದ್ದೂ ಸಹ ರಾಜಕಾರಣವನ್ನೇ ಎಂದರು.

ನಾಡಹಬ್ಬ, ಅದರ ಹಿನ್ನೆಲೆ, ಚಾಮುಂಡೇಶ್ವರಿಯ ಗುಣಗಾನ, ಮೈಸೂರು ರಾಜರ ಕೊಡುಗೆ ಬಗ್ಗೆ, ಕನ್ನಡ ನಾಡು, ನುಡಿಯ ಬಗ್ಗೆ ಸ್ಮರಿಸಬೇಕಿತ್ತು. ಅದನ್ನು ಬಿಟ್ಟು ರಾಜಕಾರಣ ಮಾತನಾಡಿದರು ಎಂದು ಆರೋಪಿಸಿದರು.ಇದಾದ ನಂತರ ಸರ್ಕಾರದ ದುಡ್ಡಿನಲ್ಲಿ ಒಂದು ಜಾಹೀರಾತು ಕೊಟ್ಟಿದ್ದಾರೆ. ಕಾಂಗ್ರೆಸ್ ದುಡ್ಡಿನಲ್ಲಿ ಕೊಟ್ಟಿದ್ದರೆ ಪ್ರಶ್ನೆ ಮಾಡುತ್ತಿರಲಿಲ್ಲ. ಆದರೆ ಜನರ ತೆರಿಗೆ ಹಣದಲ್ಲಿ ಜಾಹೀರಾತು ಕೊಟ್ಟಿದ್ದಾರೆ. ಆದರೆ ಅದಕ್ಕೂ ವಿರುದ್ಧವಾಗಿ ಅವರು ನಡೆದುಕೊಂಡಿದ್ದಾರೆ ಎಂದು ದೂರಿದರು.

ಯಾರು ಕೋಮುಗಲಭೆಗೆ ಕಾರಣರಾಗಿದ್ದರೋ ಅವರ ಮೊಕದ್ದಮೆಗಳನ್ನು ಮಂತ್ರಿಮಂಡಲದಲ್ಲಿ ಹಿಂದಕ್ಕೆ ಪಡೆಯಲಾಗಿದೆ. ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಾಕಲು ಬಂದವರು, ಆಂಜನೇಯ ಸ್ವಾಮಿ ದೇವಸ್ಥಾನದ ಮೇಲೆ ಕಲ್ಲು ತೂರಾಟ ನಡೆಸಿದವರು, ಟ್ಯಾಕ್ಟರ್‌ಗಳಲ್ಲಿ ಕಲ್ಲು ತುಂಬಿಕೊಂಡು ಬಂದು ದೊಂಬಿ ಎಬ್ಬಿಸಿದವರ ಮೇಲಿನ ಮೊಕದ್ದಮೆ ಹಿಂಪಡೆಯಲಾಗಿದೆ. ಇವರೆಲ್ಲ ಏನು ರೈತ ಹೋರಾಟಗಾರರೇ? ಅಥವಾ ಕನ್ನಡ ಹೋರಾಟಗಾರರ ಎಂದು ಪ್ರಶ್ನಿಸಿದರೇ?.

RELATED ARTICLES

Latest News