Saturday, July 27, 2024
Homeರಾಜ್ಯಉತ್ತರಾಖಂಡ್‌ದಲ್ಲಿ ಮೃತಪಟ್ಟಿದ್ದ 9 ಮಂದಿಯ ಮೃತ ದೇಹಗಳು ಸಂಬಂಧಿಕರಿಗೆ ಹಸ್ತಾಂತರ

ಉತ್ತರಾಖಂಡ್‌ದಲ್ಲಿ ಮೃತಪಟ್ಟಿದ್ದ 9 ಮಂದಿಯ ಮೃತ ದೇಹಗಳು ಸಂಬಂಧಿಕರಿಗೆ ಹಸ್ತಾಂತರ

ಬೆಂಗಳೂರು,ಜೂ.6- ಉತ್ತರಾಖಂಡ್‌ ಶಹಸ್ತ್ರತಾಳ್‌ ಪ್ರದೇಶದಲ್ಲಿ ಚಾರಣದ ವೇಳೆ ಹಿಮಪಾತಕ್ಕೆ ಸಿಲುಕಿ ಜೀವನರಣದ ಹೋರಾಟದಲ್ಲಿದ್ದ ರಾಜ್ಯದ 13 ಚಾರಣಿಗರ ತಂಡವನ್ನು ರಕ್ಷಿಸಿ ಬೆಂಗಳೂರಿಗೆ ಕರೆತರಲಾಗಿದೆ. ಪ್ರತಿಕೂಲ ಹವಾಮಾನದಿಂದಾಗಿ ಮೃತಪಟ್ಟಿದ್ದ 9 ಮೃತ ದೇಹಗಳನ್ನು ಬೆಂಗಳೂರಿಗೆ ತಂದು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.

ಮೃತ ದೇಹಗಳು ವಿಮಾನದ ಮೂಲಕ ಇಂದು ಬೆಳಿಗ್ಗೆ ಬೆಂಗಳೂರು ತಲುಪಿವೆ. ಬದುಕುಳಿದಿದ್ದ ಚಾರಣಿಗರು ನಿನ್ನೆ ರಾತ್ರಿ ಬೆಂಗಳೂರಿಗೆ ಆಗಮಿಸಿದರು. ಸುರಕ್ಷಿತವಾಗಿ ಚಾರಣಿಗರು ಮರಳಿರುವುದನ್ನು ಕಂಡು ಅವರ ಪೋಷಕರು, ಬಂಧು, ಮಿತ್ರರು ನಿಟ್ಟುಸಿರು ಬಿಟ್ಟಿದ್ದಾರೆ. ಮಕ್ಕಳು ಸುರಕ್ಷಿತವಾಗಿ ಮರಳಿರುವುದನ್ನು ಕಂಡು ಪೋಷಕರು ರಾಜ್ಯ ಸರ್ಕಾರ ಹಾಗೂ ಕಂದಾಯ ಸಚಿವ ಕೃಷ್ಣಬೈರೇಗೌಡರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಉತ್ತರಾಖಂಡ್‌ಗೆ ತೆರಳಿ ರಕ್ಷಣಾ ಕಾರ್ಯದ ಉಸ್ತುವಾರಿ ವಹಿಸಿದ ಕೃಷ್ಣಬೈರೇಗೌಡ ಅವರಿಗೆ ಕರ್ನಾಟಕ ಪರ್ವತಾರೋಹಣ ಸಂಘದ ಸದಸ್ಯರು ಧನ್ಯವಾದ ಅರ್ಪಿಸಿದ್ದಾರೆ.ಉತ್ತರಾಖಂಡ್‌ ಶಹಸ್ತ್ರತಾಳ್‌ ಪ್ರದೇಶದಲ್ಲಿ ಮೃತಪಟ್ಟಿದ್ದ 9 ಚಾರಣಿಗರ ಮೃತ ದೇಹಗಳನ್ನು ದೆಹಲಿಯಿಂದ ವಿವಿಧ ವಿಮಾನಗಳ ಮೂಲಕ ಬೆಂಗಳೂರಿಗೆ ತರಲಾಗಿದ್ದು, ಮೃತದೇಹಗಳನ್ನು ಅವರ ಬಂಧುಗಳಿಗೆ ಹಸ್ತಾಂತರಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ತಿಳಿಸಿದ್ದಾರೆ.

ಪದಿನಿ ಹೆಗ್ಡೆ, ವೆಂಕಟೇಶ ಪ್ರಸಾದ್‌, ಆಶಾ ಸುಧಾಕರ್‌, ಪದನಾಭ ಕುಂದಾಪು ಕೃಷ್ಣಮೂರ್ತಿ, ಸಿಂಧು ವಕೇಕಲಂ, ವಿನಾಯಕ ಮುಂಗೂರ್ವಾಡಿ, ಸುಜಾತ ಮುಂಗೂರ್ವಾಡಿ, ಚೈತ್ರ ಪ್ರಣೀತ್‌, ಅನಿತ ರಂಗಪ್ಪ ಅವರ ಮೃತ ದೇಹಗಳನ್ನು ಬೆಂಗಳೂರಿಗೆ ತರಲಾಗಿದೆ.
ವಿಮಾನದ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೃತ ದೇಹಗಳನ್ನು ತರಲಾಗಿದ್ದು, ಆಯಾ ಮೃತ ದೇಹಗಳನ್ನು ಸಂಬಂಧಿಕರಿಗೆ ನೀಡಲಾಗಿದೆ.

ಸತತ ಎರಡು ದಿನಗಳ ಕಾಲ ನಿರಂತರ ಶ್ರಮವಹಿಸಿ ಬದುಕಿದ್ದ ಚಾರಣಿಗರನ್ನು ಸುರಕ್ಷಿತವಾಗಿ ಕರೆತರಲಾಗಿದೆ. ಹಾಗೆಯೇ ಮೃತದೇಹಗಳನ್ನು ವಾರಸುದಾರರಿಗೆ ತಲುಪಿಸಿ ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದೆ.ಮೃತಪಟ್ಟವರ ಆತಕ್ಕೆ ಸದ್ಗತಿ ದೊರೆಯಲಿ ಹಾಗೂ ಮೃತರ ಬಂಧು ಬಾಂಧವರಿಗೆ ಅಗಲಿಕೆಯ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಅವರು ಈ ಸಂದರ್ಭದಲ್ಲಿ ಪ್ರಾರ್ಥಿಸಿದ್ದಾರೆ.

RELATED ARTICLES

Latest News