Friday, May 3, 2024
Homeಮನರಂಜನೆಕನ್ನಡ ಚಿತ್ರರಂಗದ ಹಾಸ್ಯ ದಿಗ್ಗಜ ಧೀರೇಂದ್ರ ಗೋಪಾಲ್ ಜನ್ಮದಿನ ಇಂದು

ಕನ್ನಡ ಚಿತ್ರರಂಗದ ಹಾಸ್ಯ ದಿಗ್ಗಜ ಧೀರೇಂದ್ರ ಗೋಪಾಲ್ ಜನ್ಮದಿನ ಇಂದು

ಧೀರೇಂದ್ರ ಗೋಪಾಲ್ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟರಲ್ಲೊಬ್ಬರು.ಧೀರೇಂದ್ರ ಗೋಪಾಲ್ ಅಂದರೆ ಮನಮೋಹಕವಾಗಿ ಸಂಭಾಷಣೆ ಹೇಳುತ್ತಿದ್ದ ಒಂದು ಮನೋಜ್ಞ ನಟನೆಯ ಕಲಾಭಿವ್ಯಕ್ತಿ ನಮ್ಮ ಕಣ್ಣೆದುರು ಬಂದು ನಿಲ್ಲುತ್ತದೆ. ಅವರು ಮಾಡಿದ್ದು ಹೆಚ್ಚು ಖಳ ಪಾತ್ರಗಳು. ಆದರೆ ಅವರ ಪಾತ್ರಗಳ ಹೊರಮುಖದ ಖಳತನವೇನೇ ಇದ್ದರೂ, ಅವರೊಳಗೆ ಅಡಗಿದ್ದ ಅದ್ಭುತ ಅಭಿನಯ ಪ್ರತಿಭೆ, ಅದು ಹೊರಹೊಮ್ಮಿಸುತ್ತಿದ್ದ ಸಂಭಾಷಣಾ ಚತುರತೆ ಕನ್ನಡ ಕಲಾ ರಸಿಕರನ್ನು ಅಪಾರವಾಗಿ ಸೆಳೆದಿದೆ.

ಧೀರೇಂದ್ರ ಗೋಪಾಲರು ಏಪ್ರಿಲ್ 12, 1940ರಂದು ಹೊಳೆನರಸೀಪುರದ ಜೋಡಿಗುಬ್ಬಿ ಗ್ರಾಮದಲ್ಲಿ ಜನಿಸಿದರು. ಅವರ ಅಂದಿನ ಹೆಸರು ಹೆಚ್.ಎನ್. ಗೋಪಾಲರಾವ್ ಎಂದು.ಧೀರೇಂದ್ರ ಗೋಪಾಲರಿಗೆ ಬಾಲ್ಯದಿಂದಲೂ ಅಭಿನಯ ಕಲೆಯಲ್ಲಿ ಅಪಾರವಾದ ಆಸಕ್ತಿ. ಒಮ್ಮೆ ಶಾಲೆಯಲ್ಲಿ ಅವರ ಏಕಪಾತ್ರಾಭಿನಯವನ್ನು ಕಂಡು ಮೆಚ್ಚಿಕೊಂಡ ಗುಬ್ಬಿ ವೀರಣ್ಣನವರು, ಅವರಿಗೆ ತಮ್ಮ ನಾಟಕ ತಂಡವನ್ನು ಸೇರಲು ಆಹ್ವಾನ ನೀಡಿದರು. ವಾಲಿಯ ಪಾತ್ರದ ಮೂಲಕ ರಂಗಭೂಮಿಗೆ ಪಾದಾರ್ಪಣೆ ಮಾಡಿದವರು. ದೇವೇಂದ್ರ, ದುರ್ಯೋಧನನ ಪಾತ್ರದಿಂದ ಪ್ರಸಿದ್ಧಿ ಪಡೆದರು.

ಯುವ ಧೀರೇಂದ್ರ ಗೋಪಾಲರು ಎಚ್ಚಮ ನಾಯಕನ ಪಾತ್ರದಲ್ಲಿ ವಿಜೃಂಭಿಸಿದರು. ಅಂದಿನಿಂದ ಅವರು ಹಿಂತಿರುಗಿ ನೋಡಲಿಲ್ಲ. ರಂಗಭೂಮಿಯಲ್ಲಿ ನೂರಾರು ನಾಟಕಗಳಲ್ಲಿ ಅಭಿನಯಿಸಿದ್ದ ಧೀರೇಂದ್ರ ಗೋಪಾಲರ ನಾಟಕಗಳಲ್ಲಿ ಸರ್ವಮಂಗಳ ನಾಟಕ ಸಭಾ'ದಟಿಪ್ಪು ಸುಲ್ತಾನ್’ ಪ್ರಖ್ಯಾತಗೊಂಡಿತ್ತು. `ಮುದುಕನ ಮದುವೆ’ ಧೀರೇಂದ್ರ ಗೋಪಾಲರ ಮತ್ತೊಂದು ಪ್ರಸಿದ್ಧ ನಾಟಕ.

ಒಮ್ಮೆ ನಿರ್ದೇಶಕ ಸಿ. ವಿ. ಶಿವಶಂಕರ್ ಅವರಿಂದ ಪುಟ್ಟ ಪಾತ್ರವೊಂದಕ್ಕೆ ಆಹ್ವಾನಿತರಾಗಿದ್ದ ಧೀರೇಂದ್ರ ಗೋಪಾಲ್ ಮುಂದೆ ಪುಟ್ಟಣ್ಣ ಕಣಗಾಲರ ನಾಗರಹಾವು ಚಿತ್ರದಲ್ಲಿ ಹೆಚ್ಚು ಪರಿಚಿತಗೊಂಡರು. ಪಡುವಾರಹಳ್ಳಿ ಪಾಂಡವರು ಚಿತ್ರದಲ್ಲಿನ ಅವರ ಹಳ್ಳಿಯ ಗೌಡನ ಪಾತ್ರದ ನಿರ್ವಹಣೆಯಂತೂ ಕನ್ನಡ ಚಿತ್ರರಂಗದ ಮಹತ್ವದ ಅಭಿವ್ಯಕ್ತಿಗಳಲ್ಲೊಂದು ಎನಿಸುವಂತೆ ಚಿತ್ರರಸಿಕರ ಮನದಲ್ಲಿ ಉಳಿಯುವಂತೆ ಮಾಡಿದೆ.

ಪಡುವಾರಹಳ್ಳಿ ಪಾಂಡವರು ಚಿತ್ರದ ಧೀರೇಂದ್ರ ಗೋಪಾಲ್ ಮತ್ತು ಮುಸುರಿ ಕೃಷ್ಣಮೂರ್ತಿ ಜೋಡಿ ಮಾಡಿದ ಮೋಡಿ, ಖಳನಾಯಕನ ಪಾತ್ರ ನಿರ್ವಹಣೆಗಳಿಗೊಂದು ಹೊಸ ಭಾಷ್ಯವನ್ನೇ ಬರೆದಂಥದ್ದು. ಮುಂದೆ ಧೀರೇಂದ್ರ ಗೋಪಾಲರು ಹೆಚ್ಚು ಹೆಚ್ಚು ಒಂದೇ ರೀತಿಯ ಖಳ ನಾಯಕನ ಪಾತ್ರಗಳಲ್ಲಿಯೇ ಹೆಚ್ಚು ಅಭಿನಯಿಸಿದರು ಎಂಬುದು ನಿಜವಾದರೂ ಅವರ ಭಾವಾಭಿನಯ ಮತ್ತು ಸಂಭಾಷಣಾ ರೀತಿ ಚಿತ್ರರಸಿಕರನ್ನು ಸಾಕಷ್ಟು ಮೋಡಿ ಮಾಡಿತ್ತು ಎಂಬುದಂತೂ ನಿಜ.

ಸುಮಾರು 180 ಚಿತ್ರಗಳಲ್ಲಿ ನಟಿಸಿದ ೀರೇಂದ್ರ ಗೋಪಾಲರು ಅಭಿನಯಿಸಿದ ಕೆಲವು ಚಿತ್ರಗಳನ್ನು ಹೆಸರಿಸುವುದಾದರೆ ನಾಗರಹಾವು, ಪಡುವಾರಹಳ್ಳಿ ಪಾಂಡವರು, ನಂಜುಂಡಿ ಕಲ್ಯಾಣ, ಚಕ್ರವ್ಯೂಹ, ಸಾಹಸ ಸಿಂಹ, ಖೈದಿ, ಗಜಪತಿ ಗರ್ವಭಂಗ, ಅಣ್ಣಯ್ಯ, ಗಡಿಬಿಡಿ ಗಂಡ ಮುಂತಾದವು ನೆನಪಾಗುತ್ತವೆ. ಎಸ್. ನಾರಾಯಣ್ ನಿರ್ದೇಶನದ ಅಂಜಲಿ ಗೀತಾಂಜಲಿ ಧೀರೇಂದ್ರ ಗೋಪಾಲರ ಕೊನೆಯ ಚಿತ್ರ.

ೀರೇಂದ್ರ ಗೋಪಾಲರ ಮತ್ತೊಂದು ಪ್ರಸಿದ್ಧಿಯ ಕ್ಷೇತ್ರವೆಂದರೆ ಅವರ ಧ್ವನಿ ಸುರುಳಿಗಳು. ನಾಡು ಕಂಡ ಅತ್ಯುತ್ತಮ ಸಂಭಾಷಣಾ ಚತುರರಲ್ಲೊಬ್ಬರಾದ ಧೀರೇಂದ್ರ ಗೋಪಾಲರು ತಮ್ಮ ಪ್ರತಿಭೆಯನ್ನು ಧ್ವನಿ ಸುರುಳಿಗಳಿಗೆ ಸಮರ್ಥವಾಗಿ ಬಳಸಿಕೊಂಡು ಹಲವಾರು ಪ್ರಸಿದ್ಧ ಧ್ವನಿಸುರುಳಿಗಳನ್ನು ಮಾರುಕಟ್ಟೆಗೆ ತಂದಿದ್ದರು. ರಾಜಕೀಯ ವಿಡಂಬನಾ ನಿರೂಪಣೆಗಳಿಗಾಗಿ ಅವರು 300ಕ್ಕೂ ಹೆಚ್ಚು ರೀತಿಯ ಧ್ವನಿ ವೈವಿಧ್ಯಗಳನ್ನು ಬಳಸಿದ್ದರು ಎಂದು ಹೇಳಲಾಗಿದೆ.

ಧೀರೇಂದ್ರ ಗೋಪಾಲರಿಗೆ ಕರ್ನಾಟಕ ನಾಟಕ ಅಕಾಡೆಮಿ ಗೌರವ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ಸಂದಿದ್ದವು. ಕೆಲ ಕಾಲ ಅನಾರೋಗ್ಯಕ್ಕೊಳಗಾಗಿದ್ದ ಧೀರೇಂದ್ರ ಗೋಪಾಲರು 2000ರ ಡಿಸೆಂಬರ್ 25ರಂದು ಇಹ ಲೋಕವನ್ನಗಲಿದರು.
ತಮ್ಮ ಅಪೂರ್ವ ಪ್ರತಿಭೆಯ ಮೂಲಕ ಕಲಾ ಲೋಕದಲ್ಲಿ ಅವರು ತಮ್ಮ ನೆನಪನ್ನು ಉಳಿಸಿಹೋಗಿದ್ದಾರೆ.

RELATED ARTICLES

Latest News