Saturday, May 4, 2024
Homeರಾಜಕೀಯಪಿಕ್‍ಪ್ಯಾಕೆಟ್ ಮಾಡಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸಿದ ಬಿಜೆಪಿ : ಡಿಕೆಶಿ ವಾಗ್ದಾಳಿ

ಪಿಕ್‍ಪ್ಯಾಕೆಟ್ ಮಾಡಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸಿದ ಬಿಜೆಪಿ : ಡಿಕೆಶಿ ವಾಗ್ದಾಳಿ

ಬೆಂಗಳೂರು,ಏ.23- ಬಿಜೆಪಿಯವರು ತಾವು ಮಾಡಿದ ಪಿಕ್‍ಪ್ಯಾಕೆಟ್ ಅನ್ನು ಕಾಂಗ್ರೆಸ್‍ನವರ ಮೇಲೆ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿಂದು ತಮ್ಮ ನಿವಾಸದಲ್ಲಿ ತಮಿಳುನಾಡಿನ ಚಿದಂಬರಂ ಕ್ಷೇತ್ರದ ಸಂಸದ ಹಾಗೂ ವಿಡುದಲೈ ಚಿರುತೈಗಳ್ ಕಚ್ಚಿ (ವಿಸಿಕೆ) ಪಕ್ಷದ ಅಧ್ಯಕ್ಷ ತೋಳ್ಕಪಿಯನ್ ತಿರುಮವಳವನ್ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಬಿಜೆಪಿಯ ಜಾಹೀರಾತಿನ ವಿರುದ್ಧ ಕಿಡಿಕಾರಿದರು.

ವಿದ್ಯುತ್ ಬಿಲ್ ಅನ್ನು ಏರಿಕೆ ಮಾಡಿದ್ದು ಬಿಜೆಪಿ ಅವಧಿಯಲ್ಲಿ. ನಮ್ಮ ಸರ್ಕಾರ ಎಲ್ಲಾ ಗ್ರಾಹಕರಿಗೂ ಗೃಹಜ್ಯೋತಿ ಯೋಜನೆಯ ಮೂಲಕ ವಿದ್ಯುತ್ ಬಿಲ್ ರಿಯಾಯಿತಿ ನೀಡಿ ಜನರಿಗೆ ಹೊರೆಯಾಗದಂತೆ ಎಚ್ಚರಿಕೆ ವಹಿಸಿದೆ.

ಇತಿಹಾಸದಲ್ಲೇ ಮೊದಲ ಬಾರಿಗೆ ಕಾಂಗ್ರೆಸ್ ಸರ್ಕಾರ ಕಳೆದ ತಿಂಗಳೂ 1.50 ರೂ.ನಷ್ಟು ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡಿದೆ. ಆದರೆ ಬಿಜೆಪಿಯವರು ಜಾಹೀರಾತಿನಲ್ಲಿ ನಮ್ಮ ಸರ್ಕಾರದ ವಿರುದ್ಧ ಗೂಬೆ ಕೂರಿಸುವ ಪ್ರಯತ್ನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಸರ್ಕಾರ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದಲ್ಲಿ ಜನರ ಜೇಬಿನ ಕಳ್ಳತನ ಮಾಡುತ್ತಿದೆ.

ಶೇ.40 ರಷ್ಟು ಲಂಚದ ಪ್ರಕರಣ ಬಿಗ್ ಪಿಕ್‍ಪ್ಯಾಕೆಟ್‍ಗೆ ದೊಡ್ಡ ಉದಾಹರಣೆ. ಅದನ್ನೆಲ್ಲಾ ಮರೆತು ಬಿಜೆಪಿ ಕಾಂಗ್ರೆಸ್ ವಿರುದ್ಧ ಪಿಕ್‍ಪ್ಯಾಕೆಟ್ ಆರೋಪ ಮಾಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು. ಕೇಂದ್ರ ಸರ್ಕಾರದ ವಿರುದ್ಧ ಇಂದು ಕಾಂಗ್ರೆಸ್ ಪಕ್ಷ ಸಾಂಕೇತಿಕ ಹೋರಾಟ ನಡೆಸಿದೆ. ಕೇಂದ್ರದಿಂದ ನಮಗೆ ನಿರಂತರವಾಗಿ ಅನ್ಯಾಯವಾಗುತ್ತಿರುವುದನ್ನು ಜನರ ಗಮನಕ್ಕೆ ತರುವುದು ನಮ್ಮ ಜವಾಬ್ದಾರಿ ಎಂದು ಹೇಳಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನಿನ್ನೆ ಹಾಸನದಲ್ಲಿ ಕಣ್ಣೀರು ಹಾಕಿರುವುದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಯಾವ ಅನ್ಯಾಯವಾಗಿದೆ ಎಂದು ದೇವೇಗೌಡರು ಕಣ್ಣೀರು ಹಾಕಿದ್ದಾರೆ? ಅವರನ್ನು ಕಾಂಗ್ರೆಸ್ ಪಕ್ಷ ಪ್ರಧಾನಿ ಮಾಡಿತ್ತು. ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರದ ಜನ ಮುಖ್ಯಮಂತ್ರಿ ಮಾಡಿದ್ದಾರೆ, ಹಾಸನದವರಲ್ಲ. ಅವರಿಗೆ ತಮ್ಮ ಕೊಡುಗೆ ಏನು ಎಂದು ಹೇಳಿಕೊಳ್ಳಲಾಗುತ್ತಿಲ್ಲ. ಅದಕ್ಕಾಗಿ ಕಣ್ಣೀರು ಹಾಕುತ್ತಿದ್ದಾರೆ ಎಂದು ಹೇಳಿದರು.

ಜೆಡಿಎಸ್ ಅಧಿಕೃತವಾಗಿ ಸ್ರ್ಪಧಿಸಿರುವ 3 ಹಾಗೂ ಅನಕೃತವಾಗಿ ಸ್ಪರ್ಧೆಯಲ್ಲಿರುವ 1 ಕ್ಷೇತ್ರ ಸೇರಿದಂತೆ 4 ಕಡೆ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಇದೇ ಸಂದರ್ಭದಲ್ಲಿ ನುಡಿದರು. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನಾವು ಹೊಸದಾಗಿ ರಾಜಕಾರಣ ಮಾಡುತ್ತಿಲ್ಲ, ಚುನಾವಣೆಯಲ್ಲಿ ಗೆದ್ದ ದಿನದಿಂದಲೂ ಸೇವೆ ಮಾಡುತ್ತಿದ್ದೇವೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ನಾಯಕರು ಕೋವಿಡ್ ಸಂದರ್ಭದಲ್ಲಿ ನಾಪತ್ತೆಯಾಗಿದ್ದರು. ಔಷಧಿ, ಆಹಾರ, ಚಿಕಿತ್ಸೆ ಸೇರಿದಂತೆ ಯಾವುದಕ್ಕೂ ಸ್ಪಂದಿಸಿರಲಿಲ್ಲ, ಕೊನೆಗೆ ಹೆಣ ಹೂಳಲಿಕ್ಕೂ ಬಂದಿರಲಿಲ್ಲ. ಚುನಾವಣೆ ಎಂಬ ಕಾರಣಕ್ಕೆ ಈಗ ಪದೇಪದೇ ಬರುತ್ತಿದ್ದಾರೆ ಎಂದು ತಿಳಿಸಿದರು.

ವಿಕೆಸಿ ಪಕ್ಷದ ಸಂಸದರು ಅತ್ಯಂತ ಪ್ರಭಾವಿ ಹಾಗೂ ಇಂಡಿಯಾ ಮೈತ್ರಿ ಕೂಟದ ಪಾಲುದಾರರಾಗಿದ್ದಾರೆ. ಅವರ ಪಕ್ಷದಿಂದ ಬೆಂಗಳೂರು ಗ್ರಾಮಾಂತರದಲ್ಲಿ ಚಂದ್ರಶೇಖರ್, ಕೋಲಾರದಲ್ಲಿ ಎಂ.ಸಿ.ವೇಣು, ಬೆಂಗಳೂರು ದಕ್ಷಿಣದಲ್ಲಿ ರಾಜ್‍ಕುಮಾರ್‍ರವರು ಸ್ಪರ್ಧೆ ಮಾಡಿದ್ದರು. ತಮ್ಮ ಮನವಿಗೆ ಸ್ಪಂದಿಸಿ ಈ ಮೂರೂ ಜನ ಚುನಾವಣೆ ನಿವೃತ್ತಿ ಘೋಷಿಸಿದ್ದು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಘೋಷಿಸಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

RELATED ARTICLES

Latest News