Monday, May 6, 2024
Homeರಾಜಕೀಯನಾನು ಸಿಎಂ ಆಗುತ್ತೇನೆ ಎಂಬ ನಿಮ್ಮ ನಂಬಿಕೆಗೆ ಮೋಸವಾಗುವುದಿಲ್ಲ : ಡಿಕೆಶಿ

ನಾನು ಸಿಎಂ ಆಗುತ್ತೇನೆ ಎಂಬ ನಿಮ್ಮ ನಂಬಿಕೆಗೆ ಮೋಸವಾಗುವುದಿಲ್ಲ : ಡಿಕೆಶಿ

ಬೆಂಗಳೂರು,ಏ.24- ರಾಮನಗರ ಜಿಲ್ಲೆಯ ಜನ ಆಸೆಪಟ್ಟು ಕಾಂಗ್ರೆಸ್‍ಗೆ ಮತ ಹಾಕಿದ್ದು ವ್ಯರ್ಥವಾಗುವುದಿಲ್ಲ. ನಾನು ಮುಖ್ಯಮಂತ್ರಿಯಾಗುತ್ತೇನೆ ಎಂಬ ನಿಮ್ಮ ನಂಬಿಕೆಗೆ ಮೋಸವಾಗುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ರಾಮನಗರ ಜಿಲ್ಲೆಯ ಹಾರೋಹಳ್ಳಿಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಪರವಾಗಿ ಮತಯಾಚನೆ ನಡೆಸಿದ ಅವರು, ಜನರ ನಂಬಿಕೆಯಂತೆಯೇ ನಾನು ನಿಮ್ಮ ಸೇವೆ ಮಾಡುತ್ತೇನೆ ಎಂದು ಹೇಳಿದರು. ಡಿ.ಕೆ.ಸುರೇಶ್‍ರನ್ನು ಗೆಲ್ಲಿಸಿ ಕನಕಪುರದ ಮಾದರಿಯಲ್ಲೇ ಹಾರೋಹಳ್ಳಿಯನ್ನು ಅಭಿವೃದ್ಧಿಪಡಿಸುತ್ತೇವೆ.

ರಾಮನ ಬಂಟ ಆಂಜನೇಯನಂತೆ ನಿಮ್ಮ ಸೇವೆ ಮಾಡುತ್ತೇನೆ ಎಂದು ಪ್ರತಿಜ್ಞೆ ಮಾಡಿದರು. ನಿಮ್ಮನ್ನು ಬಿಟ್ಟು ನಾವು ಎಂದೂ ಹೊರಗಡೆಗೆ ಹೋಗುವುದಿಲ್ಲ. ನಿಮಗೆ ಮೋಸ ಮಾಡುವುದಿಲ್ಲ. ಬದುಕಿದ್ದರೂ ಕನಕಪುರದಲ್ಲಿ, ಸತ್ತರೂ ನನ್ನ ಹೆಣ ಹೋಗುವುದು ಕನಕಪುರಕ್ಕೇ ಎಂದು ಭಾವನಾತ್ಮಕವಾಗಿ ಮಾತನಾಡಿದರು.

ಏ.26 ರಂದು ನಡೆಯುವ ಮತದಾನದಲ್ಲಿ ಜನ ಮತಯಂತ್ರದ ಗುಂಡಿ ಒತ್ತುತ್ತಿದ್ದಂತೆಯೇ ಬರುವ ಶಬ್ದಕ್ಕೆ ಡಾಕ್ಟರ್ ಮಂಜುನಾಥ್ ಹೋಗಿ ಮೋದಿ ಮೇಲೆ ಬೀಳಬೇಕು. ದೇವೇಗೌಡರು ಸಾಕಪ್ಪಾ ಹಾರೋಹಳ್ಳಿ ಸಹವಾಸ ಎಂದು ಹೇಳಬೇಕು, ಆ ರೀತಿ ಮಾಡುತ್ತೀರಲ್ಲವೇ? ಕೈ ಎತ್ತಿ ನೋಡೋಣ ಎಂದು ಹೇಳಿದರು. ಸುತ್ತಲೂ ಸೇರಿದ ಜನ ಕೈ ಎತ್ತಿ ಬೆಂಬಲ ವ್ಯಕ್ತಪಡಿಸಿದರು. ಸರಿಯಾಗಿ ಎಲ್ಲರ ಫೋಟೊ ತೆಗಿಯಪ್ಪ, ಇದನ್ನೆಲ್ಲಾ ಲೆಕ್ಕಕ್ಕಿಟ್ಟುಕೊಳ್ಳಬೇಕೆಂದು ತಮ್ಮ ಖಾಸಗಿ ಫೋ ಟೊಗ್ರಾಫರ್‍ಗೆ ಡಿ.ಕೆ.ಶಿವಕುಮಾರ್ ಹೇಳಿದರು.

ತಮ್ಮ ಜೊತೆಯಲ್ಲೇ ಪ್ರಚಾರ ವಾಹನದಲ್ಲಿ ನಿಂತಿದ್ದ ಸ್ಥಳೀಯ ನಾಯಕರೊಬ್ಬರು ಕೈ ಎತ್ತಿರಲಿಲ್ಲ. ಏಯ್ ನೀನ್ಯಾಕೆ ಕೈ ಎತ್ತಿಲ್ಲ, ಮೋಸಗೀಸ ಮಾಡಿಯಾ ಎಂದು ಹಾಸ್ಯಚಟಾಕಿಯನ್ನು ಡಿ.ಕೆ.ಶಿವಕುಮಾರ್ ಹಾರಿಸಿದರು.

ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿವೆ. 200 ಯುನಿಟ್ ಉಚಿತ, 2 ಸಾವಿರ ಖಚಿತವಾಗಿದೆ. ಟಿವಿಯವರು ಬಸ್ ಪ್ರಯಾಣಿಕರಲ್ಲಿ ಯಾರಿಗೆ ಮತ? ಎಂದು ಕೇಳಿದಾಗ, ಯಾರೋ ಒಬ್ಬ ಮಹಿಳೆ ಮೋದಿಗೆ ಎಂದಿದ್ದಾರೆ. ಬಸ್‍ನಲ್ಲಿದ್ದ ಎಲ್ಲಾ ಮಹಿಳೆಯರೂ ಕಾಂಗ್ರೆಸ್ ಸರ್ಕಾರದ ಉಚಿತ ಯೋಜನೆಯಲ್ಲಿ ಪ್ರಯಾಣಿಸುವ ನೀನು ಮೋದಿಗೆ ಮತ ಹಾಕುತ್ತೀಯಾ, ಕೆಳಗೆ ಇಳಿ ಎಂದು ಹೇಳುತ್ತಿರುವುದನ್ನು ನಾನು ಟಿವಿಯಲ್ಲಿ ನೋಡಿದೆ. ತಾಯಂದಿರು ಆ ಮಟ್ಟಿಗೆ ಜಾಗೃತರಾಗಿದ್ದಾರೆ. ಅವರಿಗೆ ನನ್ನ ನಮಸ್ಕಾರ ಎಂದು ಡಿ.ಕೆ.ಶಿವಕುಮಾರ್ ನುಡಿದರು.

RELATED ARTICLES

Latest News