Saturday, July 27, 2024
Homeರಾಜ್ಯಹಿಜಾಬ್ ನಿಷೇಧ ವಾಪಸಾತಿ ಬಗ್ಗೆ ಡಿಕೆಶಿ ವ್ಯತಿರಿಕ್ತ ಹೇಳಿಕೆ

ಹಿಜಾಬ್ ನಿಷೇಧ ವಾಪಸಾತಿ ಬಗ್ಗೆ ಡಿಕೆಶಿ ವ್ಯತಿರಿಕ್ತ ಹೇಳಿಕೆ

ಬೆಂಗಳೂರು, ಡಿ.25- ಇನ್ನೂ ಮುಂದೆ ಹಿಜಾಬ್ ಇರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವ್ಯತಿರಿಕ್ತವಾಗಿ ಪ್ರತಿಕ್ರಿಯಿಸಿದ್ದು, ಆ ಬಗ್ಗೆ ನಾವಿನ್ನೂ ಯೋಚನೆ ಮಾಡಿಲ್ಲ ಎಂದಿದ್ದಾರೆ.ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಹಿಜಾಬ್ ವಿಷಯವನ್ನು ಅನಗತ್ಯವಾಗಿ ದೊಡ್ಡದು ಮಾಡಲಾಗಿದೆ. ಆ ಕುರಿತಂತೆ ನಾವಿನ್ನೂ ಯೋಜನೆಯನ್ನೇ ಮಾಡಿಲ್ಲ. ಮುಖ್ಯಮಂತ್ರಿಯವರು ಅದಿನ್ನೂ ಚರ್ಚೆಗೆ ಬರುತ್ತಿದೆ, ಚರ್ಚೆ ಮಾಡಿದ್ದಾರೆ ಎಂದಿದ್ದಾರೆ. ಅದು ಇನ್ನೂ ಎಲ್ಲಿದೆ ಎಂದು ಗೋತ್ತಿಲ್ಲ ಎಂದು ತೊಡವರಿಸಿದರು.

ಕೃಷಿ ಸಚಿವ ಶಿವಾನಂದ ಪಾಟೀಲ್ ಅವರ ವಿವಾದಿತ ಹೇಳಿಕೆ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ, ಅವರನ್ನೇ ಕೇಳಿ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.ಬೆಂಗಳೂರು ನಗರಕ್ಕೆ ಸಂಬಂಧ ಪಟ್ಟಂತೆ ಗುತ್ತಿಗೆ ಆಧಾರಿತ ಶಿಕ್ಷಕರು ಇಂದು ಬೆಳಗ್ಗೆ ತಮ್ಮನ್ನು ಭೇಟಿ ಮಾಡಿ, ಸೇವೆಯಲ್ಲಿ ಮುಂದುವರೆಸುವಂತೆ ಮನವಿ ಮಾಡಿದ್ದಾರೆ. ಬಿಬಿಎಂಪಿ ವ್ಯಾಪ್ತಿಯ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಕುಸಿದಿದೆ. ಅದನ್ನು ಸುಧಾರಿಸಲು ಶಿಕ್ಷಣ ಇಲಾಖೆ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಹೇಳಿದ್ದೇನೆ.

ತರಬೇತಿ ಪಡೆದ ಶಿಕ್ಷಕರನ್ನು ನೇಮಿಸಿಕೊಳ್ಳಬೇಕು. ಚೆನ್ನಾಗಿ ಪಾಠ ಮಾಡುವವರನ್ನು ಪರಿಶೀಲಿಸಿ ಅವಕಾಶ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದ್ದು, ಬಡವರ ಮಕ್ಕಳು ಓದುವ ಸರ್ಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಣ ಸಿಗಬೇಕಿದೆ, ಗುಣಮಟ್ಟ ಕಾಯ್ದುಕೊಳ್ಳಬೇಕು. ಅದಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಹೊರಗುತ್ತಿಗೆ ಆಧಾರದಲ್ಲಿ ಶಿಕ್ಷಕರನ್ನು ನಿಯೋಜಿಸುವ ಜವಾಬ್ದಾರಿಯನ್ನು ಸೆಕ್ಯೂರಿಟಿ ಏಜೆನ್ಸಿಗೆ ಹೊರ ಗುತ್ತಿಗೆ ನೀಡಬಾರದು ಎಂದು ಹೇಳಿರುವುದಾಗಿ ತಿಳಿಸಿದರು.

ಕನ್ನಡೇತರ ಭಾಷಾ ನಾಮಫಲಕಗಳನ್ನು ತೆರವು ಮಾಡುವ ಸಂಬಂಧ ಕನ್ನಡ ಪರ ಸಂಘಟನೆಗಳು ಹೋರಾಟ ಮಾಡುವುದು ತಪ್ಪಲ್ಲ. ಆದರೆ ಈ ಸಂದರ್ಭದಲ್ಲಿ ಕಾನೂನು ಪಾಲನೆ ಮಾಡಬೇಕು. ದಾಳಿ ಮಾಡಲು ನಮ್ಮ ಸರ್ಕಾರ ಅವಕಾಶ ನೀಡುವುದಿಲ್ಲ ಎಂದರು.
ರಾಜ್ಯದಲ್ಲಿ ಉದ್ಯಮ ನಡೆಸುವವರಾಗಲಿ, ವ್ಯಾಪಾರ ಮಾಡುವವರಾಗಲಿ ಶೇ.60ರಷ್ಟು ಆದ್ಯತೆಯನ್ನು ಕನ್ನಡ ನಾಮಫಲಕಗಳಿಗೆ ನೀಡಬೇಕು ಎಂಬ ನಿಯಮ ಇದೆ. ಎಷ್ಟೇ ದೊಡ್ಡವರಾದರೂ ಅದನ್ನು ಪಾಲನೆ ಮಾಡಲೇಬೇಕು. ಮಾಧ್ಯಮದವರು ಕೂಡ ಕನ್ನಡ ಬಳಕೆಗೆ ಒತ್ತು ನೀಡಬೇಕು ಎಂದು ತಿಳಿಸಿದರು.

ಕಿರಿಕ್ ಪಾರ್ಟಿ : ಕಲ್ಲಿನಿಂದ ಜಜ್ಜಿ ಸ್ನೇಹಿತನ ಕೊಲೆ

ರಾಷ್ಟ್ರ ರಾಜಕಾರಣದಲ್ಲಿ ಇಂಡಿಯಾ ಮೈತ್ರಿ ಕೂಟದಲ್ಲಿ ಒಡಕು ಮೂಡುತ್ತಿದೆ ಎಂದು ಬಿಜೆಪಿಯವರು ಹೇಳುತ್ತಿರುವುದು ಆಧಾರ ರಹಿತ, ಎನ್ಡಿಎ ಮೈತ್ರಿಕೂಟದಲ್ಲೇ ಒಡಕು ಮೂಡಲಿದೆ, ಕಾದು ನೋಡಿ ಎಂದರು. ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಸಂಬಂಧ ಸಚಿವರನ್ನು ವೀಕ್ಷಕರನ್ನಾಗಿ ನೇಮಿಸಲಾಗಿದೆ. ಸಚಿವ ಸಂಪುಟ ಸಭೆಯ ಬಳಿಕ ಈ ಬಗ್ಗೆ ನಾನು ಮತ್ತು ಮುಖ್ಯಮಂತ್ರಿಯವರು ಸಚಿವರ ಜೊತೆ ಚರ್ಚೆ ಮಾಡಿದ್ದೇವೆ. ಎಲ್ಲರಿಗೂ ಕಾಲಮಿತಿ ನಿಗದಿ ಮಾಡಿದ್ದೇವೆ. ಕೆಲವರು ಈಗಾಗಲೇ ವರದಿ ನೀಡಿದ್ದಾರೆ, ಇನ್ನೂ ಕೆಲವರು ವರದಿ ನೀಡಬೇಕಿದೆ. ಸಚಿವರ ವರದಿ ಆಧರಿಸಿ ಮುಂದಿನ ಕ್ರಮ ಜರುಗಿಸುತ್ತೇವೆ ಎಂದರು.

RELATED ARTICLES

Latest News