Saturday, April 27, 2024
Homeಇದೀಗ ಬಂದ ಸುದ್ದಿಹೆಣ್ಣು ಭ್ರೂಣ ಹತ್ಯೆ ಪ್ರಕರಣ : ವೈದ್ಯರು, ಸಹಚರರ ಸೆರೆ

ಹೆಣ್ಣು ಭ್ರೂಣ ಹತ್ಯೆ ಪ್ರಕರಣ : ವೈದ್ಯರು, ಸಹಚರರ ಸೆರೆ

ಬೆಂಗಳೂರು, ನ.28- ಹೆಣ್ಣು ಲಿಂಗ ಭ್ರೂಣ ಪತ್ತೆ ಮಾಡಿ ಗರ್ಭಪಾತ ಮಾಡುತ್ತಿದ್ದ ವೈದ್ಯರು ಮತ್ತು ಸಹಚರರನ್ನು ಬೈಯ್ಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಳೆ ಮದ್ರಾಸ್ ರಸ್ತೆಯಲ್ಲಿ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದ ವೇಳೆಯಲ್ಲಿ ಅನುಮಾನಾಸ್ಪದವಾಗಿ ಬರುತ್ತಿದ್ದ ಒಂದು ಮಾರುತಿ ಸುಜುಕಿ ಬ್ರೀಜಾ ಕಾರನ್ನು ತಡೆದು, ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳನ್ನು ವಿಚಾರಿಸಿದ್ದಾರೆ.

ಆ ಇಬ್ಬರು ವ್ಯಕ್ತಿಗಳು ತಾವು ಗರ್ಭಿಣಿಯಾಗಿರುವ ಮಹಿಳೆಯರಿಗೆ ಅಕ್ರಮವಾಗಿ ಸ್ಕ್ಯಾನ್ ಮಾಡಿಸಿ, ಹೊಟ್ಟೆಯಲ್ಲಿ ಇರುವ ಮಗು ಗಂಡು ಅಥವಾ ಹೆಣ್ಣು ಎಂಬುದನ್ನು ಪತ್ತೆ ಮಾಡಿಸುತ್ತೇವೆ. ಹೆಣ್ಣು ಮಗು ಆಗಿದ್ದರೆ ತಮಗೆ ತಿಳಿದಿರುವ ಆಸ್ಪತ್ರೆಗಳಲ್ಲಿ ಗರ್ಭಪಾತ ಮಾಡಿಸುವುದಾಗಿ ತಿಳಿಸಿರುತ್ತಾರೆ. ಆ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದು, ಸುದೀರ್ಘವಾಗಿ ವಿಚಾರಣೆ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿ ವ್ಯಕ್ತಿಗಳು ನೀಡಿದ ಮಾಹಿತಿ ಮೇರೆಗೆ ಇತರೆ 9 ಮಂದಿ ಸೇರಿದಂತೆ, ಒಟ್ಟು 11 ಮಂದಿ ಈ ಪ್ರಕರಣದಲ್ಲಿ ಭಾಗಿಯಾಗಿರುವುದು ತನಿಖೆಯಿಂದ ಧೃಡಪಟ್ಟಿರುತ್ತದೆ.

ಬಿಜೆಪಿ ಅಸಮಾಧಾನಿತರೊಂದಿಗೆ ವರಿಷ್ಠರ ಸಮಾಲೋಚನೆ

ಬಂಧಿತರಾಗಿರುವವರ ಪೈಕಿ 4 ಮಂದಿ ಏಜೆಂಟ್‍ಗಳಾಗಿದ್ದು, ಮೈಸೂರಿನ ಉದಯಗಿರಿಯಲ್ಲಿರುವ ಆಸ್ಪತ್ರೆಯ ಇಬ್ಬರು ವೈದ್ಯರು ಮತ್ತು ಆಸ್ಪತ್ರೆಯ ಒಬ್ಬರು ವ್ಯವಸ್ಥಾಪಕಿ, ಒಬ್ಬರು ಸ್ವಾಗತಕಾರರು ಹಾಗೂ ಒಬ್ಬರು ಲ್ಯಾಬ್ ಟೆಕ್ನೀಷಿಯನ್.

ಇವರುಗಳನ್ನು ವಿಚಾರಣೆ ಮಾಡಿದಾಗ, ವೈದ್ಯರು ಮತ್ತು ಇತರೆ ವ್ಯಕ್ತಿಗಳು ಜೊತೆ ಸೇರಿ ಮೈಸೂರು ನಗರದ ಉದಯಗಿರಿಯಲ್ಲಿರುವ ಆಸ್ಪತ್ರೆ ಮತ್ತು ಮೈಸೂರು ನಗರ ಡಾ.ರಾಜ್‍ಕುಮಾರ್ ರಸ್ತೆಯಲ್ಲಿರುವ ಆಯುರ್ವೇದಿಕ್ ಪೈಲ್ಸ್ ಡೇ ಕೇರ್ ಸೆಂಟರ್‍ನಲ್ಲಿ ಅನಕೃತವಾಗಿ ಸುಮಾರು 3 ವರ್ಷಗಳಿಂದ ಗರ್ಭಪಾತ ಮಾಡಿಸುತ್ತಿದ್ದು, ಕಳೆದ 3 ತಿಂಗಳ ಅವಧಿಯಲ್ಲಿ ಸುಮಾರು 242 ಗರ್ಭಿಣಿಯರಿಗೆ ಗರ್ಭಪಾತ ಮಾಡಿಸಿರುವುದು ತನಿಖೆಯಿಂದ ತಿಳಿದು ಬಂದಿರುತ್ತದೆ. ಅಲ್ಲದೆ, ಈ ಪ್ರಕರಣದಲ್ಲಿ ಆರೋಪಿಗಳು ಕೋಟ್ಯಾಂತರ ರೂಗಳ ಹಣಕಾಸಿನ ವ್ಯವಹಾರವನ್ನು ಸಹ ಮಾಡಿರುತ್ತಾರೆ.

ಬಂಧಿತರ ಪೈಕಿ ಇಬ್ಬರು ಆರೋಪಿಗಳ ವಿರುದ್ಧ ಈಗಾಗಲೆ ದಾವಣಗೆರೆಯ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿ ಇರುತ್ತದೆ. ಇನ್ನೂ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಪ್ರಕರಣದ ತನಿಖೆ ಮುಂದುವರೆದಿದೆ. ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಪ್ರಶಾಂತ್ ಮತ್ತು ಸಿಬ್ಬಂದಿಗಳ ತಂಡ ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

RELATED ARTICLES

Latest News