Wednesday, June 25, 2025
Homeರಾಜ್ಯಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳ ಮೇಲೆ ಇ.ಡಿ.ದಾಳಿ

ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳ ಮೇಲೆ ಇ.ಡಿ.ದಾಳಿ

ED raids private engineering colleges

ಬೆಂಗಳೂರು,ಜೂ.25- ಕಳೆದ ವರ್ಷ ರಾಜ್ಯದಾದ್ಯಂತ ಭಾರೀ ವಿವಾದ ಸೃಷ್ಟಿಸಿದ್ದ ಎಂಜಿನಿಯರಿಂಗ್‌ ಸೀಟು ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎನ್ನುವ ಆರೋಪದ ಮೇಲೆ ಜಾರಿ ನಿದೇರ್ಶನಾಲಯ (ಇ.ಡಿ) ಅಧಿಕಾರಿಗಳು ಇಂದು 18 ಕಡೆ ಪ್ರತಿಷ್ಠಿತ ಖಾಸಗಿ ಕಾಲೇಜುಗಳ ಮೇಲೆ ದಿಢೀರ್‌ ದಾಳಿ ನಡೆಸಿ ಕೆಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲೆಡೆ 18 ಕಡೆಗಳಲ್ಲಿ ಬೆಳ್ಳಂಬೆಳಗ್ಗೆ ಖಾಸಗಿ ಕಾಲೇಜುಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು. ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಕಲೆ ಹಾಕಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಬಿಎಂಎಸ್‌‍ ಎಂಜಿನಿಯರಿಂಗ್‌ ಹಾಗೂ ಆಕಾಶ್‌ ಎಂಜಿನಿಯರಿಂಗ್‌ ಕಾಲೇಜ್‌ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿ ಶೋಧ ನಡೆಸಿದ್ದಾರೆ.

ಇದೇ ರೀತಿ ರಾಜ್ಯದ 18 ಕಡೆ ಏಕಕಾಲಕ್ಕೆ ಇಡಿ ದಾಳಿ ನಡೆಸಿ ಖಾಸಗಿಯವರಿಗೆ ಬಿಸಿ ಮುಟ್ಟಿಸಿದೆ. ಇಂಜಿನಿಯರಿಂಗ್‌ ಸೀಟ್‌ಗಳ ಹಂಚಿಕೆಯಲ್ಲಿ ಸಾಕಷ್ಟು ಅಕ್ರಮ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶದ ಅನ್ವಯ ವಿದ್ಯಾರ್ಥಿಗಳಿಗೆ ಕಾಲೇಜು ಹಂಚಿಕೆ ಮಾಡಿದಂತೆ ಕೆಲ ಕಾಲೇಜುಗಳು ಎಂಜಿನಿಯರಿಂಗ್‌ ಸೀಟುಗಳನ್ನು ನೀಡುತ್ತಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಅಧಿಕಾರಿಗಳು ಆರೋಪ ಮಾಡಿದ್ದರ ಹಿನ್ನಲೆಯಲ್ಲಿ ಇಡಿ ದಾಳಿ ನಡೆಸಿರಬಹುದು ಎನ್ನಲಾಗಿದೆ.

ಸೀಟು ಬ್ಲಾಕಿಂಗ್‌ ಆಕ್ರಮ ಸಂಬಂಧ ಕೆಇಎ ಅಧಿಕಾರಿಗಳು ಈ ಹಿಂದೆಯೇ ಮಲ್ಲೇಶ್ವರಂ ಪೊಲೀಸ್‌‍ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಅನ್ವಯ ಸಾಕಷ್ಟು ಕಾಲೇಜುಗಳಿಗೆ ಮಲ್ಲೇಶ್ವರಂ ಪೊಲೀಸರು ನೋಟೀಸ್‌‍ ಸಹ ನೀಡಿದ್ದರು.

ಕೆಇಎ ಪಟ್ಟಿಯಂತೆ ಕಾಲೇಜುಗಳಲ್ಲಿ ಸೀಟು ಹಂಚಿಕೆ ಆಗುತ್ತಿಲ್ಲ. ಲಕ್ಷ ಲಕ್ಷ ಹಣಕ್ಕೆ ಕಾಲೇಜು ಆಡಳಿತ ಮಂಡಳಿ ಸೀಟುಗಳನ್ನು ಬ್ಲಾಕ್‌ ಮಾಡುತ್ತಿವೆ ಎನ್ನುವ ಆರೋಪ ಕೂಡ ಕೇಳಿ ಬಂದಿದೆ. ಹೀಗಾಗಿ ಅಕ್ರಮ ಹಣ ವರ್ಗಾವಣೆ ಮತ್ತು ಎಂಜಿನಿಯರಿಂಗ್‌ ಸೀಟ್‌ ಬ್ಲಾಕಿಂಗ್‌ ವಿಚಾರವಾಗಿ ಕೇಳಿ ಬಂದ ಆರೋಪದ ಹಿನ್ನೆಲೆ ಇಡಿ ದಾಳಿ ನಡೆಸಿದೆ.

ಏನಿದು ಪ್ರಕರಣ? :
ರಾಜ್ಯದಲ್ಲಿ ಎಂಜಿನಿಯರಿಂಗ್‌ ಸೀಟು ಬ್ಲಾಕಿಂಗ್‌ ಆಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿಬ್ಬಂದಿ ಸೇರಿದಂತೆ 10 ಮಂದಿಯನ್ನು ಬಂಧಿಸಲಾಗಿತ್ತು. 2024-25ನೇ ಸಾಲಿಗಾಗಿ ವಿವಿಧ ಸ್ನಾತಕ ಎಂಜಿನಿಯರಿಂಗ್‌ ಕೋರ್ಸ್‌ ಪ್ರವೇಶದ ವೇಳೆಯಲ್ಲಿ ಕೆಇಎ ಅಧಿಕಾರಿಯೊಬ್ಬರು ಸೀಟು ಬ್ಲಾಕಿಂಗ್‌ ಅನುಮಾನದ ಬಗ್ಗೆ ಮಲ್ಲೇಶ್ವರಂ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ನಂತರ ನವೆಂಬರ್‌ 13 ರಂದು ಈ ಹಗರಣ ಬೆಳಕಿಗೆ ಬಂದಿತ್ತು.
ತನಿಖೆಯ ಸಂದರ್ಭದಲ್ಲಿ ಮೂರು ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳ ಆಡಳಿತವನ್ನು ಪ್ರಶ್ನಿಸಲಾಗಿತ್ತು. ಹಗರಣ ಸಂಬಂಧ ಹತ್ತು ಜನರನ್ನು ಬಂಧಿಸಿದ್ದೇವೆ. ಅವರಲ್ಲಿ ಒಬ್ಬರು ಕೆಇಎ ಸಿಬ್ಬಂದಿ ಇದ್ದರು. ಇತರರಲ್ಲಿ ಮಧ್ಯವರ್ತಿಗಳು ಮತ್ತು ಕೆಲವು ಎಂಜಿನಿಯರಿಂಗ್‌ ಕಾಲೇಜುಗಳ ಕೆಲವು ಸಿಬ್ಬಂದಿ ಸೇರಿದ್ದರು.

ಕೆಇಎ ನೀಡಿದ ದೂರಿನ ಆಧಾರದ ಮೇಲೆ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ವಂಚನೆ, ನಂಬಿಕೆ ದೋಹ, ಐಟಿ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿತ್ತು. ಎಫ್‌ಐಆರ್‌ ಪ್ರಕಾರ, ಸೀಟು ತೆಗೆದುಕೊಳ್ಳುವ ಉದ್ದೇಶಹೊಂದಿಲ್ಲದ ಕೆಲವು ಅಭ್ಯರ್ಥಿಗಳನ್ನು ಕಾಲೇಜು ಆಯ್ಕೆ ನಮೂದಿಸಲು ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿತ್ತು.

ಪ್ರಕರಣದ ಹಿಂದೆ ಪ್ರಭಾವಿಗಳ ಕೈವಾಡವಿರುವ ಶಂಕೆ ವ್ಯಕ್ತವಾದ ಬೆನ್ನಲ್ಲೇ ಪ್ರತಿಷ್ಠಿತ ಮೂರು ಕಾಲೇಜುಗಳ ಆಡಳಿತ ಮಂಡಳಿಗಳಿಗೆ ಪೊಲೀಸರು ನೋಟೀಸ್‌‍ ಜಾರಿಗೊಳಿಸಿದ್ದರು. ಕಳೆದ ಮೂರು ವರ್ಷಗಳಲ್ಲಿ ಮೆರಿಟ್‌ ಹಾಗೂ ಮ್ಯಾನೇಜೆಂಟ್‌ ಕೋಟಾದಲ್ಲಿ ಹಂಚಿಕೆಯಾಗಿರುವ ಸೀಟುಗಳ ಕುರಿತು ದಾಖಲಾತಿಗಳೊಂದಿಗೆ ವಿಚಾರಣೆಗೆ ಹಾಜರಾಗುವಂತೆ ಕಾಲೇಜುಗಳ ಮುಖ್ಯಸ್ಥರಿಗೆ ಸೂಚಿಸಲಾಗಿತ್ತು.

52 ಎಂಜಿನಿಯರಿಂಗ್‌ ಅಭ್ಯರ್ಥಿಗಳ ಲಾಗಿನ್‌ ಐಡಿ, ಪಾಸ್‌‍ವರ್ಡ್‌ ಹಾಗೂ ಸೀಕ್ರೆಟ್‌ ಕೀಯನ್ನು ಅನಧಿಕೃತವಾಗಿ ಪಡೆದಿದ್ದ ಅಪರಿಚಿತರು, ಅಭ್ಯರ್ಥಿಗಳ ಪರವಾಗಿ ಆಫ್ಷನ್‌ ಎಂಟ್ರಿ ಮಾಡಿಸಿದ್ದರು. ಬಳಿಕ ಸರ್ಕಾರದ ಕೋಟಾದ ಎಂಜಿನಿಯರಿಂಗ್‌ ಸೀಟುಗಳನ್ನು ಬ್ಲಾಕ್‌ ಮಾಡಿ, ಖಾಸಗಿ ಕಾಲೇಜುಗಳಿಗೆ ಲಾಭ ಮಾಡಿಕೊಟ್ಟು, ಅರ್ಹ ಅಭ್ಯರ್ಥಿಗಳು ಹಾಗೂ ಪ್ರಾಧಿಕಾರಕ್ಕೆ ವಂಚಿಸಿದ್ದಾರೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಆಡಳಿತಾಧಿಕಾರಿ ಇಸಾಲುದ್ದೀನ್‌.ಜೆ.ಗಾಡಿಯಲ್‌ ನವೆಂಬರ್‌ 13ರಂದು ಮಲ್ಲೇಶ್ವರಂ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದರು.

ತನಿಖೆ ಕೈಗೊಂಡಾಗ ಆರೋಪಿಗಳು ಮೊಬೈಲ್‌‍, ಲ್ಯಾಪ್‌ಟಾಪ್‌ಗಳನ್ನು ಬಳಸಿಕೊಂಡು ಗೋವಾ, ಶಿವಮೊಗ್ಗ, ದಾವಣಗೆರೆ, ಕಡೂರು ಹಾಗೂ ಬೆಂಗಳೂರನಲ್ಲಿ ಖಾಸಗಿ ಕಾಲೇಜುಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಅಭ್ಯರ್ಥಿಗಳೆಂದು ಬಿಂಬಿಸಿ ಕೆಇಎ ವೆಬ್‌ಸೈಟ್‌ನಲ್ಲಿ ಕಾಲೇಜು ಮತ್ತು ಕೋರ್ಸ್‌ ಆಯ್ಕೆ ಮಾಡಿರುವುದು ಪತ್ತೆಯಾಗಿತ್ತು. ಅದರನ್ವಯ ನಾಲ್ವರು ಆರೋಪಿತರನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದಾಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಕರ್ತವ್ಯ ನಿರ್ವಹಿಸುವ ಓರ್ವ ಆರೋಪಿಯು ಅಭ್ಯರ್ಥಿಗಳ ಮಾಹಿತಿಯನ್ನು ಆರೋಪಿಗಳೊಂದಿಗೆ ಹಂಚಿಕೊಳ್ಳುವ ಮೂಲಕ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ತಿಳಿದು ಬಂದಿತ್ತು.

ಈ ಮಾಹಿತಿ ಆಧರಿಸಿ ಆರೋಪಿಗಳಾದ ಹರ್ಷ(42), ಪ್ರಕಾಶ್‌ (42), ಪುನೀತ್‌(27), ಶಶಿಕುಮಾರ್‌(34), ಪುರುಷೋತ್ತಮ್‌ (24), ಅವಿನಾಶ್‌(35), ತಿಲಕ್‌(60) ರವಿಶಂಕರ್‌ (56), ನೌಶದ್‌ ಆಲಂ (42) ಹಾಗೂ ದಿಲ್ಶಾದ್‌ ಆಲಂ (33) ಎಂಬ ಆರೋಪಿಗಳನ್ನು ಮಲ್ಲೇಶ್ವರಂ ಠಾಣೆ ಪೊಲೀಸರು ಬಂಧಿಸಿದ್ದರು.

ಹಗರಣದ ಕಿಂಗ್ಪಿನ್‌ ಹರ್ಷ, ರವಿಶಂಕರ್‌, ಪುನೀತ್‌, ಶಶಿಕುಮಾರ್‌, ಪುರುಷೋತ್ತಮ್‌‍, ಪ್ರಕಾಶ್‌, ಅವಿನಾಶ್‌ ಸೇರಿದಂತೆ ಹತ್ತು ಮಂದಿಯನ್ನು ಬಂಧಿಸಲಾಗಿತ್ತು. ಆರೋಪಿಗಳು ಕೆಇಎನ ಸಿಬ್ಬಂದಿ ಅವಿನಾಶ್‌ ಎಂಬವರ ಸಹಾಯದಿಂದ ಪಾಸ್‌‍ವರ್ಡ್‌ ಪಡೆದು ಸೀಟು ಬ್ಲಾಕಿಂಗ್‌ ಮಾಡುತ್ತಿದ್ದರು ಎಂದು ಆರೋಪಿಸಲಾಗಿತ್ತು. ಕರ್ನಾಟಕ ಪರೀಕ್ಷಾ ಪ್ರಾಧೀಕಾರದ ಕೌನ್ಸಿಲಿಂಗ್‌ಗೆ ಆಯ್ಕೆಯಾಗಿ ಕಾಲೇಜು ಆಯ್ಕೆ ಮಾಡಿಕೊಳ್ಳದ ವಿದ್ಯಾರ್ಥಿಗಳ ಸೀಟುಗಳು ಮತ್ತು ಸರಕಾರದ ಅಡಿಯಲ್ಲಿ ಖಾಸಗಿ ಕಾಲೇಜುಗಳಲ್ಲಿ ಸೀಟು ಪಡೆದ ಬಳಿಕ ದಾಖಲಾತಿ ಪಡೆಯದೆ ಇದ್ದ ವಿದ್ಯಾರ್ಥಿಗಳನ್ನು ಈ ಆರೋಪಿಗಳು ಬ್ಲಾಕ್‌ ಮಾಡುತ್ತಿದ್ದರು ಎನ್ನುವ ಆರೋಪ ಕೇಳಿ ಬಂದಿತ್ತು.

RELATED ARTICLES

Latest News