Tuesday, June 3, 2025
Homeರಾಜ್ಯಗೃಹ ಸಚಿವರಿಗೆ ಇಡಿ ಶಾಕ್‌, ಪರಮೇಶ್ವರ್‌ ಒಡೆತನದ ವಿದ್ಯಾಸಂಸ್ಥೆಗಳ ಮೇಲೆ ಇಡಿ ದಾಳಿ

ಗೃಹ ಸಚಿವರಿಗೆ ಇಡಿ ಶಾಕ್‌, ಪರಮೇಶ್ವರ್‌ ಒಡೆತನದ ವಿದ್ಯಾಸಂಸ್ಥೆಗಳ ಮೇಲೆ ಇಡಿ ದಾಳಿ

ED shocks Home Minister, ED raids educational institutions owned by Parameshwar

ಬೆಂಗಳೂರು, ಮೇ 21- ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರ ಒಡೆತನದ ವಿದ್ಯಾಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತುಮಕೂರಿನ ಹೆಗ್ಗೆರೆಯಲ್ಲಿರುವ ಸಿದ್ದಾರ್ಥ ವೈದ್ಯಕೀಯ ಶಿಕ್ಷಣ ಸಂಸ್ಥೆ ಹಾಗೂ ಮರಳೂರುದಿಣ್ಣೆಯಲ್ಲಿರುವ ಶ್ರೀ ಸಿದ್ದಾರ್ಥ ಇಂಜಿನಿಯರಿಂಗ್ ಕಾಲೇಜು ಹಾಗೂ ಹೆಗ್ಗೆರೆಯಲ್ಲಿರುವ ಪರಮೇಶ್ವರ್ ಅವರ ಹುಟ್ಟೂರಿನ ಮನೆ, ತುಮಕೂರಿನ ಹೊರವಲಯದಲ್ಲಿರುವ ಹಳೆಯ ಎಚ್ಎಂಎಸ್ ಕಾಲೇಜು, ನೆಲಮಂಗಲದ ಬಳಿಯಿರುವ ಸಿದ್ದಾರ್ಥ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಇಂದು ಬೆಳಿಗ್ಗೆ 9 ಗಂಟೆಗೆ ಬೇರೆಬೇರೆ ಕಾರುಗಳಲ್ಲಿ ಆಗಮಿಸಿದ ಅಧಿಕಾರಿಗಳು ತೀವ್ರ ತಪಾಸಣೆ ನಡೆಸಿದ್ದಾರೆ. ಪರಮೇಶ್ವರ್ ಅವರ ಮನೆ ಹಾಗೂ ಶಿಕ್ಷಣ ಸಂಸ್ಥೆಗಳ ಮೇಲೆ ಆರು ವರ್ಷಗಳ ಹಿಂದೆ ಆದಾಯ ತೆರಿಗೆ ದಾಳಿಯಾಗಿತ್ತು. ಇತ್ತೀಚೆಗೆ ಪರಮೇಶ್ವರ್ ಅವರು ತುಮಕೂರಿನ ಹೊರವಲಯದಲ್ಲಿರುವ ಎಚ್ ಎಂಎಸ್ ಇಂಜಿನಿಯರಿಂಗ್ ಕಾಲೇಜನ್ನು ಕಾಂಗ್ರೆಸ್ ಮಾಜಿ ಶಾಸಕ ಶಫಿ ಅಹಮ್ಮದ್ ಅವರಿಂದ ಖರೀದಿಸಿದ್ದರು. ಈ ವೇಳೆ ಭಾರಿ ಪ್ರಮಾಣದ ಹಣಕಾಸಿನ ವಹಿವಾಟು ನಡೆದಿತ್ತು ಎಂದು ತಿಳಿದುಬಂದಿದೆ.

ಜೊತೆಗೆ ಮೈಸೂರಿನಲ್ಲಿ ಅಂತರಾಷ್ಟ್ರೀಯ ವಸತಿ ಶಾಲೆಯೊಂದನ್ನು ಪರಮೇಶ್ವರ್ ಆರಂಭಿಸಿದ್ದರು. ಜೊತೆಗೆ ಕೆಲವರು ಆಸ್ತಿಗಳ ವಹಿವಾಟುಗಳು ನಡೆದಿರುವ ಮಾಹಿತಿಗಳಿವೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.

ಸಿದ್ದಾರ್ಥ ವೈದ್ಯಕೀಯ ಶಿಕ್ಷಣ ಸಂಸ್ಥೆ ಹಾಗೂ ಇಂಜಿನಿಯರಿಂಗ್ ಕಾಲೇಜಿಗೆ ದೇಶದ ವಿವಿಧ ರಾಜ್ಯಗಳಿಂದಷ್ಟೇ ಅಲ್ಲದೆ ವಿದೇಶಿ ವಿದ್ಯಾರ್ಥಿಗಳು ಕೂಡ ಪ್ರವೇಶ ಪಡೆಯುವುದು ಸಾಮಾನ್ಯ. ಈ ಸಂದರ್ಭದಲ್ಲಿ ಬೇರೆಬೇರೆ ಸ್ವರೂಪಗಳಲ್ಲಿ ಹಣಕಾಸಿನ ವಹಿವಾಟುಗಳು ನಡೆಯುತ್ತವೆ. ಅದರಲ್ಲಿ ಕೆಲವು ಪಿಎಂಎಲ್‌ಎ ಕಾಯ್ದೆಗೆ ವ್ಯಾಪ್ತಿಗೊಳಪಡಲಿವೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಶೋಧ ಕಾರ್ಯಾಚರಣೆ ನಡೆಸಿವೆ ಎಂದು ತಿಳಿದುಬಂದಿದೆ.

ದಾಳಿಯ ಮಾಹಿತಿ ದೊರೆಯುತ್ತಿದ್ದಂತೆ ಬೆಂಗಳೂರಿನಲ್ಲಿದ್ದ ಡಾ.ಜಿ.ಪರಮೇಶ್ವರ್ ಅವರು ಪತ್ನಿ ಕನಿಕಾ ಅವರೊಂದಿಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಪ್ರಯಾಣಿಸಿದ್ದಾರೆ. ಪ್ರತಿದಿನ ಮನೆಯಿಂದ ಹೊರಡುವಾಗ ಮಾಧ್ಯಮಗಳಿಗೆ ಹೇಳಿಕೆ ನೀಡಿ ಹೊರಡುವುದು ರೂಢಿ. ಆದರೆ ಇಂದು ಮಾಧ್ಯಮಗಳ ಯಾವುದೇ ಪ್ರಶ್ನೆಗಳಿಗೆ ಪ್ರತಿಕ್ರಿಯಿಸದೆ ಪರಮೇಶ್ವ‌ರ್ ತೆರಳಿದರು.

ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟು ಹಲವಾರು ಪ್ರತ್ಯೇಕ ಸಭೆಗಳ ಮೂಲಕ ಗಮನ ಸೆಳೆದಿದ್ದ ಪರಮೇಶ್ವರ್ ಅವರಿಗೆ ಇ.ಡಿ. ಶೋಧ ಕಾರ್ಯಾಚರಣೆ ಹೊಸ ಸಂಕಟ ತಂದಿಟ್ಟಿದೆ.
ಸಾಮಾನ್ಯವಾಗಿ ಜಾರಿ ನಿರ್ದೇಶನಾಲಯ ಕಾರ್ಯಾಚರಣೆಗಳನ್ನು ರಾಜಕೀಯ ಪ್ರೇರಿತ ಎಂದು ಕಾಂಗ್ರೆಸಿಗರು ಆರೋಪ ಮಾಡುವುದು ಕಂಡುಬರುತ್ತದೆ. ಈ ಪ್ರಕರಣದಲ್ಲೂ ಅದೇ ರೀತಿಯ ಟೀಕೆಗಳು ಸಹಜವಾಗಿ ವ್ಯಕ್ತವಾಗುತ್ತವೆ.

ಆದರೆ ಜಾರಿ ನಿರ್ದೇಶನಾಲಯ ಆಳೆದು, ತೂಗಿ ಈ ಹಿಂದೆ ನಡೆದ ಆದಾಯ ತೆರಿಗೆ ಮಾಹಿತಿಗಳನ್ನು ಆಧರಿಸಿ ಹಾಗೂ ಇತ್ತೀಚಿನ ವಹಿವಾಟುಗಳನ್ನು ಗಮನಿಸಿದ ಬಳಿಕವೇ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.
ಪರಮೇಶ್ವರ್‌ರವರ ಬೆಂಗಳೂರಿನ ನಿವಾಸದಲ್ಲಿ ಶೋಧ ನಡೆಸಿರುವ ಬಗ್ಗೆ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ, ಕೇವಲ ಶಿಕ್ಷಣ ಸಂಸ್ಥೆಗಳನ್ನು ಕೇಂದ್ರೀಕರಿಸಿ ಶೋಧ ಕಾರ್ಯಾಚರಣೆ ನಡೆದಿದೆ ಎಂದು ತಿಳಿದುಬಂದಿದೆ.

RELATED ARTICLES

Latest News