Thursday, May 2, 2024
Homeರಾಜ್ಯ40 ಶಾಸಕರಿಗೆ ನಿಗಮ ಭಾಗ್ಯ, ಚಳಿಗಾಲದ ಅಧಿವೇಶನದೊಳಗೆ ಆದೇಶ

40 ಶಾಸಕರಿಗೆ ನಿಗಮ ಭಾಗ್ಯ, ಚಳಿಗಾಲದ ಅಧಿವೇಶನದೊಳಗೆ ಆದೇಶ

ಬೆಂಗಳೂರು,ನ.28- ಶಾಸಕರು, ವಿಧಾನಪರಿಷತ್ ಸದಸ್ಯರೂ ಸೇರಿದಂತೆ 39 ಮಂದಿಯನ್ನು ಮೊದಲ ಹಂತದಲ್ಲಿ ನಿಗಮ ಮಂಡಳಿಗೆ ನೇಮಿಸಲು ನಿರ್ಧರಿಸಲಾಗಿದ್ದು, ವಿಧಾನಮಂಡಲ ಅಧಿವೇಶನಕ್ಕೂ ಮೊದಲೇ ನಿರ್ಣಯ ಹೊರ ಬೀಳುವ ನಿರೀಕ್ಷೆಗಳಿವೆ. ನಗರಕ್ಕೆ ಆಗಮಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ ಇಂದು ಮಧ್ಯಾಹ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಲಿದ್ದಾರೆ.

ಈಗಾಗಲೇ ಎರಡು ಸುತ್ತಿನ ಚರ್ಚೆಗಳು ನಡೆದಿದ್ದು, ಇಂದು ನಡೆಯುವ ಸಭೆ ಬಹುತೇಕ ಅಂತಿಮ ಎಂದು ಹೇಳಲಾಗಿದೆ. ಎರಡು-ಮೂರಕ್ಕೂ ಹೆಚ್ಚು ಬಾರಿ ಶಾಸಕರಾಗಿ ಆಯ್ಕೆಯಾಗಿರುವವರನ್ನು ನಿಗಮ ಮಂಡಳಿಗಳಿಗೆ ಪರಿಗಣಿಸಲಾಗುತ್ತಿದೆ. ಇದರಲ್ಲಿ ನಾಲ್ಕೈದು ಮಂದಿ ವಿಧಾನಪರಿಷತ್ ಸದಸ್ಯರೂ ಸೇರಿದ್ದಾರೆ.

ಚೀನಾ ನ್ಯೂಮೋನಿಯ ಆತಂಕ, ಭಾರತದಲ್ಲಿ ಹೈ ಅಲರ್ಟ್ ಘೋಷಣೆ

ಸಚಿವ ಸಂಪುಟದಲ್ಲಿ ಅವಕಾಶ ಸಿಗದೆ ಅಸಮಾಧಾನಗೊಂಡಿರುವ ಶಾಸಕರನ್ನು ಸಮಾಧಾನಪಡಿಸಲು ನಿಗಮ ಮಂಡಳಿಗಳ ನೇಮಕಾತಿಗೆ ಕಾಂಗ್ರೆಸ್ ಚಾಲನೆ ನೀಡಿದೆ. ಮೂಲಗಳ ಪ್ರಕಾರ ಪ್ರಕಾಶ್‍ಕೋಳಿವಾಡ, ವಿಜಯಾನಂದ ಕಾಶಪ್ಪನವರ್, ಎಂ.ವೈ.ಪಾಟೀಲ್, ಅಲ್ಲಂಪ್ರಭು ಪಾಟೀಲ್, ಬಸನಗೌಡ ದದ್ದಲ್, ಯಶವಂತರಾಯ ಗೌಡ ವಿಠಲಗೌಡ ಪಾಟೀಲ್, ಹಂಪನಗೌಡ ಬಾದರ್ಲಿ, ರಾಘವೇಂದ್ರ ಹಿಟ್ನಾಳ್, ಪ್ರಸಾದ್ ಅಬ್ಬಯ್ಯ, ಶ್ರೀನಿವಾಸ್ ಮಾನೆ, ಜಿ.ಎನ್.ಗಣೇಶ್, ಈ ತುಕಾರಾಮ್, ಟಿ.ರಘುಮೂರ್ತಿ, ಬೇಳೂರು ಗೋಪಾಲಕೃಷ್ಣ, ಟಿ.ಡಿ.ರಾಜೇಗೌಡ, ಡಾ.ರಂಗನಾಥ್, ಎಸ್.ಆರ್.ಶ್ರೀನಿವಾಸ್, ಕೆ.ವೈ.ನಂಜೇಗೌಡ, ರಿಜ್ವಾನ್ ಅರ್ಷದ್, ಪ್ರಿಯಾಕೃಷ್ಣ, ಬಿ.ಶಿವಣ್ಣ, ಎಚ್.ಸಿ.ಬಾಲಕೃಷ್ಣ, ಕೆ.ಎಂ.ಶಿವಲಿಂಗೇಗೌಡ, ವಿನಯ್‍ಕುಲಕರ್ಣಿ, ನರೇಂದ್ರಸ್ವಾಮಿ ಅವರ ಹೆಸರುಗಳು ಸಂಭವನೀಯರ ಪಟ್ಟಿಯಲ್ಲಿ ಸೇರಿವೆ.

ಮೊದಲರೆಡು ಸಭೆಗಳಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರುಗಳ ನಡುವೆ ಹೊಂದಾಣಿಕೆಯಾಗಿರಲಿಲ್ಲ. ಇನ್ನೂ ಕೆಲವು ಹಿರಿಯರ ಹೆಸರುಗಳು ಬಿಟ್ಟುಹೋಗಿದ್ದವು. ಬಹಳಷ್ಟು ಮಂದಿ ತಮಗೆ ನಿಗಮ ಮಂಡಳಿ ಬೇಡ. ಎರಡೂವರೆ ವರ್ಷಗಳ ಬಳಿಕ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಿ ಎಂದು ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಗೊಂದಲ ಉಂಟಾಗಿತ್ತು.

ರಣದೀಪ್ ಸಿಂಗ್ ಸುರ್ಜೇವಾಲ ಮತ್ತು ಕೆ.ಸಿ.ವೇಣುಗೋಪಾಲ್ ಅವರು ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಜತೆ ಚರ್ಚೆ ನಡೆಸಿ ಬಹುತೇಕ ಸ್ಪಷ್ಟ ನಿರ್ಣಯ ರೂಪಿಸಿದ್ದಾರೆ ಎನ್ನಲಾಗಿದೆ.
ಹೈಕಮಾಂಡ್‍ನ ಸಂದೇಶದೊಂದಿಗೆ ರಾಜ್ಯಕ್ಕೆ ಆಗಮಿಸಿರುವ ರಣದೀಪ್ ಸಿಂಗ್ ಸುರ್ಜೇವಾಲ ಅವರು ಇಂದು ನಡೆಯುವ ಸಭೆಯಲ್ಲಿ ಸಂಭವನೀಯ ಪಟ್ಟಿಗೆ ಅಂಕಿತ ಹಾಕಲಿದ್ದು, ಇನ್ನೆರಡು ದಿನಗಳಲ್ಲಿ ನೇಮಕಾತಿ ಪ್ರಕ್ರಿಯೆಗಳು ಆರಂಭಗೊಳ್ಳುವ ಸಾಧ್ಯತೆ ಇದೆ.

ಅಮೆರಿಕ ನೆಲೆಗಳ ಛಾಯಾಚಿತ್ರ ತೆಗೆದಿದೆಯಂತೆ ಉತ್ತರ ಕೊರಿಯಾ ಉಪಗ್ರಹ

ಆರ್ಥಿಕವಾಗಿ ಸುಸ್ಥಿಯಲ್ಲಿರುವ 90ಕ್ಕೂ ಹೆಚ್ಚು ನಿಗಮ ಮಂಡಳಿಗಳಿಗೆ ನೇಮಕಾತಿ ನಡೆಯುವುದು ಖಚಿತವಾಗಿದೆ.
ಮೊದಲ ಹಂತದಲ್ಲಿ 40ಕ್ಕೂ ಹೆಚ್ಚು ನಿಗಮ ಮಂಡಳಿಗಳಿಗೆ ಶಾಸಕರನ್ನು ನೇಮಿಸಲಾಗುತ್ತಿದ್ದು, ಎರಡನೇ ಹಂತದಲ್ಲಿ ಕಾರ್ಯಕರ್ತರು, ಪ್ರಮುಖ ನಾಯಕರನ್ನು ಪರಿಗಣಿಸುವ ಸಾಧ್ಯತೆ ಇದೆ. ಕಾರ್ಯಕರ್ತರ ನೇಮಕಾತಿಯ ಕುರಿತಂತೆಯೂ ಇಂದಿನ ಸಭೆಯಲ್ಲಿ ಚರ್ಚೆಯಾಗಲಿದೆ ಎಂದು ಹೇಳಲಾಗಿದೆ.

RELATED ARTICLES

Latest News