Friday, May 3, 2024
Homeರಾಜ್ಯಮತ್ತೆ ಅಧಿಕಾರಕ್ಕೆ ಬರಲು ಬಿಜೆಪಿಯಿಂದ ತನಿಖಾ ಸಂಸ್ಥೆಗಳ ದುರುಪಯೋಗ : ಜಿ.ಪರಮೇಶ್ವರ್

ಮತ್ತೆ ಅಧಿಕಾರಕ್ಕೆ ಬರಲು ಬಿಜೆಪಿಯಿಂದ ತನಿಖಾ ಸಂಸ್ಥೆಗಳ ದುರುಪಯೋಗ : ಜಿ.ಪರಮೇಶ್ವರ್

ಬೆಂಗಳೂರು, ಮಾ.30- ವಿರೋಧ ಪಕ್ಷಗಳನ್ನು ಸದೆಬಡಿದು ಮತ್ತೆ ಅಧಿಕಾರ ಕ್ಕೆ ಬರುವ ಮನಸ್ಥಿತಿಯಿಂದ ಬಿಜೆಪಿಯವರು ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು. ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತನಿಖಾ ಸಂಸ್ಥೆಗಳ ಕಾರ್ಯ ನಿರಂತರವಾಗಿ ನಡೆಯುತ್ತದೆ. ಆದರೆ, ಇಷ್ಟುದಿನ ಸುಮ್ಮನಿದ್ದು ಚುನಾವಣೆ ಸಂದರ್ಭದಲ್ಲಿ ಆಸಕ್ತಿ ತೋರಿಸಿರುವುದು ಯಾಕೆ? ಆದಾಯ ತೆರಿಗೆ ಇಲಾಖೆಯವರು ಈಗ ತೆರಿಗೆ ಕಟ್ಟುವಂತೆ ನೋಟೀಸ್ ನೀಡುತ್ತಿರುವುದರ ಅರ್ಥವೇನು? ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಯನ್ನು ಯಾವ ಉದ್ದೇಶಕ್ಕಾಗಿ ಸೀಜ್ ಮಾಡಲಾಗಿತ್ತು? ಎಂದು ಪ್ರಶ್ನಿಸಿದರು.

ಎಲೆಕ್ಟ್ರೋಲ್ ಬಾಂಡ್ಸ್ ಕೊಡಬಹುದು, ಹಣ ಕೊಡುವಂತಿಲ್ಲ ಎಂದು ಕಳೆದ ಚುನಾವಣೆಯಲ್ಲಿ ಹೇಳಲಾಗಿತ್ತು. ಇದಕ್ಕೆ ಚುನಾವಣೆ ಆಯೋಗ ಅನುಮತಿ ನೀಡಿತ್ತು. ಎಲ್ಲ ಪಾರ್ಟಿಯವರು ಎಲೆಕ್ಟ್ರೋಲ್ ಬಾಂಡ್ಸ್ಗಳನ್ನು ಡೊನೇಷನ್ ಮಾದರಿಯಾಗಿ ತೆಗೆದುಕೊಂಡರು. ಈಗ ಎಲೆಕ್ಟ್ರೋಲ್ ಬಾಂಡ್ಸ್ ತೆಗೆದುಕೊಂಡಿರುವುದು ತಪ್ಪು ಎನ್ನಲಾಗುತ್ತಿದೆ. ಬಿಜೆಪಿಯವರು ಹೆಚ್ಚು ಬಾಂಡ್ಸ್ಗಳನ್ನು ತೆಗೆದುಕೊಂಡಿದ್ದು, ರೂ. 8200 ಕೋಟಿ ರೂ. ಗೂ ಹೆಚ್ಚು ತೆಗೆದುಕೊಂಡಿದ್ದಾರೆ. ನಮ್ಮ ಪಕ್ಷಕ್ಕೆ 1800 ಕೋಟಿ ರೂ. ಬಂದಿದೆ.

ಬಿಜೆಪಿಯವರು ರೂ. 8200 ಕೋಟಿ ರೂ. ಪೈಕಿ, 6600 ಕೋಟಿ ರೂ. ಲೆಕ್ಕ ಕೊಟ್ಟಿದ್ದು, ಬಾಕಿ ಹಣದ ಲೆಕ್ಕ ತೋರಿಸಿಲ್ಲ. ಇದಕ್ಕಿದ್ದಂತೆ 1800 ಕೋಟಿ ರೂ. ತೆರಿಗೆ ಕಟ್ಟುವಂತೆ ನಮ್ಮ ಪಕ್ಷಕ್ಕೆ ನೋಟೀಸ್ ಕೊಡುವುದಾದರೆ, ಬಿಜೆಪಿಯವರು ಲೆಕ್ಕ ತೋರಿಸಿರುವ 6600 ಕೋಟಿ ರೂ. ಗೂ ನೋಟಿಸ್ ನೀಡಲಿ. ಬರೀ ಕಾಂಗ್ರೆಸ್ನವರಿಗೆ ನೋಟೀಸ್ ನೀಡಿರುವುದು, ರಾಜಕೀಯ ದುರುದ್ದೇಶ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ತುಮಕೂರಿನಿಂದ ಸ್ರ್ಪಧಿಸುವಂತೆ ದೇವೇಗೌಡರನ್ನು ನಾವ್ಯಾರು ಕರೆದಿರಲಿಲ್ಲ:
ಕಳೆದ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡ ಅವರನ್ನು ತೂಮಕೂರಿನಿಂದ ಸ್ರ್ಪಧಿಸುವಂತೆ ಯಾರೂ ಕರೆದಿರಲಿಲ್ಲ. ಆಗ ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದೆ ದೇವೇಗೌಡ ಅವರು ತುಮಕೂರಿನಿಂದ ಸ್ರ್ಪಧಿಸುತ್ತಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿದೆ. ನೀವು ಬರುತ್ತೀರಾ? ಎಂದು ಖುದ್ದಾಗಿ ಕೇಳಿದ್ದೆ. ನಾನು ಇನ್ನು ತೀರ್ಮಾನ ಮಾಡಿಲ್ಲಪ್ಪ. ಬೆಂಗಳೂರು ಉತ್ತರ ಕ್ಷೇತ್ರದಿಂದ ನಿಲ್ಲಲು ತೀರ್ಮಾನ ಮಾಡಿಕೊಂಡಿದ್ದೇನೆ ಎಂದಿದ್ದರು. ತದನಂತರ ನಮ್ಮ ಹೈಕಮಾಂಡ್ ಜೊತೆ ಏನು ಮಾತನಾಡಿಕೊಂಡರೋ ಆ ಭಾಗ ನನಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ದೇವೇಗೌಡ ಅವರು ತುಮಕೂರಿನಿಂದ ಸ್ರ್ಪಧಿಸುತ್ತಾರೆ ಎಂದು ಹೈಕಮಾಂಡ್ನಿಂದ ಸೂಚನೆ ಬಂತು. ನಾವೆಲ್ಲ ಪ್ರಾಮಾಣಿಕವಾಗಿ ದೇವೇಗೌಡ ಅವರ ಗೆಲುವಿಗಾಗಿ ಕೆಲಸ ಮಾಡಿದ್ದೇವೆ. ಪ್ರಧಾನ ಮಂತ್ರಿಯಾಗಿದ್ದವರು ನಮ್ಮ ಕ್ಷೇತ್ರದಿಂದ ಸ್ರ್ಪಧಿಸುತ್ತಾರೆ ಅಂದಾಗ ಗೆಲ್ಲಿಸಿಕೊಳ್ಳಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಆದರೆ, ದೇವೇಗೌಡ ಪರವಾಗಿ ಜೆಡಿಎಸ್ ಪಕ್ಷದವರೇ ಕೆಲಸ ಮಾಡಲಿಲ್ಲ ಎಂದು ಹೇಳಿದರು.

ದೇವೇಗೌಡ ಅವರ ಬಗ್ಗೆ ಅಪಾರವಾದ ಗೌರವವಿದೆ. ನಮ್ಮ ರಾಜ್ಯದಿಂದ ಪ್ರಧಾನಿಯಾದ ಏಕೈಕ ವ್ಯಕ್ತಿ. ಅವರ ವ್ಯಕ್ತಿತ್ವದ ಬಗ್ಗೆ ನಮಗೆ ಹೆಮ್ಮೆ ಇದೆ. ನಾವ್ಯಾರೂ ಅವರನ್ನು ಕರೆದುಕೊಂಡು ಹೋಗಿ ಸೋಲಿಸಿಲ್ಲ ಎಂದರು. ಎಚ್ಡಿಕೆ ಅವರ ಆರೋಗ್ಯದ ವಿಚಾರವಾಗಿ ಶಾಸಕ ಬಂಡಿಸಿದ್ದೇಗೌಡ ಅವರ ಹೇಳಿಕೆಯ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಪರಮೇಶ್ವರ್, ಚುನಾವಣೆ ಸಂದರ್ಭದಲ್ಲಿ ಯಾರೊಬ್ಬರೂ ವೈಯಕ್ತಿಕ ವಿಚಾರಗಳನ್ನು ಮಾತನಾಡಬಾರದು. ನಮ್ಮ ಮಾತಿನ ಮೇಲೆ ನಮಗೆ ನಿಯಂತ್ರಣ ಇದ್ದರೆ ಒಳ್ಳೆಯದು. ನಾನೇ ಇರಲಿ, ಬೇರೆ ಯಾರೇ ಇರಲಿ ಅದು ಸೂಕ್ತವಲ್ಲ ಎಂದು ಹೇಳಿದರು.

ಕೋಲಾರದಲ್ಲಿ ಎರಡು ಗುಂಪು ಆಗಿರುವುದು ನಿಜ. ಇನ್ನೂ ಸಮಯ ಇದೆ. ಒಟ್ಟಾಗಿ ಕೆಲಸ ಮಾಡುತ್ತಾರೆ. ಕೋಲಾರದಲ್ಲಿ ಈಗಲೂ ಒಳ್ಳೆಯ ವಾತಾವರಣವಿದ್ದು, ಯಾರಿಗೆ ಟಿಕೆಟ್ ಕೊಟ್ಟರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.

RELATED ARTICLES

Latest News