ತಿ.ನರಸೀಪುರ,ಮಾ.16- ನದಿಯಲ್ಲಿ ಸ್ನಾನ ಮಾಡಲು ಹೋದ ಅಜ್ಜ ತನ್ನ ಇಬ್ಬರು ಮೊಮ್ಮಕ್ಕಳೊಂದಿಗೆ ಜಲ ಸಮಾಧಿಯಾಗಿರುವ ಘಟನೆ ಹಳೇ ತಿರುಮ ಕೂಡಲು ಗ್ರಾಮದಲ್ಲಿ ಸಂಭವಿಸಿದೆ.
ಹಳೇ ತಿರುಮಕೂಡಲು ಗ್ರಾಮದ ನಿವಾಸಿ ಚೌಡಯ್ಯ (65) ಹಾಗು ಮೊಮ್ಮಕ್ಕಳಾದ ಭರತ್ ಗೌಡ(11) ಮತ್ತು ಧನುಷ್ ಗೌಡ(9) ಮೃತಪಟ್ಟ ದುರ್ದೈವಿಗಳು. ಭರತ್ ಗೌಡ ಪಟ್ಟಣದ ತ್ರಿವೇಣಿ ನಗರದ ಸೆವೆಂತ್ ಡೇ ಕಾನ್ವೆಂಟ್ ನಲ್ಲಿ 5ನೇ ತರಗತಿ ಹಾಗು ಧನುಷ್ ಗೌಡ 3ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದು, ಸ್ನಾನ ಮಾಡಲು ತಾತನೊಂದಿಗೆ ನದಿ ಬಳಿ ತೆರಳಿದಾಗ ಈ ದುರ್ಘಟನೆ ಸಂಭವಿಸಿದೆ.
ಭರತ್ ಗೌಡ ಹಾಗು ಧನುಷ್ ಗೌಡ ಕಾಲು ಜಾರಿ ನದಿಯಲ್ಲಿ ಮುಳುಗಿದ್ದಾರೆ. ಮೊಮ್ಮಕ್ಕಳನ್ನು ರಕ್ಷಿಸಲು ಮುಂದಾದ ಚೌಡಯ್ಯ ಸಹ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಒಂದೇ ಕುಟುಂಬದ ಮೂರು ಜೀವಗಳು ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದು, ಮೃತ ದೇಹಗಳನ್ನಿಟ್ಟಿದ್ದ ಸಾರ್ವಜನಿಕ ಶವಾಗಾರದ ಬಳಿ ಕುಟುಂಬದವರ ಆಕ್ರಂದನ ಮುಗಿಲು ಮಟ್ಟಿತ್ತು.
ತಲಾ 2 ಲಕ್ಷ ಪರಿಹಾರ :
ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಟಿ.ಜೆ.ಸುರೇಶಾಚಾರ್ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಶಾಸಕ ಯತೀಂದ್ರ ಸಿದ್ದರಾಮಯ್ಯ ಆದೇಶದ ಮೇರೆಗೆ ಮೃತ ಕುಟುಂಬಕ್ಕೆ 6 ಲಕ್ಷ ರೂ.ಗಳ ಪರಿಹಾರ ಘೋಷಣೆ ಮಾಡಿದರು. ಯತೀಂದ್ರ ಸಿದ್ದರಾಮಯ್ಯ ಪಟ್ಟಣಕ್ಕೆ ಭೇಟಿ ನೀಡುವ ಸಮಯದಲ್ಲಿ ಮೃತ ಕುಟುಂಬದವರಿಗೆ ಪರಿಹಾರದ ಚೆಕ್ ನೀಡಲಾಗುತ್ತದೆ, ಸ್ಥಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಆಪ್ತ ಸಹಾಯಕ ಸಿ.ಟಿ.ಕುಮಾರ್ ಹಾಜರಿದ್ದರು.
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತರೆಡ್ಡಿ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ ಭೇಟಿ ನೀಡಿದ್ದರು. ಘಟನೆ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಧನಂಜಯ್ ಮಾರ್ಗದರ್ಶನದಲ್ಲಿ ಎಎಸ್ ಐ ಶಿವಕುಮಾರ್ ಕೇಸು ದಾಖಲಿಸಿದ್ದಾರೆ. ಪಿಎಸ್ಐ ಜಗದೀಶ್ ದೂಳ್ ಶೆಟ್ಟಿ, ಎಎಸ್ಐ ಪಚ್ಚೇಗೌಡ, ಮುಖ್ಯಪೇದೆ ಪ್ರಭಾಕರ್ ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಜರುಗಿಸಿದ್ದಾರೆ.