Saturday, May 18, 2024
Homeರಾಜ್ಯಗಣಿ ಪ್ರಕರಣದ ತನಿಖೆಗೆ ಅಂಜುವುದಿಲ್ಲ: ಎಚ್.ಡಿ.ಕುಮಾರಸ್ವಾಮಿ

ಗಣಿ ಪ್ರಕರಣದ ತನಿಖೆಗೆ ಅಂಜುವುದಿಲ್ಲ: ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು,ನ.17- ಬಿಡದಿ ಬಳಿ ತಾವು ಖರೀದಿಸಿರುವ ಆಸ್ತಿ ಹಾಗೂ ಜಂತ್ಕಲ್ ಗಣಿ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ತನಿಖೆಯನ್ನು ಬೇಗ ಪೂರ್ಣಗೊಳಿಸಲಿ ಎಂದು ಹೇಳಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ನನ್ನನ್ನು ಹೆದುರಿಸಲು ಸಾಧ್ಯವಿಲ್ಲ. ಏಕಾಂಗಿಯಾಗಿ ಹೋರಾಟ ಮಾಡುವುದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ಸಚಿವ ಸಂಪುಟ ಸಭೆ ನಡೆದ ನಂತರ ನನ್ನ ಬಗ್ಗೆಯೇ ಪ್ರತ್ಯೇಕ ಸಭೆ ನಡೆಸಿದ್ದಾರೆ. ಬಿಡದಿ ಬಳಿ ಜಮೀನು ಖರೀದಿಸಿ 38 ವರ್ಷವಾಗಿದೆ. ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಕಾಲದಿಂದ ಇಲ್ಲಿಯವರೆಗೆ ಆಗಿರುವ ತನಿಖೆ ಬಗ್ಗೆ ಪುಸ್ತಕ ಬರೆಯಬಹುದು. ಲೋಕಾಯುಕ್ತ, ಸಿಐಡಿ ತನಿಖೆ ಎಲ್ಲವೂ ಆಗಿದೆ. ಇನ್ನೊಮ್ಮೆ ತನಿಖೆ ಮಾಡಿಸಿ ನನಗಿನ್ನೂ ಮೂರ್ನಾಲ್ಕು ಎಕರೆ ಜಮೀನು ಸಿಕ್ಕಿಲ್ಲ. ಅದನ್ನು ಹುಡುಕಿ ಕೊಡಲಿ ಎಂದು ಹೇಳಿದರು.

ಮುಖ್ಯಮಂತ್ರಿ ಉಸ್ತುವಾರಿಯಲ್ಲೇ ಜಂತ್ಕಲ್ ಗಣಿಗಾರಿಕೆ ಪ್ರಕರಣದ ತನಿಖೆ ನಡೆಸುವುದಾಗಿ ಹೇಳಿದ್ದಾರೆ. ಅದಕ್ಕೆ ನಾನು ಹೆದರಿಕೊಳ್ಳುವುದಿಲ್ಲ. ಜಂತ್ಕಲ್ ಪ್ರಕರಣ ಮುಗಿಸಲು ಮುಖ್ಯಮಂತ್ರಿಯಾಗಿದ್ದಾಗ ಒತ್ತಡವನ್ನೂ ಹೇರಿಲ್ಲ. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿ ಮಾಲೀಕರಿಂದ 20 ಲಕ್ಷ ರೂ.ವನ್ನು ಪುತ್ರನ ಖಾತೆಗೆ ಪಡೆದುಕೊಂಡಿದ್ದ ಅಧಿಕಾರಿ ಜೈಲಿಗೆ ಹೋಗಿದ್ದಾರೆ. ಅದನ್ನು ನನ್ನ ತಲೆಗೆ ಕಟ್ಟಲು ಹುನ್ನಾರ ನಡೆಸಿದ್ದರು ಎಂದರು.

ಕಾಶ್ಮೀರ ಕಣಿವೆಯಲ್ಲಿ ಸೇನಾ ಕಾರ್ಯಾಚರಣೆ: ಐವರು ಉಗ್ರರ ಹತ್ಯೆ

ಜಂತ್ಕಲ್ ಗಣಿಗಾರಿಕೆ ಪ್ರಕರಣವನ್ನು ಶೀಘ್ರವಾಗಿ ಪೂರ್ಣಗೊಳಿಸಲಿ ಎಂದ ಅವರು, ನಾನು ಯಾವುದೇ ಕಾರಣಕ್ಕೂ ಅಂಜುವುದಿಲ್ಲ. ಸುಳ್ಳು ದಾಖಲೆ ಸೃಷ್ಟಿ ಮಾಡಿಲ್ಲ ಎಂದು ಆರೋಪಿಸಿದರು.
ಹಲವು ಪ್ರಕರಣಗಳನ್ನು ಮುಚ್ಚಿ ಹಾಕಿಕೊಳ್ಳಲು ಎಸಿಬಿ ರಚಿಸಿಕೊಂಡಿದ್ದರು. ನ್ಯಾಯಮೂರ್ತಿ ಕೆಂಪಣ್ಣ ಆಯೋಗದ ರೀಡೂ ವರದಿ ಏನಾಯ್ತು ಎಂದು ಪ್ರಶ್ನಿಸಿದರು.

ಕರಾಬ್ ಜಮೀನಿನಲ್ಲಿ ಮಾಲು: ವಿರೋಧ ಪಕ್ಷದ ಸ್ಥಾನದಲ್ಲಿದ್ದು ಕಾನೂನು ಬಾಹಿರ ಕೃತ್ಯಗಳನ್ನು ಹೊರಗೆ ತರುವ ಪ್ರಯತ್ನವನ್ನು ನಾನು ಮಾಡುತ್ತಿದ್ದೇನೆ. ಮಿನರ್ವ ಮಿಲ್‍ಗೆ ಸುಮಾರು 1934ರಲ್ಲಿ ಮಂಜೂರಾಗಿದ್ದ ಜಮೀನು 24 ಎಕರೆ ಕರಾಬ್ ಭೂಮಿಯಲ್ಲಿ ಲೂಲು ಮಾಲ್ ನಿರ್ಮಿಸಲಾಗಿದೆ. ಅಲ್ಲಿದ್ದ ಹೈಟೆನ್ಷನ್ ವೈರ್‍ಗಳನ್ನು ಅಂಡರ್‍ಗ್ರೌಂಡ್‍ನಲ್ಲಿ ತೆಗೆದುಕೊಂಡು ಹೋಗಲಾಗಿದೆ. ಇದಕ್ಕೆ ಕಂಪನಿಯಿಂದ ಹಣ ಕಟ್ಟಿದ್ದಾರೆಯೇ ಎಂದು ಪ್ರಶ್ನಿಸಿದರು.

ಅಲ್ಲದೆ ಮಾಲ್‍ನ ಕಟ್ಟಡ ನಿರ್ಮಾಣ ಮಾಡುವಾಗ ಬಳಸಿದ ವಿದ್ಯುತ್‍ಗೆ ಪೂರ್ವಾನುಮತಿ ಪಡೆದು ಹಣ ಪಾವತಿಸಿದ್ದಾರೆಯೇ ಎಂದು ಪ್ರಶ್ನಿಸಿದರು. ನನ್ನ ವಿರುದ್ಧ ನಾಲ್ಕು ಕೇಸ್‍ಗಳನ್ನು 2009ರಲ್ಲಿ ಹಾಕಲಾಗಿತ್ತು. ವಕೀಲರ ಸಲಹೆ ಮೇರೆಗೆ ಜಾಮೀನನ್ನು ಪಡೆದಿದ್ದಾಗಿ ಸ್ಪಷ್ಟಪಡಿಸಿದರು.

ಕ್ಷಮೆಗೆ ಆಗ್ರಹ: ಸಭಾಧ್ಯಕ್ಷರಾದವರು ವಿಧಾನಸಭೆಯ 224 ಸದಸ್ಯರ ರಕ್ಷಣೆ ಮಾಡಬೇಕು. ಸಭಾಧ್ಯಕ್ಷರ ಹೆಸರನ್ನು ಬಳಸಿ ಸಚಿವರೊಬ್ಬರು ಬಿಜೆಪಿ ನಾಯಕರ ಬಗ್ಗೆ ಬಳಸಿರುವ ಪದಬಳಕೆಗೆ ಕ್ಷಮೆ ಯಾಚಿಸಬೇಕೆಂದು ಕುಮಾರಸ್ವಾಮಿ ಒತ್ತಾಯಿಸಿದರು. ಸಭಾಧ್ಯಕ್ಷರಾದವರು ಒಂದು ಧರ್ಮದ ಪ್ರತಿನಿಧಿಯಲ್ಲ. ಸಂವಿಧಾನ ಬದ್ದವಾಗಿ ಕರ್ತವ್ಯ ನಿರ್ವಹಿಸುವವರು. ಅವರ ಹೆಸರಿನಲ್ಲಿ ಹುಡುಗಾಟಿಕೆ ಮಾಡುವುದು ಸರಿಯಲ್ಲ. ಈ ರೀತಿಯಾದರೆ ಸದನದ ನಿಯಮವನ್ನು ಉಳಿಸುತ್ತಾರೆಯೇ ಎಂದು ಪ್ರಶ್ನಿಸಿದರು.

ಉಡುಪಿ ನಾಲ್ವರ ಹತ್ಯೆ ಪ್ರಕರಣ: ಕುಟುಂಬಕ್ಕೆ ಸಾಂತ್ವಾನ ಹೇಳಿದ ಲಕ್ಷ್ಮೀ ಹೆಬ್ಬಾಳ್ಕರ್

ನಂಬಬೇಕೆ?: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ಬಗ್ಗೆ ಐದು ಶಾಲೆಗಳಿಗೆ ಸಿಎಸ್‍ಆರ್ ನಿಧಿ ಬಳಕೆ ವಿಚಾರಕ್ಕೆ ಮಾತನಾಡಿದ್ದಾರೆ ಎಂಬ ಸ್ಪಷ್ಟನೆ ಕೊಟ್ಟಿದ್ದಾರೆ. ಇದನ್ನು ನಾವು ನಂಬಬೇಕೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಇನ್ನು ಬೆಳಗ್ಗೆ ಮಾಧ್ಯಮಗಳಲ್ಲಿ ಆ ವಿಡಿಯೋ ಪ್ರಸಾರವಾದ ಕೂಡಲೇ ಅಂದರೆ 10-11 ಗಂಟೆಗೆ ಈ ಆರೋಪದ ಬಗ್ಗೆ ಸ್ಪಷ್ಟನೆ ನೀಡಬಹುದಿತ್ತು. ಆದರೆ ಮಧ್ಯಾಹ್ನ 3 ಗಂಟೆವರೆಗೆ ಏಕೆ ಕಾಯಬೇಕಿತ್ತು ಎಂದರು.
ಡೂಪ್ಲಿಕೇಟ್ ಸಿಎಂ ಹೇಳಿದ ಮೇಲೆ ಸಿಎಸ್‍ಆರ್ ನಿಧಿ ವಿಚಾರ ಪ್ರಸ್ತಾಪ ಮಾಡಿದ್ದಾರೆ ಎಂದ ಅವರು, ವಿಧಾನಸಭೆಯಲ್ಲಿ ಪ್ರಸ್ತಾಪಿಸುವುದಾಗಿ ಹೇಳಿದರು.

ಮಾತನಾಡುವಾಗ ವಿವೇಕನಂದ ಯಾರೂ ಎಂದು ಪ್ರಶ್ನಿಸಿದ್ದಾರೆ. ಸಿಎಸ್‍ಆರ್ ನಿಧಿ ವಿಚಾರವಾಗಿದ್ದರೆ ಬಿಇಒ ವಿವೇಕನಂದ ಎಂಬುದು ಗೊತ್ತಾಗುತ್ತಿರಲಿಲ್ಲವೇ? ಸಿದ್ದರಾಮಯ್ಯನವರ ಹುಟ್ಟೂರಿನ ಶಾಲೆಗೆ ಈ ನಿಧಿ ಕೊಟ್ಟಿದ್ದಾರೆಯೆ? ಎಂದು ಪ್ರಶ್ನಿಸಿದ ಅವರು, ನನ್ನ ಪುತ್ರ ಹಾಗೂ ಶಾಸಕರಾಗಿದ್ದ ಪತ್ನಿ ಎಂದು ಕೂಡ ಮುಖ್ಯಮಂತ್ರಿ ಕಚೇರಿಯ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡಿರಲಿಲ್ಲ ಎಂದು ಸ್ಪಷ್ಟಪಡಿಸಿದರು.
ಗೋಷ್ಠಿಯಲ್ಲಿ ಮಾಜಿ ಸಚಿವ ಆನಂದ್ ಅಸ್ನೋಟಿಕರ್, ವಿಧಾನಪರಿಷತ್ ಮಾಜಿ ಸದಸ್ಯ ರಮೇಶ್ ಗೌಡ ಉಪಸ್ಥಿತರಿದ್ದರು.

RELATED ARTICLES

Latest News