Sunday, June 15, 2025
Homeರಾಷ್ಟ್ರೀಯ | Nationalಕೇದಾರನಾಥದಲ್ಲಿ ಹೆಲಿಕಾಪ್ಟರ್‌ ದುರಂತದಲ್ಲಿ 7 ಮಂದಿ ಸಜೀವವಾಗಿ ದಹನ

ಕೇದಾರನಾಥದಲ್ಲಿ ಹೆಲಿಕಾಪ್ಟರ್‌ ದುರಂತದಲ್ಲಿ 7 ಮಂದಿ ಸಜೀವವಾಗಿ ದಹನ

ಡೆಹ್ರಡೂನ್‌ (ಉತ್ತರಾಖಂಡ್‌),ಜೂ.15- ಗುಜರಾತ್‌ನ ಆಹಮದಬಾದ್‌ನಲ್ಲಿ ಏರ್‌ ಇಂಡಿಯಾ ವಿಮಾನ ದುರಂತದಲ್ಲಿ 270 ಮಂದಿ ಭೀಕರ ಸಾವನ್ನಪ್ಪಿರುವ ಪ್ರಕರಣ ಮಾಸುವ ಮುನ್ನವೇ ಹಿಂದೂಗಳ ಪವಿತ್ರ ಧಾರ್ಮಿಕ ಕ್ಷೇತ್ರವಾದ ಉತ್ತರಾಖಂಡ್‌ನ ಕೇದಾರನಾಥದಲ್ಲಿ ಹೆಲಿಕಾಪ್ಟರ್‌ ತಾಂತ್ರಿಕ ದೋಷದಿಂದ ಪತನಗೊಂಡು 7 ಮಂದಿ ಸಜೀವವಾಗಿ ದಹನಗೊಂಡಿರುವ ಘಟನೆ ಇಂದು ಮುಂಜಾನೆ ಸಂಭವಿಸಿದೆ.
ಘಟನೆಯಲ್ಲಿ ಓರ್ವ ಮಗು, ಪೈಲೆಟ್‌ ಸೇರಿದಂತೆ ಹೆಲಿಕಾಪ್ಟರ್‌ ನಲ್ಲಿದ್ದ ಎಲ್ಲಾ 7 ಮಂದಿ ಪ್ರಯಾಣಿಕರು ಸುಟ್ಟು ಕರಕಲಾಗಿದ್ದಾರೆ. ಆರ್ಯನ್‌ ಏವಿಯೇಷನ್‌ ಹೆಲಿಕಾಪ್ಟರ್‌ ಬೆಳಿಗ್ಗೆ 5 ಗಂಟೆ ಸುಮಾರಿಗೆ ಕೇದಾರನಾಥ ಹೆಲಿಪ್ಯಾಡ್ನಿಂದ ಹೊರಟಿದ್ದ ವೇಳೆ ಅಧಿಕಾರಿಗಳಿಗೆ ಸಿಗ್ನಲ್‌ ತಪ್ಪಿದ ನಂತರ ಕಾಣೆಯಾಗಿ ಈ ದುರ್ಘಟನೆ ನಡೆದಿದೆ.

ಸಾವನ್ನಪ್ಪಿದವರನ್ನು ಕ್ಯಾಪ್ಟನ್‌ ರಾಜವೀರ್‌ ಸಿಂಗ್‌ ಚೌಹಾನ್‌ (ಪೈಲಟ್‌‍), ಮಹಾರಾಷ್ಟ್ರದ ನಿವಾಸಿಗಳಾದ ರಾಜಕುಮಾರ್‌ ಸುರೇಶ್‌ ಜೈಸ್ವಾಲ್‌ (41), ಶ್ರದ್ಧಾ ರಾಜಕುಮಾರ್‌ ಜೈಸ್ವಾಲ್‌ (35), ಕಾಶಿ (23 ತಿಂಗಳು), ರುದ್ರಪ್ರಯಾಗ ನಿವಾಸಿ ವಿಕ್ರಮ್‌ (46), ಉತ್ತರಪ್ರದೇಶದ ಬಿಜ್ನೋರ್‌ ನಿವಾಸಿಗಳಾದ ವಿನೋದ್‌ ದೇವ್‌ (66) ಮತ್ತು ತುಸ್ತಿ ಸಿಂಗ್‌ (29) ಎಂದು ಗುರುತಿಸಲಾಗಿದೆ. ಈ ದುರಂತ ಹವಾಮಾನ ವೈಪರೀತ್ಯದದಿಂದ ಸಂಭವಿಸಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ರುದ್ರಪ್ರಯಾಗ್‌ ಜಿಲ್ಲೆಯಲ್ಲಿ ಬೆಳಗಿನ ಜಾವ ಈ ಘಟನೆ ಸಂಭವಿಸಿದ್ದು, ಹೆಲಿಕಾಪ್ಟರ್‌ ಹೊತ್ತಿ ಉರಿದಿದೆ. ಹೆಲಿಕ್ಯಾಪ್ಟರ್‌ ದುರಂತದಲ್ಲಿ ಯಾರೊಬ್ಬರೂ ಬದುಕುಳಿದಿಲ್ಲ. ಪೈಲಟ್‌ ಚೌಹನ್‌, ಒಂದು ಮಗು ಸೇರಿ 6 ಮಂದಿ ಮೃತಪಟ್ಟಿದ್ದಾರೆ. ಕೇದಾರನಾಥ್‌ ದೇವಸ್ಥಾನ ಸಮಿತಿಯ ಸದಸ್ಯರೊಬ್ಬರೂ ಸಹ ಇದೇ ಹೆಲಿಕಾಪ್ಟರ್‌ನಲ್ಲಿದ್ದರು. ಈ ಹೆಲಿಕಾಪ್ಟರ್‌ ಆರ್ಯನ್‌ ಕಂಪನಿಗೆ ಸೇರಿದೆ ಎಂದು ತಿಳಿಸಿದ್ದಾರೆ.

ಕೇದಾರನಾಥದಿಂದ ಗುಪ್ತಕಾಶಿಗೆ ಆರು ಜನರನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್‌ ಮುಂಜಾನೆ ರುದ್ರಪ್ರಯಾಗ ಜಿಲ್ಲೆಯ ಗೌರಿಕುಂಡ್‌ ಅರಣ್ಯದ ಬಳಿ ಪತನಗೊಂಡು ಏಳು ಜನರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಇನ್‌ಸ್ಪೆಕ್ಟರ್‌ ಅನಿರುದ್ಧ್‌ ಭಂಡಾರಿ ತಿಳಿಸಿದ್ದಾರೆ. ರುದ್ರಪ್ರಯಾಗದಲ್ಲಿ ಹೆಲಿಕಾಪ್ಟರ್‌ ಸೇವೆಯ ನೋಡಲ್‌ ಅಧಿಕಾರಿಯೂ ಆಗಿರುವ ಜಿಲ್ಲಾ ಪ್ರವಾಸೋದ್ಯಮ ಅಧಿಕಾರಿ ರಾಹುಲ್‌ ಚೌಬೆ, ಇಂದು ಬೆಳಿಗ್ಗೆ ಹೆಲಿಕಾಪ್ಟರ್‌ ಕಾಣೆಯಾಗಿರುವ ಬಗ್ಗೆ ನಮಗೆ ಮಾಹಿತಿ ಸಿಕ್ಕಿತು. ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಆರ್ಯನ್‌ ಏವಿಯೇಷನ್‌ಗೆ ಸೇರಿದ ಹೆಲಿಕಾಪ್ಟರ್‌ ಕೇದಾರನಾಥ ಧಾಮದಿಂದ ಗುಪ್‌್ತ ಕಾಶಿಯಲ್ಲಿರುವ ತನ್ನ ಸ್ಥಳಕ್ಕೆ ಹಿಂತಿರುಗುತ್ತಿದ್ದಾಗ ಕಣಿವೆಯಲ್ಲಿ ಹಠಾತ್‌ ಪ್ರತಿಕೂಲ ಹವಾಮಾನ ಪರಿಸ್ಥಿತಿ ಎದುರಾಗಿತ್ತು. ಪೈಲಟ್‌ ಹೆಲಿಕಾಪ್ಟರ್‌ ಅನ್ನು ಕಣಿವೆಯಿಂದ ಹೊರಗೆ ಕರೆದೊಯ್ಯಲು ಪ್ರಯತ್ನಿಸಿದರು; ಆದಾಗ್ಯೂ, ಪ್ರಯತ್ನದ ಸಮಯದಲ್ಲಿ ವಿಮಾನ ಅಪಘಾತಕ್ಕೀಡಾಯಿತು ಎಂದು ಮಾಹಿತಿ ನೀಡಿದ್ದಾರೆ.

ವಿಮಾನದಲ್ಲಿ ಪೈಲಟ್‌‍, ಐದು ಪ್ರಯಾಣಿಕರು ಮತ್ತು ಒಂದು ಮಗು ಸೇರಿದಂತೆ ಏಳು ಜನರಿದ್ದರು. ಗೌರಿಕುಂಡ್‌ ಅರಣ್ಯದ ಬಳಿ ಹೊಗೆ ಹೊರಬರುತ್ತಿರುವುದನ್ನು ಸ್ಥಳೀಯರು ನೋಡಿದ ನಂತರ, ಸಿಗ್ನಲ್‌ ಕಳೆದುಕೊಂಡಿದ್ದ ಹೆಲಿಕಾಪ್ಟರ್‌ ಅಪಘಾತಕ್ಕೀಡಾಗಿದೆ ಎಂದು ನಮಗೆ ತಿಳಿಯಿತು ಎಂದಿದ್ದಾರೆ. ಚಾರ್‌ ಧಾಮ್‌ ಮಾರ್ಗದಲ್ಲಿ 40 ದಿನಗಳಿಗಿಂತ ಕಡಿಮೆ ಅವಧಿಯಲ್ಲಿ ನಡೆದ ಐದನೇ ಹೆಲಿಕಾಪ್ಟರ್‌ ಅಪಘಾತ ಇದಾಗಿದೆ.ಜೂನ್‌ 7 ರಂದು ರುದ್ರಪ್ರಯಾಗ ಜಿಲ್ಲೆಯ ಬರಾಸು ಬಳಿ ಗುಪ್‌್ತ ಕಾಶಿ-ಗೌರಿಕುಂಡ್‌ ಹೆದ್ದಾರಿಯಲ್ಲಿ ಐದು ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್‌ ಅಪಘಾತಕ್ಕೀಡಾದ ಕೆಲವು ದಿನಗಳ ನಂತರ ಈ ಘಟನೆ ನಡೆದಿತ್ತು.

ಸಿ. ಎಂ ಸಂತಾಪ :
ಕೇದಾರನಾಥ ಹೆಲಿಕಾಪ್ಟರ್‌ ಅಪಘಾತದ ಬಗ್ಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ , ರುದ್ರಪ್ರಯಾಗ ಜಿಲ್ಲೆಯಲ್ಲಿ ಹೆಲಿಕಾಪ್ಟರ್‌ ಅಪಘಾತದ ಬಗ್ಗೆ ತುಂಬಾ ದುಃಖಕರ ಸುದ್ದಿ ಬಂದಿದೆ. ಎಸ್‌‍ಡಿಆರ್‌ಎಫ್‌, ಸ್ಥಳೀಯ ಆಡಳಿತ ಮತ್ತು ಇತರ ರಕ್ಷಣಾ ತಂಡಗಳು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಎಲ್ಲಾ ಪ್ರಯಾಣಿಕರ ಸುರಕ್ಷತೆಗಾಗಿ ನಾನು ಬಾಬಾ ಕೇದಾರನನ್ನು ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ. ಏರ್‌ ಇಂಡಿಯಾ ವಿಮಾನವು ಟೇಕ್‌ ಆಫ್‌ ಆದ ಕೆಲವೇ ದಿನಗಳಲ್ಲಿ ಅಹಮದಾಬಾದ್‌ ವೈದ್ಯಕೀಯ ಹಾಸ್ಟೆಲ್‌ ಮೇಲೆ ಪತನಗೊಂಡು 270 ಜನರು ಸಾವನ್ನಪ್ಪಿದ ಕೆಲವೇ ದಿನಗಳ ನಂತರ ಈ ಘಟನೆ ನಡೆದಿರುವುದು ಜನರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ.

ಗುರುವಾರ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರಿದ ಕೆಲವೇ ಕ್ಷಣಗಳಲ್ಲಿ ವಿಮಾನ ಪತನಗೊಂಡು, ಮೇಘನಿನಗರ ಪ್ರದೇಶದ ಸರ್ಕಾರಿ ಸ್ವಾಮ್ಯದ ಬಿಜೆ ವೈದ್ಯಕೀಯ ಕಾಲೇಜಿನ ಹತ್ತಿರದ ಕ್ಯಾಂಪಸ್‌‍ ಒಳಗೆ ಬಿದ್ದು ಬೆಂಕಿಗೆ ಆಹುತಿಯಾದಾಗ, ಬೋಯಿಂಗ್‌ 787-8 (ಂಐ171) ವಿಮಾನದಲ್ಲಿದ್ದ 242 ಪ್ರಯಾಣಿಕರು ಮತ್ತು ಸಿಬ್ಬಂದಿಗಳಲ್ಲಿ ಒಬ್ಬರನ್ನು ಹೊರತುಪಡಿಸಿ ಉಳಿದವರೆಲ್ಲರೂ ಮತ್ತು ಐದು ಎಂಬಿಬಿಎಸ್‌‍ ವಿದ್ಯಾರ್ಥಿಗಳು ಸೇರಿದಂತೆ ನೆಲದ ಮೇಲಿದ್ದ 29 ಜನರು ಸಾವನ್ನಪ್ಪಿದ್ದರು.

RELATED ARTICLES

Latest News