ಗುಬ್ಬಿ,ಮೇ 31- ಕಲ್ಪತರು ನಾಡಿನಲ್ಲಿ ಹೇಮಾವತಿ ಎಕ್್ಸಪ್ರೆಸ್ ಲಿಂಕ್ ಕೆನಾಲ್ ವಿವಾದ ಭುಗಿಲೆದ್ದಿದ್ದು, ರಾಮನಗರಕ್ಕೆ ನೀರು ಹರಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಸಾವಿರಾರು ಸಂಖ್ಯೆ ಯಲ್ಲಿ ಜಮಾಯಿಸಿದ ರೈತರು, ರೈತ ಸಂಘದ ಮುಖಂಡರು, ಜನಪ್ರತಿನಿಧಿಗಳು, ವಿವಿಧ ಮಠದ ಮಠಾಧೀಶರು ರಸ್ತೆಗಿಳಿದು ಪ್ರತಿಭಟನೆ ನಡೆಸಿ ತಮ ಆಕ್ರೋಶ ಹೊರಹಾಕಿದ್ದಾರೆ.
ಹೇಮಾವತಿ ಎಕ್್ಸಪ್ರೆಸ್ ಲಿಂಕ್ ಕೆನಾಲ್ ಮೂಲಕ ತುಮಕೂರು ಜಿಲ್ಲೆಯ ನೀರನ್ನು ರಾಮನಗರಕ್ಕೆ ಕೊಂಡೊಯ್ಯುವ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿ 144 ಸೆಕ್ಷನ್ ನಿಷೇಧಾಜ್ಞೆ ನಡುವೆಯೂ ಗುಬ್ಬಿ ಬಳಿ ಶಿವಮೊಗ್ಗ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಸುರೇಶ್ಗೌಡ ಮಾತನಾಡಿ, ರಾಜ್ಯಸರ್ಕಾರ ಸತ್ತು ಹೋಗಿದೆ. ಪೊಲೀಸರನ್ನು ಬಳಸಿಕೊಂಡು ನಮನ್ನು ಅರೆಸ್ಟ್ ಮಾಡುವುದಕ್ಕೆ ಬಂದಿದ್ದಾರೆ. ನಮ ಹೆಣದ ಮೇಲೆ ನೀರನ್ನು ತೆಗೆದುಕೊಂಡು ಹೋಗಿರಿ. ಯಾವುದಕ್ಕೂ ನಾವು ಜಗ್ಗುವುದಿಲ್ಲ, ಕುಗ್ಗುವುದಿಲ್ಲ. ರಕ್ತ ಕೊಟ್ಟೇವು, ನೀರು ಕೊಡುವುದಿಲ್ಲ ಎಂಬ ಘೋಷವಾಕ್ಯದೊಂದಿಗೆ ನಮ ಜಿಲ್ಲೆಯ ನೀರನ್ನು ರಾಮನಗರಕ್ಕೆ ಕೊಂಡೊಯ್ಯಲು ಬಿಡುವುದಿಲ್ಲ. ಒಂದು ವೇಳೆ ನಮ ಪ್ರತಿಭಟನೆಗೆ, ಹೋರಾಟಕ್ಕೆ ಜಗ್ಗದೆ ಕಾಮಗಾರಿ ಮುಂದುವರೆಸಿದರೆ ಇನ್ನೂ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುತ್ತೇವೆ, ಪ್ರಾಣ ಕೊಡುತ್ತೇವೆಯೇ ಹೊರತು ರಾಮನಗರಕ್ಕೆ ನೀರು ಬಿಡುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಶಾಸಕ ಜ್ಯೋತಿ ಗಣೇಶ್ ಮಾತನಾಡಿ, ಕುಣಿಗಲ್ಗೆ ಮೀಸಲಿಟ್ಟ ನೀರನ್ನು ತೆಗೆದುಕೊಂಡು ಹೋಗಲಿ, ಅದಕ್ಕೆ ನಾವು ವಿರೋಧ ಮಾಡುವುದಿಲ್ಲ. ಆದರೆ ತುಮಕೂರು ಜಿಲ್ಲೆಯ ನೀರನ್ನು ರಾಮನಗರಕ್ಕೆ ಕೊಂಡೊಯ್ಯುವುದಕ್ಕೆ ಬಿಡುವುದಿಲ್ಲ. ಉಪಮುಖ್ಯಮಂತ್ರಿಗಳೇ, ಜಿಲ್ಲೆಯ ರೈತರಿಗೆ ವಿಷ ಕೊಟ್ಟು, ರಾಮನಗರಕ್ಕೆ ನೀರು ತೆಗೆದುಕೊಂಡು ಹೋಗಿ. ಕೂಡಲೇ ಮುಖ್ಯಮಂತ್ರಿಗಳು ಶಾಸಕರ ಸಭೆ ಕರೆದು ಕೂಡಲೇ ಈ ಯೋಜನೆಯ ಕಾಮಗಾರಿಯನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಹೋರಾಟ ಮಾಡುತ್ತೇವೆ ಎಂದರು.
ತುಮಕೂರು ಜಿಲ್ಲೆಗೆ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕಾಮಗಾರಿ ಮರಣ ಶಾಸನವಾಗಿದ್ದು, ಇದರಿಂದ ಜಿಲ್ಲೆಯ ಲಕ್ಷಾಂತರ ರೈತರಿಗೆ ಅನ್ಯಾಯವಾಗಲಿದೆ. ರೈತರಿಗೆ ಮೋಸ ಮಾಡಿ ಮಾಗಡಿ ಹಾಗೂ ರಾಮನಗರಕ್ಕೆ ನೀರು ತೆಗೆದುಕೊಂಡು ಹೋಗಲು ಉಪಮುಖ್ಯಮಂತ್ರಿಗಳು ಹುನ್ನಾರ ಮಾಡುತ್ತಿದ್ದಾರೆ. ನಮ ಜಿಲ್ಲೆಯ ನೀರನ್ನು ನಾವು ಬಿಡುವುದಿಲ್ಲ. ಎಲ್ಲದಕ್ಕೂ ಸಿದ್ಧರಾಗಿದ್ದೇವೆ ಎಂದು ಹೇಳಿದರು.
ಗುಬ್ಬಿ, ನಿಟ್ಟೂರು, ಕೆ.ಬಿ.ಕ್ರಾಸ್, ಚೇಳೂರು
ಎಂ.ಎನ್.ಕೋಟೆ, ನಾಗೇನಹಳ್ಳಿ, ಮುದ್ದೆಹೊಸೂರು, ಮದನ್ಘಟ್ಟ, ಮಲ್ಲಸಂದ್ರ, ದೊಡ್ಡಗುಣಿ ಸೇರಿದಂತೆ ವಿವಿಧ ಹೋಬಳಿ ಹಾಗೂ ತಾಲ್ಲೂಕು ಮಟ್ಟದಿಂದ ಬಿಜೆಪಿ ಹಾಗೂ ಜೆಡಿಎಸ್ನ ಕಾರ್ಯಕರ್ತರು, ಮುಖಂಡರು, ರೈತರು, ಜನಪ್ರತಿನಿಧಿಗಳು ಹಾಗೂ ಸ್ವಾಮೀಜಿಗಳು ರಸ್ತೆ ತಡೆದು ಟೈರ್ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಕರೆದೊಯ್ಯಲು ತಂದಿದ್ದ ಸಾರಿಗೆ ಬಸ್ಗಳ ಚಕ್ರಗಳ ಗಾಳಿ ತೆಗೆದಿದ್ದಲ್ಲದೆ ಬಸ್ ಅನ್ನು ಮಗುಚಿ ಹಾಕಲು ಯತ್ನಿಸಿದ್ದಾರೆ. ಅಷ್ಟೇ ಅಲ್ಲದೆ ಶಿವಮೊಗ್ಗ-ಬೆಂಗಳೂರು ಹೆದ್ದಾರಿಯಲ್ಲಿ ಕಿಲೋಮೀಟರ್ಗಟ್ಟಲೆ ಸಾಗರದಂತೆ ಪಾದಯಾತ್ರೆ ಮೂಲಕ ನಾಲೆಯತ್ತ ಹೊರಟಿದ್ದ ಪ್ರತಿಭಟನಾಕರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ನಂತರ ಪ್ರತಿಭಟನಾನಿರತರನ್ನು ವಶಕ್ಕೆ ಪಡೆಯಲಾಯಿತು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಬಸವರಾಜು, ರೇಣುಕಪ್ಪ, ಚಂದ್ರಪ್ಪ, ಲೋಕೇಶ್, ದಿಲೀಪ್ಕುಮಾರ್, ಚಂದ್ರಶೇಖರ ಬಾಬು, ಪ್ರಕಾಶ್, ಹೆಬ್ಬಾಕ ರವಿ, ಬೆಟ್ಟಸ್ವಾಮಿ ಸೇರಿದಂತೆ ಹಲವಾರು ಮುಖಂಡರು ಪಾಲ್ಗೊಂಡಿದ್ದರು.