Sunday, April 28, 2024
Homeರಾಜ್ಯಮಹಿಳೆಯ ವಿವಸ್ತ್ರ ಪ್ರಕರಣ: ಮೂಕಪ್ರೇಕ್ಷಕರಾದ ಗ್ರಾಮಸ್ಥರಿಗೆ ಹೈಕೋರ್ಟ್ ದಂಡ

ಮಹಿಳೆಯ ವಿವಸ್ತ್ರ ಪ್ರಕರಣ: ಮೂಕಪ್ರೇಕ್ಷಕರಾದ ಗ್ರಾಮಸ್ಥರಿಗೆ ಹೈಕೋರ್ಟ್ ದಂಡ

ಬೆಂಗಳೂರು,ಡಿ.18- ಮಹಿಳೆಯನ್ನು ವಿವಸ್ತ್ರಗೊಳಿಸುವ ಸಂದರ್ಭದಲ್ಲಿ ಸಹಾಯಕ್ಕೆ ಬಾರದೆ ಮೂಕ ಪ್ರೇಕ್ಷಕರಾಗಿ ನಿಂತಿದ್ದ ಗ್ರಾಮಸ್ಥರಿಗೆ ಶಿಕ್ಷೆಯಾಗುವಂತಹ ಅಥವಾ ದಂಡ ವಿಧಿಸಬಹುದಾದ ಯೋಜನೆಯನ್ನು ರೂಪಿಸಿ, ಸಂತ್ರಸ್ತೆಗೆ ಪರಿಹಾರ ನೀಡುವಂತೆ ರಾಜ್ಯ ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.

ಬೆಳಗಾವಿಯ ವಂಟಮೂರಿ ಗ್ರಾಮದಲ್ಲಿ ನಡೆದ ಮಹಿಳೆ ವಿವಸ್ತ್ರ ಪ್ರಕರಣ ಸಂಬಂಧ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಗ್ರಾಮದ ಸಾರ್ವಜನಿಕರ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಅರ್ಜಿ ವಿಚಾರಣೆಯನ್ನು ಕೆಗೆತ್ತಿಕೊಂಡ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಗಳಾದ ಪ್ರಸನ್ನ.ಬಿ ವರಾಳೆ ಹಾಗೂ ಕೃಷ್ಣ ದೀಕ್ಷಿತ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ, ಬ್ರಿಟಿಷರ ಕಾಲದಲ್ಲಿದ್ದ ಪುಂಡ ಕಂದಾಯ ತೆರಿಗೆಯನ್ನು ಹಾಕಿ ಸಾರ್ವಜನಿಕರಿಂದ ದಂಡ ವಸೂಲಿ ಮಾಡುವಂತೆ ಸೂಚನೆ ಕೊಟ್ಟಿದೆ.

ಬ್ರಿಟಿಷ್ ಆಡಳಿತದಲ್ಲಿ ವಿಲಿಯಂ ಬೆಂಟಿಂಕ್ ಎಂಬುವರು ಕಳ್ಳತನ ಮಾಡುವವರಿದ್ದ ಗ್ರಾಮಕ್ಕೆ ವಿಭಿನ್ನ ರೀತಿಯ ತೆರಿಗೆಯನ್ನು ವಿಧಿಸುತ್ತಿದ್ದರು. ಅದೇ ರೀತಿಯಲ್ಲಿ ಈಗ ತೆರಿಗೆಯನ್ನು ವಿಧಿಸಿದಲ್ಲಿ ಗ್ರಾಮಗಳಲ್ಲಿ ಜನರಿಗೆ ಸ್ವಲ್ಪ ಜವಾಬ್ದಾರಿ ಹೆಚ್ಚಾಗಲಿದೆ. ಇಂತಹ ಘಟನೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಜನರು ಮೌನವಾಗಿದ್ದರೆ ನಾಗರಿಕ ಸಮಾಜಕ್ಕೆ ಏನು ಸಂದೇಶ ಹೋಗುತ್ತದೆ ಎಂದು ಪ್ರಶ್ನೆ ಮಾಡಿದರು.

ಸ್ವಾರ್ಥದ ಪರ ಹೇಡಿತನ ತೋರಿರುವ ಜನರಿಗೆ ಸಮುದಾಯಿಕ ಹೊಣೆಗಾರಿಕೆ ಏನೆಂಬುದು ತಿಳಿಯಬೇಕು. ಮಹಿಳೆಯನ್ನು ಕಂಡು ಮೂಕ ಪ್ರೇಕ್ಷಕರಾಗಿದ್ದರಿಂದಲೇ ಇದನ್ನು ಸಹಿಸಿಕೊಳ್ಳುವುದಾದರೂ ಹೇಗೆ? ಹೀಗಾಗಿ ಬ್ರಿಟಿಷ್ ಅಧಿಕಾರಿ ವಿಲಿಯಮ್ ಬೆಂಟೆಕ್ ಅವರ ಕಾಲದಲ್ಲಿದ್ದ ಪುಂಡ ಕಂದಾಯವನ್ನು ಹಾಕಿ ಗ್ರಾಮದಲ್ಲಿರುವ ಪ್ರತಿಯೊಬ್ಬರಿಂದ ದಂಡ ವಸೂಲಿ ಮಾಡಬೇಕೆಂದು ಸೂಚನೆ ಕೊಟ್ಟಿತು.

ಕಾಂಗ್ರೆಸ್ ಆಡಳಿತದಲ್ಲಿ ಬೆಂಗಳೂರು ಉಗ್ರರ ಸ್ಲೀಪರ್‌ಸೆಲ್ ಆಗಿದೆ : ಯತ್ನಾಳ್

ಓರ್ವ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸುತ್ತಿದ್ದ ವೇಳೆ ಸಹಾಯಕ್ಕೆ ಬಾರದೆ ಮೂಕ ಪ್ರೇಕ್ಷಕರಾಗಿದ್ದ ಗ್ರಾಮಸ್ಥರ ವರ್ತನೆ ನಿಜಕ್ಕೂ ಖಂಡನೀಯ. ಭವಿಷ್ಯದಲ್ಲಿ ಇಂತಹ ಘಟನೆಗಳು ಸಂಭವಿಸಬಾರದೆಂದರೆ ನಾಗರಿಕ ಸಮಾಜಕ್ಕೆ ಸಂದೇಶ ರವಾನೆಯಾಗಬೇಕು. ಹೀಗಾಗಿಯೇ ದಂಡ ವಸೂಲಿಗೆ ಆದೇಶ ನೀಡುತ್ತಿದ್ದೇವೆ ಎಂದು ನ್ಯಾಯಮೂರ್ತಿಗಳು ಹೇಳಿದರು.

ಸರ್ಕಾರದ ಪರವಾಗಿ ಹಾಜರಾದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ಘಟನೆ ನಡೆಯುವ ವೇಳೆ ಸಂತ್ರಸ್ತ ಮಹಿಳೆಗೆ ಜಹಾಂಗೀರ್ ಎಂಬುವರು ಸಹಾಯ ಮಾಡಿದ್ದಾರೆ. ಘಟನೆ ನಡೆದ ವೇಳೆ ಸುಮಾರು 60ರಿಂದ 70 ಮಂದಿ ಸ್ಥಳದಲ್ಲಿದ್ದರು. ಯಾರೊಬ್ಬರೂ ಸಹಾಯಕ್ಕೆ ಹೋಗಲಿಲ್ಲ. ಗ್ರಾಮ ಪಂಚಾಯ್ತಿ ಸೇರಿದಂತೆ ಯಾರೊಬ್ಬರೂ ಸಹಾಯ ಮಾಡಿಲ್ಲ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತಂದರು.

ಈಗಾಗಲೇ ಮಹಿಳೆಗೆ ಕೌನ್ಸಿಲಿಂಗ್ ನಡೆಸಿ ಉತ್ತಮ ಚಿಕಿತ್ಸೆಯನ್ನು ಕೊಡಿಸಲಾಗಿದೆ. ದಿನದಿಂದ ದಿನಕ್ಕೆ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ. ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸಿಐಡಿಗೆ ವಹಿಸಲಾಗಿದೆ. ಈಗಾಗಲೇ 11 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಸಂತ್ರಸ್ತ ಮಹಿಳೆಗೆ 5 ಲಕ್ಷ ಪರಿಹಾರ ಮತ್ತು ಎರಡು ಎಕರೆ ಜಮೀನನ್ನು ಪರಿಹಾರ ರೂಪದಲ್ಲಿ ನೀಡಿದ್ದೇವೆ ಎಂದು ಹೇಳಿದರು.

ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಪೊಲೀಸ್ ಅಧಿಕಾರಿ ಸೇರಿದಂತೆ ಹಲವರನ್ನು ಅಮಾನತುಪಡಿಸಲಾಗಿದೆ. ಗ್ರಾಮಪಂಚಾಯ್ತಿ ಸದಸ್ಯರು ಮತ್ತು ಇತರರು ತಕ್ಷಣವೇ ಮಧ್ಯಪ್ರವೇಶ ಮಾಡಿದ್ದರೆ ಪ್ರಕರಣ ನಡೆಯುತ್ತಿರಲಿಲ್ಲ ಎಂದು ಪೀಠಕ್ಕೆ ತಿಳಿಸಿದರು. ಈ ಪ್ರಕರಣದಲ್ಲಿ ರಾಜಕೀಯವೇನೂ ಕಂಡುಬರುತ್ತಿಲ್ಲ. ಸಂತ್ರಸ್ತ ಮಹಿಳೆಗೆ ನ್ಯಾಯ ಸಿಗ್ಬೇಕು ಎಂಬುದೇ ಎಲ್ಲರ ಆಶಯವಾಗಿದೆ ಎಂದು ಪೀಠ ಅಭಿಪ್ರಾಯ ವ್ಯಕ್ತಪಡಿಸಿ ಮುಂದಿನ ಅರ್ಜಿ ವಿಚಾರಣೆಯನ್ನು ಜನವರಿ 3ನೇ ವಾರಕ್ಕೆ ಮುಂದೂಡಿತು.

ಈ ಹಿಂದೆ ನಡೆದ ವಿಚಾರಣೆ ವೇಳೆ, ಮಹಾಭಾರತದಲ್ಲಿ ವಸ್ತ್ರಾಪಹರಣದ ವೇಳೆ ದ್ರೌಪದಿಯ ರಕ್ಷಣೆಗೆ ಪರಮಾತ್ಮ ಶ್ರೀಕೃಷ್ಣ ಧಾವಿಸಿದಂತೆ, ಈಗಿನ ಕಾಲದಲ್ಲಿ ಯಾರೂ ಕೂಡ ಬರುತ್ತಿಲ್ಲ ಎಂದು ಕೋರ್ಟ್ ಕಳವಳ ವ್ಯಕ್ತಪಡಿಸಿತ್ತು. ಇಂದಿನ ಜಗತ್ತಿನಲ್ಲಿ ದುರ್ಯೋಧನರು ಅಥವಾ ದುಶ್ಯಾಸನರು ಬಂದರೆ ಯಾವ ಕೃಷ್ಣನೂ ಸಹಾಯಕ್ಕೆ ಬರುವುದಿಲ್ಲ ಎಂದು ಹೇಳಿದ್ದ ವಿಭಾಗೀಯ ಪೀಠ, ತನಿಖೆಯ ವಿವರಗಳಿಗೆ ಅತೃಪ್ತಿ ವ್ಯಕ್ತಪಡಿಸಿ ಹೆಚ್ಚುವರಿ ಸ್ಥಿತಿ ವರದಿಯನ್ನು ಕೋರಿತ್ತು.

ಸಂಸತ್‍ನಲ್ಲಿ ಭದ್ರತಾ ಲೋಪ ಪ್ರಕರಣದ ತನಿಖೆ ಚುರುಕು

ಏನಿದು ಪ್ರಕರಣ?:
ಪ್ರೀತಿಸುತ್ತಿದ್ದ ಜೋಡಿಯೊಂದು ಓಡಿ ಹೋಗಿತ್ತು. ಇದರಿಂದ ಆಕ್ರೋಶಗೊಂಡಿದ್ದ ಯುವತಿಯ ಕುಟುಂಬುಸ್ಥರು ವಂಟಮೂರಿ ಗ್ರಾಮದಲ್ಲಿ ಯುವಕನ ತಾಯಿಯನ್ನು ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ್ದರು. ತಡವಾಗಿ ಸ್ಥಳಕ್ಕೆ ಆಗಮಿಸಿದ್ದ ಪಿಎಸ್‍ಐ ಅಮಾನತುಗೊಂಡಿದ್ದಾರೆ. ಪ್ರಕರಣ ಸಂಬಂಧ 11 ಆರೋಪಿಗಳನ್ನು ಕಾಕತಿ ಪೊಲೀಸರು ಬಂಧಿಸಿದ್ದಾರೆ.

ಈ ನಡುವೆ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸುವಂತೆ ಒತ್ತಾಯಗಳು ಕೇಳಿಬಂದವು. ತನಿಖೆಯನ್ನು ಎಲ್ಲಿಗೆ ಬೇಕಾದರೂ ವಹಿಸಲು ತಯಾರಾಗಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಅದರಂತೆ ರಾಜ್ಯ ಸರ್ಕಾರವು ಭಾನುವಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಿ ಆದೇಶಿಸಿದೆ.

RELATED ARTICLES

Latest News