Thursday, June 5, 2025
HomeಮನರಂಜನೆBREAKING : ಕರ್ನಾಟಕದಲ್ಲಿ ಕಮಲ್ ಹಾಸನ್ 'ಥಗ್ ಲೈಫ್' ಚಿತ್ರ ಬಿಡುಗಡೆ ಹೈಕೋರ್ಟ್ ತಡೆ

BREAKING : ಕರ್ನಾಟಕದಲ್ಲಿ ಕಮಲ್ ಹಾಸನ್ ‘ಥಗ್ ಲೈಫ್’ ಚಿತ್ರ ಬಿಡುಗಡೆ ಹೈಕೋರ್ಟ್ ತಡೆ

High Court stays release of Kamal Haasan's 'Thug Life' in Karnataka

ಬೆಂಗಳೂರು, ಜೂ.3 ಕರ್ನಾಟಕ ಮತ್ತು ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಹಿನ್ನಲೆಯಲ್ಲಿ ಬಹುನಿರೀಕ್ಷಿತ ತಮಿಳುನಟ ಕಮಲ್ ಹಾಸನ್ ಅಭಿನಯದ ಥಗ್ ಲೈಫ್ ಚಿತ್ರ ಬಿಡುಗಡೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಮುಂದಿನ ಅರ್ಜಿ ವಿಚಾರಣೆ ಜೂ.10ರಂದು ನಡೆಯಲಿದ್ದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಕಮಲ್ ಹಾಸನ್ ನಡುವೆ ಸಮಸ್ಯೆ ಇತ್ಯರ್ಥವಾಗುವರೆಗೂ ಚಿತ್ರ ಬಿಡುಗಡೆಗೆ ತಡೆಯಾಜ್ಞೆ ನೀಡಿ ಹೈಕೋರ್ಟ್ ಏಕಸದಸ್ಯ ಪೀಠದ ನಾಗಮೂರ್ತಿ ಎಚ್.ನಾಗಪ್ರಸನ್ನ ಅವರು ಆದೇಶ ನೀಡಿದರು.

ನಟ ಕಮಲ್ ಹಾಸನ್‌ಗೆ ಹಿಗ್ಗಾಮುಗ್ಗಾ ಜಾಡಿಸಿದ ಹೈಕೋರ್ಟ್‌

ಇದರಿಂದ ಇದೇ 5ರಂದು ದೇಶ ಮತ್ತು ವಿದೇಶಗಳಲ್ಲಿ ಬಿಡುಗಡೆಗೆ ಸಿದ್ದಗೊಂಡಿರುವ ಕಮಲ್ ಹಾಸನ್ ನಟನೆಯ ಥಗ್ ಲೈಫ್ ಚಿತ್ರ ಕರ್ನಾಟಕದಲ್ಲಿ ಬಿಡುಗಡೆಯಾಗುತ್ತಿಲ್ಲ, ಕ್ಷಮೆ ಕೇಳಿದ್ದರೆ ಅರ್ಜಿ ವಿಚಾರಣೆ ನಡೆಸಬಹುದಿತ್ತು. ಆದರೆ ಅವರಿಗೆ(ಕಮಲ್ ಹಾಸನ್) ಅಹಂ ಅಡ್ಡಿಯಾಗುತ್ತಿರಬಹುದು. ವಾಣಿಜ್ಯ ಮಂಡಳಿಯವರು ಕ್ಷಮೆ ಕೇಳಬೇಕೆಂದು ಕೋರಿದ್ದಾರೆ. ಆದರೆ ಕಮಲ್ ಹಾಸನ್ ಕ್ಷಮೆ ಕೇಳುವುದಿಲ್ಲ ಎನ್ನುತ್ತಾರೆ. ಒಂದು ವಾರದಲ್ಲಿ ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಳ್ಳಬೇಕು. ಅಲ್ಲಿಯವರೆಗೂ ಚಿತ್ರ ಬಿಡುಗಡೆ ಬೇಡ ಎಂದು ಅಡೋಕೇಟ್ ಜನರಲ್ಗೆ ನೋಟಿಸ್ ಜಾರಿ ಮಾಡಿ ಜೂ.10ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿತು.

ಈಗಲೂ ನೀವು ವಿವೇಚನೆಯನ್ನು ಬಳಸಿ ಒಂದು ಕ್ಷಮೆ ಕೇಳುವುದರಿಂದ ಸಮಸ್ಯೆ ಇತ್ಯರ್ಥವಾಗುತ್ತದೆ. ವಿಷಮ ಸ್ಥಿತಿಯಲ್ಲಿ ವಿವೇಚನೆ ಮುಖ್ಯ. ನೀವು ಮೊಂಡುತನ ಮಾಡಿದರೆ ಸಮಸ್ಯೆ ಮತ್ತಷ್ಟು ಬೆಳೆಯುತ್ತದೆ. ನಿಮ್ಮ ಕಕ್ಷಿದಾರರಿಗೆ ಈಗಲೂ ಕಾಲ ಮಿಂಚಿಲ್ಲ. ಸರಿಯಾದ ಬುದ್ದಿ ಹೇಳಿ ಎಂದು ನಾಗಪ್ರಸನ್ನ ಅವರ ಪೀಠ ಕಮಲ್ ಹಾಸನ್ ಪರ ವಕೀಲ ಧ್ಯಾನ್ ಚಿನ್ನಪ್ಪರಿಗೆ ಸೂಚನೆ ನೀಡಿದ್ದಾರೆ.

ಇದಕ್ಕೂ ಮುನ್ನ ಬೆಳಗ್ಗೆ ಅರ್ಜಿ ವಿಚಾರಣೆ ನಡೆಸಿದ್ದ ಪೀಠ, ಕಮಲ್‌ ಹಾಸನ್ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿತ್ತು. ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದಿರುವ ನೀವು ಮೊದಲು ಕ್ಷಮೆ ಕೇಳಬೇಕು. ಭಾಷೆ ಹುಟ್ಟಿದ್ದರೆ ಬಗ್ಗೆ ಮಾತನಾಡುವುದಕ್ಕೆ ಭಾಷಾ ನೀವು ತಜ್ಞರೇ? ಅಥವಾ ಇತಿಹಾಸಕಾರರೇ? ಕ್ಷಮೆಯಾಚಿಸದಿದ್ದರೆ ಕರ್ನಾಟಕದಲ್ಲಿ ಚಿತ್ರ ಪ್ರದರ್ಶನಗೊಳ್ಳಬೇಕೆಂದು ಏಕೆ ಬಯಸುತ್ತೀರಿ? ಮಾಡಿರುವ ತಪ್ಪಿಗೆ ಪೊಲೀಸರ ರಕ್ಷಣೆ ಬೇರೆ ಬೇಕಾ..? ಎಂದು ಪ್ರಶ್ನಿಸಿತು.ತಮಿಳು ಭಾಷೆಯಿಂದ ಕನ್ನಡ ಹುಟ್ಟಿತು ಎಂದು ಹೇಳಲು ನೀವೇನು ಭಾಷಾ ತಜ್ಞರೇ? ಅಥವಾ ಇತಿಹಾಸಗಾರರೇ? ಜನರ ಭಾವನೆಗಳಿಗೆ ಧಕ್ಕೆ ತಂದ ಮೇಲೆ ಕ್ಷಮೆಯಾಚಿಸಬೇಕಲ್ಲವೇ? ಎಂದು ಪ್ರಶ್ನೆ ಮಾಡಿದರು.

ಒಂದೇ ಒಂದೂ ಕ್ಷಮೆ ಕೇಳಲು ಇಷ್ಟೊಂದು ಹಾವಭಾವ ಏಕೆ? ಹಿಂದೆ ರಾಜಗೋಪಾಲಚಾರಿ ತಮ್ಮ ಹೇಳಿಕೆಗೆ ಕ್ಷಮೆ ಕೇಳಿರುವುದು ಗೊತ್ತಿಲ್ಲವೇ? ನಾನು ಇತಿಹಾಸವನ್ನು ನೋಡದೇ ಹೇಳಿಕೆ ನೀಡಿದ್ದೇನೆಂಬ ಕಡೆಪಕ್ಷ ವಿಷಾದದ ಭಾವನೆಯೂ ನಿಮ್ಮಲ್ಲಿ ಇಲ್ಲ, ಈಗ ನೀವು ವಾಣಿಜ್ಯದ ಹಿತಾಸಕ್ತಿಗಾಗಿ ರಕ್ಷಣೆ ಕೋರಿ ಅರ್ಜಿ ಸಲ್ಲಿಸಿದ್ದೀರಿ. ನೀರು, ಭೂಮಿ ಮತ್ತು ಭಾಷೆ ನಾಗರಿಕರಿಗೆ ಮುಖ್ಯವಾದವು. ಇದನ್ನು ಎಲ್ಲರೂ ಗೌರವಿಸಬೇಕೆಂದು ಸಲಹೆ ಮಾಡಿದರು. ಕ್ಷಮೆ ಯಾಚಿಸುವುದಿಲ್ಲ ಎಂದರೆ ಭಾಷೆ ಬಗ್ಗೆ ಮಾತನಾಡಲು ನಿಮಗೆ ಅಧಿಕಾರ ಕೊಟ್ಟವರು ಯಾರು? ಯಾವುದೇ ಒಂದು ಭಾಷೆಯು ಇನ್ನೊಂದು ಭಾಷೆಯಿಂದ ಹುಟ್ಟಲು ಸಾಧ್ಯವಿಲ್ಲ. ಇದನ್ನು ದೃಢೀಕರಿಸಲು ನಿಮ್ಮ ಬಳಿ ಸಾಕ್ಷ್ಯಾಧಾರಗಳಿವೆಯೇ? ಭಾಷಾವಾರು ವಿಂಗಡಣೆ ಆಧಾರದ ಮೇಲೆ ರಾಜ್ಯಗಳು ಉದಯವಾಗಿದ್ದು, ಇದು ನಿಮ್ಮ ನಟನಿಗೆ ಗೊತ್ತಿಲ್ಲವೇ? ಎಂದು ಕಮಲಹಾಸನ್ ಪರ ವಕೀಲ ಧ್ಯಾನ್ ಚಿನ್ನಪ್ಪ ಅವರ ಮೇಲೆಯೂ ನ್ಯಾಯಮೂರ್ತಿಗಳು ಹರಿಹಾಯ್ದರು.

ಈ ಹಿಂದೆ ಸಿ.ರಾಜುಗೋಪಾಲಚಾರಿ ಇದೇ ರೀತಿಯ ಹೇಳಿಕೆ ನೀಡಿದ್ದರು. ತಮ್ಮ ತಪ್ಪಿನ ಅರಿವಾದ ನಂತರ ಕ್ಷಮೆಯಾಚಿಸಿದ್ದರು. ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದಿರುವ ಕಮಲ್ ಹಾಸನ್ ಕ್ಷಮೆಯಾಚನೆ ಮಾಡಿಲ್ಲ. ಬದಲಿಗೆ ನಾನು ಹೇಳಿದ್ದೇ ಸರಿ ಎಂದು ಮೊಂಡು ವಾದ ಮಾಡುತ್ತಿದ್ದಾರೆ. 300 ಕೋಟಿ ರೂ. ವಾಣಿಜ್ಯ ಉದ್ದೇಶದ ಸಿನಿಮಾ ಮಾಡಿದ್ದೀರಿ. ನಿಮ್ಮ ತಪ್ಪಿಗೆ ಪೊಲೀಸರು ಚಿತ್ರ ಪ್ರದರ್ಶನಕ್ಕೆ ಭದ್ರತೆ ನೀಡಬೇಕೆಯೇ ಎಂದು ಛಾಟಿ ಬೀಸಿದರು.

ನಿಮ್ಮ ಹೇಳಿಕೆಯಿಂದ ಕನ್ನಡದ ಖ್ಯಾತ ಚಲನಚಿತ್ರ ನಟ ಶಿವರಾಜ್ ಕುಮಾರ್ ಸಮಸ್ಯೆ ಅನುಭವಿಸುವಂತಾಗಿದೆ. ನಾನು ಕೂಡ ಥಗ್ ಲೈಫ್ ಸಿನಿಮಾ ನೋಡಬೇಕೆಂದಿದ್ದೆ. ಆದರೆ ಈ ವಿವಾದದಿಂದಾಗಿ ಸಿನಿಮಾ ನೋಡುವುದೇ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದೇನೆ ಎಂದು ಅಸಮಾಧಾನದಿಂದ ಹೇಳಿದರು. ನೀವು ನಿಮ್ಮ ಹೇಳಿಕೆಯನ್ನು ನಿರಾಕರಿಸಿಲ್ಲ.

ಒಪ್ಪಿಕೊಂಡಿದ್ದೀರಾ. ಆದರೆ ಕ್ಷಮೆಯಾಚನೆ ಮಾಡಲು ಸಿದ್ಧರಿಲ್ಲ, ಬೇರೆಯವರ ಭಾವನೆಗಳಿಗೆ ಧಕ್ಕೆ ತಂದು ಸಿನಿಮಾ ಮಾಡಲು ಬಯಸುತ್ತೀದ್ದೀರಾ? 300 ಕೋಟಿ ರೂ. ಸಿನಿಮಾ ಎನ್ನುತ್ತಿದ್ದೀರಾ.. ಕ್ಷಮೆ ಯಾಚನೆ ಮಾಡಿ ಎಂದು ಸೂಚಿಸಿದರು.

ಅರ್ಜಿ ವಿಚಾರಣೆ ಕುರಿತು ನಮಗೆ ಆದೇಶ ಹೊರಡಿಸಲು ಯಾವುದೇ ಸಮಸ್ಯೆ ಇಲ್ಲ. ಕ್ಷಮೆ ಕೇಳದಿದ್ದರೆ ಬಿಟ್ಟುಬಿಡಿ. ಆದರೆ ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆ ಏಕೆ ಆಗಬೇಕು? ಹಿಂದೆ ಕಾಳಸಿಂಹ ಸಿನಿಮಾ ಬಂದಾಗಲೂ ಈ ರೀತಿಯ ಸಮಸ್ಯೆ ಎದುರಾಗಿತ್ತು. ತಕ್ಷಣವೇ ರಾಜುಗೋಪಾಲಚಾರಿ ಅವರು ಕ್ಷಮೆಯಾಚಿಸಿದ್ದರು. ಆಗ ಹೈಕೋರ್ಟ್ ಸಿನಿಮಾ ಬಿಡುಗಡೆಗೆ ಭದ್ರತೆ ನೀಡುವಂತೆ ಆದೇಶಿಸಿತ್ತು. ಬೇರೊಬ್ಬರ ಭಾವನೆಗಳಿಗೆ ಧಕ್ಕೆ ತರಲು ನಿಮಗೆ ಅಧಿಕಾರ ಕೊಟ್ಟವರು ಯಾರು? ಎಂದು ಸಿಡಿಮಿಡಿಗೊಂಡರು.

ನೆಲ. ಭಾಷೆ ಬಗ್ಗೆ ಭಾವನೆಗಳಿರುತ್ತವೆ. ಜನರ ಭಾವನೆಗಳಿಗೆ ಯಾರೂ ಧಕ್ಕೆ ಉಂಟು ಮಾಡಬಾರದು. ಜನರು ಕ್ಷಮೆ ಕೇಳುವಂತೆ ಒತ್ತಾಯಿಸುತ್ತಿದ್ದಾರೆ. ಒಂದು ಬಾರಿ ಕ್ಷಮೆ ಕೇಳುವುದರಿಂದ ಅನೇಕ ಸಮಸ್ಯೆಗಳು ಬಗೆಹರಿಯುತ್ತವೆ. ನಿಮಗೆ ಕ್ಷಮೆ ಕೇಳಲು ಸಮಸ್ಯೆಯಾದರೂ ಏನು ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಪ್ರಶ್ನೆ ಮಾಡಿದರು.

ನೀವು ಸಿನಿಮಾ ನಿರ್ಮಾಣಕ್ಕೆ 300 ಕೋಟಿ ಹಾಕಿದ್ದೀರೋ ಅಥವಾ 350 ಕೋಟಿ ಹಾಕಿದ್ದೀರೋ ಅದು ನಿಮಗೆ ಬಿಟ್ಟಿದ್ದು ಜನರ ಭಾವನೆಗಳಿಗೆ ಧಕ್ಕೆ ತಂದು ಹಣ ಸಂಪಾದನೆ ಮಾಡಬೇಕೇ? ಎಲ್ಲವೂ ಸರಾಗವಾಗಿ ನಡೆಯಬೇಕೆಂದರೆ ಕ್ಷಮೆಯನ್ನು ಕೇಳಿ. ಅಭಿವ್ಯಕ್ತಿ ಸ್ವಾತಂತ್ರ ದಿಂದ ಭಾವನೆಗಳಿಗೆ ಧಕ್ಕೆಯಾಗಬಾರದು. ಸಿನಿಮಾ ನೋಡುವುದು ಎಲ್ಲರ ಮೂಲಭೂತ ಹಕ್ಕು.

ನಿಮಗೆ ಭದ್ರತೆ ಬೇಕೆಂದರೆ ನಿಮ್ಮ ಹೇಳಿಕೆಗೆ ಕ್ಷಮೆ ಕೇಳಿ. ನೀವು ಇತಿಹಾಸದ ಬಗ್ಗೆ ದಾಖಲೆ ಸಮೇತ ಹೇಳಿದ್ದರೆ ಅದು ಚರ್ಚೆಯಾಗುತ್ತಿತ್ತು. ಕ್ಷಮೆ ಕೇಳದ ಹೊರತು ನಿಮ್ಮ ಅರ್ಜಿ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳು ಕಟ್ಟುನಿಟ್ಟಾಗಿ ಹೇಳಿದರು. ಈ ವೇಳೆ ಕಮಲ್ ಹಾಸನ್ ಪರ ವಕೀಲ ಧ್ಯಾನ್ ಚಿನ್ನಪ್ಪ ಅವರು, ವಿವಾದವನ್ನು ಆನಗತ್ಯವಾಗಿ ದೊಡ್ಡದೆಂಬಂತೆ ಬಿಂಬಿಸಿದ್ದಾರೆ ಎಂದು ನ್ಯಾಯಾಧೀಶರ ಗಮನಸೆಳೆಯಲು ಮುಂದಾದರು.

ಆಗ ಅರ್ಜಿದಾರರ ಪರ ವಕೀಲರು ಕಮಲ್ ಹಾಸನ್ ಹೇಳಿಕೆ ನೀಡಿರುವುದರ ಕುರಿತು ಆಡಿಯೋ, ವಿಡಿಯೋವನ್ನು ವೀಕ್ಷಣೆ ಮಾಡಬೇಕೆಂದು ನ್ಯಾಯಾಧೀಶರಿಗೆ ಮನವಿ ಮಾಡಿದರು. ಈ ವೇಳೆ ನಾಗಪ್ರಸನ್ನ ಅವರು ಕಮಲ್ ಹಾಸನ್ ಹೇಳಿದ್ದಾರೆ ಎನ್ನಲಾದ ವಿಡಿಯೋವನ್ನು ವೀಕ್ಷಿಸಿ, ಇದು ಜನರ ಭಾವನೆಗಳಿಗೆ ಧಕ್ಕೆ ತಂದಿಲ್ಲವೇ? ಎಂದು ಚಿನ್ನಪ್ಪ ಅವರನ್ನು ಪ್ರಶ್ನಿಸಿದರು.

ಏನಿದು ವಿವಾದ?:
ಕಮಲ್ ಹಾಸನ್ ನಟನೆಯ ಬಹುನಿರೀಕ್ಷಿತ ಥಗ್ ಲೈಫ್ ಆಡಿಯೋ ಬಿಡುಗಡೆ ಸಮಾರಂಭ ಚೆನ್ನೈನಲ್ಲಿ ನಡೆಯಿತು. ಈ ವೇಳೆ ಕಮಲಹಾಸನ್, ಕನ್ನಡವು ತಮಿಳು ಭಾಷೆಯಿಂದ ಹುಟ್ಟಿತು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಈ ಹೇಳಿಕೆ ನಂತರ ಕಮಲ್ ವಿರುದ್ಧ ಕನ್ನಡಿಗರು, ಕನ್ನಡಪರ ಸಂಘಟನೆಗಳು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸೇರಿದಂತೆ ಮತ್ತಿತರರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದಿದ್ದಾರೆ. ಆದರೆ ಮೊಂಡುತನ ಮಾಡುತ್ತಿರುವ ಕಮಲ್ ಹಾಸನ್ ನಾನು ಪ್ರೀತಿಯಿಂದ ಹೇಳಿದ್ದೆ. ತಪ್ಪು ಮಾಡಿಲ್ಲ ಎಂದ ಮೇಲೆ ಕ್ಷಮೆ ಏಕೆ ಕೇಳಬೇಕೆಂದು ವಿತಂಡವಾದ ಮಾಡುತ್ತಿದ್ದಾರೆ.

ಇದೇ 5ರಂದು ಕಮಲ್ ಹಾಸನ್ ನಟನೆಯ ಥಗ್ ಲೈಫ್ ಸಿನಿಮಾ ಬಿಡುಗಡೆಗೆ ದೇಶ, ವಿದೇಶಗಳಲ್ಲಿ ಮುಹೂರ್ತ ನಿಗದಿಯಾಗಿದೆ. ಆದರೆ ಕನ್ನಡ ಭಾಷೆ ಮತ್ತು ಕನ್ನಡಿಗರ ಭಾವನೆಗೆ ಧಕ್ಕೆ ತಂದಿರುವ ಕಾರಣ ಕರ್ನಾಟಕದಲ್ಲಿ ಅವರ ಚಿತ್ರ ಪ್ರದರ್ಶನಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಷೇಧ ಹೇರಿದೆ.

RELATED ARTICLES

Latest News