Friday, May 3, 2024
Homeರಾಜ್ಯಡಿಕೆಶಿ ಪ್ರಕರಣ, ಕಾನೂನಾತ್ಮಕ ನಿರ್ಧಾರ ತೆಗೆದುಕೊಂಡಿದ್ದೇವೆ : ಪರಮೇಶ್ವರ್

ಡಿಕೆಶಿ ಪ್ರಕರಣ, ಕಾನೂನಾತ್ಮಕ ನಿರ್ಧಾರ ತೆಗೆದುಕೊಂಡಿದ್ದೇವೆ : ಪರಮೇಶ್ವರ್

ಬೆಂಗಳೂರು, ನ.24- ಡಿ.ಕೆ.ಶಿವಕುಮಾರ್ ವಿರುದ್ಧ ಅಕ್ರಮ ಆಸ್ತಿ ಪ್ರಕರಣದಲ್ಲಿ ಸಿಬಿಐ ತನಿಖೆಗೆ ವಹಿಸುವಾಗ ಹಿಂದಿನ ಬಿಜೆಪಿ ಸರ್ಕಾರ ಮಾಡಿದಂತಹ ಲೋಪವನ್ನು ಸರಿಪಡಿಸುವ ನಿಟ್ಟಿನಲ್ಲಿ ರಾಜ್ಯ ಸಚಿವ ಸಂಪುಟ ತೀರ್ಮಾನ ತೆಗೆದುಕೊಂಡಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸಮರ್ಥಿಸಿಕೊಂಡಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ತನ್ನ ಇತಿ-ಮಿತಿಯಲ್ಲಿ ತೀರ್ಮಾನ ತೆಗೆದುಕೊಂಡಿದೆ. ನಾವು ಪ್ರಕರಣದ ಸತ್ಯಾಸತ್ಯತೆಯ ಜೇಷ್ಠತೆ ಮೇಲೆ ಚರ್ಚೆ ಮಾಡಿಲ್ಲ. ಸಿಬಿಐ ತನಿಖೆಗೆ ಅನುಮತಿ ನೀಡುವಾಗ ಆಗಿದ್ದಂತಹ ಲೋಪಗಳ ಬಗ್ಗೆಯಷ್ಟೇ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದರು.
ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಮುಖ್ಯಕಾರ್ಯದರ್ಶಿ ಅವರಿಗೆ ಮೌಖಿಕ ಸೂಚನೆ ನೀಡಿ ಸಿಬಿಐ ತನಿಖೆಗೆ ಅನುಮತಿ ನೀಡಿದ್ದರು.

ಯಾವುದೇ ಶಾಸಕರ ವಿರುದ್ಧ ತನಿಖೆ ಅಥವಾ ವಿಚಾರಣೆಗೆ ಮುನ್ನ ವಿಧಾನಸಭಾಧ್ಯಕ್ಷರ ಪೂರ್ವಾನುಮತಿ ಅಗತ್ಯ. ಆದರೆ, ಡಿ.ಕೆ.ಶಿವಕುಮಾರ್ ಪ್ರಕರಣದಲ್ಲಿ ಆ ರೀತಿಯ ಯಾವ ಪ್ರಕ್ರಿಯೆಗಳನ್ನೂ ಪಾಲನೆ ಮಾಡಲಾಗಿಲ್ಲ.

ಹಿಂದಿನ ಸರ್ಕಾರ ಮಾಡಿದ ಈ ಲೋಪಗಳನ್ನು ನಾವು ಮುಂದುವರೆಸಲು ಸಾಧ್ಯವಿಲ್ಲ. ಅದಕ್ಕಾಗಿ ಸರಿಪಡಿಸುವ ಪ್ರಯತ್ನ ಮಾಡಿದ್ದೇವೆ ಎಂದರು. ಪ್ರಕರಣದ ತನಿಖೆಗೆ ಅನುಮತಿ ನೀಡುವಾಗಲೇ ಆಗ ಅಧಿಕಾರದಲ್ಲಿ ಇದ್ದವರಿಗೆ ಜವಾಬ್ದಾರಿ ಇರಬೇಕಿತ್ತು. ಅದರಲ್ಲೂ ಶಾಸಕರ ವಿರುದ್ಧ ಸಿಬಿಐ ತನಿಖೆಗೆ ವಹಿಸುವಂತಹ ಸೂಕ್ಷ್ಮ ಪ್ರಕರಣದಲ್ಲಿ ಮುಂದಿನ ದಿನಗಳಲ್ಲಿ ನ್ಯಾಯಾಲಯದ ವಿಚಾರಣೆ ಎದುರಾಗಬಹುದು, ನ್ಯಾಯಾಂಗ ಮತ್ತು ಶಾಸಕಾಂಗದ ನಡುವೆ ಸಂಘರ್ಷವಾಗಬಹುದು ಎಂಬ ಅರಿವಿನ ಅಗತ್ಯವಿತ್ತು.

ಹಿಂದೂ ಧರ್ಮದ ಜಾಗೃತಿಗಾಗಿ ಮಿಲಿಯನ್ ಡಾಲರ್ ಖರ್ಚು ಮಾಡುತ್ತಿರುವ NRI ವೈದ್ಯ

ಸೂಕ್ಷ್ಮ ಪ್ರಕರಣದಲ್ಲಿ ಮುಖ್ಯಮಂತ್ರಿಯವರು ಮೌಖಿಕ ಸೂಚನೆ ನೀಡಿ ಮುಖ್ಯ ಕಾರ್ಯದರ್ಶಿಯವರು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುತ್ತಾರೆ ಎಂದರೆ ಇದು ರಾಜಕೀಯ ಪ್ರೇರಿತವಲ್ಲವೇ ?
ಲಿಖಿತ ಸೂಚನೆ ಇಲ್ಲದೆ ಮೌಖಿಕ ಆದೇಶದ ಮೇಲೆ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರೆ ಅದನ್ನು ಏನೆಂದು ಭಾವಿಸಬೇಕೆಂದು ಪ್ರಶ್ನಿಸಿದರು.

ಬಿಜೆಪಿ ಸರ್ಕಾರದಲ್ಲಿನ ಅಡ್ವೋಕೇಟ್ ಜನರಲ್ ಅವರು ಈ ಪ್ರಕರಣ ಸಿಬಿಐ ತನಿಖೆಗೆ ಸೂಕ್ತವಲ್ಲ ಎಂದಿದ್ದರು. ನಮ್ಮ ಸರ್ಕಾರದ ಅಡ್ವೋಕೇಟ್ ಜನರಲ್ ಕೂಡ ಇದೇ ಅಭಿಪ್ರಾಯ ಹೇಳಿದ್ದಾರೆ. ಅದರ ಆಧಾರದ ಮೇಲೆ ನಾವು ಪ್ರಕ್ರಿಯೆಗಳಲ್ಲಿನ ಲೋಪಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಂಡಿದ್ದೇವೆ.

ಎರಡು-ಮೂರು ದಿನಗಳಲ್ಲಿ ಸರ್ಕಾರಿ ಆದೇಶ ಹೊರಡಿಸುತ್ತೇವೆ. ನ್ಯಾಯಾಲಯಕ್ಕೂ ಸಂಪುಟ ಸಭೆಯ ನಿರ್ಧಾರವನ್ನು ತಿಳಿಸಿ ಹಿಂದಿನ ಸರ್ಕಾರ ಮಾಡಿದ್ದು ಸರಿಯಲ್ಲ ಎಂದು ಮನವರಿಕೆ ಮಾಡಿಕೊಡುತ್ತೇವೆ ಎಂದರು.

ರಾಜ್ಯ ಸರ್ಕಾರ ಪ್ರಕರಣದಲ್ಲಿನ ಸತ್ಯಾಸತ್ಯತೆ ಬಗ್ಗೆ ಚರ್ಚಿಸಲು ಹೋಗಿಲ್ಲ. ಡಿ.ಕೆ.ಶಿವಕುಮಾರ್ ಅವರು ಅಕ್ರಮ ಆಸ್ತಿ ಮಾಡಿದ್ದಾರೆಯೇ ? ಹೇಗೆ ಸಂಪಾದಿಸಿದ್ದಾರೆ ಎಂಬ ಬಗ್ಗೆ ನಾವು ಒಂದು ಪದವನ್ನೂ ಪ್ರಸ್ತಾಪಿಸಿಲ್ಲ. ಪ್ರಕ್ರಿಯೆಗಳ ಪಾಲನೆಯಲ್ಲಿ ನಷ್ಟವಾದಾಗ ಅದನ್ನು ಸರಿಪಡಿಸುವ ಜವಾಬ್ದಾರಿ ರಾಜ್ಯ ಸರ್ಕಾರದ್ದಾಗಿರುತ್ತದೆ ಎಂದು ಪುನರುಚ್ಚರಿಸಿದರು.

ಸಂಪುಟದ ನಿರ್ಣಯದ ಬಗ್ಗೆ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಯಾವ ರೀತಿ ಬೇಕಾದರೂ ವ್ಯಾಖ್ಯಾನ ಮಾಡಿಕೊಳ್ಳಬಹುದು. ನಮಗೆ ಅದರ ಬಗ್ಗೆ ಚಿಂತನೆ ಇಲ್ಲ. ಕಾನೂನಾತ್ಮಕವಾಗಿ ಸರಿಯಾಗಿ ನಿರ್ಧಾರ ತೆಗೆದುಕೊಂಡಿದ್ದೇವೆ ಎಂಬುದಷ್ಟೇ ನಮ್ಮ ಸಂದೇಶ ಎಂದರು.

RELATED ARTICLES

Latest News