Thursday, May 2, 2024
Homeರಾಷ್ಟ್ರೀಯಅಯೋಧ್ಯೆಗೆ ಹರಿದು ಬರುತ್ತಿರುವ ಭಕ್ತರ ನಿಯಂತ್ರಣಕ್ಕೆಪೊಲೀಸರ ಹರಸಾಹಸ

ಅಯೋಧ್ಯೆಗೆ ಹರಿದು ಬರುತ್ತಿರುವ ಭಕ್ತರ ನಿಯಂತ್ರಣಕ್ಕೆಪೊಲೀಸರ ಹರಸಾಹಸ

ಅಯೋಧ್ಯೆ, ಜ.24- ರಾಮ ಮಂದಿರ ದಲ್ಲಿ ಬಾಲ ರಾಮನ ಪ್ರಾಣಪ್ರತಿಷ್ಠಾಪನೆ ಬಳಿಕ ದರ್ಶನಕ್ಕೆ ದೇಶ-ವಿದೇಶಗಳಿಂದ ಆಗಮಿಸುತ್ತಿರುವ ಭಕ್ತರ ಸಂಖ್ಯೆ ಕ್ಷಣ-ಕ್ಷಣಕ್ಕೂ ಹೆಚ್ಚಾಗುತ್ತಿದ್ದು, ಭದ್ರತೆ ಒದಗಿಸುವುದೇ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಈ ನಡುವೆ ಭಕ್ತರ ಮೇಲೆ ಅನಗತ್ಯವಾಗಿ ಪೊಲೀಸರು ಲಾಠಿ ಪ್ರಹಾರ ನಡೆಸದಂತೆ ಹಾಗೂ ಸಂಯಮದಿಂದ ವರ್ತಿಸುವಂತೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ.

ರಾಮ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಲು ಬರುವ ಎಲ್ಲಾ ಭಕ್ತರಿಗೆ ರಾಮಲಲ್ಲಾನ ದರ್ಶನಕ್ಕೆ ಅವಕಾಶವಿದೆ. ಆದರೆ, ತಾಳ್ಮೆಯಿಂದ ಇರುವಂತೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಅರ್ಚಕ ಅಚಾರ್ಯ ಸತ್ಯೇಂದ್ರ ದಾಸ್ ಅವರು ಮನವಿ ಮಾಡಿದ್ದಾರೆ. ಭದ್ರತೆಗೆ ಸವಾಲಾದ ಭಕ್ತರ ಸಂಖ್ಯೆ: ದೇವಾಲಯದ ಭದ್ರತೆಯ ನಿರ್ವಹಣಾ ಅಧಿಕಾರಿಗಳು, ಭದ್ರತಾ ಸಿಬ್ಬಂದಿ ಭಾರೀ ಯಾತ್ರಾರ್ಥಿಗಳ ಗುಂಪನ್ನು ನಿಯಂತ್ರಿಸಲು ಕಷ್ಟಪಟ್ಟ ನಂತರ ಈ ಹೇಳಿಕೆ ಬಂದಿದೆ. ಎಲ್ಲಾ ಭಕ್ತರು ರಾಮಲಲ್ಲಾನ ದರ್ಶನ ಪಡೆಯಲು ಸಾಧ್ಯವಾಗುತ್ತದೆ. ದರ್ಶನವು ನಿರಂತರವಾಗಿ ನಡೆಯುತ್ತಿದೆ. ಭಕ್ತರು ತಾಳ್ಮೆಯಿಂದ ಇರಬೇಕೆಂದು ಅವರು ಹೇಳಿದ್ದಾರೆ.

ರಾಮಮಂದಿರದ ಗರ್ಭಗುಡಿಯೊಳಗೆ ಜನಸಂದಣಿಯನ್ನು ನಿರ್ವಹಿಸಲು ಸ್ವತ: ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಸಂಜಯ್ ಪ್ರಸಾದ್ ಮತ್ತು ಉತ್ತರ ಪ್ರದೇಶ ಡಿಜಿಪಿ ಪ್ರಶಾಂತ್ ಕುಮಾರ್ ಮತ್ತು ಇತರ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.
ಮಂಗಳವಾರ ಸುಮಾರು 5 ಲಕ್ಷ ಭಕ್ತರು ಭೇಟಿ ನೀಡಿದ್ದರು. ಇಂದು ಸಹ ಲಕ್ಷಾಂತರ ಭಕ್ತರು ಬಾಲ ರಾಮನ ದರ್ಶನಕ್ಕೆ ಮುಂಜಾನೆಯಿಂದಲೇ ಕಾದು ಕುಳಿತಿದ್ದರು.

ರಾಮನ ದರ್ಶನಕ್ಕೆ ಅವಕಾಶ ಕೊಟ್ಟ ಮೊದಲ ದಿನ, ಮುಂಜಾನೆ 3 ಗಂಟೆ ಸುಮಾರಿಗೆ ಲಕ್ಷಾಂತರ ಭಕ್ತರು ಸೇರಿದ್ದರು. ಈ ವೇಳೆ ರಾಮ ಮಂದಿರದ ಬಾಗಿಲು ತೆರೆಯುತ್ತಿದ್ದಂತೆ ದರ್ಶನಕ್ಕೆ ನೂಕು ನುಗ್ಗಲು ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ದೇವಾಲಯದ ಒಳಗೆ ಪ್ರವೇಶಿಸುವ ಭಕ್ತರನ್ನು ಮೆಟಲ್ ಡಿಟೆಕ್ಟರ್ ಮೂಲಕ ಪರಿಶೀಲಿಸಲಾಗುತ್ತಿದೆ.

ಮಂದಿರಕ್ಕೆ ಜನರನ್ನು ಸರದಿಯಲ್ಲಿ ಬಿಡಲಾಗುತ್ತಿದ್ದು, ಶಿಸ್ತು, ಸಂಯಮ ಪಾಲನೆಗೆ ಮನವಿ ಮಾಡಲಾಗುತ್ತಿದೆ. ಯಾವುದೇ ಅಹಿತಕರ ಘಟನೆಗಳಾಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದಕ್ಕಾಗಿ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಅದೆಷ್ಟೋ ವರ್ಷದಿಂದ ರಾಮ ಮಂದಿರ ನಿರ್ಮಾಣವಾಗಬೇಕೆಂಬ ಬಯಕೆ ಈಗ ಈಡೇರಿದೆ. ಹಾಗಾಗಿ ಜೀವನದಲ್ಲಿ ಒಮ್ಮೆ ರಾಮನ ದರ್ಶನ ಪಡೆಯಬೇಕೆಂಬ ಹಂಬಲ ಭಕ್ತರಲ್ಲಿ ಮೂಡಿದೆ. ಎರಡು ದಿನಗಳಿಂದ ಅಯೋಧ್ಯೆಗೆ ಲಕ್ಷಾಂತರ ಭಕ್ತರು ನಿರಂತರವಾಗಿ ಆಗಮಿಸುತ್ತಿದ್ದಾರೆ. ಅಪಾರ ಸಂಖ್ಯೆಯಲ್ಲಿ ಬಂದ ಭಕ್ತರನ್ನು ನಿಯಂತ್ರಿಸಲು ಅಲ್ಲಿದ್ದ ಪೊಲೀಸರು, ಭದ್ರತಾ ಸಿಬಂದಿ ಹರಸಾಹಸ ಪಡುವಂತಾಗಿದೆ.

ಭಕ್ತರಿಗೆ ಬಾಲ ರಾಮನ ದರ್ಶನಕ್ಕೆ ಸಮಯ ನಿಗದಿ:

ಬಾಲಕ ರಾಮನ ದರ್ಶನಕ್ಕೆ ಬರುವ ಭಕ್ತರಿಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ವೆಬ್ಸೈಟ್ನಲ್ಲಿ ನಿರ್ದಿಷ್ಟ ಸಮಯದ ಸ್ಲಾಟ್ಗಳನ್ನು ಒದಗಿಸಿರುವ ಮಾಹಿತಿ ಇದೆ. ಇದರಂತೆ ನಿತ್ಯ ಬೆಳಗ್ಗೆ 7 ರಿಂದ 11:30 ರವರೆಗೆ ಮತ್ತು ಮಧ್ಯಾಹ್ನ 2 ರಿಂದ ಸಂಜೆ 7 ರವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಬೆಳಗ್ಗೆ 6:30ಕ್ಕೆ ಆರತಿ ಹಾಗೂ ಅಲಂಕಾರ ನಡೆಯಲಿದೆ. ಸಂಜೆ 7:30 ಕ್ಕೆ ಸಂಧ್ಯಾ ಆರತಿ ನಡೆಯಲಿದೆ. ಆಫ್ಲೈನ್ ಮತ್ತು ಆನ್ಲೈನ್ ಎರಡರಲ್ಲೂ ಆರತಿಗಾಗಿ ಪಾಸ್ಗಳು ದೊರೆಯಲಿವೆ. ಆಫ್ಲೈನ್ ಪಾಸ್ಗಳು ಶ್ರೀರಾಮ ಜನ್ಮಭೂಮಿಯ ಕಚೇರಿಯಲ್ಲಿ ಲಭ್ಯವಿದ್ದು, ಗುರುತಿನ ಪುರಾವೆ ಒದಗಿಸಿ ಪಡೆಯಬಹುದಾಗಿದೆ.

ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವ ಕಾರಣ, ಅಯೋಧ್ಯೆಯಲ್ಲಿ ಅಧಿಕಾರಿಗಳು ಒಳಬರುವ ಎಲ್ಲಾ ವಾಹನಗಳಿಗೆ ತಕ್ಷಣ ಪ್ರವೇಶವನ್ನು ನಿರ್ಬಂಸಿದ್ದಾರೆ. ಬೆಳಿಗ್ಗೆ ಅಯೋಧ್ಯೆಯಲ್ಲಿ ಹಠಾತ್ ಯಾತ್ರಿಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಇದರಿಂದ ಭದ್ರತಾ ವ್ಯವಸ್ಥೆಯು ಸವಾಲಾಗಿ ಪರಿಣಮಿಸಿದೆ. ಜನದಟ್ಟಣೆಯಿಂದಾಗಿ ಕೆಲವು ವ್ಯಕ್ತಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಗಂಭೀರ ಹಾನಿಯ ವರದಿಯಾಗಿಲ್ಲ. ಭಾರೀ ಜನಸಂದಣಿಯನ್ನು ಗಮನಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಯೋಧ್ಯೆಗೆ ಮತ್ತಷ್ಟು ಯಾತ್ರಿಗಳ ಆಗಮನವನ್ನು ನಿರ್ಬಂಸಲು ಆದೇಶಿಸಿದರು.

ಗೊಂದಲಗಳಿಲ್ಲದೆ ನಡೆದ ಪಿಎಸ್‍ಐ ಹುದ್ದೆಗಳ ನೇಮಕಾತಿ ಲಿಖಿತ ಮರು ಪರೀಕ್ಷೆ

ಅಯೋಧ್ಯೆಯಲ್ಲಿನ ಪರಿಸ್ಥಿತಿ ಕುರಿತು ಸಭೆ ನಡೆಸಲಾಗಿದ್ದು, ಮುಂದಿನ ಕೆಲವು ದಿನಗಳವರೆಗೆ ಅಯೋಧ್ಯೆಗೆ ತೆರಳುವ ಎಲ್ಲಾ ವಾಹನಗಳ ಮೇಲೆ ನಿಷೇಧ ಹೇರಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಈ ವಾಹನಗಳಿಗೆ ಮಾಡಲಾದ ಎಲ್ಲಾ ಆನ್ಲೈನ್ ಬುಕಿಂಗ್ಗಳನ್ನು ರದ್ದುಗೊಳಿಸಲಾಗಿದೆ ಮತ್ತು ಯಾತ್ರಿಕರ ಬಸ್ ದರಗಳ ಮರುಪಾವತಿಯನ್ನು ತ್ವರಿತ ಪಾವತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಿರುವ ಕಾರಣ ಅಯೋಧ್ಯೆಯಲ್ಲಿ ಹೋಟೆಲ್, ರೂಮ್ಗಳು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಎಷ್ಟೋ ತಿಂಗಳ ಕಾಲದವರೆಗೆ ಹೋಟೆಲ್ಗಳು ಬುಕ್ ಆಗಿದೆ ಎನ್ನಲಾಗಿದೆ. ಅದೂ ಅಲ್ಲದೆ ಕೆಲವೊಂದು ಹೋಟೆಲ್ಗಳಲ್ಲಿ ಹೆಚ್ಚಿನ ಬಾಡಿಗೆ ವಸೂಲಿ ಮಾಡುತ್ತಿರುವ ಆರೋಪಗಳು ಕೇಳಿಬರುತ್ತಿವೆ.

ಅಯೋಧ್ಯೆ ದೇವಸ್ಥಾನದಲ್ಲಿ ನೂತನ ರಾಮಲಲ್ಲಾ ಮೂರ್ತಿಯ ಪ್ರಾಣಪ್ರತಿಷ್ಠಾಪಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಸಮಾರಂಭವನ್ನು ದೇಶಾದ್ಯಂತ ನೇರಪ್ರಸಾರ ಮಾಡಲಾಯಿತು. ಸಮಾರಂಭಕ್ಕೆ ಪ್ರಮುಖ ರಾಜಕಾರಣಿಗಳು, ಉದ್ಯಮಿಗಳು, ಕ್ರೀಡಾಪಟುಗಳು ಮತ್ತು ಸೆಲೆಬ್ರಿಟಿಗಳು ಸೇರಿದಂತೆ ಸಾವಿರಾರು ಜನರನ್ನು ಆಹ್ವಾನಿಸಲಾಗಿತ್ತು. ಆಮಂತ್ರಿತರು ನಂತರ ಸಮಾರಂಭ ಮುಗಿದ ಕೂಡಲೇ ದೇವರ ದರ್ಶನ ಪಡೆದರು.

ಕಳೆದ ಸೋಮವಾರ ಅಯೋಧ್ಯೆಯಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ನೆರವೇರಿದ್ದು ಇದರೊಂದಿಗೆ ನೂರಾರು ವರುಷಗಳ ತಪಸ್ಸಿನ ಫಲವಾಗಿ ನೆರವೇರಿದಂತಾಗಿದೆ. ಅಂದಿನಿಂದ ಅಯೋಧ್ಯೆಗೆ ಭಕ್ತರ ದಂಡೇ ಹರಿದು ಬರುತ್ತಿದೆ.

RELATED ARTICLES

Latest News