Sunday, July 7, 2024
Homeರಾಜ್ಯಆಸ್ತಿ ವಿಚಾರಕ್ಕೆ ವಿಚ್ಛೇದಿತ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿದ ಪತಿ-ಮಗ..!

ಆಸ್ತಿ ವಿಚಾರಕ್ಕೆ ವಿಚ್ಛೇದಿತ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿದ ಪತಿ-ಮಗ..!

ಶಿಡ್ಲಘಟ್ಟ, ಜೂ.26- ವಿಚ್ಛೇದಿತ ಪತ್ನಿಯನ್ನು ಪತಿ ಹಾಗೂ ಆತನ ಎರಡನೆ ಪತ್ನಿಯ ಪುತ್ರ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ಸೊಣ್ಣೆನಹಳ್ಳಿ ಗ್ರಾಮದಲ್ಲಿ ಬೆಳಿಗ್ಗೆ ನಡೆದಿದೆ.ಪದ್ಮಮ್ಮ ( 45) ಭೀಕರವಾಗಿ ಕೊಲೆಯಾದ ಮಹಿಳೆ.

ಮೃತಳ ಪತಿ ಮುನಿರೆಡ್ಡಿ (58) ಕೊಲೆ ಮಾಡಿದ ನಂತರ ಸ್ವತಃ ಪೊಲೀಸರಿಗೆ ಶರಣಾಗಿದ್ದಾನೆ. ಕೊಲೆಯಲ್ಲಿ ಭಾಗಿಯಾದ ಮುನಿರೆಡ್ಡಿಯ ಮತ್ತೊಬ್ಬ ಪತ್ನಿಯ ಪುತ್ರ (20) ಗಿರೀಶ್‌ ತಲೆ ಮರೆಸಿಕೊಂಡಿದ್ದಾನೆ.ಮುನಿರೆಡ್ಡಿ ಹಾಗೂ ಪದ್ಮಮ್ಮ ನಡುವೆ ಕೌಟುಂಬಿಕ ವಿಚಾರವಾಗಿ ಗಲಾಟೆ ನಡೆದು ಇಬ್ಬರೂ ವಿಚ್ಛೇದನ ಪಡೆದು ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಪದ್ಮಮ್ಮಗೆ ಇಬ್ಬರು ಪುತ್ರರಿದ್ದರು. ಇಬ್ಬರೂ ಪುತ್ರರೂ ಪ್ರತ್ಯೇಕ ಅಪಘಾತಗಳಲ್ಲಿ ಮೃತಪಟ್ಟಿದ್ದು, ಒಬ್ಬಂಟಿಯಾಗಿ ಅದೇ ಗ್ರಾಮದಲ್ಲಿ ವಾಸಿಸುತ್ತಿದ್ದಳು.

ವಿಚ್ಛೇದನ ಪಡೆದ ಮುನಿರೆಡ್ಡಿ ಮತ್ತೊಂದು ಮದುವೆಯಾಗಿದ್ದು, ಒಂದು ಹೆಣ್ಣು ಒಂದು ಹಾಗೂ ಒಂದು ಗಂಡು ಮಗು ಇದೆ. ಈ ಮಧ್ಯೆ ಪದ್ಮಮ್ಮಳಿಗೆ ಜೀವನಾಂಶಕ್ಕಾಗಿ ನೀಡಿದ ಜಮೀನನ್ನು ವಾಪಸ್‌ ಮಾಡುವಂತೆ ಮುನಿರೆಡ್ಡಿ ತಗಾದೆ ತೆಗೆದಿದ್ದಾನೆ ಎನ್ನಲಾಗಿದೆ.

ನಿನಗೆ ಮಕ್ಕಳಿಲ್ಲವಲ್ಲ ಜಮೀನು ಇಟ್ಟುಕೊಂಡು ಏನು ಮಾಡ್ತೀಯಾ ಎಂದು ಜಮೀನು ವಾಪಸ್‌ ಮಾಡು ಎಂದು ಆಗಾಗ್ಗೆ ಪೀಡಿಸುತ್ತಿದ್ದು, ಇದು ಪದ್ಮಮ್ಮ ಮತ್ತು ಮುನಿರೆಡ್ಡಿ ನಡುವೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿತ್ತು.

ಮುನಿರೆಡ್ಡಿ ಹಾಗೂ ಆತನ ಮಗ ಗಿರೀಶ್‌ ಬೆಳಗ್ಗೆಯೇ ಪದ್ಮಮ್ಮಳ ಮನೆಗೆ ತೆರಳಿದ್ದು, ಶೌಚ ಕಾರ್ಯ ಮುಗಿಸಿ ಮನೆಯೊಳಗೆ ಬಂದ ಪದ್ಮಮ್ಮಳ ಮೇಲೆ ಏಕಾಏಕಿ ಮಚ್ಚಿನಿಂದ ದಾಳಿ ನಡೆಸಿ ಕೊಚ್ಚಿ ಕೊಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಪದ್ಮಮ್ಮ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಘಟನೆ ನಂತರ ಗಿರೀಶ್‌ ತಲೆ ಮರೆಸಿಕೊಂಡಿದ್ದು, ಮುನಿರೆಡ್ಡಿ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಗೆ ತೆರಳಿ ಪೊಲೀಸರಿಗೆ ಶರಣಾಗಿದ್ದಾನೆ. ಅಲ್ಲಿಂದ ಶಿಡ್ಲಘಟ್ಟ ಗ್ರಾಮಾಂತರ ಠಾಣೆಗೆ ಆರೋಪಿ ಮುನಿರೆಡ್ಡಿಯನ್ನು ಕರೆ ತರಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಸಿಪಿಐ ಎಂ.ಶ್ರೀನಿವಾಸ್‌, ಗ್ರಾಮಾಂತರ ಠಾಣೆ ಎಸ್‌ಐ ಸತೀಶ್‌ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ಬೆರಳಚ್ಚು ತಜ್ಞರ ತಂಡ ಆಗಮಿಸಿ ಪರಿಶೀಲಿಸಿದೆ. ನಗರದಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ, ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಎಸ್‌ಪಿ ಡಿ.ಎಲ್‌‍.ನಾಗೇಶ್‌, ಎಎಸ್‌ಪಿ ರಾಜ ಇಮಾಮ್‌ ಖಾಸಿಂ, ಡಿವೈಎಸ್‌ಪಿ ಮುರಳೀಧರ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News