Monday, May 13, 2024
Homeಬೆಂಗಳೂರುಬೆಂಗಳೂರಲ್ಲಿ ಅಪರಾಧ ನಿಯಂತ್ರಣಕ್ಕೆ ರಾತ್ರಿಗಸ್ತು ಹೆಚ್ಚಳ : ದಯಾನಂದ

ಬೆಂಗಳೂರಲ್ಲಿ ಅಪರಾಧ ನಿಯಂತ್ರಣಕ್ಕೆ ರಾತ್ರಿಗಸ್ತು ಹೆಚ್ಚಳ : ದಯಾನಂದ

ಬೆಂಗಳೂರು, ಏ.28- ಅವಶ್ಯಕತೆ ಇರುವ ಕಡೆ ಸಿಸಿ ಕ್ಯಾಮೆರಾಗಳನ್ನು ಹಾಕಲಾಗುವುದು ಹಾಗೂ ನಗರದಲ್ಲಿ ಅಪರಾಧ ಪ್ರಕರಣ ನಿಯಂತ್ರಣಕ್ಕೆ ರಾತ್ರಿ ಗಸ್ತನ್ನು ಹೆಚ್ಚಳ ಮಾಡಲಾಗುವುದು ಎಂದು ನಗರದ ಪೊಲೀಸ್‌ ಆಯುಕ್ತರಾದ ಬಿ. ದಯಾನಂದ ಅವರು ತಿಳಿಸಿದ್ದಾರೆ.

ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರ ಸಾಗರ ಗೇಟ್‌ ನಂ.4ನಲ್ಲಿ ಏರ್ಪಡಿಸಿದ್ದ ಮಾಸಿಕ ಜನಸಂಪರ್ಕ ದಿವಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ವಸಂತನಗರದಲ್ಲಿ ಮಹಿಳಾ ಪಿಜಿಗಳೇ ಹೆಚ್ಚಾಗಿರುವುದರಿಂದ ಕೆಲಸ ಮುಗಿಸಿ ತಡರಾತ್ರಿ ಪಿಜಿಗೆ ಬರುವ ಯುವತಿಯರನ್ನು ಕೆಲವು ಯುವಕರು ಚುಡಾಯಿಸುತ್ತಾರೆ. ಆದ್ದರಿಂದ ಈ ಪ್ರದೇಶಗಳಲ್ಲಿ ಹೆಚ್ಚಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ರಾತ್ರಿ ಗಸ್ತನ್ನು ಹೆಚ್ಚಳ ಮಾಡಬೇಕೆಂದು ಸಾರ್ವಜನಿಕರು ಆಯುಕ್ತರಲ್ಲಿ ಮನವಿ ಮಾಡಿಕೊಂಡಾಗ ಅವರಿಗೆ ಸ್ಪಂದಿಸಿ ಮೇಲಿನಂತೆ ಭರವಸೆ ನೀಡಿದರು.

ಪ್ಯಾಲೆಸ್‌ ಗುಟ್ಟಹಳ್ಳಿಯ ವಿನಾಯಕ ಸರ್ಕಲ್‌ನ ಎರಡೂ ಕಡೆಗಳಲ್ಲಿ ವಾಹನಗಳನ್ನು ಪಾರ್ಕಿಂಗ್‌ ಮಾಡುವುದರಿಂದ ಇಲ್ಲಿ ಟ್ರಾಫಿಕ್‌ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಆದ್ದರಿಂದ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರು ಆಯುಕ್ತರಲ್ಲಿ ಮನವಿ ಮಾಡಿಕೊಂಡರು.

ಆಯುಕ್ತರು ಕಾರ್ಯಕ್ರಮದಲ್ಲಿ ಹಾಜರಿದ್ದ ಸಂಚಾರ ವಿಭಾಗದ ಅದಿಕಾರಿಗಳಿಗೆ ಈ ಬಗ್ಗೆ ಗಮನ ಹರಿಸುವಂತೆ ಸೂಚಿಸಿದರು. ಬಹುತೇಕ ಪ್ರದೇಶಗಳಲ್ಲಿ ಬೀದಿ ದೀಪಗಳು ಇಲ್ಲ. ಹಾಗಾಗಿ ರಾತ್ರಿ ವೇಳೆ ಓಡಾಡಲು ತೊಂದರೆಯಾಗು ತ್ತದೆ ಎಂದು ಸಾರ್ವಜನಿಕರು ಆಯುಕ್ತ ರಲ್ಲಿ ಅಳಲು ತೋಡಿಕೊಂಡರು.

ಈ ಸಮಸ್ಯೆ ಬಗ್ಗೆ ಬಿಬಿಎಂಪಿ ಅದಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಆಯುಕ್ತರು ತಿಳಿಸಿದರು. ಕಾರ್ಯಕ್ರಮದಲ್ಲಿ ಕೇಂದ್ರ ವಿಭಾಗದ ಡಿಸಿಪಿ ಶೇಖರ್‌ ಎಚ್‌., ಸಂಚಾರ ವಿಭಾಗದ ಡಿಸಿಪಿ ಅನಿತಾ ಹದ್ದಣ್ಣನವರ್‌ ಹಾಗೂ ಕೇಂದ್ರ ವಿಭಾಗದ ಎಲ್ಲ ಹಿರಿಯ-ಕಿರಿಯ ಆದಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

Latest News